Advertisement

ಕನ್ನಡದ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾನೂನು ಜಾರಿಯಾಗಲಿ

12:45 AM Oct 30, 2022 | Team Udayavani |

ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ವಿಷಯದಲ್ಲಿ ಕನ್ನಡ ಭಾಷೆ ಸಮಗ್ರ ಅಭಿವೃದ್ದಿ ಮಸೂದೆ 2022 ಸಿದ್ಧ ವಾಗಿದ್ದು, ಈ ಬಗ್ಗೆ ಸಾರ್ವಜನಿಕ ಚರ್ಚೆ ಆರಂಭವಾಗಿದೆ.

Advertisement

ಕನ್ನಡ ಅಭಿವೃದ್ದಿ ಪ್ರಾಧಿ ಕಾರ 2021ರಲ್ಲಿ ರೂಪಿಸಿದ ಮಸೂದೆಯನ್ನು ಕರ್ನಾಟಕ ಕಾನೂನು ಆಯೋಗಕ್ಕೆ ಕಳಿಸಿ ಸೂಕ್ತ ಸಲಹೆ ಪಡೆದು ಈಗ ಕರಡು ರೀತಿಯಲ್ಲಿ ಅಣಿಯಾಗಿದೆ. ಈಗಾಗಲೇ ಸದನಲ್ಲಿ ಮಂಡನೆಯಾಗಿರುವ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ-2022’ರಲ್ಲಿದ್ದ ದಂಡ ವಿಚಾರ, ಜಾರಿ ನಿರ್ದೇಶನ ವ್ಯವಸ್ಥೆ ಅಂಶಗಳಲ್ಲಿ ಲೋಪವಿದೆ ಎಂಬ ಮಾತುಗಳು ಕೇಳಿ ಬಂದಿವೆ. ಮಸೂದೆ ಸಮಗ್ರ ಎನ್ನುತ್ತಲೇ ಸಂಕುಚಿತವಾಗಿದ್ದು ಆ ದೃಷ್ಟಿಯಿಂದ ಮಸೂದೆಯನ್ನು ಒರೆಗೆ ಹಚ್ಚಬೇಕು ಎಂಬ ಮಾತುಗಳು ಕೇಳತೊಡಗಿವೆ. ಸರಕಾರವೂ ಈ ನಿಟ್ಟಿನಲ್ಲಿ ಮುಕ್ತವಾಗಿದೆ. ಹಠಕ್ಕೆ ಬಿದ್ದು ಮಸೂದೆ ಅನುಮೋದಿಸದಿರಲು ನಿರ್ಧರಿಸಿದೆ.

ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರೂ ಕನ್ನಡ ಭಾಷೆ, ನೆಲ, ಜಲದ ಜತೆಗೆ ಕನ್ನಡಿಗ, ಕನ್ನಡತನವನ್ನು ಬಲಗೊಳಿಸಲು “ಕನ್ನಡ ಭಾಷೆ ಸಮಗ್ರ ಅಭಿವೃದ್ದಿ ಮಸೂದೆ 2022′ ಸಂಪೂರ್ಣ ಸಿದ್ಧವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು.

ಈ ಮಸೂದೆಯ ಕುರಿತು ಸಾರ್ವ ಜನಿಕವಾಗಿ ಚರ್ಚೆ ನಡೆದು ಬಿಟ್ಟು ಹೋಗಿರುವ ಅಂಶಗಳು ಸೇರಿ ಸಮಗ್ರ ವಾಗಬೇಕು. ಹೀಗಾಗಿ ಇದರ ಕುರಿತ ಚರ್ಚೆ ಕನ್ನಡ ಸಾಹಿತ್ಯ ಪರಿಷತ್ತಿನಿಂದಲೇ ಆರಂಭವಾಗಬೇಕು ಎಂದು ಸಲಹೆ ನೀಡಿದ್ದರು. ಇದರ ಭಾಗವಾಗಿಯೇ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಚರ್ಚೆಯೂ ನಡೆದಿತ್ತು.

ಹಾವೇರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ಹಿರಿಯ ಕಾದಂಬರಿ ಕಾರ ಎಸ್‌.ಎಲ್‌. ಭೈರಪ್ಪ ಮತ್ತಿತರರರು ಭಾಗವಹಿಸಿ ಮಸೂದೆಯಲ್ಲಿನ ಲೋಪದೋಷ ಹಾಗೂ ಅಡಕವಾಗಬೇಕಾದ ಅಂಶಗಳ ಬಗ್ಗೆ, ಒಟ್ಟಾರೆ ಮಸೂದೆ ಗಟ್ಟಿಗೊಳ್ಳಬೇಕಾದ ಅಂಶಗಳ ಒರೆಗೆ ಹಚ್ಚಿದರು.

Advertisement

ಕಡ್ಡಾಯವಾಗಲಿ
ಈ ಮಸೂದೆಯಲ್ಲಿ ಕನ್ನಡದ ಜಾರಿಗೆ “ಪ್ರಾಮುಖ್ಯ’ ಎಂಬ ಪದದ ಬದಲಾಗಿ “ಕಡ್ಡಾಯ’ ಎಂದಾಗಬೇಕು ಹಾಗೂ ಜಗದ ಎಲ್ಲ ಕನ್ನಡಿಗರು ಎಂಬ ಅರ್ಥದಲ್ಲಿ ವಿಸ್ತೃತಗೊಳ್ಳಬೇಕು ಎಂಬ ಮಾತು ಕೇಳಿಬಂದಿದೆ.

ಕೆಲವು ಸಾಹಿತಿಗಳು ಮತ್ತು ಕನ್ನಡಪರ ಹೋರಾಟಗಾರರು ನ್ಯಾಯಾಲಯದಲ್ಲಿ ಕನ್ನಡ ಬಳಕೆಯ ಪ್ರಸ್ತಾಪ ಮಸೂದೆಯಲ್ಲಿ ದ್ದರೂ ಅದು ಕೇವಲ ಜಿಲ್ಲಾ ನ್ಯಾಯಾಲಯ ಗಳಿಗೆ ಸೀಮಿತವಾಗಿದೆ. ಅದನ್ನು ಇತರ ನ್ಯಾಯಾಲಯಗಳಿಗೂ ವಿಸ್ತರಿಸಬೇಕಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ಉದ್ಯೋಗ ಖಾತರಿ, ಮೀಸಲಾತಿ ಹೆಚ್ಚಲಿ
ಹಿರಿಯ ಸಾಹಿತಿ ಡಾ| ಬರಗೂರು ರಾಮಚಂದ್ರಪ್ಪ ಹೇಳುವಂತೆ ಈ ಮಸೂದೆ ಕನ್ನಡಿಗರಿಗೆ ಉದ್ಯೋಗ ಖಾತರಿ ಕುರಿತೇ ಹೆಚ್ಚು ಬೆಳಕು ಚೆಲ್ಲಬೇಕು. ಈಗಾಗಲೇ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಉದ್ಯೋಗ ದಲ್ಲಿ ಶೇ.5ರಷ್ಟು ಮೀಸಲು ನೀಡಲಾಗುತ್ತಿದೆ. ಇದರ ಹೆಚ್ಚಳ ಬಗ್ಗೆ ಮಸೂದೆಯಲ್ಲಿ ಪ್ರಸ್ತಾಪವಾಗಬೇಕು ಎನ್ನುತ್ತಾರೆ.

ವೃತ್ತಿ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಜಾರಿಗೆ ತರಲಾಗಿದೆ. ಆದರೆ ಪರೀಕ್ಷೆಗೆ ಇರಲಿಲ್ಲ. ಆ ಹಿನ್ನೆಲೆಯಲ್ಲಿ ವೃತ್ತ ಶಿಕ್ಷಣದಲ್ಲಿನ ಕನ್ನಡ ಕಲಿಕೆಯನ್ನು 2 ಸೆಮಿಸ್ಟರ್‌ಗಳಲ್ಲಿ ಕಡ್ಡಾಯವಾಗಿಸಲು ಮಾರ್ಗೋಪಾಯ ಹುಡುಕಬೇಕು. ಶಿಕ್ಷಣ, ಉದ್ಯೋಗ ಆಡಳಿತ ಕ್ಷೇತ್ರಗಳಲ್ಲಿ ಕನ್ನಡ ಕಡ್ಡಾಯವಾಗಿ ಅನುಷ್ಠಾನಕ್ಕೆ ತರುವುದು ಹೇಗೆ ಎಂಬ ಕುರಿತೂ ಆಲೋಚಿಸಬೇಕು ಎನ್ನುತ್ತಾರೆ.

ಬದಲಾಗಲಿ ಕನ್ನಡಿಗ ಪರಿಕಲ್ಪನೆ
ಮಸೂದೆಯಲ್ಲಿ ಕನ್ನಡಿಗ ಎಂಬ ಪರಿಕಲ್ಪನೆ ಸಮರ್ಪಕವಾಗಿಲ್ಲ. ಅದು ಭೌಗೋಳಿಕ ವ್ಯಾಪ್ತಿ ಯನ್ನು ಮಾತ್ರ ಪರಿಗಣಿಸುತ್ತದೆ. ಇದರಿಂದ ಹೊರನಾಡು, ಗಡಿನಾಡು ಕನ್ನಡಿಗರು ಕನ್ನಡಿಗರಲ್ಲ ಎಂಬ ಅರ್ಥವೂ ಬರುತ್ತದೆ. ಹಾಗಾಗಿ ಮಸೂದೆಯಲ್ಲಿ ಎಲ್ಲ ಕನ್ನಡಿಗರನ್ನು ಪ್ರತಿನಿಧಿಸುವ ಅಂಶಗಳಿರಬೇಕು ಎಂಬುದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಮಹೇಶ ಜೋಷಿ ಅವರ ಅಭಿಪ್ರಾಯ.

ಹಲವು ಕನ್ನಡ ಪರ ಆಜ್ಞೆ ಆದೇಶಗಳಿದಾಗ್ಯೂ ಸಹ ರಾಜ್ಯದಲ್ಲಿ ಅಧಿಕೃತ ಭಾಷೆಯಾದ ಕನ್ನಡವನ್ನು ಅನುಷ್ಠಾನಗೊಳಿಸುವಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿಲ್ಲ. ಶಾಲಾ ಹಂತದಲ್ಲಿ ಕನ್ನಡ ಕಡ್ಡಾಯವಾಗಿ ಕಲಿಸಲು ಸಾಧ್ಯವಾಗಿದ್ದರೂ ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಲು ಈವರೆಗೂ ಸಾಧ್ಯವಾಗಿಲ್ಲ. ಜತೆಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರ ಒಂದು ಶಾಸನಬದ್ಧ ಸಂಸ್ಥೆಯಾಗಿದ್ದರೂ ಅದಕ್ಕೆ ಕನ್ನಡವನ್ನು ಅಧಿಕೃತ ಭಾಷೆಯನ್ನಾಗಿ ಎಲ್ಲ ಹಂತಗಳಲ್ಲಿ ಅನುಷ್ಠಾನವನ್ನು ಖಚಿತಪಡಿಸುವ ಅಧಿಕಾರವಿಲ್ಲ. ಹೀಗಾಗಿ, ಕನ್ನಡ, ಕನ್ನಡಿಗ ಹಾಗೂ ಕರ್ನಾಟಕದ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾನೂನು ಆಗಲಿ. ಮಸೂದೆ ಮತ್ತಷ್ಟು ಗಟ್ಟಿಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ವಲಯದಲ್ಲಿ ಸಂವಾದ ಚರ್ಚೆಗಳು ನಡೆಯಲಿ ಎಂದು ತಿಳಿಸುತ್ತಾರೆ.

ಕನ್ನಡ ಮಸೂದೆಯ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯಲಿ. ಪರಿಣಿತರ ಅಭಿಪ್ರಾಯ ವನ್ನು ಆಧರಿಸಿ ಮಸೂದೆಯಲ್ಲಿ ತಿದ್ದುಪಡಿ ತಂದು ಅನುಮೋದಿಸು ತ್ತೇವೆ.
-ವಿ. ಸುನಿಲ್‌ ಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಸಚಿವ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next