Advertisement

ಯೋಜನೆ ಎಲ್ಲ ವರ್ಗದವರಿಗೆ ತಲುಪಲಿ; ಸಚಿವ  ಭಗವಂತ

06:26 PM Jun 29, 2022 | Team Udayavani |

ಬೀದರ: ಕೇಂದ್ರ ಸರ್ಕಾರದ ಯೋಜನೆಗಳಾದ ಪಿಎಂ ಸ್ವನಿಧಿ ಯೋಜನೆ, ಮಾತೃವಂದನ, ಪ್ರಧಾನಮಂತ್ರಿ ಮತ್ಸ್ಯ ಸಂಪದ, ಆಯುಷ್ಮಾನ್‌ ಭಾರತ ಆರೋಗ್ಯ ವಿಮೆ ಸೇರಿದಂತೆ ಸರ್ಕಾರದ ಹಲವಾರು ಯೋಜನೆಗಳು ಎಲ್ಲ ವರ್ಗದ ಜನರಿಗೆ ಸಿಗುವಂತಾಗಬೇಕೆಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ರಸಗೊಬ್ಬರ ರಾಜ್ಯ ಖಾತೆ ಸಚಿವ  ಭಗವಂತ ಖೂಬಾ ಹೇಳಿದರು.

Advertisement

ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ, 8ನೇ ವರ್ಷದ ಸೇವೆ, ಉತ್ತಮ ಆಡಳಿತ, ಬಡವರ ಕಲ್ಯಾಣ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಯೋಜನೆಗಳಾದ ಮಾತೃವಂದನ ಯೋಜನೆ ಗರ್ಭಿಣಿ ಮಹಿಳೆಯರಿಗೆ ಮಗುವಿನ ಬೆಳವಣಿಗೆಗೆ ಪೌಷ್ಟಿಕ ಆಹಾರ ನೀಡುವುದರಿಂದ ಹಿಡಿದು ಎಲ್ಲ ರೀತಿಯ ಯೋಜನೆಗಳನ್ನು ನಮ್ಮ ಸರ್ಕಾರ ಜನರಿಗೆ ನೀಡುತ್ತಿದೆ. ಕೇವಲ ಎಂಟು ವರ್ಷಗಳಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.

ರೈತರಿಗೆ ಪ್ರತಿವರ್ಷ ಆರು ಸಾವಿರ ರೂಪಾಯಿ, ಬೀದಿ ವ್ಯಾಪಾರಿಗಳಿಗೆ ಹತ್ತು ಸಾವಿರ ರೂ. ಮತ್ತು ಯುವಕ-ಯುವತಿಯರಿಗೆ ಕಲಿಕೆಗಾಗಿ ಸಹಾಯಧನ ನೀಡಲಾಗುತ್ತದೆ. ದೇಶವನ್ನು ಆರ್ಥಿಕವಾಗಿ ಸಶಕ್ತಿಕರಣಗೊಳಿಸಲಾಗುತ್ತಿದ್ದು, ಇಲ್ಲಿಯವರೆಗೂ ದೇಶದಲ್ಲಿ 81 ಕೋಟಿ ಜನರು ಸರ್ಕಾರದ ಯೋಜನೆಗಳ ಲಾಭ ಪಡೆದಿದ್ದಾರೆ.

ಕೊರೊನಾ ಸಂದರ್ಭದಲ್ಲಿಯೂ ನಾವು ಸಮರ್ಥವಾಗಿ ಎದುರಿಸಿರುವುದರಿಂದ ನಾಲ್ಕನೇ ಅಲೆ ಈಗ ಕಾಣಿಸುತ್ತಿಲ್ಲ, ದೇಶದ ಸೇವೆಯಲ್ಲಿ ನಾವೆಲ್ಲರೂ ಏಕ ಭಾರತ ಶ್ರೇಷ್ಠ ಭಾರತವಾಗಿ ಸಹೋದರತೆಯಿಂದ ಇರಬೇಕೆಂದು ಹೇಳಿದರು.

Advertisement

ಕೇಂದ್ರ ಕ್ಷೇತ್ರ ಜನಸಂಪರ್ಕ ಇಲಾಖೆಯ ಕಲಬುರಗಿ ಉಪ ನಿರ್ದೇಶಕ ಡಾ| ಜಿ.ಡಿ. ಹಳ್ಳಿಕೇರಿ ಮಾತನಾಡಿ, ಸರ್ಕಾರದ ಯೋಜನೆಗಳು ಪ್ರತಿ ಹಳ್ಳಿಗಳಿಗೂ ತಲುಪಬೇಕು ಮತ್ತು ತಾವು ತಿಳಿದುಕೊಳ್ಳುವುದರ ಜೊತೆಗೆ ನಮ್ಮ ಅಕ್ಕ-ಪಕ್ಕದ ಜನರಿಗೂ ಈ ಕುರಿತು ಮಾಹಿತಿ ನೀಡಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶಿವಶಂಕರ ಟೋಕರೆ, ಮಲ್ಲಿಕಾರ್ಜುನ, ಮಹಾಂತೇಶ ಸೇರಿದಂತೆ ಸರ್ಕಾರಿ ಐಟಿಐ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next