Advertisement

ಖುಷಿ ಹೆಸರಲ್ಲಿ ಸಿಲಿಂಡರ್‌ ವಿತರಕರ ಸುಲಿಗೆ

12:54 PM Oct 08, 2021 | Team Udayavani |

ಬೀದರ: ದಿನದಿಂದ ದಿನಕ್ಕೆ ಅಡುಗೆ ಅನಿಲ (ಗ್ಯಾಸ್‌) ಏರಿಕೆಯಾಗಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದರೆ, ಮತ್ತೂಂದೆಡೆ ಸಿಲಿಂಡರ್‌ ಸಾಗಾಣಿಕೆ (ಡೋರ್‌ ಡಿಲೆವರಿ) ಶುಲ್ಕ ವಸೂಲಿ ಹೆಸರಿನಲ್ಲಿ ಗ್ಯಾಸ್‌ ಏಜೆನ್ಸಿಗಳು ಹಗಲು ದರೋಡೆಗೆ ಇಳಿದಿರುವುದು ಜಿಲ್ಲೆ ಗ್ರಾಹಕರನ್ನು ತತ್ತರಿಸುವಂತೆ ಮಾಡಿದೆ. ಆದರೆ, ಸುಲಿಗೆಗೆ ಕಡಿವಾಣ ಹಾಕಬೇಕಾದ ಆಡಳಿತ ಮೌನ ವಹಿಸಿದೆ.

Advertisement

ಗ್ಯಾಸ್‌ ಸಿಲಿಂಡರ್‌ ಬೆಲೆ ಗಗನಮುಖೀಯಾಗಿ ಅಡುಗೆ ಮನೆ ದುಬಾರಿಯಾಗುತ್ತಿದೆ. ಇದರಿಂದ ಜನ ಸಾಮಾನ್ಯ ಗ್ರಾಹಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ ಇತ್ತ ಮನೆ ಬಾಗಿಲಿಗೆ ಸಿಲಿಂಡರ್‌ ವಿತರಿಸಲು ಗ್ಯಾಸ್‌ ಏಜೆನ್ಸಿಗಳು ಹಲವು ವರ್ಷಗಳಿಂದ ಶುಲ್ಕ ವಸೂಲಾತಿ ದಂಧೆ ನಡೆಸುತ್ತಿರುವುದು ಗ್ರಾಹಕರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವ್ಯಾಪ್ತಿಗೆ ಒಳಪಡುವ ಗ್ಯಾಸ್‌ ಏಜೆನ್ಸಿಗಳು ಇಲಾಖೆಯ ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ಏಜೆನ್ಸಿಗಳ ನೌಕರರು ಖುಷಿ ಹೆಸರಲ್ಲಿ ಅಕ್ರಮವಾಗಿ ಸಿಲಿಂಡರ್‌ ಬಳಕೆದಾರರಿಂದ ಹಣ ಕೀಳುತ್ತಿರುವುದು ಅವ್ಯಾಹತವಾಗುತ್ತಿದೆ.

ಗ್ಯಾಸ್‌ ಸಿಲಿಂಡರ್‌ ಸ್ಫೋಟಕ ಅನಿಲ ಆಗಿದೆ. ಹಾಗಾಗಿ ಗೋದಾಮಿನಲ್ಲಿ ಸಂಗ್ರಹಿಸಿಡುವ ಸಿಲಿಂಡರ್‌ನ್ನು ಬೇಡಿಕೆಯಂತೆ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಇಳಿಸಬೇಕು. ರಸ್ತೆ ಬದಿ ಎಲ್ಲೆಂದರಲ್ಲಿ ವಿತರಿಸಬಾರದು. ಜತೆಗೆ ಶುಲ್ಕ ಕುರಿತಂತೆ ಸಹ ಅಗತ್ಯ ನಿಯಮಗಳನ್ನು ರೂಪಿಸಿದೆ. ಇದನ್ನರಿತ ಗ್ರಾಹಕರು ಕೆಲವೊಮ್ಮೆ ನೌಕರರಿಗೆ ಪ್ರಶ್ನೆ ಮಾಡಿದರೆ ಸಿಲಿಂಡರ್‌ ಪೂರೈಕೆ ವಿಳಂಬ ಮಾಡಿ ತೊಂದರೆ ಕೊಡುವುದು ಸಾಮಾನ್ಯವಾಗಿದೆ. ಈ ಅವ್ಯವಹಾರದ ಬಗ್ಗೆ ಏಜನ್ಸಿ ಮಾಲೀಕರುಗಳಿಗೆ ಮಾಹಿತಿ ಇದ್ದರೂ ಸಹ ಸಿಲೆಂಡರ್‌ ವಿತರಕರ ವಿರುದ್ಧ ಕ್ರಮ ಕೈಗೊಳ್ಳದೇ ಪರೋಕ್ಷ ಬೆಂಬಲಕ್ಕೆ ನಿಂತಿದ್ದಾರೆ. ಅಷ್ಟೇ ಅಲ್ಲ ದಂಧೆ ತಡೆಯಬೇಕಾದ ಅಧಿಕಾರಿ ವರ್ಗ ಈ ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ ಎಂಬುದು ಜನರ ಆರೋಪ.

ಇನ್ನೂ ಉಜ್ವಲ್‌ ಯೋಜನೆ ಮತ್ತು ಅನಿಲ ಭಾಗ್ಯ ಯೋಜನೆ ಮೂಲಕ ಸರ್ಕಾರಗಳು ಬಡ ಕುಟುಂಬಗಳಿಗೆ ಗ್ಯಾಸ್‌ ಸಂಪರ್ಕ ಕಲ್ಪಿಸಿವೆ. ಈ ಮಹತ್ವಕಾಂಕ್ಷಿ ಕಾರ್ಯಕ್ರಮದದಿಂದ ಫಲಾನುಭವಿಗಳ ಮನೆ ಬಾಗಿಲಿಗೆ ಉಚಿತವಾಗಿ ಎಲ್‌ಪಿಜಿ ಗ್ಯಾಸ್‌ಗಳು ಸೇರಬೇಕು. ಆದರೆ, ಏಜೆನ್ಸಿ ಕಾರ್ಮಿಕರು “ಖುಷಿ’ ಹೆಸರಿನಲ್ಲಿ 50ರಿಂದ 100 ರೂ.ವರೆಗೆ ಹಣ ಪಡೆದು ಗ್ರಾಹಕರಿಗೆ ಮೋಸ ಮಾಡಿದ್ದಾರೆ. ಗ್ರಾಮೀಣ ಭಾಗದ ಫಲಾನುಭವಿಗಳನ್ನು ಗುಂಪುಗಳಾಗಿ ಕರೆದುಕೊಂಡು ಬಂದು ಪ್ರತಿಯೊಬ್ಬರಿಂದ 500 ರೂ.ವರೆಗೆ ಹಣ ದೋಚಿರುವ ಆರೋಪಗಳು ಹೆಚ್ಚಿವೆ.

ಸಿಲಿಂಡರ್‌ ಡೋರ್‌ ಡಿಲೆವರಿಗಾಗಿ ಆಹಾರ ಇಲಾಖೆ ಅಗತ್ಯ ನಿಯಮಗಳನ್ನು ರೂಪಿಸಿ ಪ್ರತಿ ಏಜೆನ್ಸಿಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅದರಂತೆ 5 ಕಿ.ಮೀ. ವರೆಗೆ ಗ್ರಾಹಕರ ಮನೆಗಳಿಗೆ ಸಿಲೆಂಡರ್‌ಗಳನ್ನು ಉಚಿತವಾಗಿ ಸರಬರಾಜು ಮಾಡಬೇಕು. ನಂತರ ಒಂದು ಕಿ.ಮೀ.ಗೆ ಶುಲ್ಕ ನಿಗದಿ ಮಾಡಲಾಗಿದೆ. ಆದರೂ, ಈ ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರನ್ನು ಸುಲಿಗೆ ಮಾಡಲಾಗುತ್ತಿದೆ. ಏಜೆನ್ಸಿಯ ವಿತರಕ ಕಾರ್ಮಿಕರು ಬಿಲ್‌ಗಿಂತ 20ರಿಂದ 40 ರೂ. ವರೆಗೆ ಹೆಚ್ಚುವರಿ ಹಣ ಪಡೆದು ವಂಚಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಂತೂ ಮನಬಂದಂತೆ ಹಣ ಪಡೆಯಲಾಗುತ್ತಿದೆ. ಗ್ರಾಹಕರಿಗೆ ಇದು ಸಾಮಾನ್ಯವೆಂದು ಒಪ್ಪಿಕೊಂಡಿರುವುದರಿಂದ ಹೆಚ್ಚುವರಿ ಹಣ ತೆರಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ.

Advertisement

11ರಂದು ಏಜೆನ್ಸಿಗಳ ಜತೆ ಸಭೆ ಗ್ಯಾಸ್‌ ಸಿಲಿಂಡರ್‌ಗಳನ್ನು ಮನೆಗಳಿಗೆ ವಿತರಣೆಗೆ ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಕುರಿತು ದೂರುಗಳು ಕೇಳಿ ಬಂದಿವೆ. ಈ ಹಿಂದೆ ಏಜೆನ್ಸಿ ಮಾಲೀಕರುಗಳ ಜತೆಗೆ ಸಭೆ ನಡೆಸಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿತ್ತು. ಅ.11ರಂದು ಮತ್ತೊಮ್ಮೆ ಸಭೆ ನಡೆಸಲಾಗುವುದು. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ವಹಿಸಲಾಗುವುದು.
ಬಾಬು ರೆಡ್ಡಿ, ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೀದರ್

ಶಶಿಕಾಂತ ಬಂಬುಳಗ

Advertisement

Udayavani is now on Telegram. Click here to join our channel and stay updated with the latest news.

Next