Advertisement

ಆರ್ ಟಿಓ ಕಚೇರಿಗೆ ಲೋಕಾಯುಕ್ತ ನ್ಯಾ.ಪಾಟೀಲ್ ದಿಢೀರ್ ಭೇಟಿ : ಅಧಿಕಾರಿಗಳಿಗೆ ಎಚ್ಚರಿಕೆ

04:12 PM Jun 24, 2022 | Team Udayavani |

ವಿಜಯಪುರ : ಕರ್ನಾಟಕ ರಾಜ್ಯ ಲೋಕಾಯುಕ್ತ‌ ನ್ಯಾಯಮೂರ್ತಿ ಬಿ. ಎಸ್.ಪಾಟೀಲ್ ಶುಕ್ರವಾರ ನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್ ಟಿಓ) ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಬದ್ಧತೆಯ ಕರ್ತವ್ಯ ನಿರ್ವಹಣೆಯ ಕುರಿತು ಮಾರ್ಗದರ್ಶನ ಮಾಡಿ, ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಕಂಡುಬಂದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

Advertisement

ಆರ್ ಟಿಓ ಕಚೇರಿಯಲ್ಲಿ ಸಲ್ಲಿಕೆಯಾದ ಹಾಗೂ ವಿಲೆ ಮಾಡಲಾದ ಕಡತಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಲೋಕಾಯುಕ್ತ ನ್ಯಾ. ಎಸ್‌.ಬಿ. ಪಾಟೀಲ್ , ಕಡತ ವಿಲೆ ಮಾಡುವಲ್ಲಿ ಅನಗತ್ಯವಾಗಿ ವಿಳಂಬ ಮಾಡದಂತೆ ತಾಕೀತು ಮಾಡಿದರು.

ಚೆಕ್ ಫೊಸ್ಟ್ ಗಳಲ್ಲಿ ತೀವ್ರ ಸಮಸ್ಯೆ ಇರುವ ಮಾಹಿತಿ ಬರುತ್ತಿವೆ. ಒಂದೊಮ್ಮೆ ಈ ಕುರಿತು ದೂರು ಬಂದರೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಆರ್ ಟಿಓ ಅವರಿಗೆ ಎಚ್ಚರಿಕೆ ನೀಡಿದರು.

ಅಧಿಕಾರಿಗಳು ಕಛೇರಿಗೆ ನಿಗದಿತ ಸಮಯಕ್ಕೆ ಹಾಜರಿರಬೇಕು. ಮನಸ್ಸಿಗೆ ಬಂದಂತೆ ಕಚೇರಿಗೆ ಬರುವುದು, ಹೋಗುವುದು ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಪಾರ್ಥನಳ್ಳಿಗೆ ಹಾಗೂ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ಪ್ರತಿ ತಿಂಗಳ ವಾಹನ ನೋಂದಣಿ ಸೇರಿದಂತೆ ಇತರೆ ಕೆಲಸಕ್ಕಾಗಿ ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿ, ವಿಲೆ ಮಾಡಿದ ವಿವರ, ವಿಲೆ ಮಾಡದೇ ಉಳಿದ ಕಡತಗಳಿಗೆ ಸೂಕ್ತ ಕಾರಣ ಸಹಿತ ಲೋಕಾಯುಕ್ತ ಕಚೇರಿಗೆ ಮಾಹಿತಿ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿದರು.

Advertisement

ವಿಜಯಪುರ ಬಾಗಲಕೋಟೆ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ಸೇರಿದಂತೆ ವಿಜಯಪುರ, ಬಾಗಲಕೋಟೆ ಲೋಕಾಯುಕ್ತ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next