Advertisement

ಹಾವೇರಿಯಲ್ಲಿ “ಕೈ’ಕೊಟ್ಟ ಲಿಂಗಾಯತರು, ಮುಸ್ಲಿಮರು

12:29 AM May 25, 2019 | Team Udayavani |

ಹಾವೇರಿ: ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್‌ ಈ ಬಾರಿ ತನ್ನೆಲ್ಲ ಹಿಂದಿನ ಸಂಪ್ರದಾಯ ಮುರಿದು, ಸಾಕಷ್ಟು ಅಳೆದು ತೂಗಿ ಟಿಕೆಟ್‌ ನೀಡಿದರೂ ನಿರೀಕ್ಷಿತ ಫಲ ಪಡೆಯುವಲ್ಲಿ ವಿಫಲವಾಯಿತು.

Advertisement

ಕಾಂಗ್ರೆಸ್‌ ಪಕ್ಷ ಕ್ಷೇತ್ರದಲ್ಲಿ ಕಳೆದ ಆರು ದಶಕಗಳಿಂದ ಮುಸ್ಲಿಂ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡುತ್ತ ಬಂದಿತ್ತು. 2004ರಿಂದ ನಿರಂತರ ಮೂರು ಬಾರಿ ಸೋಲುಂಡಿದ್ದರಿಂದ ಈ ಬಾರಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಉತ್ಕಟ ಇಚ್ಛೆ ಹೊಂದಿತ್ತು. ಅದಕ್ಕಾಗಿ ಇದೇ ಮೊದಲ ಬಾರಿಗೆ ತಾನು ಹಲವು ದಶಕಗಳಿಂದ ಪಾಲಿಸಿಕೊಂಡು ಬಂದ “ಮುಸ್ಲಿಂ ಮೀಸಲು’ ಸಂಪ್ರದಾಯವನ್ನು ತಾನೇ ಮುರಿದು ಹಿಂದುಗಳಿಗೆ ಟಿಕೆಟ್‌ ನೀಡಿತು.

ಇದರ ಜತೆಗೆ ಕ್ಷೇತ್ರದ ಜಾತಿ ಲೆಕ್ಕಾಚಾರ ಹಾಕಿ ಬಹುಸಂಖ್ಯಾತ ಲಿಂಗಾಯತರ ಮತ ಸೆಳೆಯಲು ರಡ್ಡಿ ಲಿಂಗಾ ಯತ ಸಮುದಾಯದ ಡಿ.ಆರ್‌. ಪಾಟೀಲ ಅವರಿಗೆ ಟಿಕೆಟ್‌ ನೀಡಿತು. ಆದರೆ, ಫಲಿತಾಂಶ ಮಾತ್ರ ಕಾಂಗ್ರೆಸ್‌ನ ಈ ಎಲ್ಲ ಲೆಕ್ಕಾಚಾರವನ್ನೂ ತಲೆಕೆಳಗಾಗಿಸಿದೆ.

ಈ ಮೊದಲು ಧಾರವಾಡ ದಕ್ಷಿಣ ಲೋಕಸಭೆ ಕ್ಷೇತ್ರವಾಗಿದ್ದ ಹಾವೇರಿ ಲೋಕಸಭೆ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಆದರೆ, 2004ರಿಂದ ಕ್ಷೇತ್ರದಲ್ಲಿ ನಿರಂತರವಾಗಿ ಕಮಲ ಅರಳುತ್ತ ಬಂದಿದೆ. 2004ರಲ್ಲಿ ಬಿಜೆಪಿಯಿಂದ ಮಂಜು ನಾಥ ಕುನ್ನೂರ ಆಯ್ಕೆಯಾದರೆ. 2009, 2014 ಹಾಗೂ ಈಗ ಮೂರನೇ ಬಾರಿ ಬಿಜೆಪಿಯ ಶಿವಕುಮಾರ ಉದಾಸಿ ಗೆದ್ದು ಹ್ಯಾಟ್ರಿಕ್‌ ಜಯ ಸಾಧಿಸಿದ್ದಾರೆ.

ಅಲ್ಪಸಂಖ್ಯಾತರ ಆಕ್ರೋಶ: ಈ ಬಾರಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಾಗಿ ಚುನಾವಣೆ ಎದುರಿಸಿದ್ದರಿಂದ ಎರಡೂ ಪಕ್ಷಗಳ ಸಾಂಪ್ರದಾಯಿಕ ಅಲ್ಪಸಂಖ್ಯಾತ ಮತಗಳು ಪಕ್ಷಕ್ಕೆ ಅನುಕೂಲ ತಂದು ಕೊಡಲಿವೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಬಹು ನಂಬಿಕೆ ಇಟ್ಟುಕೊಂಡಿತ್ತು.

Advertisement

ಆದರೆ, ಕಾಂಗ್ರೆಸ್‌ ಈ ಬಾರಿ ಮುಸ್ಲಿಮೇತರರಿಗೆ ಟಿಕೆಟ್‌ ನೀಡಿದ್ದರಿಂದ ಮುಸ್ಲಿಮರು ಕಾಂಗ್ರೆಸ್‌ ವಿರುದ್ಧ ಸಿಡಿದೆದ್ದರು. ಮೈತ್ರಿ ಅಭ್ಯರ್ಥಿ ಸೋಲಿಸುವ ಮೂಲಕ ತಮ್ಮ ಪ್ರಾಬಲ್ಯ ಏನು ಎಂಬುದನ್ನು ತೋರಿಸಲು ನಿರ್ಧರಿಸಿದ್ದರು. ಮುಸ್ಲಿಮರ ಈ ನಡೆ ಕಾಂಗ್ರೆಸ್‌ ಮತ ಪೆಟ್ಟಿಗೆಗೆ ಭಾರಿ ಪೆಟ್ಟು ನೀಡಿತು.

ಲಿಂಗಾಯತರೂ “ಕೈ’ ಬಿಟ್ಟರು: ಇನ್ನು ಎದುರಾಳಿ ಬಿಜೆಪಿ ಅಭ್ಯರ್ಥಿ ಲಿಂಗಾಯತ ಆಗಿದ್ದು, ತಮ್ಮ ಅಭ್ಯರ್ಥಿಯೂ ಲಿಂಗಾಯತ. ಆದರೆ, ಕ್ಷೇತ್ರದ ಬಹುಸಂಖ್ಯಾತ ಲಿಂಗಾಯತ ಮತಗಳು ಸಹ ಕಾಂಗ್ರೆಸ್‌ಗೆ ಕೈ ಹಿಡಿಯಲಿವೆ ಎಂಬ ಜಾತಿ ಲೆಕ್ಕಾಚಾರವನ್ನು ಪಕ್ಷ ನಡೆಸಿತ್ತು.

ಈ ಲೆಕ್ಕಾಚಾರದ ಆಧಾರದಲ್ಲಿ ಕಾಂಗ್ರೆಸ್‌ ರಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿದ ಡಿ.ಆರ್‌. ಪಾಟೀಲ ಅವರಿಗೆ ಟಿಕೆಟ್‌ ನೀಡಿತ್ತು. ಆದರೆ, ಇಲ್ಲಿಯೂ ಲಿಂಗಾಯತ ಮತಗಳು ಕೈಹಿಡಿಯ ಲಿಲ್ಲ. ಅವು ಮೋದಿ ಅಲೆಯಲ್ಲಿ ತೇಲಿ ಹೋಗಿ ಕಮಲ ಅರಳಿಸಿದವು. ಹೀಗಾಗಿ ಕಾಂಗ್ರೆಸ್‌ಗೆ ಜಾತಿ ಲೆಕ್ಕಾಚಾರವೂ ಸಹ ಕೈಕೊಟ್ಟಿತು.

* ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next