Advertisement

ವಿಶ್ವಕ್ಕೆ ಸಹಬಾಳ್ವೆ ಸಂದೇಶ ನಮ್ಮದಾಗಲಿ

01:12 PM Apr 28, 2017 | Team Udayavani |

ಹುಬ್ಬಳ್ಳಿ: ನಮ್ಮ ಆಚಾರ-ವಿಚಾರ, ಚಿಂತನೆಗಳೆನಿದ್ದರೂ ನಮ್ಮೊಳಗೆ ಇರಲಿ. ಆದರೆ ಇನ್ನೊಬ್ಬರ ಜೊತೆ ಪರಸ್ಪರ ಹೊಂದಾಣಿಕೆಯಿಂದ ಇರಬೇಕು. ನೀನು ಬದುಕಬೇಕು, ಇನ್ನೊಬ್ಬರನ್ನು ಬದುಕಲು ಬಿಡಬೇಕು. ಇದುವೇ ನಾವಿಂದು ವಿಶ್ವಕ್ಕೆ ನೀಡುವ ಸಹಬಾಳ್ವೆಯ ಸಂದೇಶವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. 

Advertisement

ಇಲ್ಲಿನ ಹಳೇಹುಬ್ಬಳ್ಳಿ ಆಸಾರ ಓಣಿಯ ಅನಂತನಾಥ ಸ್ವಾಮಿ ದೇವಾಲಯ ಆವರಣದಲ್ಲಿ ನಿರ್ಮಿಸಿದ ಸರೋಜಿನಿ ಮುರಗಿ ಪಾಟೀಲ ವಿದ್ಯಾರ್ಥಿನಿಯರ ವಸತಿ ನಿಲಯ, ಸುಶೀಲಾ ಎಸ್‌. ಹೊಸಮನಿ ಸಭಾಗೃಹ ಹಾಗೂ ಪುಷ್ಪಾವತಿ ಪಿ. ಶಿರಗುಪ್ಪಿ ಅನ್ನಪೂರ್ಣ ಭೋಜನ ಶಾಲಾ ನೂತನ ಕಟ್ಟಡಗಳನ್ನು ಉದ್ಘಾಟಿಸಿ, ನಂತರ ಅರವಿಂದ ನಗರದ ವಿವೇಕಾನಂದ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. 

ವಿಶ್ವದಲ್ಲಿ ಧರ್ಮ, ರಾಜಕೀಯದ ಹೆಸರಿನಲ್ಲಿ ಹಾಗೂ ಇನ್ನಿತರೆ ಕಾರಣಗಳಿಂದ ಹಿಂಸೆಗಳು ನಡೆಯುತ್ತಿವೆ. ಎರಡು ಮಹಾ ಯುದ್ಧಗಳು ಆಗಿವೆ. ಸಾವಿರಾರು ಜನರು ಬಲಿಯಾಗಿದ್ದಾರೆ. ಅಮಾಯಕರಿಗೆ ಹಿಂಸೆಯಾಗಿದೆ. ನಾವೆಲ್ಲ ಪರಸ್ಪರರು ಹೊಂದಾಣಿಕೆಯಿಂದ ಸಹಬಾಳ್ವೆಯಿಂದ ಬಾಳಬೇಕು. ಮನುಷ್ಯ ಮತ್ತು ಪ್ರಾಣಿಗಳಲ್ಲೂ ಪ್ರೀತಿ, ಪ್ರೇಮ, ಬಾಂಧವ್ಯ, ಮುಂದಿನ ಸಂತಾನ ಬಗ್ಗೆ ಇರುತ್ತದೆ.

ಆದರೆ ಪ್ರಾಣಿಯು ತನ್ನ ಪ್ರಾಣಕ್ಕೆ ಸಂಚಕಾರ ಬಂದಾಗ ಇನ್ನೊಬ್ಬರನ್ನು ಬಲಿಕೊಟ್ಟು ಬದುಕಬೇಕು ಎನ್ನುತ್ತವೆ. ಆದರೆ ಬುದ್ಧಿಜೀವಿ ಎನಿಸಿಕೊಂಡ ಮನುಷ್ಯ ಹಾಗಲ್ಲ. ನಮ್ಮ ಬಲಿದಾನ ಕೊಟ್ಟು ಇತರರನ್ನು ಬದುಕಿಸಬೇಕು. ಧರ್ಮದ ಆದರ್ಶ, ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ಯುವ ಪೀಳಿಗೆಗೆ ಬಿಟ್ಟು ಕೊಡಬೇಕಾದ ದೊಡ್ಡ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಸಮಾಜವನ್ನು ಬೆಸೆಯುವ ಕಾರ್ಯವು ಮಠಗಳಿಂದ ಆಗಬೇಕಿದೆ ಎಂದರು. 

ಸಮಾಜ ಬೆಳೆಯಬೇಕಾದರೆ ಮಹಿಳೆಯರ ಪಾತ್ರ ಬಹಳ ಪ್ರಾಮುಖ್ಯವಾಗಿದೆ. ಧರ್ಮ, ಸಂಸ್ಕಾರ, ಸಂಸ್ಕೃತಿ ಬೆಳೆಯಲು ಮಹಿಳೆಯೆ  ಪ್ರಮುಖಳಾಗಿದ್ದಾಳೆ. ಅವರಿಗೆ ಹೆಚ್ಚಿನ ಸ್ವಾತಂತ್ರ, ಹೊಣೆಗಾರಿಕೆ ನೀಡಬೇಕಾಗಿದೆ. ಧಾರ್ಮಿಕ ಶ್ರದ್ಧೆಗಳಿಗೆ ಮಾಪನವಿಲ್ಲ. ಆ ಮೂಲಕ ಅಗೋಚರವಾದ ರೀತಿಯಲ್ಲಿ ಪರಂಪರೆ, ಸಂಸ್ಕಾರ, ಸಂಸ್ಕೃತಿ ಪಡೆದುಕೊಂಡು ಬರಲಾಗಿದೆ. ಅದನ್ನು ಮುಂದುವರೆಸಿಕೊಂಡು ಹೋಗಬೇಕು.

Advertisement

ಈಗ ನಿರ್ಮಿಸಲಾದ ವಸತಿ ನಿಯಲದಲ್ಲಿ ಧಾರ್ಮಿಕ ಶಿಕ್ಷಣ ಕೊಡುವ ಕಾರ್ಯವು ದೇವಾಲಯದ ಟ್ರಸ್ಟ್‌ನವರಿಂದ ಆಗಬೇಕು. ಭಾರತದಲ್ಲಿ ಜೈನ ಧರ್ಮ ಪ್ರಾಚೀನವಾದದ್ದು. ಜೈನ ಸಮಾಜ ಸಂಖ್ಯಾದೃಷ್ಟಿಯಲ್ಲಿ ಬಹಳ ಕಡಿಮೆಯಾಗಿದ್ದರೂ, ಧರ್ಮದ ನೆಲೆ. ಆಚರಣೆ, ನಡೆ-ನುಡಿಯಲ್ಲಿ ಸರ್ವಮಾನ್ಯವಾಗಿದೆ. ಸಮಾಜದಲ್ಲಿ ಒಗ್ಗಟ್ಟು, ಸಂಘಟನೆ ಮುಖ್ಯ ಎಂದರು. ಶ್ರೀಕ್ಷೇತ್ರ ಹೊಂಬುಜದ ಡಾ| ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಸಮಾಜದಿಂದ ಇದುವರೆಗೆ ವಿದ್ಯಾರ್ಥಿಗಳಿಗಾಗಿ ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಇನ್ನಿತರೆಡೆ ವಸತಿ ನಿಲಯಗಳಿದ್ದವು.

ಇಲ್ಲಿ ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯ ಸ್ಥಾಪಿಸಿದ್ದು ಉತ್ತಮ ಕಾರ್ಯ. ಇದರಿಂದ ನಗರ ಪ್ರದೇಶಗಳಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುವವರಿಗೆ ಅನುಕೂಲವಾಗುತ್ತದೆ. ಪರೋಪಕಾರಕ್ಕಾಗಿ ಬದುಕಬೇಕು. ದಾನ ಮಾಡುವ ಪರಂಪರೆ ಮುಂದುವರಿಸಿಕೊಂಡು ಹೋಗಬೇಕು ಎಂದರು. ವಿಆರ್‌ಎಲ್‌ ಸಮೂಹ ಸಂಸ್ಥೆ ಚೇರನ್‌ ಡಾ| ವಿಜಯ ಸಂಕೇಶ್ವರ ಮಾತನಾಡಿ, ಮಹಿಳೆಯರಿಗೂ ಎಲ್ಲ ಕ್ಷೇತ್ರಗಳಲ್ಲಿ ಸ್ಥಾನಮಾನ ಸಿಗಬೇಕು.

ಬಡತನದಲ್ಲೂ ಉತ್ತಮ ಶಿಕ್ಷಣ ಹೊಂದಲು ವಸತಿ ನಿಲಯ ಅನುಕೂಲವಾಗಿದೆ ಎಂದರು. ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ ಮಾತನಾಡಿ, ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯ ಸ್ಥಾಪಿಸಿದ್ದು ಉತ್ತಮ ಕಾರ್ಯ. ಇದರಿಂದ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು. 

ಅನಂತನಾಥ ಸ್ವಾಮಿ ದೇವಾಲಯ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಸುಭಾಸ ಹೊಸಮನಿ ಅಧ್ಯಕ್ಷತೆ ವಹಿಸಿ, ಜನಪ್ರತಿನಿಧಿಗಳ ಅನುದಾನ ಹಾಗೂ ಸಮಾಜದವರಿಂದ ದೇಣಿಗೆ ಸಂಗ್ರಹಿಸಿ ಒಟ್ಟು 52 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡಗಳನ್ನು ನಿರ್ಮಿಸಲಾಗಿದೆ. 

ಜೂನ್‌ 15ರಿಂದ ವಸತಿ ನಿಲಯದಲ್ಲಿ 25-30 ವಿದ್ಯಾರ್ಥಿನಿಯರಿಗೆ ಉಳಿದು ಕೊಳ್ಳಲು ಅವಕಾಶ ಕಲ್ಪಿಸಲಾಗುವುದು. 2018ರಿಂದ ಪ್ರತಿವರ್ಷ ವಾರ್ಷಿಕ ಪೂಜೆ  ವೇಳೆ ಆರ್ಥಿಕವಾಗಿ ಹಿಂದುಳಿದ ಮಾಜದ ಬಡವರ 5 ಜೋಡಿಗಳಿಗೆ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗುವುದು. 25 ಲಕ್ಷ ರೂ. ಠೇವಣಿ ಇರಿಸುವ ಪೂಜಾಧ್ರುವ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು. 

ಸ್ಥಳೀಯ ದಿಗಂಬರ ಜೈನ ಸಮಾಜದ ಅಧ್ಯಕ್ಷ ಶಾಂತಿನಾಥ ಹೋತಪೇಟೆ, ಪಾಲಿಕೆ ಸದಸ್ಯ ಡಾ| ಪಾಂಡುರಂಗ ಪಾಟೀಲ, ತವನಪ್ಪ ಶಿರಗುಪ್ಪಿ, ಅಜಿತ ಮುತ್ತಗಿ, ಮದನ ದೇಸಾಯಿ, ಶಾಂತಣ್ಣ ಕಡಿವಾಲ ಇದ್ದರು. ಇದೇ ಸಂದರ್ಭದಲ್ಲಿ ದಾನಿಗಳಿಗೆ, ಧರ್ಮದರ್ಶಿಗಳನ್ನು ಸನ್ಮಾನಿಸಲಾಯಿತು. ಚಂದ್ರಕಾಂತ ಹೊಸಮನಿ ಸ್ವಾಗತಿಸಿದರು. ರಾಘವೇಂದ್ರ ತವನಪ್ಪನವರ ನಿರೂಪಿಸಿದರು. ಅಶೋಕ ನವಲೂರ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next