Advertisement

ಪಂಚಾಯತ್‌ ರಾಜ್‌ ವ್ಯವಸ್ಥೆ ನಿರರ್ಥಕವಾಗದಿರಲಿ

11:03 AM Feb 03, 2022 | Team Udayavani |

ಪಂಚಾಯತ್‌ ಕಾನೂನುಗಳು ಕೇವಲ ದಾಖಲೆಪತ್ರಗಳಿಗೆ ಮಾತ್ರ ಸೀಮಿತವೇ?, ಈ ಕಾನೂನುಗಳನ್ನು ಕಾಗದದ ಹುಲಿಗಳನ್ನಾಗಿ ಮಾಡುವ ಪ್ರಯತ್ನಗಳಿಗೆ ಅವಕಾಶ ನೀಡಬಾರದು.

Advertisement

ನಮ್ಮ ದೇಶದಲ್ಲಿ ಸದೃಢವಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳಿದ್ದರೂ ಸ್ಥಳೀಯ ಸ್ವಯಂ ಆಡಳಿತದ ವಿಚಾರ ನಮಗೆ ಹೊಸತೇನೂ ಅಲ್ಲ. ವೇದಗಳ ಕಾಲದಲ್ಲಿಯೇ ಜನಪದಗಳೆಂಬ ಇಂತಹ ಆಡಳಿತದ ವಿಧಾನ ಚಾಲ್ತಿಯಲ್ಲಿ ದ್ದುದಾಗಿ ತಿಳಿದು ಬರುತ್ತದೆ. ದಕ್ಷಿಣ ಭಾರತದಲ್ಲಿಯೂ ಗ್ರಾಮ ಸಮಿತಿಗಳು ಅಸ್ತಿತ್ವದಲ್ಲಿದ್ದು ಆಡಳಿತಾತ್ಮಕ ನಿರ್ಧಾರ ಗಳನ್ನು ತೆಗೆದುಕೊಳ್ಳುತ್ತಿದ್ದವು. ಇವು ರಾಜ ಪ್ರತಿನಿಧಿ ಗಳೊಂದಿಗೆ ಸೇರಿ ವೈಯಕ್ತಿಕ ಹಾಗೂ ಸಾಮಾಜಿಕ ಆಸ್ತಿಗಳ ಪರಿಶೀಲನೆ ನಡೆಸುತ್ತಿದ್ದವು. ಹೀಗೆ ಅನಾದಿ ಕಾಲದಿಂದಲೂ ಇತಿಹಾಸದ ವಿವಿಧ ಕಾಲಘಟ್ಟ ಗಳಲ್ಲಿ ಸಾಂಕಘಟಕಗಳಾಗಿ ಪಂಚಾಯತ್‌ ವ್ಯವಸ್ಥೆ ಇದ್ದು ಅದೀಗ ವಿಕಸಿತಗೊಂಡಿದೆ.

ಬ್ರಿಟಿಷರು ಕ್ರಿ.ಶ. 1688ರಲ್ಲಿ ಸ್ಥಾಪಿಸಿದ ಮದ್ರಾಸ್‌ ಮುನ್ಸಿಪಲ್‌ ಕಾರ್ಪೊರೇಶನ್ನಿನ ಮೂಲಕ ನಮ್ಮ ದೇಶದಲ್ಲಿ ನಾಗರಿಕ ಆಡಳಿತ ಸಂಸ್ಥೆಗಳ ಹೊಸ ಪರಿಕಲ್ಪನೆ ರೂಪುಗೊಂಡಿತು. ಕ್ರಿ.ಶ. 1885ರಲ್ಲಿ ಗ್ರಾಮೀಣ ವಿಭಾಗಕ್ಕೂ ಈ ಬಗೆಯ ಆಡಳಿತ ವಿಸ್ತಾರಗೊಂಡು ಸಣ್ಣಪುಟ್ಟ ಬದಲಾವಣೆಗಳೊಂದಿಗೆ 1950ರ ಸುಮಾರಿನ ವರೆಗೂ ಮುಂದುವರಿಯಿತು. ಕೇಂದ್ರ ಸರಕಾರವು 1977ರಲ್ಲಿ ರಚಿಸಿದ ಅಶೋಕ ಮೆಹ್ತಾ ನೇತೃತ್ವದ ಸಮಿತಿ ಈ ದಿಸೆಯಲ್ಲೊಂದು ಮೈಲಿಗಲ್ಲಾಗಿದೆ. 1989ರ ಜುಲೈಯಲ್ಲಿ ಆಗಿನ ಪ್ರಧಾನಿ ರಾಜೀವ್‌ ಗಾಂಧಿ ನೇತೃತ್ವದ ಸರಕಾರ ಮಂಡಿಸಿದ ಸಂವಿ ಧಾನದ 64 ಮತ್ತು 65ನೇ ತಿದ್ದುಪಡಿಯು ಮೇಲ್ಕಾಣಿಸಿದ ಸಮಿತಿಯ ಶಿಫಾರಸಿನಂತೆ ಮಾಡಿದ್ದಾಗಿತ್ತು. ದುರದೃಷ್ಟವಶಾತ್‌ ಲೋಕಸಭೆಯ ಅಂಗೀಕಾರ ಪಡೆಯುವುದರಲ್ಲಿ ಅದು ವಿಫ‌ಲವಾಯಿತು. ಅಂತಿಮವಾಗಿ 1992ರಲ್ಲಿ ಮೊದಲಿದ್ದ ಕೆಲವು ಪ್ರಮುಖ ಅಂಶಗಳನ್ನು ಉಳಿಸಿ ಕೊಂಡು ಸರಕಾರವು ಕರಡೊಂದನ್ನು ಸಿದ್ಧಪಡಿಸಿ, ಸಂವಿಧಾನದ 73, 74ನೇ ತಿದ್ದುಪಡಿ ಮಸೂದೆ ಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿ ಅದು 1993ರಲ್ಲಿ ಅಂಗೀಕಾರವಾಯಿತು. ಇದೇ 1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14 ಆಗಿ ರಾಜ್ಯ ದಲ್ಲಿ ಮಾದರಿ ವ್ಯವಸ್ಥೆಯಾಗಿ ಜಾರಿಗೆ ಬಂದಿದೆ.

ಇದೀಗ ನಮ್ಮಲ್ಲಿ ಮೂರು ಹಂತಗಳ ಪಂಚಾಯತ್‌ ವ್ಯವಸ್ಥೆ ಜಾರಿಯಲ್ಲಿದ್ದು, ಗ್ರಾ. ಪಂ., ತಾ.ಪಂ. ಹಾಗೂ ಜಿ.ಪಂ.ಗಳು ಕಾರ್ಯನಿರ್ವಹಿಸುತ್ತಾ ಬಂದಿವೆ. ಗ್ರಾಮ ಮಟ್ಟದಲ್ಲಿ ಪಂಚಾಯತ್‌ ಅಭಿ ವೃದ್ಧಿ ಅಧಿಕಾರಿ, ತಾಲೂಕು ಮಟ್ಟದಲ್ಲಿ ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಮಟ್ಟದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಯವರು ಕಚೇರಿ ಸಿಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ಮೂರು ಹಂತಗಳಲ್ಲಿ ಚುನಾಯಿತ ಜನಪ್ರತಿನಿಧಿಗಳಿದ್ದು ಸಾಮಾನ್ಯ ಜನರ, ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಯ ಜವಾಬ್ದಾರಿ ಹೊತ್ತಿರುತ್ತಾರೆ.

ತಳಮಟ್ಟದ ಪಂಚಾಯತ್‌ ಆಡಳಿತದಲ್ಲಿ ಜನ ಸಾಮಾನ್ಯರ ಹಿತದೃಷ್ಟಿ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಹೊಸಹೊಸ ಯೋಜನೆಗಳು, ಆಡಳಿತ ವ್ಯವಸ್ಥೆಯ ಸುಧಾರಣೆಗಾಗಿ ಪ್ರಯೋಗ ಗಳನ್ನು ನಡೆಸುತ್ತಲೇ ಬಂದಿದ್ದು ಜನಸಾಮಾನ್ಯರಲ್ಲಿ ಉತ್ಸಾಹ ಮೂಡಿಸಿವೆ. ಒಂದೆಡೆ ಕಂಪ್ಯೂಟರ್‌, ಮೊಬೈಲ್‌ಗ‌ಳು ಆ ಎಲ್ಲ ಅನುಕೂಲತೆಗಳನ್ನು ಜನರ ಬೆರಳ ತುದಿಯಲ್ಲಿ ದೊರಕಿಸಿಕೊಟ್ಟರೆ ಮಾಹಿತಿ ಹಕ್ಕು, ಸಕಾಲದಂತಹ ಕಾನೂನುಗಳು ಇವುಗಳನ್ನು ಜಾರಿಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ ಸರಕಾರ ಎಷ್ಟೇ ಒಳ್ಳೆಯ ಕಾರ್ಯಕ್ರಮ ಗಳನ್ನು ಘೋಷಿಸಿದರೂ ಅದರ ಸಮರ್ಪಕ ಅನುಷ್ಠಾನದ ಹೊಣೆ ಆಡಳಿತ ಯಂತ್ರದ್ದು. ಸರಕಾರದ ಸದಾಶಯಗಳು, ಜನೋಪಯೋಗಿ ನೂತನ ಪ್ರಯೋಗಗಳು ಸಾರ್ಥಕವಾಗಬೇಕಾದರೆ ಅಧಿಕಾರಿ ವರ್ಗದವರು ಅದನ್ನು ಆಸಕ್ತಿಯಿಂದ ಶ್ರದ್ಧೆಯಿಟ್ಟು ಕಾರ್ಯರೂಪಕ್ಕೆ ತರಬೇಕಾಗಿದೆ. ಆಗ ಮಾತ್ರ ಜನಸಾಮಾನ್ಯರ ದೂರುದುಮ್ಮಾನ, ಸಂಕಷ್ಟಗಳಿಗೆ ಪರಿಣಾಮಕಾರಿ ಮತ್ತು ಆಶಾದಾಯಕ ಸ್ಪಂದನೆ ಸಿಗಲು ಸಾಧ್ಯವಿದೆ. ಆದರೆ ಈ ವರ್ಷದ ಆರಂಭದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 1.70 ಲಕ್ಷದಷ್ಟು ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿದೆ ಎಂಬ ಅಂಶ ವಾಸ್ತವ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ!

Advertisement

ಪ್ರಜಾಪ್ರಭುತ್ವದ ಮುಖ್ಯ ಲಕ್ಷಣವೆಂದರೆ ಜನ ಸಾಮಾನ್ಯರಿಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತ ವಾಗಿ ವ್ಯಕ್ತಪಡಿಸಲು, ಅಗತ್ಯ ಬಂದರೆ ಆಡಳಿತದ ನಿಲುವಿನ ಕುರಿತಾಗಿ ಸಕಾರಣ ಅಸಮಾಧಾನ ವ್ಯಕ್ತಪಡಿಸಲು ಅವಕಾಶವಿರುವುದು ಮತ್ತು ತನಗಾದ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಸಾಧ್ಯ ವಾಗುವುದು. ಹಿಂದೆ ಎಸೆಸೆಲ್ಸಿ ಪರೀಕ್ಷೆಯಷ್ಟೇ ಪಾಸಾಗಿದ್ದ ಕಾರ್ಯದರ್ಶಿಯವರ ಉಸ್ತುವಾರಿ ಯಲ್ಲಿ ಗ್ರಾಮ ಪಂಚಾಯತ್‌ಗಳು ನಡೆಯುತ್ತಿದ್ದು ಆಡಳಿತ ತೃಪ್ತಿಕರವಾಗಿರಲಿಲ್ಲ ಎಂಬ ಅಭಿಪ್ರಾಯ ವಿತ್ತು. ಆದರೆ ಈಗ ಹಾಗಿಲ್ಲ. ಉನ್ನತೋನ್ನತ ಶಿಕ್ಷಣ ಪಡೆದವರೂ ಇಂದು ಪಿಡಿಒ ಹುದ್ದೆ ಗೆ ಬಂದಿದ್ದಾರೆ. ಆದರೂ ಕೆಲವು ಪಂಚಾಯತ್‌ಗಳಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ. ಜನರ ಅಹವಾಲನ್ನು ತಾಳ್ಮೆಯಿಂದ ಕೇಳುವ, ಅರ್ಜಿಗಳನ್ನು ಓದಿ ಪರಾಮರ್ಶಿಸುವ ಮನಃಸ್ಥಿತಿ, ವ್ಯವಧಾನ ಕೆಲವರಿಗಿಲ್ಲ. ಇದು ತಮ್ಮ ಕರ್ತವ್ಯದ ಅವಿಭಾಜ್ಯ ಅಂಗ ಎಂಬ ಕನಿಷ್ಠ ಅರಿ ವನ್ನು ಹೊಂದಿಲ್ಲ. ವಸ್ತುನಿಷ್ಠ ಬೇಡಿಕೆಗಳನ್ನು ವ್ಯಕ್ತಿನಿಷ್ಠ ಸವಾಲಾಗಿ ಗ್ರಹಿಸುವುದು, ಸಾಮಾಜಿಕ ವಿನಯವಂತಿಕೆಯನ್ನು ದೌರ್ಬಲ್ಯವಾಗಿ ಪರಿಗಣಿಸುವುದು, ಹುದ್ದೆಯ ಅಧಿಕಾರ ಬಲದಿಂದ ದಮನಿಸಲು ಪ್ರಯತ್ನಿಸುವುದು ಮೊದಲಾದವು ಗಳನ್ನು ಕೆಲವು ಕಡೆ ಕಾಣುತ್ತೇವೆ. ಕೆಲವರಂತೂ ತಮ್ಮಲ್ಲಿಗೆ ಬಂದವರನ್ನು ನಿಕೃಷ್ಟ ಭಾವದಿಂದ ಕಾಣುತ್ತಾರೆ. ವಿನಮ್ರತೆ, ಸಜ್ಜನಿಕೆ, ಪ್ರಾಮಾಣಿಕತೆಗಳು ಉಪಯೋಗಕ್ಕೆ ಬಾರದಿದ್ದಾಗ, ಅನಿವಾರ್ಯವಾಗಿ ಜನಸಾಮಾನ್ಯನು ಕಚೇರಿಯಿಂದ ಲಿಖೀತ ದಾಖಲೆ ಗಳನ್ನು ಕೇಳಿದರೆ ಅದನ್ನೇ ಒಂದು ಅಪರಾಧ ವೆಂಬಂತೆ ಪರಿಗಣಿಸಲಾಗುತ್ತದೆ. ನಿಧಾನದ್ರೋಹವೇ ಮೊದಲಾದ ನಕಾರಾತ್ಮಕ ಪ್ರಯೋಗ ಗಳನ್ನು ಮಾಡಲಾಗುತ್ತದೆ.

ಇಂತಹ ಸಂದರ್ಭಗಳಲ್ಲಿ ತಾನು ಪ್ರತಿನಿಧಿಸುವ ಜನರ ಅಹವಾಲುಗಳಿಗೆ ಧ್ವನಿಯಾಗಬೇಕಾದ ಜನಪ್ರತಿನಿಧಿಗಳಲ್ಲಿ ಕೆಲವರು ಅಧಿಕಾರಿಗಳೊಂದಿಗಿನ ಸ್ನೇಹ ಭಾವದಿಂದಲೋ ಸಣ್ಣಪುಟ್ಟ ಟೆಂಡರ್‌ ಸಿಗುತ್ತದೆಂಬ ಸ್ವಲಾಭ ಚಿಂತನೆಯಿಂದಲೋ ತನ್ನ ಕರ್ತವ್ಯದ ಅರಿವಿನ ಅಜ್ಞಾನದಿಂದಲೋ ಅಥವಾ ಇನ್ಯಾವುದೋ ಅದೃಶ್ಯ ಕಾರಣಗಳಿಂದ ತಟಸ್ಥರಾಗಿ ಬಿಡುತ್ತಾರೆ. ಇದು ಸಾಮಾನ್ಯ ನಾಗರಿಕನ ಹೋರಾಟದ ಹಾದಿಯಲ್ಲಿ ಮುಳ್ಳಾಗಿ ಪರಿಣಮಿಸುವುದು ಮತ್ತು ಸ್ವಲ್ಪ ಮಟ್ಟಿನ ಹಿನ್ನಡೆಗೂ ಕಾರಣವಾಗುವುದು. ಇದು ಜನಪ್ರತಿನಿಧಿಗಳು ತಮಗೆ ಅರಿವಿಲ್ಲದಂತೆಯೇ ಭ್ರಷ್ಟ ಅಧಿಕಾರಿಗೆ ಬೆಂಬಲ ನೀಡಿದಂತಾಗುವುದು.

ಸರಕಾರಿ ಕಚೇರಿಗಳಲ್ಲಿ ಇನ್ನೊಂದು ಬಗೆಯ ಅಲಿಖಿತ ನಿಯಮ ಇದ್ದಂತಿದೆ. ಅದೆಂದರೆ ಕೆಲವು ಮೇಲಧಿಕಾರಿಗಳು ತಮ್ಮ ಕೈಕೆಳಗಿನ ಅಧಿಕಾರಿಗಳು, ನೌಕರರು ಮಾಡಿದ ತಪ್ಪು, ಕರ್ತವ್ಯಲೋಪದ ಬಗ್ಗೆ ಜನರಿಂದ ದೂರು ಬಂದಾಗ, ಅದನ್ನು ಅಲಕ್ಷಿಸಿ, ವಿಚಾರ-ವಿಮರ್ಶೆ ಮಾಡದೇ ತಮ್ಮವರ ಪರ ವಹಿಸುವುದು. ಇದರಿಂದ ಜನತೆಗೆ ಸಿಗ ಬೇಕಾದ ಸಹಜ ನ್ಯಾಯವನ್ನು ನಿರಾಕರಿಸಿದಂತೆ ಮಾತ್ರವಲ್ಲದೇ ಕೆಳಹಂತದ ನೌಕರ, ಅಧಿಕಾರಿಗಳಿಗೆ ಪ್ರಜಾಕಂಟಕರಾಗಿ, ಸ್ವೇಚ್ಛಾಚಾರಿಗಳಾಗಿ ವರ್ತಿಸಲು ಪರವಾನಿಗೆ ನೀಡಿದಂತಾಗುವುದು. ಹೀಗೆ ಎಲ್ಲಿ ಕಾನೂನು, ಕಾನೂನಿನ ಆಡಳಿತ ನಡೆಯುವು ದಿಲ್ಲವೋ ಅಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಅರಾಜಕತೆ ತಾಂಡವವಾಡುವುದು. ಅದು ಸರಕಾರ ದಿಂದ ಅಧಿಕಾರ, ಸಂಬಳ ಪಡೆದು ನಡೆಸುವ ಜಂಗ್ಲೀ ನ್ಯಾಯವಾಗುವುದು.

ಪಂಚಾಯತ್‌ ಕಾನೂನುಗಳು ಕೇವಲ ದಾಖಲೆಪತ್ರಗಳಿಗೆ ಮಾತ್ರ ಸೀಮಿತವೇ?, ಈ ಕಾನೂನುಗಳನ್ನು ಕಾಗದದ ಹುಲಿಗಳನ್ನಾಗಿ ಮಾಡುವ ಪ್ರಯತ್ನಗಳಿಗೆ ಅವಕಾಶ ನೀಡಬಾರದು. ಗ್ರಾಮ ಸ್ವರಾಜ್ಯದ ತಿರುಳನ್ನು ಅರ್ಥೈಸಿಕೊಂಡು ಪಂಚಾಯತ್‌ನ ಆಡಳಿತ ವರ್ಗ ಮತ್ತು ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸುವುದು ಅತ್ಯಗತ್ಯ.

– ಡಾ| ಕೆ.ಎಸ್‌.ಎನ್‌.ಉಡುಪ, ಸುಬ್ರಹ್ಮಣ್ಯ

Advertisement

Udayavani is now on Telegram. Click here to join our channel and stay updated with the latest news.

Next