Advertisement

ರೈಲಿನ ಭಿಕ್ಷೆಯಿಂದ ಬದುಕು ರೂಪಿಸಿದ ದೇಶದ ಮೊದಲ ಮಂಗಳಮುಖಿ ಫೋಟೋ ಜರ್ನಲಿಸ್ಟ್ ಜೋಯಾಳ ಯಶೋಗಾಥೆ

06:40 PM Jun 22, 2021 | Team Udayavani |

ಅವಕಾಶ ಹಾಗೂ ಅದೃಷ್ಟ ಎರಡು ನಮ್ಮ ಜೊತೆನೇ ಇರುತ್ತವೆ. ಆದರೆ ಅವುಗಳನ್ನು ಸರಿಯಾದ ಹಾದಿಯಲ್ಲಿ ಬಳಸಲು ನಾವು ಬೇಗನೇ ಹಾತೊರೆಯುತ್ತೇವೆ. ತಾಳಿದವನು ಬಾಳಿಯಾನು. ಬಾಳಿದವನು ಏನಾದರೂ ಸಾಧಿಸಿಯಾನು.

Advertisement

ಅವಮಾನ, ಹತಾಶೆ, ಸೋಲು, ಖಿನ್ನತೆ ಮನುಷ್ಯನಿಗೆ ಮಾನಸಿಕವಾಗಿ ಕಾಡುತ್ತದೆ ಇವುಗಳಿಂದ ಆತ ದುರ್ಬಲನಾಗುತ್ತಾನೆ. ಇಂಥ ಸಮಯದಲ್ಲಿ ಮನುಷ್ಯನಿಗೆ ಆತನ ಯೋಚನೆಯೇ ಆತನ ಬದುಕು ರೂಪಿಸಲು ಸಹಕಾರಿಯಾಗುತ್ತದೆ.

ಥೋಮಸ್ ಲೋಬೋ. ಮುಂಬಯಿಯ ಒಂದು ಸಣ್ಣ ಏರಿಯಾದಲ್ಲಿ ಬೆಳೆದ ಹುಡುಗ. ಬಾಲ್ಯದಲ್ಲೇ ಅಮ್ಮನ ಪ್ರೀತಿಯಲ್ಲಿ, ತಂಗಿಯೊಂದಿಗೆ ಗುದ್ದಾಡುತ್ತಾ ಬೆಳೆದ ಹುಡುಗ. ಅಪ್ಪನಿಲ್ಲದೆ ವಿಧವೆ ತಾಯಿಯೊಂದಿಗೆ ಬಡತನದ ನೆರಳಿನಲ್ಲಿ ದಿನದೂಡಿದ ಕುಟುಂಬವದು.

ಬಡತನದಲ್ಲಿ ಕಷ್ಟಪಟ್ಟು ಮಕ್ಕಳ ಭವಿಷ್ಯದ ಕುರಿತು ಕನಸು ಕಂಡು ಥೋಮಸ್ ನ ತಾಯಿ, ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು. ಆದರೆ ಥೋಮಸ್ 5 ನೇ ತರಗತಿವರೆಗೆ ಕಾನ್ವೆಂಟ್ ಶಾಲೆಗೆ ಹೋಗಿ ಅಲ್ಲಿಂದ ಶಾಲೆ ಬಿಟ್ಟಾವ ಮತ್ತೆ ಕಲಿಯುವ ಕುರಿತು ಯೋಚಿಸಲೇ ಇಲ್ಲ. ಕ್ರಿಶ್ಚಿಯನ್ ಸಮುದಾಯದ ಗೆಳೆಯರೊಂದಿಗೆ ಕ್ಷಣ ಕಳೆದ ಥೋಮಸ್ ಸಣ್ಣಂದಿರಲ್ಲೇ ಇಂಗ್ಲೀಷ್ ಭಾಷೆಯನ್ನು ಕರಗತ ಮಾಡಿಕೊಳ್ಳುತ್ತಾನೆ.

ಮುಂಬಯಿಯ ಮಹೀಮ್ ಕಪಾಡ್ ಬಜಾರ್ ನಲ್ಲಿ ದಿನ ಕಳೆದು, ಸರಿಯಾದ ಮನೆಯಿಲ್ಲದೆ ರಾತ್ರಿ ಹೊತ್ತು ಫುಟ್ ಪಾತ್ ನಲ್ಲಿ ಮಲಗುವ ಪರಿಸ್ಥಿ ಥೋಮಸ್ ಕುಟುಂಬಕ್ಕೆ ಬರುತ್ತದೆ.

Advertisement

ಥೋಮಸ್ ಬೆಳೆಯುತ್ತಾ ಹೋದ ಹಾಗೆ ಆತನ ವರ್ತನೆ, ನಡವಳಿಕೆಯಲ್ಲಿ ಹೆಣ್ಣು ಸ್ವಭಾವ ಕಾಣಿಸಿಕೊಳ್ಳುತ್ತದೆ. ಆತನ ರುಚಿ, ಅಭಿರುಚಿ, ಆಯ್ಕೆ, ಆದ್ಯತೆಯೆಲ್ಲಲ್ಲಾ ಹೆಣ್ಣಿನ ವರ್ತನೆ ತುಂಬಿಕೊಳ್ಳುತ್ತದೆ. ದಿನಕಳೆದು , ವರ್ಷಗಳು ಉರುಳಿದಾಗ, ಥೋಮಸ್ ಗೆ ತಾನು ಬೇರೆ ಹುಡುಗರ ಥರ ಇಲ್ಲ ಎನ್ನುವುದು ತಿಳಿಯುತ್ತದೆ. ಆದರೆ ಅಮ್ಮನಿಗೆ ಹೇಳದೇ ಭಯದಿಂದಲೇ ಬೆಳೆಯುತ್ತಾನೆ.

ಥೋಮಸ್ ಬೇಕರಿಗೆ ಕೆಲಸಕ್ಕೆ ಹೋಗುತ್ತಿದ್ದ ದಿನಗಳವು. ಅದೊಂದು ದಿನ ಸಲ್ಮಾ ಎನ್ನುವ ಮಂಗಳಮುಖಿವೊಬ್ಬರು ಥೋಮಸ್ ಗೆ ಪರಿಚಯವಾಗುತ್ತಾರೆ. ಈ ಪರಿಚಯವೇ ಮುಂದೆ ಜೋಯಾ ಥೋಮಸ್ ಲೋಬೋ ಆಗಿ ಪರಿವರ್ತನೆಯಾಗಲು ಕಾರಣವಾಗುತ್ತದೆ.

ಥೋಮಸ್ ಜೋಯಾಳಾಗುತ್ತಾಳೆ. ಮಂಗಳಮುಖಿ ಸಮುದಾಯ ಆತನನ್ನು, ಆಕೆಯೆಂದು ಒಪ್ಪಿಕೊಂಡು,ಅವರ ಹಾಗೆ, ಚಪ್ಪಳೆ,ನಡಿಗೆ,ವರ್ತನೆ,ಸಂಪ್ರದಾಯವನ್ನು, ಉಡುಗೆ-ತೊಡಗೆಯನ್ನು ಕಲಿಸುತ್ತಾರೆ. ಮುಂದೆ ಥೋಮಸ್ ಈ ವಿಷ್ಯವನ್ನು ಅಮ್ಮನ ಬಳಿ ಹೇಳಿದಾಗ, ಅಮ್ಮ ಅವಳನ್ನು ಮೂರು ತಿಂಗಳು ಮನೆಯೊಳಗೆ ಸೇರಿಸಿರಲಿಲ್ಲ.

ಮೊದಲ ಬಾರಿ ಜೋಯಾ ರೈಲಿನಲ್ಲಿ ಭಿಕ್ಷೆ (magthi) ಬೇಡಲು ಹೋದಾಗ,ಅವಳು ದಾರಿ ತಪ್ಪಿ ಮೈ ಮಾರಿಕೊಳ್ಳಬಹುದೆನ್ನುವ ಭಯದಿಂದ ಜೋಯಾಳ ಅಮ್ಮ ಅವಳು ರೈಲಿನಲ್ಲಿ ಹೋದಾಗ ಅವಳನ್ನು ತೀಕ್ಷ್ಣವಾಗಿ ಗಮನಿಸುತ್ತಾರೆ.

2016 ರಲ್ಲಿ ಜೋಯಾಳ ತಾಯಿ ತೀರಿ ಹೋದ ಮೇಲೆ, ಜೋಯಾ ಮತ್ತೆ ರೈಲಿನಲ್ಲಿ ಭಿಕ್ಷೆ ಬೇಡುವುದನ್ನು ಮುಂದುವರೆಸುತ್ತಾರೆ. ಬೇರೆ ಬೇರೆ ರೈಲಿನಲ್ಲಿ ಹೋಗಿ ಭಿಕ್ಷೆ ಬೇಡುತ್ತಾರೆ. ದಿನಕ್ಕೆ ಕಮ್ಮಿಯಂದ್ರೆ 500- 600 ರೂಪಾಯಿಯನ್ನು ಭಿಕ್ಷೆಯ ಮೂಲಕ ದುಡಿದು ಒಟ್ಟು ಮಾಡುತ್ತಾರೆ.

ಫೋಟೋಗ್ರಾಫಿಯ ಬಗ್ಗೆ ಆಸಕ್ತಿ ಹೊಂದಿದ್ದ ಜೋಯಾ, ಹತ್ತು ವರ್ಷದಿಂದ ಒಟ್ಟು ಮಾಡಿದ ಹಣದಿಂದ ಒಂದು ಸೆಕೆಂಡ್ ಹ್ಯಾಂಡ್ ಕ್ಯಾಮಾರಾ ಖರೀದಿಸುತ್ತಾರೆ. ಪ್ರತಿನಿತ್ಯ ಏನಾದರೂ ಕ್ಲಿಕ್ಕಿಸುತ್ತಾ ಇರುತ್ತಾರೆ.

ಅದು 2020 ರ ಲಾಕ್ ಡೌನ್ ಸಮಯ. ಭಿಕ್ಷೆ ಬೇಡುವುದು ಬಿಡಿ. ಜೋಯಾಳಂಥವರಿಗೆ ಸರಿಯಾದ ಊಟವೂ ಸಿಗದಂಥ ಕ್ರೂರಿ ಕೋವಿಡ್ ನ ಕರಾಳ ಕಾಲವದು. ಅದೊಂದು ದಿನ ಜೋಯಾ ಬಾಂದ್ರಾ ನಿಲ್ದಾಣದ ಬಳಿ ಸಾವಿರಾರು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದನ್ನು ನೋಡುತ್ತಾರೆ. ಕಾರ್ಮಿಕರ ಹಸಿವಿನ ಹರಸಾಹಸವನ್ನು, ಆಕ್ರೋಶವನ್ನು ಕ್ಯಾಮಾರದಲ್ಲಿ ಸರೆ ಹಿಡಿಯಲು ಮನೆಗೆ ಓಡಿ ಕ್ಯಾಮಾರವನ್ನು ಹಿಡಿದು ಆ ಚಿತ್ರಣವನ್ನು ಸೆರೆ ಹಿಡಿಯುತ್ತಾರೆ. ಅದನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡುತ್ತಾರೆ.

ಇದಾದ ಕೆಲವೇ ಕ್ಷಣಗಳಲ್ಲಿ ಜೋಯಾ ಅವರ ಪೋಟೋಗಳು ವೈರಲ್ ಆಗುತ್ತವೆ. ಮರುದಿನ ಮುಂಬಯಿ ಮಿರರ್, ಹಿಂದೂಸ್ತಾನ್ ಟೈಮ್ಸ್ ನಂಥ ಹಲವು ಜನಪ್ರಿಯ ಪತ್ರಿಕೆಗಳಲ್ಲಿ ವೈಬ್ ಸೈಟ್ ನಲ್ಲಿ ಜೋಯಾ ಅವರ ಹೆಸರಿಗೆ ಕೃಪೆ ನೀಡುತ್ತಾ ಪೋಟೋಗಳು ಪ್ರಕಟಗೊಳ್ಳುತ್ತವೆ. ಇದಾದ ಬಳಿಕವೂ ಜೋಯಾ ತಮ್ಮ ಭಿಕ್ಷೆಯ ವೃತ್ತಿಯನ್ನು ಮುಂದುವರೆಸುತ್ತಾರೆ.

 

ಜೋಯಾ ಯೂಟ್ಯೂಬ್ ನಲ್ಲಿ 2018 ರಲ್ಲಿ ಬಂದ ಹಿಜ್ರಾ  ಶಾಪ್ ಕೀ ವರ್ಧನ್ ‘ ಎನ್ನುವ ಕಿರುಚಿತ್ರವೊಂದನ್ನು ನೋಡಿ, ಅದರಲ್ಲಿ ತನಗೆ ಕಂಡ ದೋಷಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಾಕುತ್ತಾರೆ. ಇದು ಜೋಯಾಳ ಬದುಕಿನ ಎರಡನೇ ತಿರುವು.

ಕಿರುಚಿತ್ರದ 2 ನೇ ಭಾಗಕ್ಕೆ ಜೋಯಾಳನ್ನು ಮುಖ್ಯ ಭೂಮಿಕೆಯಲ್ಲಿ ನಟಿಸಲು ಆಹ್ವಾನಿಸಿ ಅವಕಾಶವನ್ನು ನಿರ್ದೇಶಕರು ನೀಡುತ್ತಾರೆ.ಕನಸೋ ಅಥವಾ ಕಲ್ಪನೆಯೋ ಅಂತೂ ಹಿಜ್ರಾ ಶಾಪ್ ಕೀ ವರ್ಧನ್ -2 ಚಿತ್ರದಲ್ಲಿ ಜೋಯಾ ನಟಿಸುತ್ತಾರೆ. ಈ ಚಿತ್ರ ಬಿಡುಗಡೆಯಾಗಿ ಸುಮಾರು 4 ಮಿಲಿಯನ್ ಅಧಿಕ ಜನರನ್ನು ತಟ್ಟುತ್ತದೆ.

ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣವಾದ ಜೋಯಾಳ ನಟನಗೆ ಆವಾರ್ಡ್ ಕೂಡ ಸಿಗುತ್ತದೆ. ಆವಾರ್ಡ್ ಕಾರ್ಯಕ್ರಮದಲ್ಲಿ ಹತ್ತಾರು ಪತ್ರಕರ್ತರು ಭಾಗಿಯಾಗುತ್ತಾರೆ. ವೇದಿಕೆಯ ಮೇಲೆ ಜೋಯಾ ಪ್ರಶಸ್ತಿ ಪಡೆದು ಆಕೆಯ  ಜೀವನದ ಕಥೆ ಕೇಳಿದ,ಕಾಲೇಜ್ ಮೀಡಿಯಾ ಏಜಿನ್ಸಿಯ ಪತ್ರಕರ್ತರೊಬ್ಬರು ಜೋಯಾಳಿಗೆ ಒಂದು ಉದ್ಯೋಗದ ಆಫರ್ ನೀಡುತ್ತಾರೆ.  ಆ ಉದ್ಯೋಗವೇ ವರದಿಗಾರಿಕೆ.

ಚಪ್ಪಳೆ ತಟ್ಟುವ ಕೈಗಳಿಗೆ ಮೈಕ್, ಹಣ ಕೇಳುವ ಬಾಯಿಗೆ ಸುದ್ದಿಯನ್ನು ವಿವರಿಸುವ ಜವಬ್ದಾರಿಯಿಂದ ಜೋಯಾ ಒಂದಿಷ್ಟು ದುಡಿಯುತ್ತಾರೆ. ಮುಂಗಳಮುಖಿಯರು ತಮ್ಮ ಹಕ್ಕಿಗಾಗಿ ನಡೆಸುವ  ‘ಪಿಂಕ್ ರ್ಯಾಲಿಯಲ್ಲಿ ಫೋಟೋ ಜರ್ನಲಿಸ್ಟ್  ದಿವ್ಯಾಕಾಂತ್ ಎನ್ನುವವರನ್ನು ಜೋಯಾ ಭೇಟಿಯಾಗುತ್ತಾರೆ. ಮುಂದೆ ಅವರಿಂದಲೇ ಜೋಯಾ ಫೋಟೋ ಜರ್ನಲಿಸ್ಟ್ ಕುರಿತ ವಿದ್ಯೆಯನ್ನು ಕಲಿತು ಕರಗತ ಮಾಡಿಕೊಳ್ಳುತ್ತಾರೆ.

ಜೋಯಾ ಸದ್ಯ ಫ್ರಿಲ್ಯಾನ್ಸರ್ ಪತ್ರಕರ್ತೆಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಕ್ಲಿಕ್ಕಿಸಿದ ಫೋಟೋಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜೋಯಾಳ ವೈಲ್ಡ್ ಲೈಫ್ ಫೋಟೋಗಳು ಜನಮಾನವನ್ನು ಸೆಳೆಯುತ್ತಿವೆ. ತಾನೊಬ್ಬಳು ಸರ್ಕಾರಿ ಅಧಿಕಾರಿಯಾಗಬೇಕೆನ್ನುವುದು ಜೋಯಾಳ ಕನಸು.

 

-ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next