Advertisement

ಉಪ್ಪೂರು ಗ್ರಾಮಕ್ಕೆ ಇಂದು ನ್ಯಾಯಾಂಗ, ಜಿಲ್ಲಾಡಳಿತ : ಗ್ರಾಮಸ್ಥರಿಗೆ ಕಾನೂನು ನೆರವು

04:23 PM Sep 10, 2022 | Team Udayavani |

ಉಡುಪಿ: ಉಪ್ಪೂರು ಗ್ರಾ.ಪಂ. ವ್ಯಾಪ್ತಿಯ ವಿವಿಧ ಸಮಸ್ಯೆಗಳ ಬಗ್ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತದ ಮೂಲಕ ಪರಿಹಾರ ಒದಗಿಸುವ, ಕಾನೂನು ಅರಿವು ಮತ್ತು ನೆರವು ನೀಡುವ ಕಾರ್ಯಕ್ರಮ ಸೆ. 10ರ ಬೆಳಗ್ಗೆ 10.30ಕ್ಕೆ ಉಪ್ಪೂರು ಜಾತಬೆಟ್ಟುವಿನ ಚಿತ್ತಾರಿ ಮಹಾಬಲೇಶ್ವರ ದೇಗುಲದಲ್ಲಿ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಉಪ್ಪೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಮೂಲಕ 1,200 ಮನೆಗಳ ಸಮೀಕ್ಷೆ ನಡೆಸಿ, ಗ್ರಾಮಸ್ಥರ ವಿವಿಧ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಈ ಸಮಸ್ಯೆಗಳಲ್ಲಿ ಸ್ಥಳದಲ್ಲೇ ಬಗೆಹರಿಸಬಹುದಾದ ಸಮಸ್ಯೆಗಳನ್ನು ಸೆ. 10ರಂದು ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಮೂಲಕ ಪರಿಹಾರ ಒದಗಿಸಲಾಗುವುದು. ಉಳಿದ ಸಮಸ್ಯೆಗಳ ವಿವರಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ ಕಾಲಮಿತಿಯಲ್ಲಿ ಅವುಗಳಿಗೆ ಪರಿಹಾರ ಒದಗಿಸುವಂತೆ ತಿಳಿಸಲಾಗುವುದು. ಈ ಬಗ್ಗೆ ಆದ ಪ್ರಗತಿಯ ಕುರಿತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನಿಯಮಿತವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ವಿವಿಧ ಇಲಾಖೆಯ ವಸ್ತು ಪ್ರದರ್ಶನ ಮಳಿಗೆ ತೆರದು ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಯೋಜನೆಯ ನೆರವು ಪಡೆಯಲು ಅಗತ್ಯವಿರುವ ಅರ್ಜಿಗಳನ್ನು ನೀಡಿ, ಸೂಕ್ತ ದಾಖಲಾತಿಗಳಿದ್ದಲ್ಲಿ ಸ್ಥಳದಲ್ಲಿಯೇ ಸೌಲಭ್ಯಗಳಿಗೆ ಮಂಜೂರಾತಿ ನೀಡಲಾಗುವುದು. ಹೈಕೋರ್ಟ್‌ ನ್ಯಾಯಾಧೀಶರು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಾಧೀಶ ಬಿ. ವೀರಪ್ಪ ಭಾಗವಹಿಸಲಿದ್ದಾರೆ ಎಂದರು.

ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲೆ ಪ್ರೊ| ನಿರ್ಮಲಾ ಕುಮಾರಿ ಮಾತನಾಡಿ, ಕಾಲೇಜಿನ 172 ವಿದ್ಯಾರ್ಥಿಗಳು 17 ಗುಂಪುಗಳಾಗಿ ವಿಂಗಡನೆಗೊಂಡು ಉಪ್ಪೂರು ಗ್ರಾಮ ವ್ಯಾಪ್ತಿಯ 1,200 ಮನೆಗಳ ಸಮೀಕ್ಷೆ ಮಾಡಿದ್ದಾರೆ. ಪಿಂಚಣಿ ಮಂಜೂರಾತಿ, ವಿಕಲಚೇತನ ಸೌಲಭ್ಯ, ಕಂದಾಯ ಸಮಸ್ಯೆಗಳು ಮತ್ತು ರಸ್ತೆ ಸಮಸ್ಯೆಯ ಬಗ್ಗೆ ಗ್ರಾಮಸ್ಥರು ಸಮೀಕ್ಷೆಯಲ್ಲಿ ತಿಳಿಸಿ¨ªಾರೆ ಎಂದು ಮಾಹಿತಿ ನೀಡಿದರು.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ವಕೀಲರ ಸಂಘ ಅಧ್ಯಕ್ಷ ನಾಗರಾಜ್‌, ಪ್ರ. ಕಾರ್ಯದರ್ಶಿ ರೊನಾಲ್ಡ್‌ ಪ್ರವೀಣ್‌ ಕುಮಾರ್‌, ವಕೀಲ ನಾಗರಂಜನ್‌ ಉಪಸ್ಥಿತರಿದ್ದರು.

Advertisement

ಮೆಗಾ ಲೋಕ್‌ ಅದಾಲತ್‌ 5 ಸಾವಿರ ಪ್ರಕರಣ ಇತ್ಯರ್ಥ
ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ರಾಜ್ಯಾದ್ಯಂತ ನ. 12ರಂದು ಇ-ಲೋಕ ಅದಾಲತ್‌/ ಮೆಗಾ ಲೋಕ್‌ ಅದಾಲತ್‌ ನಡೆಯಲಿದೆ. ಜಿಲ್ಲೆಯಲ್ಲಿ 5 ಸಾವಿರ ಪ್ರಕರಣ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ. 33 ಸಾವಿರ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದೆ. ಇದರಲ್ಲಿ 15ರಿಂದ 18 ಸಾವಿರ ಪ್ರಕರಣಗಳು ಅದಾಲತ್‌ ಇತ್ಯರ್ಥವಾಗಲು ಅರ್ಹವಾದ ಪ್ರಕರಣಗಳು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next