Advertisement

ರೇಷ್ಮೆ ಉದ್ಯಮ ಅಭಿವೃದ್ಧಿಗೆ ಪ್ಯಾಕೇಜ್‌ ಘೋಷಿಸಲಿ

01:21 PM Jan 31, 2021 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಿಂದ ರಾಜ್ಯಸಭಾ ಸದಸ್ಯರಾಗಿ ಕೇಂದ್ರದಲ್ಲಿ ವಿತ್ತ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ಮಿಲ್ಕ್ ಅಂಡ್‌ ಸಿಲ್ಕ್ ಖ್ಯಾತಿ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಅಥವಾ ಜಿಲ್ಲೆಯ ಅಭಿವೃದ್ಧಿಗೆ ಕೃಷಿ ಆಧಾರಿತ ಕೈಗಾರಿಕೆ ಸ್ಥಾಪಿಸಲು ಘೋಷಣೆ ಮಾಡುವುರೇ ಎಂದು ಜಿಲ್ಲೆಯ ಜನ ನಿರೀಕ್ಷೆ ಹೊಂದಿದ್ದಾರೆ.

Advertisement

ನೀರಾವರಿ ಸೌಲಭ್ಯದಿಂದ ವಂಚಿತ: ರೇಷ್ಮೆ, ಹೈನುಗಾರಿಕೆ, ಹೂ ಹಣ್ಣು ತರಕಾರಿ ಉತ್ಪಾದನೆ ಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಜಿಲ್ಲೆ ಯಾವುದೇ ನದಿ ನಾಲೆಗಳಿಲ್ಲದೆ ನೀರಾವರಿ ಸೌಲಭ್ಯದಿಂದ ವಂಚಿತಗೊಂಡಿದೆ. ಸತತ ಹೋರಾಟದ ಫಲವಾಗಿ ಈ ಭಾಗಕ್ಕೆ ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಹೆಚ್‌ಎನ್‌ ವ್ಯಾಲಿ ಯೋಜನೆಯ ಮೂಲಕ ಹರಿಸಲಾಗಿದೆ ಹೊರತುಪಡಿಸಿ ಈ ಭಾಗದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಕನಸಾಗಿಯೇ ಉಳಿದಿದೆ.

ಅನುದಾನ ನೀಡಲಿ: ಸಿಲಿಕಾನ್‌ ಸಿಟಿ ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಜಿಲ್ಲೆ ಯನ್ನು ಬೆಂಗಳೂರಿಗೆ ಪರ್ಯಾಯವಾಗಿಅಭಿವೃದ್ಧಿಗೊ ಳಿಸಲು ಅವಕಾಶಗಳಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲೆಯ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ನೀರಾವರಿ ಯೋಜನೆಗೆ ಎತ್ತಿನಹೊಳೆ ಸೇರಿಸಿ ವಿಶೇಷ ಅನುದಾನ ಜಾರಿಗೊಳಿಸುವ ಮೂಲಕ ಈ ಭಾಗದ ಹಲವು ವರ್ಷಗಳ ಕನಸನ್ನು ನನಸು ಮಾಡಬೇಕಾಗಿದೆ.

ಜಿಯೋ ಟ್ಯಾಗ್‌ ಮೂಲಕ ಸ್ಥಾನಮಾನ ನೀಡಲಿ: ರೇಷ್ಮೆ ಉತ್ಪಾದನೆ ಮಾಡುವ ಬೆಳೆಗಾ ರರು ಮತ್ತು ನೂಲು ಬಿಚ್ಚಾಣಿಕೆದಾರರು, ಹುರಿಕಾರರು, ನೇಕಾರರು ಒಳಗೊಂಡಂತೆ ರೇಷ್ಮೆ ಉದ್ದಿಮೆಯಲ್ಲಿ ತೊಡಗಿಸಿಕೊಂಡಿರುವ ವರ್ಗಕ್ಕೆ ಕೇಂದ್ರ ಸರ್ಕಾರದಿಂದ ವಿಶೇಷ ಪ್ಯಾಕೇಜ್‌ ನೀಡಿ ರೇಷ್ಮೆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಉತ್ಪಾದನೆ ಆಗುವ ರೇಷ್ಮೆ ನೂಲಿಗೆ ದೇಶ ವಿದೇಶಗಳಲ್ಲಿ ಬೇಡಿಕೆ ಇದ್ದರೂ ಸಹ ಇಲ್ಲಿನ ರೇಷ್ಮೆಗೆ ಜಿಯೋ ಟ್ಯಾಗ್‌ ಮಾಡುವ ಮೂಲಕ ಸೂಕ್ತ ಸ್ಥಾನಮಾನ ಕಲ್ಪಿಸಬೇಕಾಗಿದೆ.

ರಫ್ತು ಮಾಡಲು ಅವಕಾಶ ಕಲ್ಪಿಸಲಿ: ಜಿಲ್ಲೆಯಲ್ಲಿ ಉತ್ಪಾದನೆ ಮಾಡುವ ಹೂ ಹಣ್ಣು ಮತ್ತು ತರಕಾರಿ (ಕೃಷಿ ಉತ್ಪನ್ನಗಳು ಸಹಿತ) ದೇಶ ವಿದೇಶಗಳಿಗೆ ರಫ್ತು ಮಾಡಲು ಸಕಲ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ವಿಶೇಷವಾಗಿ ಸುಮಾರು ವರ್ಷಗಳಿಂದ ಈ ಭಾಗದ ಜನರ ಬೇಡಿಕೆಯಾಗಿರುವ ಚಿಕ್ಕಬಳ್ಳಾಪುರ ಪುಟ್ಟಪರ್ತಿ ರೈಲ್ವೆ ಮಾರ್ಗವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಒತ್ತು ನೀಡಬೇಕಾಗಿದೆ.

Advertisement

ನಂದಿಗಿರಿಧಾಮ ಅಭಿವೃದ್ಧಿಗೊಳಿಸಲಿ: ಕರ್ನಾಟಕದ ಊಟಿ ಎಂದು ಖ್ಯಾತಿ ಹೊಂದಿರುವ ಪ್ರಕೃತಿಯ ಸೊಬಗಿನ ಮೂಲಕ ದೇಶವಿದೇಶಗಳ ಪ್ರವಾಸಿಗರನ್ನು ಪರಿಸರ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿರುವ ನಂದಿ ಗಿರಿಧಾಮವನ್ನು ಕೇಂದ್ರದ ಪ್ರವಾಸೋದ್ಯಮ ಇಲಾಖೆ ಮೂಲಕ ಅಭಿವೃದ್ಧಿಗೊಳಿಸಲು ವಿಶೇಷ ಪ್ಯಾಕೇಜ್‌ ನೀಡಲು ಒತ್ತಾಯ ಸಹ ಕೇಳಿ ಬರು ತ್ತಿದೆ. ರೈತರು ಉತ್ಪಾದಿಸುವ ಉತ್ಪನ್ನಗಳನ್ನು ಸಂರಕ್ಷಣೆ ಮಾಡಲು ಸಂಸ್ಕರಣಾ ಮತ್ತು ಶೀತಲ ಘಟಕ ಗಳನ್ನು ಸ್ಥಾಪಿಸಲು ಆದ್ಯತೆ ನೀಡಬೇಕಾಗಿದೆ.

ಇದನ್ನೂ ಓದಿ:ಸುತ್ತೂರು ಶ್ರೀಗಳನ್ನು ಸಿಎಂ ಮಾಡಿ!

150 ಟಿಎಂಸಿ ಬಯಲುಸೀಮೆಗೆ ಹರಿಸಲಿ: ಸತತ ಬರಗಾಲದಿಂದ ತತ್ತರಿಸುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ರಾಷ್ಟ್ರೀಯ ನೀರಾವರಿ ಯೋಜನೆಯನ್ನು ಜಾರಿಗೊಳಿಸಿ ಪಶ್ಚಿಮವಾಹಿನಿ ನದಿಗಳು ಕೃಷ್ಣ, ಭದ್ರ, ಗೋದಾವರಿ ನದಿಗಳ ಮೂಲಕ ನೀರು ಹರಿಸಲು ಒತ್ತಾಯ ಕೇಳಿ ಬರುತ್ತಿದೆ. ಈ ಯೋಜನೆಯ ಮೂಲಕ 150 ಟಿಎಂಸಿ ನೀರು ಬಯಲುಸೀಮೆಯ ಪ್ರದೇಶಗಳಿಗೆ ಹರಿಸಲು ಕ್ರಮ ಕೈಗೊಳ್ಳಬೇಕಾಗಿದೆ.

ಟೆಕ್ಸ್‌ ಟೈಲ್‌ ಪಾರ್ಕ್‌ ಸ್ಥಾಪಿಸಲಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೆಕ್ಸ್‌ ಟೈಲ್‌ ಪಾರ್ಕ್‌ ಜಾರಿಗೊಳಿಸುವ ಯೋಜನೆ ಕನಸಾಗಿಯೇ ಉಳಿದಿದ್ದು, ಕನಿಷ್ಟ ಈ ಭಾಗದ ಜನರ ಬೇಡಿಕೆ ಈಡೇರಿಸಲು ಸರ್ಕಾರ ಗಮನ ಹರಿಸಬೇಕಾಗಿದೆ. ರೇಷ್ಮೆ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಪ್ರಾಶಸ್ತ್ಯ ನೀಡಬೇಕಾಗಿದೆ.

ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next