Advertisement

ತಿಳಿ ನೀರಿನ ಬಣ್ಣವೂ ಕಾಡ ನೀರಿನ ಕಥೆಗಳೂ…

11:05 AM Aug 07, 2017 | |

ಮಳೆ ಸರಿಯಾಗಿ ಸುರಿದಿತ್ತು, ನಿರ್ಮಿಸಿದ ಕೆರೆಯೂ ಸರಿಯಾಗೇ ಇತ್ತು. ಆದರೆ ಕೆರೆಗೆ ನೀರು ತುಂಬಲಿಲ್ಲ. ಕೆರೆಯ ಜಲಾನಯನ ಕ್ಷೇತ್ರದಲ್ಲಿ ಅರಣ್ಯ ನಾಶವಾದರೆ ಮಣ್ಣು ಸವಕಳಿಯಾಗಿ ಕೆರೆಯ ಪಾತ್ರ ಆವರಿಸುವುದು ಗೊತ್ತಿದೆ. ನಾಶದ ಬದಲು ಅರಣ್ಯ ಸಮೃದ್ಧಿಯಾದರೆ? ಭೂಮಿಗೆ ಬಿದ್ದ ಹನಿಯನ್ನು ಬಿದ್ದಲ್ಲೇ  ಹೀರಲು ಶುರುಮಾಡುತ್ತದೆ.  ಕೆರೆಗೆ ನೀರು ಹರಿದು ಬರುವುದು ಕಡಿಮೆಯಾಗುತ್ತದೆ. ಮಣ್ಣು ಫ‌ಲವತ್ತಾದಂತೆ ನೆಲಕ್ಕೆ ನೀರು ಹಿಡಿಯುವ ಸಾಮರ್ಥ್ಯ ಹೆಚ್ಚುತ್ತದೆ. ಅಂತರ್ಜಲ ಹೆಚ್ಚಳಕ್ಕೆ ಕೆರೆ ಕಾಡಿನ ಕಲಿಕೆಗಳು ಹಲವಿದೆ.

Advertisement

ನೆಲ, ನೀರು ಓದಿ ಅರ್ಥಮಾಡಿಕೊಳ್ಳುವುದಕ್ಕೆ ತಾಂತ್ರಿಕ ತಜ್ಞತೆ ಮಾತ್ರ ಸಾಲುವುದಿಲ್ಲ, ನಿರಂತರವಾಗಿ ನೆಲ ನೋಡುವ ಅನುಭವವೂ ಬಲಿಯಬೇಕಾಗುತ್ತದೆ.  ಕಳೆದ 2002ರಿಂದ ಕೆರೆ ನಿರ್ಮಾಣಕ್ಕೆ ನಿಂತು ಕೆಲಸವನ್ನು ಹತ್ತಿರದಿಂದ ನೋಡಲು ಶುರುಮಾಡಿದೆ. ಹೊಸ ಕೆರೆ ನಿರ್ಮಿಸಿದಾಗ ಮಳೆ ಬಂದ ತಕ್ಷಣ ಕೆರೆಗೆ ಓಡುವುದು ಅಭ್ಯಾಸವಾಯ್ತು. ಕೆರೆಯಲ್ಲಿ ಎಷ್ಟು ನೀರು ತುಂಬಿತೆಂದು ನೋಡುವ ತವಕವಿರುತ್ತಿತ್ತು. ಎಕರೆ ವಿಸ್ತೀರ್ಣದ ಒಂದು ಕೆರೆಯಲ್ಲಿ ಕೋಟ್ಯಂತರ ಲೀಟರ್‌ ಮಳೆ ನೀರು ಶೇಖರಣೆಯಾಗಿತ್ತು. ಹರಿದು ಹೋಗುವ ಮಳೆ ನೀರು ಕಣಿವೆಯ ಹೊಸಕೆರೆಯಲ್ಲಿ ನಿಲ್ಲಿಸಿದ ಖುಷಿಯಲ್ಲಿ ಈಜು ಸ್ಪರ್ಧೆ ಏರ್ಪಡಿಸಿದ್ದೆವು. ನೀರು ನಿಂತ ಹೊಸ ಕೆರೆ ವೀಕ್ಷಣೆಗೆ ಜನ ಬರಲು ಆರಂಭಿಸಿದರು. ವಿಶೇಷವೆಂದರೆ ಕೇವಲ 8-10 ದಿನಗಳಲ್ಲಿ ಕೆರೆಯ ನೀರೆಲ್ಲ ಇಂಗಿ ತಳಮುಟ್ಟಿತು. ಭೂಮಿಯ ಜಲದಾಹ ಭಯ ಹುಟ್ಟಿಸಿತು. ಪ್ರತಿ ವರ್ಷ ಮಳೆಗಾಲದಲ್ಲಿ ಒಮ್ಮೆ ಕೆರೆತುಂಬಿ ಇಂಗಿದರೆ 300 ಮೀಟರ್‌ ದೂರದ ಅಡಿಕೆ ತೋಟಕ್ಕೆ ಬೇಸಿಗೆಯಲ್ಲೂ ಹನಿ ನೀರು ಅಗತ್ಯವಿರಲಿಲ್ಲ.  ನೀರಾವರಿ ಇಲ್ಲದೇ ಮಲೆನಾಡಿನ ತೋಟ ಬದುಕಿತು. ನಾಲ್ಕೈದು ವರ್ಷಗಳಲ್ಲಿ ಒಂದು ಸತ್ಯ ಸಾಬೀತಾಯಿತು. ಕೆರೆಯಲ್ಲಿ ಬೇಸಿಗೆಯಲ್ಲಿ ನೀರಿರದಿದ್ದರೂ ಮಳೆಯಲ್ಲಿ ಒಮ್ಮೆ ಭರ್ತಿಯಾಗಿ ಇಂಗಿದರೆ ತೋಟ ಹಸಿರಾಗಿರುತ್ತದೆಂದು ಅರ್ಥವಾಯ್ತು. ಕೆರೆ ತುಂಬಿದ ವರ್ಷ ತೋಟದ ಕಾಲುವೆಗಳಲ್ಲಿ ಮಾರ್ಚ್‌ ತಿಂಗಳಿನಲ್ಲೂ ನೀರಿರುತ್ತಿತ್ತು. 

ಒಂದು ದಿನಕ್ಕೆ 10-15 ಸೆಂಟಿ ಮೀಟರ್‌ ಮಳೆ ಸುರಿದರೆ ಕಣಿವೆಯ ಕೆರೆಗಳು ತುಂಬುತ್ತದೆಂದು ಊರಿನ ನೀರಿನ ಕತೆ ಮನದಟ್ಟಾಯ್ತು. ಆದರೆ ಈ ವರ್ಷ  ಈವರೆಗೆ 1400 ಮಿಲಿ ಮೀಟರ್‌ ಮಳೆ ಸುರಿದ ನೆಲದ ಕೆರೆ ಸ್ಥಿತಿ ನೋಡಿದರೆ ಅಚ್ಚರಿ. ಕೆಲವು ಕೆರೆಗಳು ತುಂಬಿವೆ, ಮತ್ತೆ ಕೆಲವುದರಲ್ಲಿ ಅರ್ಧದಷ್ಟೂ ನೀರು ಬಂದಿಲ್ಲ. ಇಡೀ ಕಣಿವೆಯಲ್ಲಿ ಕಳೆದ 10 ವರ್ಷಗಳೀಚೆಗೆ ಭೂಮಿ ವಿನ್ಯಾಸಲ್ಲಿ ಅಂಥ ಬದಲಾವಣೆಯಾಗಿಲ್ಲ. ನೀರು ನೀಡುವ ಜಲಾನಯನ ಕ್ಷೇತ್ರ ಸರಿಯಾಗಿದೆ. ಹಾಗಾದರೆ ಮಳೆ ಬಂದರೂ ಕೆರೆ ತುಂಬದಿರಲು ಕಾರಣವೇನು? ಕೆರೆಗಳ ಮೇಲಾºಗದಲ್ಲಿ ಕೃಷಿಕರು ನಿರ್ವಹಿಸುವ ಬೇಣಗಳಿವೆ. ಅರಣ್ಯ ಇಲಾಖೆಯ ಅಧೀನದಲ್ಲಿರುವ ಆ ಭೂಮಿಯಲ್ಲಿ ಹುಲ್ಲು,  ತರಗೆಲೆ ಪಡೆಯುವರು. ಕೂಲಿ ಸಮಸ್ಯೆಯಿಂದ ತರಗೆಲೆ ಸಂಗ್ರಹಣೆಯ ಕಾರ್ಯ ಕಳೆದ ಬೇಸಿಗೆಯಲ್ಲಿ ನಡೆದಿಲ್ಲ.

 ಬೆಳೆದ ಹುಲ್ಲನ್ನೂ ಕಟಾವು ಮಾಡಿಲ್ಲ. ಕಾಡಿಗೆ ಬೆಂಕಿ ತಗಲಿಲ್ಲ. ಜಲಾನಯನ ಕ್ಷೇತ್ರದಲ್ಲಿ ಸುರಿದ ಮಳೆ ನೀರು ಸರಾಗವಾಗಿ ಹರಿಯುವ ಬದಲು ಅಲ್ಲಲ್ಲಿ ನಿಂತು ಹರಿಯಲು ಶುರುವಾಯ್ತು. ತರಗೆಲೆ ಸಂಗ್ರಹಿಸುವಾಗ ಭೂಮಿಯಲ್ಲಿ ಬೆಳೆದ ಮುಳ್ಳುಕಂಟಿ ಕತ್ತರಿಸುವುದು ಬೇಣ ನಿರ್ವಹಣೆಯ ಒಂದು ಕ್ರಮ. ತರಗೆಲೆ ಸಂಗ್ರಹ ನಡೆಯದಿದ್ದರಿಂದ ಮುಳ್ಳುಕಂಟಿಗಳೂ ಬಚಾವಾದವು. ಗುಡ್ಡದ ತುಂಬೆಲ್ಲ ಮುಳ್ಳುಕಂಟಿಗಳು ಸಮೃದ್ಧವಾಗಿ ಬೆಳೆದಿವೆ. ತರಗೆಲೆಗಳು ನೆಲಕ್ಕೆ ಹಾಸಿವೆ. ಮಣ್ಣಿಗೆ ನೀರು ಹಿಡಿದುಕೊಳ್ಳುವ ಶಕ್ತಿ ಬರಲು ತರಗೆಲೆ, ಹುಲ್ಲಿನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವು ಕಾಡಲ್ಲಿ ಹಾಗೇ ಇದ್ದರೆ ಮಣ್ಣಿಗೆ ಹೆಚ್ಚಿನ ಸಾವಯವ ವಸ್ತು ದೊರೆತು ಫ‌ಲವತ್ತತೆ ಹೆಚ್ಚುತ್ತದೆ. ನಂತರದಲ್ಲಿ ಮಳೆ ನೀರು ಹಿಡಿದು ಇಂಗಿಸುವ ಸಾಮರ್ಥ್ಯ ವೃದ್ಧಿಯಾಗುತ್ತದೆ. 

ದಶಕಗಳ ಹಿಂದೆ ಕೆರೆ ನಿರ್ಮಿಸಿದ ಆರಂಭದಲ್ಲಿ ಗುಡ್ಡದಿಂದ ಮಳೆಯ ಕೆಂಪು ನೀರು ಜೋರಾಗಿ ಬರುತ್ತಿದ್ದ ಚಿತ್ರ ದಾಖಲೆಗಳಿವೆ. ಈಗ ಹರಿದು ಬರುವ ನೀರಿನ ಬಣ್ಣ, ಪ್ರಮಾಣ ಬದಲಾಗಿದೆ. ಕಾಡಲ್ಲಿ ಗಿಡಗಂಟಿಗಳು ಬೆಳೆದಿವೆ, ಅವುಗಳ ನಡುವೆ ಹುಲ್ಲು, ತೆರಕು ಬಿದ್ದಿವೆ. ಪರಿಣಾಮ ಹರಿವ ನೀರಿನ ವೇಗವೂ ಕಡಿಮೆಯಾಗಿದೆ. ಅಂದು ಮಳೆಗಾಲದಲ್ಲಿ ಕೆರೆಯಲ್ಲಿ ನೀರು ನಿಂತರೆ ಕೆಂಪು ರಾಡಿಯಾಗಿ ಕಾಣಿಸುತ್ತಿತ್ತು. ಹೊಸಕೆರೆ ಆರಂಭದ ಎರಡು ಮೂರು ವರ್ಷ ಮಣ್ಣು ಸವಕಳಿಯಿಂದಾಗಿ ಹೀಗೆ ಕಾಣವುದು ಸಹಜ. ನಂತರದಲ್ಲಿ ಸಸ್ಯ ಬೆಳೆದು ಮಣ್ಣು ಸವಕಳಿ ಕಡಿಮೆಯಾಗಿದೆ. ಸ್ವತ್ಛ ಜಲ ಬರುತ್ತಿದೆ. ಕೆರೆಗಳಲ್ಲಿ ನೀರು ಕಡಿಮೆ ಇದ್ದರೂ ನೀರಿನ ತಿಳಿಬಣ್ಣ ಗಮನ ಸೆಳೆಯುತ್ತದೆ. 

Advertisement

ಬಿದ್ದ ಹನಿಯನ್ನು ಬಿದ್ದಲ್ಲೇ ಇಂಗಿಸಬೇಕೆನ್ನುತ್ತೇವೆ. ಹನಿ ಹನಿ ಕೂಡಿ ಹಳ್ಳವಾದರೆ ಅಪಾರ ಪ್ರಮಾಣದ ಸಂಗ್ರಹಿಸಿ, ಇಂಗಿಸುವುದಕ್ಕೆ ದೊಡ್ಡ ದೊಡ್ಡ ಕೆರೆ ಜಲಾಶಯಗಳು ಬೇಕಾಗುತ್ತದೆ. ನಿಸರ್ಗ ನಮ್ಮ ಬೆಟ್ಟಗಳನ್ನು ನೀರಿಂಗುವ ಒಂದು ಅದ್ಭುತ ವ್ಯವಸ್ಥೆಯಾಗಿ ರೂಪಿಸಿದೆ. ಅದು 
ಭೂಮಿಗೆ ನೀರುಣಿಸುವ ವಿಧಾನ ತಾಯಿ ಎಳೆ ಶಿಶುವಿಗೆ ಹಾಲುಣಿಸುವ ರೀತಿಯಲ್ಲಿರುತ್ತದೆ. ಅರಣ್ಯದ ಗಿಡ ಮರಗಳ ಸಣ್ಣ ಸಣ್ಣ ಬೇರುಗಳು ಎದೆ ಹಾಲು ಕುಡಿಸಿದಂತೆ ನಿಧಾನಕ್ಕೆ ಇಂಗಿಸುತ್ತವೆ. ಮಳೆಯ ಪ್ರಮಾಣ, ಮಳೆ ದಿನಗಳು ಜಾಸ್ತಿ ಇದ್ದು, ಅರಣ್ಯವೂ ದಟ್ಟವಾಗಿದ್ದರೆ ನೀರಿಂಗಿಸಲು ಇಷ್ಟು  ಸಾಕೇ ಸಾಕು. ಈಗ ಕಣಿವೆಗಳು ಜಲ ಬಳಕೆಯ ನೆಲೆಗಳಾಗಿವೆ. ಅಲ್ಲಿ ತೋಟ, ಮನೆ ನಿರ್ಮಿಸಿ ಕೃಷಿ ವಿಸ್ತರಣೆಯಾಗಿದೆ. ಆದರೆ ಗುಡ್ಡದಲ್ಲಿ ಕಾಡುಗಳಿಲ್ಲ. ಇದ್ದರೂ ಏಕಜಾತಿಯ ನೆಡುತೋಪುಗಳಿವೆ. ನಾವು ನೀರುಳಿಸುವುದು ಮರೆತು ಕಣಿವೆಯಲ್ಲಿ ಬಳಕೆ ಹೆಚ್ಚಿಸಿದ ಪರಿಣಾಮವನ್ನು  “ûಾಮ ಫ‌ಲ’ ದಲ್ಲಿ  ಅನುಭವಿಸುತ್ತಿದ್ದೇವೆ. ಮುಳ್ಳಿನ ಗಿಡಗಳು, ಹುಲ್ಲು ಬೆಳೆಯುವ ಅವಕಾಶ ನೀಡಿದರೆ ನಿಸರ್ಗ ಬಹುದೊಡ್ಡ ಬದಲಾವಣೆಯನ್ನು  ಮೂರು ನಾಲ್ಕು ವರ್ಷಗಳಲ್ಲಿ ತೋರಿಸುತ್ತದೆ. ಆದರೆ ಮಾನವ ಮನಸ್ಸು ಕೃಷಿ ಬಳಕೆ ತಗ್ಗಿಸಿ ಅರಣ್ಯವನ್ನು ನೀರಿನ ನೆಲೆಯಾಗಿ ನೋಡಲು ಮನಸ್ಸು ಮಾಡುತ್ತಿಲ್ಲ. ಒಂದು ಮಳೆಗಾಲದಲ್ಲಿ ಎಕರೆಯಲ್ಲಿ ಕೋಟ್ಯಂತರ ಲೀಟರ್‌ ಮಳೆ ನೀರು ಸುರಿದು ಹೋಗುತ್ತಿದ್ದರೂ ಸಾವಿರಾರು ಎಕರೆ ಅರಣ್ಯದ ನಡುನ ಹಳ್ಳಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಅಳುತ್ತದೆಂದರೆ ನಮ್ಮ ಸಂರಕ್ಷಣೆಯ ಪ್ರಜ್ಞೆ ಇನ್ನೂ ಜಾಗೃತವಾಗಿಲ್ಲವೆಂದು ಅರ್ಥೈಸಬಹುದು. 

ನಮ್ಮ ಕೃಷಿಯ ದಾಖಲೆ ತೆಗೆದರೆ ನೂರಾರು ವರ್ಷಗಳಿಂದ ಗದ್ದೆ, ತೋಟ ನಿರ್ಮಿಸಿಕೊಂಡು ಬದುಕಿದ್ದು ತಿಳಿಯುತ್ತದೆ. ಕೃಷಿ ಭೂಮಿಯ ಒಡೆತನದ ಚರಿತ್ರೆಗೆ ಶತಮಾನಗಳ ಇತಿಹಾಸದ್ದರೂ ನೀರು ನಿರ್ವಹಣೆಯ ವಿಚಾರದಲ್ಲಿ ನಾವು ನಮ್ಮ ಭೂಮಿಯನ್ನು, ಕಾಡನ್ನು ಎಷ್ಟು ಅರ್ಥಮಾಡಿಕೊಂಡಿದ್ದೇವೆ? ನಮ್ಮ ಶಿಕ್ಷಣ ಪರಿಸರ ಸಂರಕ್ಷಣೆಯ ಕಲಿಕೆಯಾಗಿಲ್ಲವೇಕೆ? ಪ್ರಶ್ನೆ ಕಾಡುತ್ತದೆ. ಕಾಡು, ಮಳೆ, ಕೃಷಿ, ನೀರು ಓದುವುದನ್ನು ಈಗಲಾದರೂ ಕಲಿಯಬೇಕಿದೆ. ಇಷ್ಟು ವರ್ಷಗಳಿಂದ ಮಳೆ, ಪರಿಸರ ಅನುಭಸಿ ಬದುಕು ಕಟ್ಟಿದ ನಮಗೆ ಭೂಮಿ ಅರ್ಥವಾಗಿಲ್ಲವೆಂದರೆ  ಅದು ನಮ್ಮ ದಡ್ಡತನ ತೋರಿಸುತ್ತದೆ. ನೀರಿನ ಬಣ್ಣ ತಿಳಿಯಲು ನಾವು ಕಾಡು ಶಾಲೆಯ ಮಕ್ಕಳಾಗೋಣ. 

ಶಿವಾನಂದ ಕಳವೆ

Advertisement

Udayavani is now on Telegram. Click here to join our channel and stay updated with the latest news.

Next