Advertisement

ಹತಾಶೆಯ ಕೊಳದಲ್ಲಿ ಮುಳುಗಿ ಹೋಗಬೇಡ ನೀನು…! ಸುತ್ತಮುತ್ತ ಹೆದರುಪುಕ್ಕಲರೆ ಇರುವಾಗ ಧೈರ್ಯ ತಾಳುವುದು ಕೊಂಚ ಕಷ್ಟ. ನಿನ್ನ ಸುತ್ತಲಿನ ಕತ್ತಲೆಯು ನಿನ್ನೊಳಗಿನ ಕಾಂತಿಯನ್ನು ನುಂಗಬಲ್ಲದು. ಆದರೆ ಹೆದರಬೇಡ ನಾ ನಿನ್ನ ನಿಜ ಬಣ್ಣಗಳನ್ನು ಗುರುತಿಸಬಲ್ಲೆ. ನಿನ್ನ ಹೊಳೆಯುವ ಕಣ್ಣೊಳಗಿನ ಕಾಂತಿಯನ್ನು ಕಾಣಬಲ್ಲೆ, ಅದಕ್ಕೆ ನಾ ನಿನ್ನ ಪ್ರೀತಿಸುತ್ತೇನೆ. ಜಗತ್ತಿಗೆ ನಿನ್ನ ನಿಜ ಬಣ್ಣಗಳನ್ನು ತೋರಲು ಹೆದರಬೇಡ. ಯಾಕೆಂದರೆ ಆ ಬಣ್ಣಗಳು ಸುಂದರ ವಾಗಿವೆ ಕಾಮನಬಿಲ್ಲಿನ ಹಾಗೆ! ಈ ಹಾಡನ್ನು ಅಮೆರಿಕದ ಸಾಹಿತ್ಯ ರಚನೆಗಾರರಾದ ಬಿಲ್ಲಿ ಸಟೆನ್‌ಬರ್ಗ್‌ ಹಾಗೂ ಟಾಮ್‌ ಕೆಲ್ಲಿ ರಚಿಸಿರುವುದು. ಈ ಹಾಡಿನ ಸಾಲುಗಳನ್ನು ಬೆರಗು

Advertisement

ಗಣ್ಣುಗಳಿಂದ ಕೇಳುತ್ತಿದ್ದಳು ಐದು ವರ್ಷದ ಪುಟ್ಟ ಹುಡುಗಿ. ಈ ಹಾಡನ್ನು ದಿನಕ್ಕೆ ಹತ್ತು ಬಾರಿಯಾದರೂ ಕೇಳುತ್ತಾಳೆ. ಅದಕ್ಕಾಗಿ ಅಮ್ಮನನ್ನು ಪೀಡಿಸುತ್ತಾಳೆ. ಹಾಗೆಂದು ಇವಳಿಗೆ ಈ ಹಾಡು ಹಾಡಲು ಬರುವುದಿಲ್ಲ, ಈಗಷ್ಟೇ ಮಾತು ಕಲಿಯುತ್ತಿದ್ದಾಳೆ. ಅಮ್ಮ ಈ ಹಾಡನ್ನು ಕಲಿತು ಹಾಡಿದರೆ, ಇವಳಿಗೆ ಎಲ್ಲಿಲ್ಲದ ಆನಂದ. ಅಮ್ಮನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಸಂಭ್ರಮಿಸಿ ನಿರಾಳವಾಗಿ ನಿದ್ದೆಗೆ ಜಾರುತ್ತಾಳೆ. ಈಕೆ ನಿದ್ದೆ ಮಾಡಿದರೆ ಅವಳಮ್ಮನಿಗೆ ಸ್ವಲ್ಪ ಸುಧಾರಿಸಿ ಕೊಳ್ಳಲು ಸಮಯ ಸಿಕ್ಕೀತು.

ಈ ಪುಟ್ಟ ಹುಡುಗಿಗೆ ಅವಳದ್ದೇ ಪ್ರಪಂಚ, ಆಕೆ ನಮ್ಮ ಜಗತ್ತನ್ನು ನೋಡುವ ರೀತಿಯೇ ಬೇರೆ. ದೃಷ್ಟಿಯಲ್ಲೇನು ಸಮಸ್ಯೆಯಿಲ್ಲ. ಆಟಿಸಂ ನಿಂದಾಗಿ ಆಕೆ ಹಾಗೂ ಅವಳ ಜತೆ ಇರುವವರ  ಜಗತ್ತು ಬದಲಾಗಿದೆ.

ಆಟಿಸಂ ನಾವು ಊಹಿಸಲಾಗದ ಜಗತ್ತು. ವಿಜಾnನದ ಪ್ರಕಾರ, ನಮ್ಮ ದೇಹ ಹಾಗೂ ಮನಸ್ಸು ಸಮತೋ ಲನದಲ್ಲಿದ್ದರೆ ಮಾತ್ರ ನಾವು ನಮ್ಮ ಸುತ್ತಲಿನ ಜಗತ್ತಿಗೆ ನಾವು ಪೂರಕವಾಗಿ ಪ್ರತಿಕ್ರಿಯಿಸಲು ಸಾಧ್ಯ ಹಾಗೂ  ಹಾಗೆ ಪ್ರತಿಕ್ರಿಯಿಸಿದಲ್ಲಿ ಮಾತ್ರ ಹೊಸದೊಂದನ್ನು ನೋಡಲು, ನೋಡಿ ಕಲಿಯಲು ಸಾಧ್ಯ.

ನಮ್ಮ ದೇಹ ಮತ್ತು ಮನಸ್ಸು ಅತೀ ಸೂಕ್ಷ್ಮವಾಗಿರುತ್ತವೆ. ಆಟಿಸಂ ಇದ್ದವರಲ್ಲಿಯೂ ಅನೇಕರು ಅತೀ ಸೂಕ್ಷ್ಮವಾಗಿರುತ್ತಾರೆ. ಉದಾಹರಣೆಗೆ  ಕೆಲವರು ಕೆಲವು ಶಬ್ದಗಳಿಗೆ ಭಯ ಪಡುತ್ತಾರೆ, ಕೆಲವು ಬಣ್ಣ, ಆಹಾರ ಪದಾರ್ಥಗಳು ಒಗ್ಗುವುದಿಲ್ಲ. ಈ ಕಾರಣದಿಂದ ಆಟಿಸಂ ಉಳ್ಳವರಿಗೆ “ನೀನು ಸುರಕ್ಷಿತ ಜನರೊಟ್ಟಿಗಿರುವ, ಸರಿಯಾದ ಜಾಗದಲ್ಲಿರುವೆ ಎನ್ನುವ ಭಾವವನ್ನು ಆಗಾಗ್ಗೆ ಮೂಡಿಸಿ, ಜಗತ್ತಿನ ಮೇಲೆ ನಂಬಿಕೆಯನ್ನು ಕೊಡುವುದು ಅವಶ್ಯ. ಇದೇ ಅವರ ಬದುಕಿಗೆ ಆಧಾರ.

Advertisement

ಆಗ ಹೇಳಿದ ಪುಟ್ಟ ಹುಡುಗಿಗೆ ಜಗತ್ತನ್ನು ಅಚ್ಚರಿಯಿಂದ ನೋಡಿ, ಎಲ್ಲರೊಟ್ಟಿಗೆ ಆಟವಾಡೋ ವಯಸ್ಸು. ಆದರೆ ಅವಳ ಮನಸ್ಸಿನೊಳಗೆ ಆಗುತ್ತಿರುವ ಗೊಂದಲ, ತನಗೇನಾಗುತ್ತಿದೆ ಎಂದು ಹೇಳಲಾಗದ ಅಸಹಾಯಕತೆ, ತನ್ನನ್ನು ತಾನಿರುವ ಹಾಗೆ ಒಪ್ಪಿಕೊಳ್ಳುವ  ಜೀವವೊಂದಿದೆ ಎನ್ನುವ ವಿಶ್ವಾಸ- ಇದೇ ಹಾಡನ್ನು ಅಮ್ಮನಿಂದ ಪದೇಪದೇ ಕೇಳಿಸಿಕೊಳ್ಳಬೇಕು ಅನ್ನೋ  ಹಂಬಲವೊಂದೇ ಬಹುಶಃ ಸಾಕೆನ್ನಿಸುತ್ತಿರಬೇಕು.

ಹೆತ್ತವರಿಗೆ ತಮ್ಮ ಮಗು ಎಲ್ಲರಿಗಿಂತ ಭಿನ್ನ ಅನ್ನೋ ವಾಸ್ತವ ಒಪ್ಪಿಕೊಳ್ಳಲು ಸ್ವಲ್ಪ ಸಮಯಬೇಕು. ಅರಿತಾದ ಬಳಿಕ ತನ್ನ ಮಗುವಿಗಿಂತ ಭಿನ್ನವಿರುವ ಜಗತ್ತಿನಲ್ಲಿ ಒಬ್ಬ ಯಶಸ್ವೀ ವ್ಯಕ್ತಿಯಾಗಿಸೋ ತವಕ. ಅದಕ್ಕೆ ತಂದೆ ತಾಯಂದಿರು ಏನು ಬೇಕಾದರೂ ಕಲಿತು ಹೇಳಿಕೊಡಬಲ್ಲರು. ಈ ಭರದಲ್ಲಿ ತನ್ನ ಮಗುವಿಗೆ ಶಕ್ತಿ ಮೀರಿ ಹೇಳಿಕೊಡಲು ಪ್ರಯತ್ನಿಸುತ್ತಾರೆ. ಆಗ ಮಗು ಅಳುತ್ತದೆ, ಚೀರುತ್ತದೆ, ಒಲ್ಲೆ ಎನ್ನುತ್ತದೆ. ಹೀಗಿರುವಾಗ ಆ ಪುಟ್ಟ ಮಗುವನ್ನು ನಾವು ದಿನನಿತ್ಯ ಬಾಳುವ ಬದುಕನ್ನು ಪರಿಚಯಿಸಬೇಕೇ ಅಥವಾ ಅದರದ್ದೇ ಪ್ರಪಂಚದಲ್ಲಿ ಖುಷಿಯಾಗಿರಲಿ ಎಂದು ಬಿಟ್ಟು ಬಿಡಬೇಕೇ ಎನ್ನುವ ಗೊಂದಲ. ಇದೇ ಗೊಂದಲದಲ್ಲಿದ್ದರೆ, ಮಗುವಿಗೆ ಹೊಸದೊಂದು ಕೌಶಲವನ್ನು ಹೇಳಿಕೊಡುವುದು ಕಷ್ಟ. ಆದ್ದರಿಂದ ಹೊರಗಿನ ಜಗತ್ತಿಗೆ ತನ್ನ ಗೊಂದಲವನ್ನು ತೋರದೇ, ಹೊಸ ಪರದೆ ಹಾಕಿಕೊಂಡು ಅವರ ದುಗುಡ ದುಮ್ಮಾನಗಳನ್ನು ಬದಿಗಿಟ್ಟಿರುತ್ತಾರೆ. ಈ ಪುಟ್ಟ ಮಗುವಿನ ತಾಯಿಯಂತೆ.

ಭಾವನಾತ್ಮಕವಾಗಿ ಎಷ್ಟೇ ಕಷ್ಟವಾದರೂ, ದೃಢವಾಗಿರುವುದು ಬಿಟ್ಟು ಬೇರೆ ದಾರಿಯಿಲ್ಲ. ಮೊನ್ನೆ ಹೀಗೆ ಹಾಡು ಕೇಳುತ್ತಾ ಪುಟ್ಟಿ ಸಮಾಧಾನಿಯಾಗಿದ್ದಳು. ಅಮ್ಮನನ್ನು ನೋಡಿ ವಿಶ್ವಾಸದ ನಗು ಬೀರಿದಳು. ಅಮ್ಮ ನನ್ನನ್ನು ನೋಡುತ್ತಾ ಕೇಳಿದರು, “ನೀನು ಈಕೆಗೆ ಮಾತು ಕಲಿಸಿದಾಗ ಇದೇ ಹಾಡನ್ನು ಅವಳು ಹಾಡಬಲ್ಲಳು ಅಲ್ಲವೇ? ಅದನ್ನು ಕೇಳಬೇಕೆಂಬುದು ನನ್ನ ಆಸೆ’ ಎಂದರು. ಅವರ ಭರವಸೆಯ ಬೆಳಕು, ನಾನು ಕಲಿಸುವ  ಮಾತಿನಲ್ಲಿದೆ ಎಂದೆನಿಸಿ ಮೈ ಜುಮ್ಮೆಂದಿತು. ಈಕೆ ಸಾಧಾರಣವಾಗಿ ಎಲ್ಲ ಮಕ್ಕಳೊಂದಿಗೆ ಶಾಲೆಗೆ ಹೋಗಿ ಅವರೊಟ್ಟಿಗೆ ಅವರದೇ ತರಗತಿಗೆ ಹೋಗುವ ಅವಳನ್ನು ಶಾಲೆಯಲ್ಲಿ ಭೇಟಿಯಾಗಲು ಹೋಗಿದ್ದೆ. ಗೋಡೆಯ ಮೇಲೆ ತರಗತಿಯಲ್ಲಿರುವ ಮಕ್ಕಳ ಛಾಯಾ ಚಿತ್ರವನ್ನು ಅಂಟಿಸಿದ್ದರು. ಈಕೆಯ ಚಿತ್ರ ನೋಡಿದರೆ ಅರ್ಥ ಮಾಡಿಕೊಳ್ಳಬಹುದಾಗಿತ್ತು ಛಾಯಾ ಗ್ರಾಹಕ ಇವಳನ್ನು ಸುಮ್ಮನೆ ನಿಲ್ಲಿಸಲು   ಪಟ್ಟ ಹರಸಾಹಸವನ್ನು. ಇನ್ನು ಕೊಠಡಿಯಲ್ಲಿ ಈಕೆಗೆಂದೇ ಮೀಸಲಾಗಿರುವ ಶಿಕ್ಷಕಿ. ಬೇರೆ ಮಕ್ಕಳೆಲ್ಲ ಒಟ್ಟಿಗೆ ಆಟವಾಡುತ್ತಿದ್ದಾರೆ, ಕೆಲವು ಹುಡುಗಿಯರು ಬಂದು ಇವಳ ಬೆನ್ನು ತಟ್ಟಿ “ಹಲೋ’ ಎನ್ನಲು ಪ್ರಯತ್ನಿಸುತ್ತಿದ್ದಾರೆ, ಇವಳ ಆಟವನ್ನು ದೂರದಿಂದಲೇ ನೋಡುತ್ತಿದ್ದಾರೆ. ಈ ದೃಶ್ಯವನ್ನು ನೋಡಿ ನನಗೊಂದು ರೀತಿಯ ಖುಶಿ.

ಆಗ ತಿಳಿಯಿತು ಈ ಪುಟ್ಟ ಮಗು, ತನ್ನ ನಿಜ ಬಣ್ಣವನ್ನು ತೋರಿಸಲು ಮನಸ್ಸು ಮಾಡಿದರೆ, ಆ ಸೊಗಸನ್ನು ಸವಿಯುವ ಜನರು ಬಹಳಷ್ಟಿದ್ದಾರೆ  ಎಂದು. ಶಾಲೆಯಿಂದ ಹೊರ ಬರುವಾಗ ಮನಸ್ಸು ಶಾಂತವಾಗುವ ಕಡಲಿನಂತಿತ್ತು. ಉದ್ಯಾನದಲ್ಲಿ ಗಿಡವೊಂದು ಬಿಟ್ಟ ಹೂವಿಗಿಂತ ಅದರ ಬಣ್ಣ ಕೊಡುವ ಖುಷಿಯೇ ಹೆಚ್ಚು.  ಎಲ್ಲರ ಮಧ್ಯೆ ತನ್ನನ್ನು ತನ್ನಂತೆಯೇ ಒಪ್ಪಿಕೊಳ್ಳುವವರ ಜತೆ ಇರಬೇಕು ಎಂದು ಹಾತೊರೆಯುವವರ ಮಧ್ಯೆ ಈ ಪುಟ್ಟ ಹುಡುಗಿ ಪದೇಪದೆ ನೆನಪಾಗುತ್ತಲೇ ಇರುತ್ತಾಳೆ.

 

-ಸ್ಫೂರ್ತಿ  ತಸ್ಮೇನಿಯಾ

Advertisement

Udayavani is now on Telegram. Click here to join our channel and stay updated with the latest news.

Next