Advertisement

Karnataka: ಪಠ್ಯಪುಸ್ತಕ ಪರಿಷ್ಕರಣೆಗೆ ಸಮಾನ ಮನಸ್ಕರ ಒಕ್ಕೂಟ ಆಗ್ರಹ: CM ಭೇಟಿ ಮಾಡಿದ ನಿಯೋಗ

12:28 AM May 30, 2023 | Team Udayavani |

ಬೆಂಗಳೂರು: ಬಿಜೆಪಿ ಸರಕಾರದ ಅವಧಿಯಲ್ಲಿ ಸಿದ್ಧಪಡಿಸಿದ್ದ ಪಠ್ಯ ಪುಸ್ತಕ ಪರಿಷ್ಕರಣೆಗೆ ತಜ್ಞರ ಸಮಿತಿ ರಚಿಸುವಂತೆ ಸಾಹಿತಿ-ಚಿಂತಕರನ್ನೊಳಗೊಂಡ ಸಮಾನ ಮನಸ್ಕರ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.

Advertisement

ಸೋಮವಾರ ಗೃಹ ಕಚೇರಿ “ಕೃಷ್ಣಾ’ ದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಿಯೋಗ, ಈಗಾಗಲೇ ಮುದ್ರಣವಾಗಿ ಬಿಇಒ ಕಚೇರಿ ಹಾಗೂಶಾಲೆಗಳಿಗೆ ತಲುಪಿರುವ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸದಿರಲು ಸ್ಪಷ್ಟ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.

ಈ ಕುರಿತು ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಒಕ್ಕೂಟ, ಈ ಪಠ್ಯಪುಸ್ತಕಗಳಲ್ಲಿ ಬದಲಾಗಿದ್ದ ಪ್ರಮುಖ ಪಾಠಗಳನ್ನು ಮತ್ತು ಕಲಿಕಾಂಶಗಳನ್ನು ಈ ಪುಸ್ತಕಗಳಿಂದ ತೆಗೆದು ಹಾಕಿ ವಿತರಿಸಬೇಕು. ಎಲ್ಲ ಪುಸ್ತಕಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಇಂದಿನ ಬದಲಾವಣೆಗೆ ತಕ್ಕಂತೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಮನವಿ ಮಾಡಿದೆ.

ಕಳೆದ 4-5 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು. 13,352 ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಶಾಲೆ ಪ್ರಾರಂಭವಾಗುವ ಮುನ್ನ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಸರಕಾರಿ ಶಾಲೆಯಲ್ಲಿ ಮಕ್ಕಳಿ ದ್ದರೂ ಶೂನ್ಯ ಶಿಕ್ಷಕರಿರುವ ಶಾಲೆಗ ಳಿಗೆ ಕೂಡಲೇ ಈ ಖಾಯಂ ಶಿಕ್ಷಕರ ನೇಮಕವಾಗಬೇಕು. ಬಾಕಿ ಖಾಲಿ ಉಳಿಯುವ ಹು¨ªೆಗಳಿಗೆ ತಾತ್ಕಾಲಿ
ಕವಾಗಿ ಅತಿಥಿ ಶಿಕ್ಷಕರನ್ನು ಜೂನ್‌ 15ರ ಒಳಗಾಗಿ ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಶಾಲೆ ಪ್ರಾರಂಭಕ್ಕೆ ಮುನ್ನ ಎಲ್ಲ ಮಕ್ಕಳಿಗೆ ದೊರೆಯಬೇಕಾದ ಉತ್ತೇಜಕಗಳಾದ ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್‌ಗಳನ್ನು ಸಕಾಲಕ್ಕೆ ಒದಗಿಸಬೇಕು.

Advertisement

ಶಾಲಾ ಹಂತದಲ್ಲಿ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 12ನೇ ತರಗತಿಯ ಎಲ್ಲ ಮಕ್ಕಳಿಗೆ ಉಚಿತ ಬಸ್‌ ಪಾಸ್‌ ನೀಡಬೇಕು. ಇದು ಶಾಲಾ ಲಾಗಿನ್‌ ನಲ್ಲಿಯೇ ದೊರೆಯುವಂತೆ ಮಾಡು ವುದು. ಸರಕಾರಿ ಶಾಲೆಗಳಲ್ಲಿ ಬಳಸುವ ವಿದ್ಯುತ್‌ ಹಾಗೂ ನೀರಿನ ಬಳಕೆಯ ಬಿಲ್‌ ಶುಲ್ಕ ಮನ್ನಾ ಮಾಡಬೇಕು.

ಪ್ರೌಢ ಶಿಕ್ಷಣ ಮುಂದುವರಿಸಲು ಅನುಕೂಲವಾಗುವಂತೆ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಸಿಗುತ್ತಿದ್ದ ಸೈಕಲ್‌ ವಿತರಣೆಯು ನಾಲ್ಕು ವರ್ಷಗಳಿಂದ ಸ್ಥಗಿತವಾಗಿದ್ದು, ಅದನ್ನು ಕೂಡಲೇ ವಿತರಿಸಬೇಕು. ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಭಾಗವಾಗಿ ಮಧ್ಯಾಹ್ನದ ಬಿಸಿಯೂಟದ ವೆಚ್ಚಕ್ಕೆ ಈಗಿರುವ ಪ್ರತಿ ಮಗುವಿನ ಯುನಿಟ್‌ ವೆಚ್ಚವನ್ನು ಹೆಚ್ಚಿಸಬೇಕು. ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲಿ ಮಧ್ಯಾಹ್ನ ಉಚಿತ ಊಟ ಒದಗಿಸಬೇಕು. ಯಾವುದೇ ನೆಪಹೇಳಿ ಸರಕಾರಿ ಶಾಲೆಗಳನ್ನು ಸಾಮೂಹಿಕವಾಗಿ ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು.

ಮಕ್ಕಳಿಗೆ ಕ್ಷೀರ ಭಾಗ್ಯ ಮತ್ತು ಮಧ್ಯಾಹ್ನದ ಬಿಸಿಯೂ ಟದ ಜತೆಗೆ ಬೆಳಗಿನ ಉಪಾಹಾರ ಯೋಜನೆಯನ್ನು ಜಾರಿಗೊಳಿಸು ವುದು ಹಾಗೂ ರಾಜ್ಯದಲ್ಲಿ ಅಪೌಷ್ಟಿಕತೆ ತೊಡೆದು ಹಾಕಲು ಅಂಗನವಾಡಿ ಯಿಂದ 10ನೇ ತರಗತಿ ವರೆಗಿನ ಎಲ್ಲ ಮಕ್ಕಳಿಗೆ ಪ್ರತಿದಿನ ಮೊಟ್ಟೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪ್ರೊ| ಎಸ್‌.ಜಿ.ಸಿದ್ದರಾಮಯ್ಯ, ಡಾ| ಕೆ.ಮರುಳಸಿದ್ದಪ್ಪ, ಡಾ| ಬಂಜಗೆರೆ ಜಯಪ್ರಕಾಶ್‌, ಡಾ| ವಸುಂಧರಾ ಭೂಪತಿ, ಪ್ರೊ| ನಿರಂಜನಾರಾಧ್ಯ, ಜಾಣಗೆರೆ ವೆಂಕಟ ರಾಮಯ್ಯ ಮುಂತಾದವರಿದ್ದರು.

ದ್ವೇಷದ ಪಾಠಕ್ಕೆ ಅವಕಾಶವಿಲ್ಲ, ಎನ್‌ಇಪಿ ಬಗ್ಗೆ ಚರ್ಚೆ: ಸಿಎಂ
ತಮ್ಮನ್ನು ಭೇಟಿಯಾದ ನಿಯೋಗಕ್ಕೆ ಮುಖ್ಯಮಂತ್ರಿಗಳು, ಮಕ್ಕಳ ಮನಸ್ಸಿಗೆ ವಿಷ ತುಂಬುವ ಪಠ್ಯ ಮತ್ತು ಪಾಠಗಳಿಗೆ ಅವಕಾಶ ಕೊಡುವುದಿಲ್ಲ. ಶೈಕ್ಷಣಿಕ ವರ್ಷ ಆರಂಭ ಆಗಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಎನ್‌ಇಪಿ ಹಾಳು ಮಾಡಲು ಬಿಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ.
ನಿಯೋಗವು ಎನ್‌ಇಪಿಯನ್ನು ರದ್ದುಪಡಿಸಿ ಸಮ ಸಮಾಜಕ್ಕಾಗಿ ಸಮಾನ ಶಿಕ್ಷಣ ಆಶಯವನ್ನು ಸಾಕಾರಗೊಳಿಸ ಬೇಕು. ಹಿಜಾಬ್‌ ವಿವಾದದಿಂದ ಸಾವಿರಾರು ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದರಿಂದ ಸಮವಸ್ತ್ರ ನೀತಿಯನ್ನು ಪರಿಷ್ಕರಿಸಬೇಕು ಎಂದು ಮನವಿ ಮಾಡಿತು.

ನಿಯೋಗಕ್ಕೆ ಸಿಎಂ ನೀಡಿದ ಭರವಸೆಗಳು
ದ್ವೇಷದ ರಾಜಕಾರಣವನ್ನು ಕೊನೆಗೊಳಿಸುತ್ತೇವೆ.
ಅನೈತಿಕ ಪೊಲೀಸ್‌ಗಿರಿಗೆ ಅವಕಾಶ ಇಲ್ಲ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
 ಕನ್ನಡ ನಾಡಿನ ಸೌಹಾರ್ದ ಮತ್ತು ಜಾತ್ಯತೀತ ಪರಂಪರೆಯ ರಕ್ಷಣೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ .
 ಕನ್ನಡ ಹೋರಾಟಗಾರರು, ರೈತ-ಕಾರ್ಮಿಕ-ದಲಿತ ಚಳವಳಿ ಗಳ ಹೋರಾಟಗಾರರು, ಸಾಹಿತಿ, ಬರಹಗಾರರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆ ಹಿಂ ಪಡೆಯುತ್ತೇವೆ.
ಎನ್‌ಇಪಿ ಬಗ್ಗೆ ಪ್ರತ್ಯೇಕ ಸಭೆ ಕರೆದು ಚರ್ಚಿಸಿ ನಿಷ್ಠುರ ಮತ್ತು ಖಚಿತ ತೀರ್ಮಾನಗಳನ್ನು ತೆ‌ಗೆದುಕೊಳ್ಳುತ್ತೇವೆ.
 ಸಾಹಿತಿ ಬರಹಗಾರರ ಮನವಿ ಪತ್ರದಲ್ಲಿನ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯಕ್ಕೆ ತಕ್ಕಂತೆ ಸರಕಾರ ಕ್ರಮ ಕೈಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next