ನವದೆಹಲಿ: ಭಗವಾನ್ ಕೃಷ್ಣ ಹಾಗೂ ಹನುಮಂತ, ವಿಶ್ವದ ಶ್ರೇಷ್ಠ ರಾಜತಾಂತ್ರಿಕರು. ಜಗತ್ತಿನ ಅತ್ಯುತ್ತಮ 10 ಅಂತಾರಾಷ್ಟ್ರೀಯ ರಾಜತಾಂತ್ರಿಕ ಪರಿಕಲ್ಪನೆಯನ್ನ ಪರಿಗಣಿಸುವುದಾದರೆ ಅದರ ಮೂಲವೂ ಮಹಾಭಾರತವೇ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಜೈಶಂಕರ್ ಅವರ ದಿ-ಇಂಡಿಯನ್ ವೇ ಪುಸ್ತಕದ ಮರಾಠಿ ಅವತರಣಿಕೆ ಭಾರತ್ ಮಾರ್ಗ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ವೇಳೆ ಅಂತಾರಾಷ್ಟ್ರೀಯ ಸಂಬಂಧ, ಯೋಜನೆ, ವಿಚಾರ ಮಂಡನೆ, ನಿಲುವು ಹೀಗೆ ಸಾಕಷ್ಟು ವಿಚಾರಗಳನ್ನು ಕೃಷ್ಣ-ಹನುಮಂತ ನಿಭಾಯಿಸಿದ ರೀತಿ ಹಾಗೂ ಪರಿಸ್ಥಿತಿ ಅನುಕರಣೀಯ ಎಂದರು.
ಸೀತಾದೇವಿಯ ಅಪಹರಣದ ಸಮಯದಲ್ಲಿ ಲಂಕೆಗೆ ತೆರಳಿದ್ದ ಆಂಜನೇಯ, ದುಷ್ಟ ಸಂಹಾರ ಹಾಗೂ ಸೀತಾದೇವಿಯ ರಕ್ಷಣೆ ಹೊಣೆ ಹೊತ್ತಿದ್ದ. ಆತನನ್ನು ವಿವಿಧ ಉದ್ದೇಶವನ್ನು ಹೊಂದಿದ್ದ ಅತ್ಯುತ್ತಮ ರಾಜತಾಂತ್ರಿಕನೆಂದು ಪರಿಗಣಸಿಬಹುದು.
ಅದೇ ರೀತಿ ಮಹಾಭಾರತವನ್ನು ನೋಡಿದರೆ ಕುರುಕ್ಷೇತ್ರ ನಿದರ್ಶನ. ವಿವಿಧ ರಾಜ್ಯಗಳ ರಾಜರು ನಾವು ಅವರ ಪರ, ವಿರೋಧ, ತಟಸ್ಥ ಎನ್ನುವ ನಿಲುವುಗಳನ್ನು ತಾಳಿದ್ದರು. ಆದರೆ, ಕೃಷ್ಣ ಧರ್ಮದ ಪರವಿದ್ದರು. ಅರ್ಜುನ ತನ್ನ ಸ್ವಂತ ರಕ್ತಸಂಬಂದಧ ವಿರುದ್ಧ ಹೋರಾಡಬೇಕೇ ಎಂದುಕೊಂಡರೂ, ಧರ್ಮವೇ ಮುಖ್ಯವೆಂದು ಯುದ್ಧ ಮಾಡಿದ. ಅಂತಹ ನಿರ್ಣಯಗಳು ಅಗತ್ಯ ಎಂದೂ ಜೈಶಂಕರ್ ಹೇಳಿದರು.
Related Articles
ಪಾಕ್ ಶಿಶುಪಾಲನಿದ್ದಂತೆ!
ಶ್ರೀ ಕೃಷ್ಣ ಶಿಶುಪಾಲನನ್ನು 100 ಬಾರಿ ಕ್ಷಮಿಸಿದಂತೆ, ಭಾರತವು ಪಾಕಿಸ್ತಾನದ ಉದ್ಧಟತನವನ್ನು ಸಹಿಸಿ ಪದೇ ಪದೆ ಕ್ಷಮಿಸುತ್ತಿದೆ. ಸಮಯ ಬಂದಾಗ ಹಾಗೂ ಶಿಷ್ಟರ ರಕ್ಷಣೆ ಆಗಲೇಬೇಕು ಎಂದಾಗ ದುಷ್ಟರ ಸಂಹಾರ ಮಾಡುವುದೇ ಧರ್ಮವೆಂದು ಮಹಾಭಾರತ ಹೇಳಿದೆ ಎಂದು ಜೈಶಂಕರ್ ಟಾಂಗ್ ನೀಡಿದ್ದಾರೆ.
ನಾನು ಸಚಿವನಾಗುತ್ತೇನೆಂದು ಕನಸು ಮನಸಿನಲ್ಲೂ ಭಾವಿಸಿರಲಿಲ್ಲ. ಮೋದಿಯವರು ಪ್ರಧಾನಿ ಆಗಿರದಿದ್ದರೆ, ನನಗೆ ರಾಜಕೀಯಕ್ಕೆ ಎಂಟ್ರಿಯಾಗುವ ಧೈರ್ಯವಾದರೂ ಬರುತ್ತಿತ್ತೇ ಎಂದು ಹಲವು ಬಾರಿ ನನ್ನನ್ನು ನಾನೇ ಪ್ರಶ್ನಿಸಿದ್ದೇನೆ.
– ಎಸ್.ಜೈಶಂಕರ್, ವಿದೇಶಾಂಗ ಸಚಿವ