Advertisement

UV Fusion: ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ…

01:16 PM Feb 20, 2024 | Team Udayavani |

ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನಿರುದ್ಯೋಗ, ಬಡತನ ಅದು ಇದು ಅಂತ ಪಟ್ಟಿ ಎಷ್ಟುದ್ದಕ್ಕೆ ಬೇಕಾದರೂ ಬೆಳೆಯುತ್ತೆ. ಆದರೆ ಹೆಚ್ಚಿನ ಯುವ ಜನರ ಸಮಸ್ಯೆ ಯಾವುದು ಹೇಳಿ ನೋಡೋಣ? ಬ್ರೇಕ್‌ ಅಪ್‌! ಅವರು ಮಾತಾಡಿಸುತ್ತಿಲ್ಲ, ಇವರೂ ಮಾತಾಡಿಸುತ್ತಿಲ್ಲ, ಒಂಟಿತನ ಇಂತಹವೇ. ಯಾಕೆ ಹೀಗೆ ಅಂತೀರಾ? ಯಾಕಂದ್ರೆ ಕೆಲವೊಂದು ಸರಳ ವಿಷಯಗಳು ಸರಳವಾಗಿ ತಲೆಗೆ ಹೋಗಲ್ಲ.

Advertisement

ಇಲ್ಯಾರು ಪರಿಪೂರ್ಣರಲ್ಲ. ಎಲ್ಲರಿಗೂ ಅವರವರದ್ದೇ ಆದ ಒಳ್ಳೆಯ ಕೆಟ್ಟ ಗುಣಗಳೆರಡೂ ಇರುತ್ತವೆ. ಒಳ್ಳೆಯ ಅಥವಾ ಕೆಟ್ಟ ಎನ್ನುವುದಕ್ಕಿಂತ ಧನಾತ್ಮಕ ಮತ್ತು ಋಣಾತ್ಮಕ ಇಲ್ಲವೇ ಶಕ್ತಿ ಮತ್ತು ಬಲಹೀನತೆಗಳಿವೆ ಎನ್ನಬಹುದೇನೋ. ಹಳೆಯ ಹಾಡಿನ ಸಾಲೊಂದಿದೆಯಲ್ಲ “ಒಂದೇ ಗಿಡದಿ ಹೂವು ಮುಳ್ಳು ಇರುವಂತೆ ಒಂದೇ ಮನದಿ ಎರಡು ಗುಣವು ಇರುವುದಂತೆ’ ಅಂತ ಹಾಗೆಯೇ ಇದು ಕೂಡ. ಸೀಬೆಯ ಗಿಡದಲ್ಲಿ ಸೇಬು ಬೆಳೆಯಬೇಕು ಎಂದರೆ? ಅದು ಸಾಧ್ಯವಿರಬಹುದು.

ಆದರೆ ಪ್ರಕೃತಿಯ ನಿಯಮಕ್ಕೆ ಅದೆಷ್ಟು ಸಹ್ಯ? ಅಂತೆಯೇ ಎಲ್ಲರ ಆಲೋಚನೆಗಳು, ಆಕಾರ, ನಡೆ, ನುಡಿ ಎಲ್ಲವೂ ವಿಭಿನ್ನವೇ. ಅದನ್ನು ಒಪ್ಪಿಕೊಳ್ಳುವ ಭಾವ ನಮ್ಮೆಲ್ಲರಲ್ಲಿ ಬರಬೇಕು. ಇನ್ನೊಬ್ಬರ ನಡೆ ನುಡಿ, ವೇಷ ಭೂಷಣ, ಆಯ್ಕೆ, ನಂಬಿಕೆಗಳನ್ನು ಆಡಿಕೊಂಡು ನಗಲು ನಾವೆಷ್ಟು ಅರ್ಹರು?ಅವರು ಸ್ನೇಹಿತರಿರಲಿ ಅಪರಿಚಿತರಿರಲಿ ಇನ್ನೊಬ್ಬರನ್ನು ಅಳೆಯುವ ಕೆಳಮಟ್ಟಕ್ಕೆ ನಾವಿಳಿಯುವುದು ಉಚಿತವಲ್ಲವೇನೋ. ಇದನ್ನು ಕೆಲವರು ಅರ್ಥಮಾಡಿಕೊಳ್ಳಬೇಕು.

ಇದಕ್ಕಿಂತಲೂ ಬಹುಮುಖ್ಯವಾದ ವಿಷಯ ವೇನೆಂದರೆ ಏಕೆ ನಮ್ಮನ್ನು ನಾವು ಯಾವಾಗಲೂ ಅಮುಖ್ಯರಾಗೇ ನೋಡುತ್ತೇವೆ? ನಮ್ಮ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವೇಕೆ ಹಿಂದೆ ಬೀಳುತ್ತೇವೆ? ಕಾರಣ ಇಷ್ಟೇ. “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ’.

ಅವರಷ್ಟು ಸಿರಿವಂತರಾಗಿ ನಾವೇಕಿಲ್ಲ? ಅವರಪ್ಪ ಅಮ್ಮನ ರೀತಿ ನಮ್ಮವರು ನಮಗ್ಯಾಕೆ ಸೌಲಭ್ಯ ಕೊಟ್ಟಿಲ್ಲ? ಇದೆಲ್ಲ ಒಂದು ರೀತಿಯದ್ದಾದರೆ ಇನ್ನೊಂದಿದೆ ನಮ್ಮನ್ನು ಪ್ರೀತಿಸುವ ಗೌರವಿಸುವ ಒಂದಷ್ಟು ಹೃದಯಗಳನ್ನು ನಾವು ಗುರುತಿಸುವುದೇ ಇಲ್ಲ. ಯಾವಾಗಲೂ ನಮ್ಮನ್ನು ಕಡೆಗಣಿಸುವವರ ಹಿಂದೆಯೇ ಓಡಿ ಓಡಿ ಮತ್ತೆ ಅವರೇ ಸರ್ವಸ್ವವೆನ್ನುವಂತೆ ವರ್ತಿಸಿ ಕೊನೆಗೆ ಅವರು ತಿರುಗಿಯೂ ನೋಡದಾಗ ಹತಾಶೆಯಿಂದ ಅದಕ್ಕೂ ನಮ್ಮನ್ನು ನಾವೇ ಹೊಣೆಯಾಗಿಸಿಕೊಳ್ಳುವುದು! ಅದ್ಯಾಕೆ ಹಾಗೆ? ನಾವು ಅಂದರೆ ನಾವೆಲ್ಲರೂ ಹಾಗಂತಲ್ಲ ಹಲವರು ಅಥವಾ ಕೆಲವರು ಅವರನ್ನು ನಮ್ಮವರೆಂದೇ ಬಗೆದು ಹೇಳುತ್ತಿರುವೆನಷ್ಟೆ.

Advertisement

ಯಾವಾಗಲೂ ಇನ್ನೊಬ್ಬರ ಸ್ನೇಹ ಪ್ರೀತಿ ಹಂಬಲದಲ್ಲಿ ಬಿದ್ದು ಒದ್ದಾಡುವವರು ನಮ್ಮನ್ನು ನಿಜವಾಗಿ ಆತ್ಮೀಯರೆಂದು ಬಗೆಯುವ ಮನಸ್ಸುಗಳನ್ನು ಗೌರವಿಸೋದೇ ಇಲ್ಲ. ಯಾರದೋ ಹಿಂದೆ ಅಥವಾ ಯಾವುದೋ ವಸ್ತುವಿನ ಹಿಂದೆ, ಆಸೆಯ ಹಿಂದೆ ಓಡುತ್ತಾ ನಮ್ಮನ್ನೇ ಅರಸುತ್ತಾ ಅನುಸರಿಸುತ್ತಾ ಬಂದ ವ್ಯಕ್ತಿ, ವಸ್ತು, ಮನಸ್ಸು, ಕನಸುಗಳನ್ನು ಒಮ್ಮೆ ನಿಂತು ಮಾತಾಡಿಸಿ, ನಾವೂ ಇಷ್ಟೆಲ್ಲಕ್ಕೂ ಅರ್ಹರೆಂಬ ಭಾವದಿಂದ ಒಪ್ಪಿ ಅಪ್ಪಿ ಇರುವುದರೊಂದಿಗೆ ನಮ್ಮೊಂದಿಗೆ ನಿಜವಾಗಿ ಬರುವುದರೊಂದಿಗೆ ಮುನ್ನಡೆಯಬಹುದಲ್ವಾ?

ಬದುಕಿನಲ್ಲಿ ಈ ಸರಳ ಸೂತ್ರವನ್ನೊಮ್ಮೆ ಅನುಸರಿಸಿ ನೋಡೋಣ. ನಮ್ಮ ವರ್ತನೆ, ಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ಆದರೂ ಮತ್ತೆ ಮತ್ತೆ ನಿಮ್ಮ ಮಾತಿಗೆ ಹಾರೈಸುವ ಜೀವಗಳನ್ನು ಪಡೆಯುವುದು ಸಾಮಾನ್ಯ ವಿಷಯವೇ? ಮತ್ತೆ ಹೇಳಬೇಡಿ ಅಂತವರು ಯಾರೂ ನನ್ನ ಬದುಕಲ್ಲಿ ಇಲ್ಲ ಅಂತ. ಇಲ್ಲದೇ ಅಲ್ಲ ನೀವು ಗುರುತಿಸಿಲ್ಲ ಅಷ್ಟೇ.

ಅಕ್ಕರೆ ತೋರಿಸುವ ಅಪ್ಪ ಅಮ್ಮ ಅಕ್ಕ ತಮ್ಮ ಇರಬಹುದು, ಇಲ್ಲ ಸ್ನೇಹಿತರಿರಬಹುದು ಅದೂ ಇಲ್ಲ ನಿಮ್ಮ ದಾರಿಯನ್ನೇ ಕಾಯುವ ಸಾಕು ಪ್ರಾಣಿಯೊಂದಿರ ಬಹುದು ಗಮನಿಸುವ ಗುರುತಿಸುವ ತಾಳ್ಮೆ ಜಾಣ್ಮೆ ನಮಗಿರಬೇಕಷ್ಟೆ.

-ಶರತ್‌ ಶೆಟ್ಟಿ ,

ವಂಡ್ಸೆ

Advertisement

Udayavani is now on Telegram. Click here to join our channel and stay updated with the latest news.

Next