Advertisement

ಅನ್‌ಲಾಕ್‌ ಹಂತ-2: ರಾಜ್ಯದ ಮಾರ್ಗಸೂಚಿ ಪ್ರಕಟ

09:51 AM Jul 01, 2020 | sudhir |

ಬೆಂಗಳೂರು: ಕೋವಿಡ್ ಲಾಕ್‌ಡೌನ್‌ ಅನ್‌ಲಾಕ್‌ ಹಂತ-2ಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಗೃಹ ಮಂತ್ರಾಲಯದ ಅಧಿಸೂಚನೆ ಆಧಾರದ ಮೇಲೆ ರಾಜ್ಯ ಸರಕಾರವೂ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಜು. 1ರಿಂದ 31ರ ವರೆಗೂ ಮುಂದುವರಿಯಲಿದೆ.

Advertisement

ಜು. 31ರ ವರೆಗೆ ಶಾಲಾ-ಕಾಲೇಜು, ತರಬೇತಿ ಸಂಸ್ಥೆಗಳು ತೆರೆಯುವುದಿಲ್ಲ. ಚಿತ್ರಮಂದಿರ, ಜಿಮ್‌, ಈಜುಕೊಳ, ಮೆಟ್ರೋ ಸೇವೆಯೂ ಇರುವುದಿಲ್ಲ. ಲಾಕ್‌ಡೌನ್‌ ಇಲ್ಲದ ಸಮಯದಲ್ಲಿ ವಿವಾಹ ಸಮಾರಂಭಕ್ಕೆ ಅವಕಾಶ ವಿದ್ದು, 50 ಜನ ಪಾಲ್ಗೊಳ್ಳಲು ಮಾತ್ರ ಅನುಮತಿ. ರವಿವಾರದ ಲಾಕ್‌ಡೌನ್‌ ಸಂದರ್ಭ ಮೊದಲೇ ನಿಗದಿ ಯಾಗಿರುವ ವಿವಾಹಕ್ಕೆ ಮಾತ್ರ ಅನುಮತಿಯಿದೆ. ಅದೇ ರೀತಿ ಅಂತ್ಯಕ್ರಿಯೆಗೆ 20 ಮಂದಿಗೆ ಮಾತ್ರ ಅವಕಾಶ ಇರಲಿದೆ.

ರಾಜಕೀಯ ಸಭೆ, ಸಮಾರಂಭ, ಧಾರ್ಮಿಕ ಜಾತ್ರೆಗಳಿಗೆ, ಮನೋ ರಂಜನೆ ಪಾರ್ಕ್‌ಗಳಿಗೆ ನಿರ್ಬಂಧ ಮುಂದುವರಿಯಲಿದ್ದು, ಕೇಂದ್ರ ಗೃಹ ಸಚಿವಾಲಯದ ಅನುಮತಿ ಹೊರತುಪಡಿಸಿದ ಅಂತಾರಾಷ್ಟ್ರೀಯ ವಿಮಾನ ಸೇವೆಯೂ ಇರುವುದಿಲ್ಲ. ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ ಸೇವೆ ಜು. 31ರ ವರೆಗೂ ಮುಂದುವರಿಯಲಿದೆ.

ಕಟ್ಟುನಿಟ್ಟಿನ ಕ್ರಮ
ಅನ್‌ಲಾಕ್‌ ಹಂತ-2ರ ಮಾರ್ಗ ಸೂಚಿ ಅನುಷ್ಠಾನ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ನಗರ ಪೊಲೀಸ್‌ ಆಯುಕ್ತರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಸುತ್ತೋಲೆ ಹೊರಡಿಸಿದ್ದಾರೆ.

ಮಾಸ್ಕ್ ಧರಿಸದಿದ್ದರೆ 200 ರೂ. ದಂಡ
ಸಾರ್ವಜನಿಕ ಸ್ಥಳ, ಸಂಚಾರ ಸಮಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಬೆಂಗಳೂರು ಸಹಿತ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದಿದ್ದರೆ 200 ರೂ. ದಂಡ, ರಾಜ್ಯದ ಇತರೆಡೆ ದಂಡದ ಮೊತ್ತ 100 ರೂ. ನಿಗದಿಪಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next