Advertisement

ವೆಂಕಟೇಶ್‌ ವಾಸ್ತವ ಅರಿತು ಮಾತನಾಡಲಿ: ಮಹದೇವ್‌

09:12 PM Jan 14, 2020 | Lakshmi GovindaRaj |

ಪಿರಿಯಾಪಟ್ಟಣ: 30 ವರ್ಷಗಳ ಸುದೀಘ ರಾಜಕಾರಣ ಮಾಡಿರುವ ಮಾಜಿ ಶಾಸಕ ಕೆ.ವೆಂಕಟೇಶ್‌ ಅನುಭವಿ ರಾಜಕಾರಣಿ ಎಂದು ಭಾವಿಸಿದ್ದೆ. ಆದರೆ, ರಾಜಕಾರಣಿಗಿರಬೇಕಾದ ಗಾಂಭೀರ್ಯತೆ ಅವರಿಗಿಲ್ಲ ಎಂದು ಶಾಸಕ ಕೆ.ಮಹದೇವ್‌ ಹರಿಹಾಯ್ದರು.

Advertisement

ಪಟ್ಟಣದ ಶಾಸಕರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ ಭಾನುವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ತಮ್ಮ ಬಗ್ಗೆ ಹುರುಳಿಲ್ಲದ ಆರೋಪ ಮಾಡಿದ ಮಾಜಿ ಸಚಿವ ಕೆ.ವೆಂಕಟೇಶ್‌ ತಾನೊಬ್ಬ ಅನಾನುಭವಿ ರಾಜಕಾರ‌ಣಿ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.

ತಾಲೂಕಿನ ಭ್ರಷ್ಟಾಚಾರದ ಪಿತಾಮಹ ಕೆ.ವೆಂಕಟೇಶ್‌ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 2017ರಲ್ಲಿ ಸಾರ್ವಜನಿಕ ಸಭೆಯಲ್ಲಿ ವೆಂಕಟೇಶ್‌ ಅವರು “ಚುನಾವಣೆ ಎದುರಿಸಲು ಭ್ರಷ್ಟಾಚಾರ ಮಾಡಬೇಕು, ಇಲ್ಲದಿದ್ದರೆ ಚುನಾವಣೆ ಎದುರಿಸಲು ಹಣವನ್ನು ಎಲ್ಲಿಂದ ತರಲಿ’ ಎಂದು ಹೇಳಿದ್ದನ್ನು ವಿಡಿಯೋ ಸಮೇತ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 2017ರಲ್ಲಿ ಮುತ್ತಿನಮುಳುಸೋಗೆ ಗ್ರಾಮಕ್ಕೆ ಸಿದ್ದರಾಮಯ್ಯರನ್ನು ಕೆರತಂದು ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದು ಕೇವಲ ಕಮಿಷನ್‌ಗಾಗಿ ಅಷ್ಟೇ. ಅನುಮೋದ‌ನೆಯಾದ ಯೋಜನೆ ಪೂರ್ಣಗೊಳ್ಳಲು 18 ತಿಂಗಳು ಅವಧಿ ಇರುತ್ತದೆ. ಆದರೆ, ಹಣಕಾಸು ಇಲಾಖೆ ಹಣ ಬಿಡುಗಡೆ ಮಾಡದೆ ಕಾಮಗಾರಿ ಮುಂದುವರಿಸಲು ವಿಳಂಬವಾಗಿದೆ.

ಇದನ್ನು ಅರಿಯದ ವೆಂಕಟೇಶ್‌ ವಿನಾಃ ಕಾರಣ ತಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅಲ್ಲದೇ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದಿನ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರಿಂದ 80 ಕೋಟಿ ರೂ. ಬಿಡುಗಡೆ ಮಾಡಿಸದ್ದೆ ಎಂದು ಸುಳ್ಳು ಹೇಳುವ ಮೂಲಕ ತಾಲೂಕಿನ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಹರಿಹಾಯ್ದರು.

Advertisement

ನೈತಿಕತೆ ಇಲ್ಲ: ಪಿರಿಯಾಪಟ್ಟಣ ತಾಲೂಕಿನಿಂದ ಸ್ಪರ್ಧಿಸಿ ಐದು ಬಾರಿ ಶಾಸಕರಾಗಿ ವಿಧಾನಸೌಧ ಪ್ರವೇಶಿಸಿದರೂ ಸದನದಲ್ಲಿ ತಾಲೂಕಿನ ಅಭಿವೃದ್ಧಿಗಾಗಿ ಒಮ್ಮೆಯೂ ತುಟಿಕ್‌ಪಟಿಕ್‌ ಎನ್ನಲಿಲ್ಲ. ಪರಿಸ್ಥಿತಿ ಹೀಗಿರುವಾಗ ನನ್ನನ್ನು ಅನಾನುಭವಿ ಶಾಸಕ ಎಂದು ಹೇಳುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ ಕೆ.ಮಹದೇವ್‌, ನಾನು ಪ್ರಥಮ ಬಾರಿಗೆ ಶಾಸಕನಾದರೂ ತಾಲೂಕಿನ ಅಭಿವೃದ್ಧಿಗಾಗಿ ಹಿರಿಯರ ಸಲಹೆ ಮತ್ತು ಮಾರ್ಗದರ್ಶನ ಪಡೆಯುತ್ತಿದ್ದೇನೆ. ನಿಮ್ಮ ಹಾಗೆ ಸದನದಲ್ಲಿ ಕುಳಿತು ನಿದ್ರಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಪಟ್ಟಣದ 23 ವಾರ್ಡ್‌ಗಳಲ್ಲಿ ನಡೆಯುತ್ತಿರುವ 57 ಕೋಟಿ ರೂ. ವೆಚ್ಚದ ಒಳ ಚರಂಡಿ ಯೋಜನೆ ವೆಂಕಟೇಶ್‌ ಅವಧಿಯಲ್ಲಿ ಮಂಜೂರಾದರೂ ಸರ್ಕಾರದ ಆದೇಶ ಮತ್ತು ಅನುಮೋದನೆ ದೊರೆತು ಕೆಲಸ ಆರಂಭವಾಗಿರುವುದು ನನ್ನ ಅವಧಿಯಲ್ಲಿ. ಇವರಿಗೆ ರಾಜಕಾರಣದಲ್ಲಿ ನೈತಿಕತೆ ಇದ್ದರೆ ಜನರಿಗೆ ಸತ್ಯ ಹೇಳಲಿ, ಅವರೇನು ಅವಿದ್ಯಾವಂತರಲ್ಲ, ಪ್ರಬುದ್ಧತೆಯುಳ್ಳ ಬುದ್ಧಿವಂತ ರಾಜಕಾರಣಿ ಎಂದು ಭಾವಿಸಿದ್ದೇನೆ.

ಆದರೆ, ಅವರು ಕಾರ್ಯಕರ್ತರಿಂದ ಚಪ್ಪಾಳೆ ಗೀಟಿಸಲು ವಿನಾಃ ಕಾರಣ ಆರೋಪ ಮಾಡುತ್ತಿದ್ದಾರೆ. ಅವರು ನಗರ ಒಳ ಚರಂಡಿ ಯೋಜನೆಯ ಸರ್ಕಾರಿ ಆದೇಶವನ್ನೊಮ್ಮೆ ತೆಗೆದು ನೋಡಲಿ ಅನುಮೋದನೆಯಾದ ನಂತರ ನಾನು ಗುದ್ದಲಿಪೂಜೆ ಮಾಡಿದ್ದೇನೆಯೇ ಹೊರತು ಜನತೆಗೆ ಮೋಸಗೊಳಿಸುವ ಕೆಲಸ ಮಾಡಿಲ್ಲ, ಈಗಾಗಲೇ ಪಟ್ಟಣದ ನಗರ ಒಳ ಚರಂಡಿ ಯೋಜನೆ ಶೇ. 85ರಷ್ಟು ಪೂರ್ಣಗೊಂಡಿದೆ. ಮಳೆಯ ಸಮಸ್ಯೆ ಇಲ್ಲದಿದ್ದರೆ ಈಗಾಗಲೇ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು ಎಂದರು.

ತಾಪಂ ಸದಸ್ಯ ಎಸ್‌. ರಾಮು ಮಾತನಾಡಿ, ವಿನಾಃ ಕಾರಣ ಕಾರ್ಯಕರ್ತರ ಮನಸ್ಸನ್ನು ಕದಡುವ ಕೆಲಸ ಮಾಡಬೇಡಿ. ಇಂತಹ ಬಾಲಿಶ ಹೇಳಿಕೆಗಳನ್ನು ನೀಡಬೇಡಿ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯ ಪಿ.ರಾಜೇಂದ್ರ, ತಾಪಂ ಮಾಜಿ ಅಧ್ಯಕ್ಷ ಮಾಕೋಡು ಜವರಪ್ಪ, ಎಂಡಿಸಿಸಿ ನಿರ್ದೇಶಕ ಸಿ.ಎನ್‌.ರವಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಕೆ.ಕುಮಾರ್‌, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಈರಯ್ಯ ಇತರರಿದ್ದರು.

ಚರ್ಚೆಗೆ ಬನ್ನಿ, ನನ್ನ ಸಾಧನೆ ತಿಳಿಸುವೆ: ನನ್ನ ಹಾಗೂ ನನ್ನ ಮಗನ ಬಗ್ಗೆ ಕೆ.ವೆಂಕಟೇಶ್‌ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ವಸೂಲಿ ದಂಧೆಯಲ್ಲಿ ತೊಡಗಿದ್ದಾರೆ ಎಂದು ಅಪಪ್ರಚಾರ ಮಾಡಿದ್ದಾರೆ. ನನ್ನ ಮಗ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡು ತಾಲೂಕಿನ ಜನತೆಗೆ ಕೈಲಾದ ಸೇವೆ ಮಾಡುತ್ತಿದ್ದಾರೆ. ನಿಮ್ಮ ಮಗನ ಹಾಗೆ ನಿಸ್ಸಾಹಯಕನಲ್ಲ.

ಇಂಥ ಅನಗತ್ಯ ಹೇಳಿಕೆಗಳನ್ನು ನೀಡಿ ಕಾರ್ಯಕರ್ತಗಳ ನಡುವೆ ವೈಮನಸ್ಸು ಉಂಟು ಮಾಡಿ ತಾಲೂಕಿನಲ್ಲಿ ಘರ್ಷಣೆ ಮತ್ತು ಅಶಾಂತಿಗೆ ಅವಕಾಶ ನೀಡಬೇಡಿ. ತಾಲೂಕಿನಲ್ಲಿ ಆರೋಗ್ಯಕರ ಚರ್ಚೆಗೆ ಅವಕಾಶ ನೀಡಿ. ನಿಮಗೆ ನನ್ನ ಸಾಧನೆಗಳ ಮಾಹಿತಿ ಬೇಕಾದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಶಾಸಕ ಕೆ.ಮಹದೇವ್‌ ಸವಾಲು ಹಾಕಿದರು.

ಅಭಿವೃದ್ಧಿ ಸಾಬೀತಾದರೆ ರಾಜೀನಾಮೆ ನೀಡುವೆ: ಕೆ.ವೆಂಕಟೇಶ್‌ ಸೋತು ಒಂದೂವರೆ ವರ್ಷ ಕೂಡ ಕಳೆದಿಲ್ಲ, ಈಗಾಗಲೇ ಹತಾಶೆ ಮನೋಭಾವದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. 30 ವರ್ಷ ರಾಜಕಾರಣ ಮಾಡಿ, 5 ಬಾರಿ ಶಾಸಕರಾಗಿರುವ ಇವರಿಗೆ ಕೇವಲ ಒಂದು ಬಾರಿ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ತಾಲೂಕಿನ ಅಭಿವೃದ್ಧಿಗಾಗಿ 1376 ಕೋಟಿ ರೂ. ತಂದಿದ್ದೇನೆ ಎಂದು ಬೀಗುತ್ತಿರುವ ಇವರು ತಾಲೂಕಿನ ಯಾವುದಾದರೂ ಗ್ರಾಮವನ್ನು ಸಂಪೂರ್ಣ ಅಭಿವೃದ್ದಿ ಪಡಿಸಿದ್ದೆಯಾದರೆ ನಾನು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಕೆ.ಮಹದೇವ್‌ ಸವಾಲು ಹಾಕಿದರು

Advertisement

Udayavani is now on Telegram. Click here to join our channel and stay updated with the latest news.

Next