Advertisement

ಬಿಜೆಪಿ ಆಪರೇಷನ್‌ ಮಾಡಲಿ ನೋಡೋಣ: ದಿನೇಶ್‌ ಸವಾಲು

06:40 AM Sep 17, 2018 | Team Udayavani |

ಬೆಂಗಳೂರು: ಬಿಜೆಪಿ ನೀತಿಗೆಟ್ಟ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸಿದ್ದರಾಮಯ್ಯ ಅವರ ಜತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು,ಸರ್ಕಾರ ಅಸ್ಥಿರಗೊಳಿಸಲು ಯಡಿಯೂರಪ್ಪ ಹಾಗೂ ಒಂದು ಗುಂಪು ಮಾತ್ರ ಪ್ರಯತ್ನ ಪಡುತ್ತಿದೆ. ಆದರೆ ಬಿಜೆಪಿಯ ಕೆಲವರಿಗೆ ಸರ್ಕಾರ ಬೀಳಿಸುವುದು ಬೇಕಿಲ್ಲ. ಅವರ ಪಕ್ಷದವರೇ ಯಡಿಯೂರಪ್ಪ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರ ಹೇಗೆ ಅಸ್ಥಿರಗೊಳಿಸುತ್ತಾರೋ ನಾವು ನೋಡುತ್ತೇವೆ ಎಂದು ಸವಾಲು ಹಾಕಿದ ಅವರು, ಬಿಜೆಪಿಯ ನೀತಿಗೆಟ್ಟ ರಾಜಕಾರಣ ಬಯಲಿಗೆ ಎಳೆಯುತ್ತೇವೆ ಎಂದು ತಿಳಿಸಿದರು.

ಅನಾವಶ್ಯಕವಾಗಿ ಸಿದ್ದರಾಮಯ್ಯ ಹೆಸರನ್ನು ತರಲಾಗುತ್ತಿದೆ. ಆದರೆ ಅವರು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡಿಲ್ಲ. ಅಪಪ್ರಚಾರ ಯಾರೂ ಒಪ್ಪುವಂತದ್ದಲ್ಲ ಎಂದು ಹೇಳಿದರು.ಜಾರಕಿಹೊಳಿ ಸಹೋದರರ ಸಮಸ್ಯೆ ಒಂದು ಜಿಲ್ಲೆಗೆ ಸೀಮಿತ. ಅವರಿಗೆ ಸರ್ಕಾರ ಅಸ್ಥಿರಗೊಳಿಸುವ ಉದ್ದೇಶವೂ ಇಲ್ಲ ಎಂದರು.ಬಿಬಿಎಂಪಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟಕ್ಕೆ ಭಂಗ ತರುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ. ಆದರೆ, ಅವರ ಪ್ರಯತ್ನ ಫ‌ಲ ನೀಡುವುದಿಲ್ಲ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರ ಸ್ಥಿರವಾಗಿದೆ. ಸದ್ಯಕ್ಕೆ ಕಾಂಗ್ರೆಸ್‌ ಶಾಸಕಾಂಗ ಪಕ್ಷ ಕರೆಯುವ ಅವಶ್ಯಕತೆಯೂ ಇಲ್ಲ. ವಿಧಾನಪರಿಷತ್‌ ಚುನಾವಣೆಗೆ ಸಂಬಂಧಿಸಿದಂತೆ ಮುಂದೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗುವುದು . ನಮ್ಮ ಎಲ್ಲ ಶಾಸಕರು ಒಗ್ಗಟ್ಟಾಗಿದ್ದು ಎಲ್ಲೂ ಹೋಗಲ್ಲ ಎಂದು ತಿಳಿಸಿದರು.ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿಯವರು ಆಮಿಷವೊಡ್ಡಿರುವ ಬಗ್ಗೆ ಐಟಿ ಇಲಾಖೆಗೆ ದೂರು ನೀಡಿದ್ದೇವೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next