Advertisement

ಕತ್ತಲಿದ್ದರೆ ಮಾತ್ರ ಬೆಳಕಿಗೆ ಮಹತ್ವ

11:52 PM Jan 14, 2023 | Team Udayavani |

ದಟ್ಟವಾದ ಕಾಡಿನಲ್ಲಿ ಒಂಟಿಯಾಗಿ ನಡೆಯುವುದು ಅಥವಾ ಕತ್ತಲೆಯ ಕೋಣೆಯಲ್ಲಿ ಏಕಾಂಗಿಯಾಗಿ ಕಾಲ ಕಳೆಯುವುದು… ನಿತ್ಯದ ಕೆಲಸದಿಂದ ದೂರ ಸರಿದು ಕೊಂಚ ನೆಮ್ಮದಿ ಬೇಕೆನ್ನುವವರಿಗೆ ಇದು ಒಳ್ಳೆಯ ಅವಕಾಶ. ಆದರೂ ಕತ್ತಲೆ ಎಂದರೆ ನಮ್ಮೊಳಗೆ ಏನೋ ಅವ್ಯಕ್ತ ಭಯ, ಬೇಸರ. ಹೀಗಾಗಿ ನೈಸರ್ಗಿಕ ಬೆಳಕಿದ್ದರೂ ವಿದ್ಯುತ್‌ ದೀಪಗಳನ್ನು ಉರಿಸುತ್ತೇವೆ, ಕತ್ತಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ದೀಪಗಳನ್ನು ಬೆಳಗಿಸುತ್ತೇವೆ, ವಿಶೇಷ ಸಂದರ್ಭಗಳಲ್ಲಿ ಸಾಕಷ್ಟು ಕೃತಕ ದೀಪಗಳ ಅಲಂಕಾರವನ್ನು ಮಾಡುತ್ತೇವೆ. ಇನ್ನು ನಗರ ಪ್ರದೇಶಗಳಲ್ಲಿ ವರ್ಷವಿಡೀ ಬೀದಿ ದೀಪಗಳು, ಅಲಂಕಾರಿಕ ಬಲ್ಬ್ಗಳು ಹಗಲು ರಾತ್ರಿ ಎನ್ನದೆ ಉರಿಯುತ್ತಲೇ ಇರುತ್ತವೆ. ಇದು ನಮ್ಮಲ್ಲಿ ಸಂಭ್ರಮವನ್ನೇನೋ ಸೃಷ್ಟಿಸುತ್ತದೆ. ಆದರೆ ಅದೆಷ್ಟೋ ಜೀವರಾಶಿಗಳ ಬದುಕಿಗೆ ಕಂಟಕವನ್ನು ತಂದೊಡ್ಡುತ್ತಿದೆ.

Advertisement

ಏಕೆ?
ಬೆಳಕಿನೊಡನೆ ಕತ್ತಲೆ ಇರಲೇಬೇಕು.ಇದು ಪ್ರಕೃತಿ ನಿಯಮ. ಬೆಳಕು ಹೆಚ್ಚು ಶಬ್ದ, ವಾಯು ಮಾಲಿನ್ಯವನ್ನು ಉಂಟು ಮಾಡಿದರೆ ಕತ್ತಲೆ ಹೆಚ್ಚು ವಿಶ್ರಾಂತಿ ಮತ್ತು ನೆಮ್ಮದಿಯನ್ನು ಕೊಡುತ್ತದೆ. ಮಾಲಿನ್ಯದ ಪ್ರಮಾಣವನ್ನೂ ತಗ್ಗಿಸುತ್ತದೆ. ಇನ್ನೊಂದು ದೃಷ್ಟಿಕೋನದಲ್ಲಿ ನೋಡುವುದಾದರೆ ಕತ್ತಲೆ, ನಿಶ್ಯಬ್ದ ಎಂಬುದು ಹಲವಾರು ಜೀವಜಂತುಗಳ ಬದುಕಿನ ಬೆಳಕಿನ ಕಿರಣ.

ಎಲ್ಲಿ?
ಸ್ವೀಡನ್‌ನ ಆಳವಾದ ಕೆಲವು ಗಣಿಗಾರಿಕ ಪ್ರದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ಬಾವಲಿಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಕಾರಣ ಇಲ್ಲಿ ಒಂದು ರೀತಿಯ ನಿಶ್ಯಬ್ದದ ಜತೆಗೆ ಗಾಢವಾದ ಅಂಧಕಾರವಿದೆ. ಅಲ್ಲದೇ ಯುರೋಪ್‌ ಭಾಗಗಳಲ್ಲಿ ಮೊತ್ತ ಮೊದಲ ಬಾರಿಗೆ ಕಂದು ಬಣ್ಣದ ದೊಡ್ಡ ಕಿವಿಯ ಬಾವಲಿಗಳನ್ನು 2020ರಲ್ಲಿ ಸ್ವೀಡಿಶ್‌ನಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳ ಪಟ್ಟಿಗೆ ಸೇರಿಸಲಾಯಿತು. ಬಾವಲಿಗಳು ಹೆಚ್ಚಾಗಿ ಹಳೆಯ ಕಟ್ಟಡಗಳಲ್ಲಿ ವಾಸ ಮಾಡುತ್ತವೆ. ಚರ್ಚ್‌ ಯಾರ್ಡ್‌ಗಳಲ್ಲಿ ಅವುಗಳು ಆಹಾರವನ್ನು ಹುಡುಕುತ್ತವೆ. ಆದರೆ ಕಳೆದ ಮೂವತ್ತು ವರ್ಷಗಳಲ್ಲಿ ಚರ್ಚ್‌ನ ಹೊರ ಆವರಣಗಳಲ್ಲಿ ಹಾಕಿರುವ ಕೃತಕ ಬೆಳಕಿನಿಂದ ಅವುಗಳಿರುವ ಪ್ರದೇಶ ದ್ವೀಪದಂತಾಗಿದೆ.

ಯಾಕೆ?
ಸುಮಾರು 55 ಮಿಲಿಯನ್‌ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಭೂಮಿ ಮೇಲೆ ವಾಸವಾಗಿರುವ ಮತ್ತು ಇಂದಿಗೂ ಜೀವಂತವಾಗಿರುವ ಸುಮಾರು 1,400ರಷ್ಟು ಪ್ರಭೇದದ ಬಾವಲಿಗಳಲ್ಲಿ ಯಾವೊಂದೂ ಹಗಲಿನ ಪ್ರಕಾಶಮಾನಕ್ಕೆ ಒಗ್ಗಿ ಕೊಂಡಿಲ್ಲ. ಕತ್ತಲೆ ಮಾನವನಿಗೆ ಬಿಡುವು ನೀಡಿದರೆ ಬಾವಲಿಗಳಿಗೆ ಇದು ಕಾರ್ಯಚಟುವಟಿಕೆಯ ಸಮಯ. ಬೆಳಕು ಹೇಗೆ ಮಾನವನ ಪಂಚೇಂದ್ರಿಯ ಗಳನ್ನು ಜಾಗೃತಗೊಳಿಸಿ ಭದ್ರತೆಯ ಅನುಭವವನ್ನು ಕೊಡುತ್ತದೆಯೋ ಅಂತೆಯೇ ಕತ್ತಲೆ ಎನ್ನುವುದು ಬಾವಲಿ ಸಹಿತ ಹಲವಾರು ನಿಶಾಚರ ಪ್ರಾಣಿ, ಪಕ್ಷಿ, ಕ್ರಿಮಿಕೀಟಗಳ ಪಾಲಿಗೆ ಭದ್ರತೆ ನೀಡುವ ಮತ್ತು ವಿವೇಕವನ್ನು ಜಾಗೃತಗೊಳಿಸುವ ವೇಳೆಯಾಗಿದೆ.

ಹೇಗೆ?
ಕತ್ತಲೆಯ ಭಯ ನಮ್ಮಲ್ಲಿ ಅನುವಂಶಿಕವಾಗಿ ಮತ್ತು ತಲೆ ತಲಾಂತರಗಳಿಂದ ಬಂದಿರುತ್ತದೆ. ಹೀಗಾಗಿ ನಾವು ಮುಸ್ಸಂಜೆಯಾಗುತ್ತಿದ್ದಂತೆ ಬೆಳಕಿನ ದೀಪಗಳನ್ನು ಉರಿಸಿ ಕತ್ತಲನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡತೊಡಗಿದ್ದೇವೆ. ಮನೆಯ ಉದ್ಯಾನ, ಕೈಗಾರಿಕ ಪ್ರದೇಶ, ಕಾರು ಪಾರ್ಕಿಂಗ್‌ ಸ್ಥಳ ಸಹಿತ ಎಲ್ಲೆಡೆ ಕೃತಕ ವಿದ್ಯುತ್‌ ದೀಪಗಳನ್ನು ಬೆಳಗಿಸುತ್ತಿದ್ದೇವೆ. ಹೀಗಾಗಿ ರಾತ್ರಿಗೂ ನಾವು ಬೆಳಕನ್ನು ವಿಸ್ತರಿಸಿದ್ದೇವೆ. ಇದರಿಂದಾಗಿ ಯಾವ ಜೀವಜಂತುಗಳಿಗೆ ಬೆಳಕು ಸಹಿಸಲು ಅಸಾಧ್ಯವೋ ಅವುಗಳೆಲ್ಲವೂ ಗಾಢ ಅಂಧಕಾರವಿರುವ ಪ್ರದೇಶವನ್ನು ಅರಸಿಕೊಂಡು ತೆರಳುತ್ತಿವೆ.

Advertisement

ಹೇಗಿದೆ ಪರಿಸ್ಥಿತಿ?
ಪ್ರಸ್ತುತ ವಿಶ್ವದಾದ್ಯಂತ ಬೆಳಕಿನ ಮಾಲಿನ್ಯ ಉಂಟಾಗಿದೆ. ಬೀದಿಗಳಲ್ಲಿ ಉರಿಯುವ ಕೃತಕ, ಹೆಚ್ಚು ಬೆಳಕು ಬೀರುವ ವಿದ್ಯುತ್‌ ದೀಪಗಳು ಹಾಗೂ ಜಾಹೀರಾತು ಫ‌ಲಕಗಳಿಗೆ ಅಳವಡಿಸುವ ಪ್ರಕಾಶಮಾನವಾದ, ಕಣ್ಣು ಕೋರೈಸುವ ಬೆಳಕಿನ ವ್ಯವಸ್ಥೆಗಳು ಪ್ರಕೃತಿಯ ಮೇಲೆ ಪರಿಣಾಮ ಬೀರುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಪರಿಸರ ವ್ಯವಸ್ಥೆ ಕತ್ತಲೆಯಿಂದ ರೂಪುಗೊಂಡಿದೆ. ನಗರಗಳಲ್ಲಂತೂ ಕೃತಕ ಬೆಳಕಿನ ಹಾವಳಿ ಮಿತಿಮೀರಿದ್ದು ಕತ್ತಲನ್ನೂ ಸಂಪೂರ್ಣವಾಗಿ ಆವರಿಸಿ ದಿನದ 24 ಗಂಟೆಗಳೂ ಬೆಳಕಿರುವಂತೆ ಮಾಡಿದೆ. ಇದರಿಂದ ಕ್ರಿಮಿ ಕೀಟಗಳು ಸಂಪೂರ್ಣವಾಗಿ ನಿರ್ಮೂಲನಗೊಂಡು ಪ್ರಕೃತಿಯ ಸ್ವಾಭಾವಿಕ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತಿದೆ.

ಪರಿಣಾಮ?
ಕತ್ತಲೆಯೇ ಇಲ್ಲದಿರುವುದು ನಿಶಾಚರ ಜೀವಜಂತುಗಳಿಗೆ ಮಾತ್ರ ಸಮಸ್ಯೆಯಾಗಿಲ್ಲ. ಹೂವುಗಳ ಪರಾಗಸ್ಪರ್ಶಕ್ಕೆ, ಬೀಜಗಳು ಮೊಳಕೆಯೊಡೆಯಲು ಸಮಸ್ಯೆಯಾಗುತ್ತಿದೆ. ಮರಗಳ ಎಲೆ ಉದುರುವಿಕೆ ವಿಳಂಬಗೊಳ್ಳುತ್ತಿದೆ. ರಾತ್ರಿ ಸಂಚಾರ ಸಾಧ್ಯವಾಗದೆ ವಲಸೆ ಪ್ರಾಣಿಪಕ್ಷಿಗಳು ತೊಂದರೆ ಎದುರಿಸುತ್ತಿವೆ. ಬೆಳಕಿನ ಮಾಲಿನ್ಯದಿಂದ ಒಂದೆಡೆ ಜಾಗತಿಕ ತಾಪಮಾನ ಏರಿಕೆಯಾದರೆ, ಇನ್ನೊಂದೆಡೆ ಪ್ಲಾಸ್ಟಿಕ್‌, ಶಬ್ದ ಮಾಲಿನ್ಯವೂ ಉಂಟಾಗುತ್ತಿದೆ. ಇದರೊಂದಿಗೆ ಅರಣ್ಯ ನಾಶ ಹಾಗೂ ಮಾನವನಿಂದ ಸೃಷ್ಟಿಯಾಗುತ್ತಿರುವ ಇನ್ನೂ ಅನೇಕ ಸಮಸ್ಯೆಗಳು ಪ್ರಾಕೃತಿಕ ಸಮತೋಲನಕ್ಕೆ ಅಪಾಯ ತಂದೊಡ್ಡಿದೆ.

ಯಾವ ರೀತಿ?
ರಾತ್ರಿ ಹಾರುವ ಕೀಟ, ಪಕ್ಷಿಗಳು ದಾರಿ ತಪ್ಪಿ ಗಗನಚುಂಬಿ ಕಟ್ಟಡಗಳು, ನಗರದಲ್ಲಿರುವ ಮರಗಳಿಗೆ ಢಿಕ್ಕಿಯಾಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತವೆ. ಬೀದಿ ದೀಪಗಳಡಿ ಸತ್ತು ಬಿದ್ದ ಕ್ರಿಮಿಕೀಟಗಳು, ಪಕ್ಷಿಗಳನ್ನು ನಾವು ಖಂಡಿತಾ ನೋಡಿರುತ್ತೇವೆ. ಇವುಗಳು ರಾತ್ರಿ ವೇಳೆ ಚಂದ್ರ, ನಕ್ಷತ್ರಗಳ ಬೆಳಕಿನಲ್ಲಿ ತಾವು ಸಾಗಬೇಕಿರುವ ದಾರಿಯ ಬಗ್ಗೆ ತಿಳಿದುಕೊಳ್ಳುತ್ತವೆ. ಕೃತಕ ಬೆಳಕಿನಲ್ಲಿ ದಾರಿ ತಪ್ಪಿ ಬೆಳಕಿನ ಸುತ್ತವೇ ಸುತ್ತುತ್ತವೆ. ಇದರಿಂದ ವಿದ್ಯುತ್‌ ಬಲ್ಬ್ನ ಶಾಖಕ್ಕೆ ತುತ್ತಾಗಿ ಸಾವಿಗೀಡಾಗುತ್ತವೆ ಅಥವಾ ಪರಭಕ್ಷಕಗಳಿಗೆ ಆಹಾರವಾಗುತ್ತವೆ. ಇದು ನಗರ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಭವಿಸುತ್ತದೆ. ಅಲ್ಲದೇ ಹೊಸದಾಗಿ ಮೊಟ್ಟೆಯೊಡೆದು ಹೊರಬಂದ ಕಡಲಾಮೆಗಳು ಸಮುದ್ರದೆಡೆಗೆ ಸಾಗುವುದನ್ನು ಬಿಟ್ಟು ಬೆಳಕಿನೆಡೆಗೆ ಆಕರ್ಷಿಸಲ್ಪಡುತ್ತಿವೆ. ಹೀಗಾಗಿ ಸುಮಾರು 200 ಮಿಲಿಯನ್‌ ವರ್ಷಗಳಿಂದ ಅವುಗಳು ಪಾಲಿಸುತ್ತಿದ್ದ ಪ್ರವೃತ್ತಿಯನ್ನು ಬದಲಿಸುತ್ತಿವೆ. ಇನ್ನು ಚಂದ್ರನ ಬೆಳಕನ್ನೇ ಅವಲಂಬಿಸಿರುವ ಹವಳದ ಪ್ರಾಣಿಗಳು ಸಂಯೋಗದ ಸಮಯ ಅರಿಯಲು ವಿಫ‌ಲವಾಗುತ್ತಿವೆ. ಇದು ಈ ಪ್ರಭೇದದ ಜೀವಿಗಳ ಅಳಿವಿಗೆ ಕಾರಣವಾಗುತ್ತಿದೆ.

ಯಾಕೆ ಮುಖ್ಯ?
ಯಾವುದೇ ಹೊತ್ತಿಗೆ, ಎಲ್ಲಿಗೆ ಬೇಕಾದರೂ ನಾವಿಂದು ಹೋಗಬಹುದು. ಅದಕ್ಕೆ ಮುಖ್ಯ ಕಾರಣ ವಿದ್ಯುತ್‌ ದೀಪಗಳು. ನಾವೇನೋ ಬೆಳಕು ಉರಿಸಿ ಕತ್ತಲೆಯನ್ನು ದೂರ ಮಾಡಿದ್ದೇವೆ. ಆದರೆ ಕತ್ತಲೆಯಲ್ಲೇ ಬದುಕುವ ನಿಶಾಚರ ಪ್ರಾಣಿ, ಪಕ್ಷಿ, ಕೀಟಗಳನ್ನು ಸಂಪೂರ್ಣ ಬೆಳಕಿಗೆ ದೂಡಿದ್ದೇವೆ. ಅವುಗಳ ಸಂರಕ್ಷಣೆಗೆ ನಾವು ಈಗಲೇ ಕ್ರಮಕೈಗೊಳ್ಳಬೇಕಿದೆ. ಅವುಗಳಿಗಾಗಿ ಮಾತ್ರವಲ್ಲದೆ ನಮಗಾಗಿಯೂ ನಾವಿದನ್ನು ಮಾಡಬೇಕಿದೆ. ಮಾನವನ ದೇಹದ ಅದೆಷ್ಟೋ ಕಾರ್ಯಗಳು ರಾತ್ರಿ ವೇಳೆಯಲ್ಲೇ ನಡೆಯುತ್ತದೆ. ಕೃತಕ ಬೆಳಕಿನಲ್ಲಿ ಅವುಗಳಿಗೂ ಕಾರ್ಯ ನಿರ್ವಹಣೆ ಅಸಾಧ್ಯ. ಪ್ರಾಕೃತಿಕ ನಿಯಮವಾದ ಬೆಳಕು ಮತ್ತು ಕತ್ತಲೆ ಮಾನವನ ಹಾರ್ಮೋನ್‌ ವ್ಯವಸ್ಥೆಯನ್ನು ನಿಯಂತ್ರಣದಲ್ಲಿರಿಸುತ್ತದೆ. ಕತ್ತಲೆ ಕೋಣೆಯಲ್ಲಿ ಮಲಗಿದ್ದಾಗ ಮಾತ್ರ ಮೆಲಾಟೋನಿನ್‌ ಹಾರ್ಮೋನ್‌ ಉತ್ಪತ್ತಿಯಾಗುತ್ತದೆ. ಉಳಿದ ಹಾರ್ಮೋನ್‌ಗಳ ಉತ್ಪತ್ತಿ ಆಗ ನಿಂತುಹೋಗುತ್ತದೆ. ಹೀಗಾಗಿಯೇ ನಾವು ರಾತ್ರಿ ವೇಳೆ ಸಂಪೂರ್ಣ ವಿಶ್ರಾಂತಿ ಪಡೆಯಲು ಸಾಧ್ಯವಾಗುವುದು. ಇದಲ್ಲದೇ ಮನದೊಳಗೆ ಸೃಷ್ಟಿಯಾಗುವ ಭಯ ಅಥವಾ ಕೆಲವು ಗೊಂದಲಗಳ ನಿವಾರಣೆಗೆ ಕತ್ತಲು ಬಹುಮುಖ್ಯವಾಗಿರುತ್ತದೆ. ಇದು ಮಾನವನ ಮೆದುಳು ಮತ್ತೆ ಚುರುಕಿನಿಂದ ಕಾರ್ಯನಿರ್ವಹಿಸಲು, ಹಲವು ನೈಸರ್ಗಿಕ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಸಹಾಯ ಮಾಡುತ್ತದೆ.

ಹಿಂದೆ ಏನಾಗಿತ್ತು?
ನಕ್ಷತ್ರ ಪುಂಜಗಳ ಕ್ಷೀರಪಥವನ್ನು ನಾವ್ಯಾರೂ ನೋಡಿಲ್ಲ. ಅತಿಯಾದ ಅನಿಲ ದೀಪಗಳ ಬಳಕೆ ರಾತ್ರಿ ಆಕಾಶದತ್ತ ದೃಷ್ಟಿ ಬೀರುವ ನಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು 1880ರ ಮೊದಲೇ ಕೆಲವು ಆಂಗ್ಲ ಖಗೋಳಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದರು. ಆಗ ವಿಶ್ವದ ಮೂರನೇ ಒಂದು ಭಾಗದಷ್ಟು ಜನರು ಮಾತ್ರ ನಕ್ಷತ್ರಪುಂಜಗಳ ಕ್ಷೀರಪಥವನ್ನು ನೋಡಿದ್ದರು. ಅನಂತರ ಯಾರೂ ಅದನ್ನು ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ.

ಏನು ಕ್ರಮ?
ಬೆಳಕಿನ ಮಾಲಿನ್ಯವು ಪ್ರಕೃತಿಯ ನೈಜ ಸೌಂದರ್ಯದ ಮೇಲೆ ಮಾತ್ರವಲ್ಲ ಪ್ರಕೃತಿಯ ಲಯ, ಗ್ರಹಗಳ ಚಲನೆ ಮತ್ತು ಪ್ರಾಣಿಗಳ ವರ್ತನೆಗಳ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಶರೀರಶಾಸ್ತ್ರ ಮತ್ತು ಪರಿಸರದ ಮೇಲೆ ಬೆಳಕಿನ ಪ್ರಭಾವದ ಕುರಿತು ಕೆಲವು ವರ್ಷಗಳಿಂದೀಚೆಗೆ ಹಲವಾರು ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ. ಕತ್ತಲೆ ರಹಿತ ಮತ್ತು ಅತಿಯಾದ ಬೆಳಕಿನ ಅವಲಂಬನೆಯಿಂದ ಭೂಮಿಯ ಮೇಲಾಗಬಹುದಾದ ಪರಿಣಾಮಗಳ ಬಗ್ಗೆ ನಿರಂತರ ಸಂಶೋಧನೆ ನಡೆಸತೊಡಗಿದ್ದಾರೆ. ಬೆಳಕಿನ ಜತೆಜತೆಯಲ್ಲಿ ಕತ್ತಲಿಗೂ ತನ್ನದೇ ಆದ ಮಹತ್ವವಿದೆ ಎಂಬುದು ಈ ಸಂಶೋಧನೆ, ಅಧ್ಯಯನಗಳಿಂದ ಸಾಬೀತಾಗಿದೆ.

-ವಿದ್ಯಾ ಇರ್ವತ್ತೂರು

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next