ಬೆಳಗಾವಿ: ಟಿಕೆಟ್ ಪಡೆಯುವ ವಿಚಾರದಲ್ಲಿ ಸಾಕಷ್ಟು ಆಕ್ಷೇಪಣೆಗಳನ್ನು ಎದುರಿಸಿದ್ದ ಜಗದೀಶ ಶೆಟ್ಟರ್ ಈಗ ಒಂದು ಹಂತದ ಆತಂಕ ನಿವಾರಿಸಿಕೊಂಡಿದ್ದಾರೆ. ಪಕ್ಷದ ಪ್ರಮುಖ ಪ್ರಭಾವಿ ನಾಯಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲಾ ನಾಯಕರ ಜತೆ ನಡೆದ ಸಂಧಾನ ಸಭೆ ಹಾಗೂ ಪ್ರಚಾರ ರ್ಯಾಲಿ ಶೆಟ್ಟರ್ ಅವರಿಗೆ ನೈತಿಕ ಬಲ ತಂದುಕೊಟ್ಟಿದೆ.
Advertisement
ಸಭೆಯಲ್ಲಿ ಜಗದೀಶ ಶೆಟ್ಟರ್ ಬಗ್ಗೆ ನಿರೀಕ್ಷೆ ಮಾಡಿದಂತೆ ಸ್ಥಳೀಯ ಮುಖಂಡರಿಂದ ಹಾಗೂ ಕಾರ್ಯಕರ್ತರಿಂದ ಅಂತಹಅಸಮಾಧಾನಗಳು ಕಂಡು ಬರಲಿಲ್ಲ. ಆದರೆ ಟಿಕೆಟ್ ಹಂಚಿಕೆ ಮಾಡುವ ಮುನ್ನ ಸ್ಥಳೀಯ ನಾಯಕರಿಗೆ ಆದ್ಯತೆ ನೀಡಬೇಕಾಗಿತ್ತು ಎಂಬ ಅಭಿಪ್ರಾಯಗಳು ಕೇಳಿ ಬಂದವು.
Related Articles
Advertisement
ಜಗದೀಶ ಶೆಟ್ಟರ್ಗೆ ಸವಾಲು: ಹಾಗೆ ನೋಡಿದರೆ ಜಗದೀಶ ಶೆಟ್ಟರ್ಗೆ ಬೆಳಗಾವಿ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ. ಸಕಾರಾತ್ಮಕ ಅಂಶಗಳಿಗಿಂತ ನಕಾರಾತ್ಮಕ ಅಂಶಗಳ ಸಂಖ್ಯೆಯೇ ಹೆಚ್ಚು. ಮುಖ್ಯವಾಗಿ ಶೆಟ್ಟರ್ ಅವರಿಗೆ ಕ್ಷೇತ್ರದ ಪರಿಚಯ ಹಾಗೂ ಸಂಪರ್ಕ ಇಲ್ಲ ಎಂಬ ಕೊರತೆ ಕಾಡಲಿದೆ. ಇದಲ್ಲದೆ ಹಾಲಿ ಸಂಸದರು ಸಹ ಕ್ಷೇತ್ರದ ಜನರ ಜತೆ ನಿರೀಕ್ಷಿತ ಪ್ರಮಾಣದಲ್ಲಿ ಬೆರೆಯಲಿಲ್ಲ ಎಂಬ ಅಭಿಪ್ರಾಯ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಕಾಣುತ್ತಿದೆ. ಇದೆಲ್ಲದರ ಜತೆಗೆ ಲಿಂಗಾಯತ ಪಂಚಮಸಾಲಿ ಎಂಬ ಟ್ರಂಪ್ ಕಾರ್ಡ್ ಶೆಟ್ಟರ್ ಅವರಿಗೆ ಸಮಸ್ಯೆ ತಂದೊಡ್ಡಲಿದೆ.
ಕಾಂಗ್ರೆಸ್ ನಾಯಕರು ಶೆಟ್ಟರ್ ಹೆಸರು ಘೋಷಣೆಯಾಗುತ್ತಿದ್ದಂತೆ ಪ್ರಚಾರದಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ಬಿಟ್ಟು ಪಂಚಮಸಾಲಿ ಕಾರ್ಡ್ ಬಳಕೆ ಮಾಡಲು ಆರಂಭ ಮಾಡಿದ್ದಾರೆ. ಇದನ್ನು ಜಗದೀಶ ಶೆಟ್ಟರ್ ಯಾವ ರೀತಿ ನಿಭಾಯಿಸುತ್ತಾರೆ ಎಂಬುದು ಕುತೂಹಲದ ಪ್ರಶ್ನೆ.
ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ವಶದಲ್ಲೇ ಉಳಿಯಬೇಕಾದರೆ ಜಗದೀಶ ಶೆಟ್ಟರ್ ಸ್ಥಳೀಯ ನಾಯಕರನ್ನು ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕ್ಷೇತ್ರದಲ್ಲಿರುವ 2000ಕ್ಕೂ ಅಧಿಕ ಮತಗಟ್ಟೆಗಳ ಮಾಹಿತಿ ಇರುವ ನಾಯಕರು ಹಾಗೂ ಕಾರ್ಯಕರ್ತರಿಗೆ ಅದರ ಜವಾಬ್ದಾರಿ ಕೊಡಬೇಕು ಎಂಬುದು ಮುಖಂಡರ ಅಭಿಪ್ರಾಯ.
ಚರ್ಚೆಗೆ ಗ್ರಾಸವಾದ ಜಾರಕಿಹೊಳಿ: ಜಿಲ್ಲೆಯಲ್ಲಿ ಯಡಿಯೂರಪ್ಪ ಎರಡು ದಿನಗಳ ಕಾಲ ಇದ್ದರೂ ಜಾರಕಿಹೊಳಿ ಸಹೋದರರು ಯಾವ ಸಭೆ ಹಾಗೂ ಪ್ರಚಾರ ಕಾರ್ಯಕ್ಕೆ ಬರದೆ ದೂರ ಉಳಿದಿದ್ದು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಜಗದೀಶ ಶೆಟ್ಟರ್ಗೆ ಬೆಳಗಾವಿ ಟಿಕೆಟ್ ಕೊಡಿಸುವಲ್ಲಿ ಜಾರಕಿಹೊಳಿ ಸಹೋದರರ ಪಾತ್ರವೂ ಇದೆ ಎಂಬ ಮಾತುಗಳ ನಡುವೆಯೇ ಇಬ್ಬರೂ ಸಹೋದರರು ಜಿಲ್ಲಾ ನಾಯಕರ ಜತೆಗೆ ನಡೆದ ಸಂಧಾನ ಸಭೆಯಲ್ಲಿ ಏಕೆ ಭಾಗವಹಿಸಲಿಲ್ಲ ಎಂಬ ಅನುಮಾನದ ಪ್ರಶ್ನೆಗಳು ಮೂಡಿವೆ.
ಒಂದು ಮೂಲದ ಪ್ರಕಾರ ಜಿಲ್ಲೆಯ ನಾಯಕರು ಜಾರಕಿಹೊಳಿ ಸಹೋದರರಿಗೆ ಚುನಾವಣಾ ಕಾರ್ಯದ ನೇತೃತ್ವ ನೀಡಬಾರದು ಎಂಬ ಒತ್ತಾಯ ಮಾಡಿದ್ದಾರೆ. ಇದರಿಂದ ಕೆಲ ನಾಯಕರು ಪ್ರಚಾರ ಕಾರ್ಯದಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಸಹೋದರರು ಸಂಧಾನ ಸಭೆಗೆ ಬಂದಿರಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಆತ್ಮವಿಶ್ವಾಸ ಹೆಚ್ಚಿಸಿದ ರ್ಯಾಲಿ: ಒಂದು ಕಡೆ ಅಸಮಾಧಾನ, ಟಿಕೆಟ್ ಸಿಗಲಿಲ್ಲ ಎಂಬ ನೋವಿನ ನಡುವೆ ಬುಧವಾರ ನಗರದಲ್ಲಿ ನಡೆದ ರ್ಯಾಲಿ ಹಾಗೂ ಪ್ರಚಾರ ಕಾರ್ಯ ಜಗದೀಶ ಶೆಟ್ಟರ್ ಅವರಿಗೆ ಹೊಸ ಆತ್ಮವಿಶ್ವಾಸ ಮೂಡಿಸಿರುವದು ಸುಳ್ಳಲ್ಲ. ಬೆಳಗಾವಿ ನನ್ನ ಕರ್ಮಭೂಮಿ, ಇಲ್ಲಿಯೇ ಮನೆ ಮಾಡುವದಾಗಿ ಹೇಳಿರುವ ಶೆಟ್ಟರ್ ತಮ್ಮ ಕರ್ಮಭೂಮಿಯಲ್ಲಿ ಯಾವ ಫಲ ಪಡೆಯುತ್ತಾರೆ ಎಂಬ ಕುತೂಹಲ ಜನರಲ್ಲಿದೆ.
*ಕೇಶವ ಆದಿ