ಚಿಕ್ಕೋಡಿ: ಗಿಡದಿಂದ ಗಿಡಕ್ಕೆ ಜಿಗಿಯುವ ಸಂದರ್ಭದಲ್ಲಿ ಕೋತಿಯೊಂದು ಕೈ ಮುರಿದುಕೊಂಡು ಸಂಕಷ್ಟ ಪಡುತ್ತಿರುವ ವೇದನೆ ಕಂಡು ಸ್ಥಳೀಯರು ಪಶು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಘಟನೆ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ನಡೆದಿದೆ.
ಕೇರೂರ ಗ್ರಾಮದ ರೈತ ಸಂಘದ ಮುಖಂಡ ಮಂಜುನಾಥ ಪರಗೌಡ ಮತ್ತು ಸ್ನೇಹಿತರು ಕೂಡಿಕೊಂಡು ಕೋತಿಯನ್ನು ಹಿಡಿದು ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಮೂರು ನಾಲ್ಕು ದಿನಗಳಿಂದ ಗಿಡದಿಂದ ಬಿದ್ದು ಕೈ ಮುರಿದುಕೊಂಡು ಓಡಾಡುತ್ತಿದ್ದ ಕೋತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಹಿಡಿಯಲು ಬಂದಾಗ ಕೈಗೆ ಸಿಗದೆ ಓಡಿ ಹೋಗಿತ್ತು, ಆದರೆ ರವಿವಾರ ದಿನ ಚಿಕ್ಕೋಡಿ ತಾಲೂಕು ರೈತ ಮುಖಂಡ ಮಂಜುನಾಥ ಪರಗೌಡರು ತಮ್ಮ ಮನೆ ದೇವರಿಗೆ ಹೋಗುವ ಸಂಧರ್ಭದಲ್ಲಿ ದೇವರಿಗಿಂತ ಜೀವ ಉಳಿಸುವುದು ಮುಖ್ಯವೆಂದು ತಿಳಿದು ಪಶು ಆಸ್ಪತ್ರೆಗೆ ಕೋತಿಯನ್ನು ಕರೆದೊಯ್ಯುವ ವ್ಯವಸ್ಥೆ ಮಾಡಿದ್ದಾರೆ, ಅದರಂತೆ ಪಶು ಆಸ್ಪತ್ರೆ ವೈದ್ಯರಿಗೆ ಕೋತಿಯ ಪರಿಸ್ಥಿತಿ ತಿಳಿಸಿದ್ದಾರೆ, ರವಿವಾರ ರಜೆ ಇರುವ ಕಾರಣ ಸೋಮವಾರ ಕರೆದುಕೊಂಡು ಬನ್ನಿ ಎಂದು ವೈದ್ಯರು ತಿಳಿಸಿದಾಗ ಮಂಜುನಾಥ ಪರಗೌಡ ಅವರು ಕೋತಿಗೆ ಆಹಾರ. ನೀರು ಕುಡಿಸಿದ್ದಾರೆ.
ಮರು ದಿನ ಅಂದರೆ ಸೋಮವಾರ ನೋಡಿದಾಗ ಕೋತಿ ಗ್ರಾಮದ ಕಾಳಿಂಗೆ ಅವರ ತೋಟದಲ್ಲಿ ಗಿಡದಿಂದ ಜಿಗಿದು ಬಾವಿಯಲ್ಲಿ ಬಿದ್ದಿದೆ. ಅದನ್ನು ನೋಡಿದ ರೈತರು ಮಂಜುನಾಥ ಪರಗೌಡರಿಗೆ ವಿಷಯ ತಿಳಿಸಿ ಕೋತಿಯನ್ನು ಪಕ್ಕಕ್ಕೆ ಎಳೆದು ಕೂರಿಸುತ್ತಾರೆ, ಬಾವಿಗೆ ಇಳಿದು ಮಂಗನನ್ನು ಮೇಲೆ ತಂದು ತಮ್ಮದೇ ಕಾರಿನಲ್ಲಿ ಮಂಗನನ್ನು ಚಿಕ್ಕೋಡಿ ಪಶು ಆಸ್ಪತ್ರೆಗೆ ಕರೆ ತರುತ್ತಾರೆ,ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ವ್ಯವಸ್ಥೆ ಇಲ್ಲದ ಕಾರಣ ಅದರ ನೋವು ಮತ್ತು ಹುಳು ಬೀಳುವಂತೆ ಚುಚ್ಚುಮದ್ದು ನೀಡಿದ್ದಾರೆ. ನಂತರ ವೈದ್ಯರು ಅರಣ್ಯ ಇಲಾಖೆಯವರನ್ನು ಕರೆಸಿ ಮಂಗನನ್ನು ಬೆಳಗಾವಿ ಆಸ್ಪತ್ರೆಗೆ ದಾಖಲು ಮಾಡಿ ಸೂಕ್ತ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಬೇಕೆಂದು ಹೇಳಿದಾಗ ಅರಣ್ಯಾಧಿಕಾರಿಗಳು ಮಂಗನ ಚಿಕಿತ್ಸೆ ಕೊಡಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂದು ರೈತ ಮುಖಂಡ ಮಂಜುನಾಥ ಪರಗೌಡ ತಿಳಿಸಿದರು.
ಇದನ್ನೂ ಓದಿ: Tejas Aircraft: ರಾಜಸ್ಥಾನದ ಜೈಸಲ್ಮೇರ್ ನಲ್ಲಿ ತೇಜಸ್ ಯುದ್ಧ ವಿಮಾನ ಪತನ, ಪಾರಾದ ಪೈಲೆಟ್