Advertisement

ರಸ್ತೆ ಅಪಘಾತ: ಲಾರಿ-ಟೆಂಪೋ ಢಿಕ್ಕಿ; ಕಾರ್ಮಿಕ ಸಾವು

11:51 PM Oct 31, 2022 | Team Udayavani |

ಸಿದ್ದಾಪುರ: ಸೋಮವಾರ ಜನ್ಸಾಲೆಯ ತಿರುವಿನಲ್ಲಿ ಲಾರಿ ಹಾಗೂ ಟೆಂಪೋ ನಡುವೆ ನಡೆದ ಅಪಘಾತದಲ್ಲಿ ಕೂಲಿ ಕಾರ್ಮಿಕ ಮೃತಪಟ್ಟಿದ್ದಾರೆ.

Advertisement

ಕೋಟೇಶ್ವರದ ಪೂಜಾ ಗ್ರಾನೈಟ್ಸ್‌ ಸಂಸ್ಥೆಯಲ್ಲಿ ಕೆಲಸಕ್ಕಿದ್ದ ಬಿಹಾರ ಮೂಲದ ಶಿವಬೋಸ್‌ (35) ಮೃತ ಕಾರ್ಮಿಕ. ಸಿಲಿಕಾ ಸ್ಯಾಂಡ್‌ ಹೊತ್ತಿದ್ದ ಲಾರಿಯು ಕೋಟೇಶ್ವರದಿಂದ ಶಿವಮೊಗ್ಗದ ಫ್ಯಾಕ್ಟರಿ ಕಡೆಗೆ ಹೋಗುತ್ತಿತ್ತು. ಅದರ ಮುಂಭಾಗದಲ್ಲಿ ಮಾರ್ಬಲ್ಸ್‌ಗಳನ್ನು ಹೊತ್ತೂಯ್ಯುತ್ತಿದ್ದ 407 ಟೆಂಪೋ ತೆರಳುತ್ತಿತ್ತು. ಜನ್ಸಾಲೆಯ ತಿರುವೊಂದರಲ್ಲಿ ಟೆಂಪೋ ಚಾಲಕ ಹಠಾತ್ತನೆ ತಿರುಗಿಸಿದಾಗ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಲಾರಿಯು, ಟೆಂಪೋ ಹಿಂಭಾಗಕ್ಕೆ ಢಿಕ್ಕಿ ಹೊಡೆದಿತ್ತು. ಈ ವೇಳೆ ಟೆಂಪೋ ಹಿಂಬದಿಯಲ್ಲಿದ್ದ ಕಾರ್ಮಿಕ ಶಿವಬೋಸ್‌ ಅವರು ಟೆಂಪೋದಿಂದ ಹೊರಗೆಸೆಯಲ್ಪಟ್ಟು ರಸ್ತೆ ಬದಿಗೆ ಬಿದ್ದಿದ್ದರು. ಈ ವೇಳೆ ಅವರ ಒಂದು ಅಂಗಕ್ಕೆ ಬಲವಾದ ಪೆಟ್ಟಾಗಿ ಮೃತಪಟ್ಟಿದ್ದಾರೆ.

ಘಟನ ಸ್ಥಳಕ್ಕೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಗೋಪಿಕೃಷ್ಣ, ಸಬ್‌ ಇನ್‌ಸ್ಪೆಕ್ಟರ್‌ ಶ್ರೀಧರ್‌ ನಾಯ್ಕ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಳಿಯಂಗಡಿ: ಬೈಕ್‌-ಕಾರು ಢಿಕ್ಕಿ
ಸಿದ್ದಾಪುರ: ಹೆಬ್ರಿ-ಆಗುಂಬೆ ರಾಜ್ಯ ಹೆದ್ದಾರಿಯ ಗೋಳಿಯಂಗಡಿ ಪೇಟೆಯ ಹತ್ತಿರ ಅತೀ ವೇಗವಾಗಿ ಬಂದ ಕಾರು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಸಿದ್ದಾಪುರ ಗ್ರಾಮದ ಚಂದ್ರ ಕುಲಾಲ (32) ಅವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿಂಬಂದಿ ಸವಾರ ಅರುಣ್‌ ಕುಲಾಲ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳ್ಳಿಹೊಳೆ: ಮಾನಸಿಕ ರೋಗಿ ಆತ್ಮಹತ್ಯೆ
ಸಿದ್ದಾಪುರ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಹಳ್ಳಿಹೊಳೆ ಗ್ರಾಮದ ಮಯಿರಕೋಡಿ ಶ್ರೀಧರ ಛಾತ್ರ (36) ಅವರು ಅ. 30ರಂದು ಮನೆಯ ತೋಟದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next