Advertisement

ಎಲ್ಲರಿಗೂ ಜೋಶಿಮಠ ಘಟನೆ ಎಚ್ಚರಿಕೆ ಗಂಟೆಯಾಗಲಿ

12:06 AM Jan 14, 2023 | Team Udayavani |

ಮನುಕುಲವನ್ನು ಕಾಡುತ್ತಿರುವ ತಾಪಮಾನ ಏರಿಕೆ ಸಮಸ್ಯೆಗೆ ಅತ್ಯುತ್ತಮ ಉದಾಹರಣೆ ಜೋಶಿಮಠ ನಗರದ ಕುಸಿಯುವಿಕೆ. ದಿನದಿಂದ ದಿನಕ್ಕೆ ಮನೆಗಳೆಲ್ಲ ಬಿರುಕು ಬಿಡುತ್ತಿದ್ದು, ಜನ ಊರು ಖಾಲಿ ಮಾಡುತ್ತಿದ್ದಾರೆ. ಇಸ್ರೋ ಹೇಳಿರುವ ಪ್ರಕಾರ, ಕಳೆದ 12 ದಿನಗಳಿಂದ ಜೋಶಿಮಠದಲ್ಲಿ  5.4 ಸೆ.ಮೀ. ಭೂಮಿ ಕುಸಿದಿದೆ.

Advertisement

ಜೋಶಿಮಠದ ಘಟನೆಯಿಂದಾಗಿ ಉತ್ತರಾಖಂಡ ಸರಕಾರ ಒಂದು ರೀತಿಯಲ್ಲಿ ಆತಂಕಕ್ಕೆ ಒಳಗಾಗಿದೆ. ಜೋಶಿಮಠದ ಜತೆಗೆ ಕರ್ಣಪ್ರಯಾಗದಲ್ಲೂ ಕಟ್ಟಡಗಳಲ್ಲಿ ಬಿರುಕು ಮೂಡಿದ್ದು ಈ ಘಟನೆಯ ಗಂಭೀರತೆಯನ್ನು ತೋರಿದೆ.

ಜೋಶಿಮಠವು ಹಿಮಾಲಯದ ತಪ್ಪಲಿನ ಒಂದು ನಗರವಾಗಿದೆ. ಉತ್ತರಾಖಂಡದ ಪ್ರಮುಖ ಪ್ರವಾಸಿತಾಣವೂ ಹೌದು. ಸದ್ಯ ಈ ನಗರ ಭೂಗರ್ಭ ಸೇರುತ್ತಿರುವುದರಿಂದಲೇ ಹೆಚ್ಚು ಸುದ್ದಿಯಲ್ಲಿದೆ. ಭೂಗರ್ಭ ಶಾಸ್ತ್ರಜ್ಞರ ಪ್ರಕಾರ, ಜೋಶಿಮಠದ ಇಂದಿನ ಪರಿಸ್ಥಿತಿಗೆ ಅರಣ್ಯ ನಾಶ, ಮಣ್ಣು ಸವಕಳಿ, ಹಿಮ ಕರಗುವಿಕೆ ಹೆಚ್ಚಳದಂಥ ಸಮಸ್ಯೆಗಳೇ ಕಾರಣ. ಹಾಗೆಯೇ ಇನ್ನೊಂದು ಲೆಕ್ಕಾಚಾರದಲ್ಲಿ ನೋಡುವುದಾದರೆ ಮಿತಿಮೀರಿದ ನಗರೀಕರಣವೂ ಭೂಕುಸಿತಕ್ಕೆ ಪ್ರಮುಖ ಕಾರಣ. ಅಂದರೆ ಜೋಶಿಮಠದ ನೆಲ, ನಗರೀಕರಣವನ್ನು ತಡೆದುಕೊಳ್ಳಬಲ್ಲದೇ ಎಂಬ ಬಗ್ಗೆ ಅಧ್ಯಯನವನ್ನೇ ನಡೆಸದೆ ಮನಬಂದಂತೆ ಕಟ್ಟಡಗಳ ನಿರ್ಮಾಣ ಮಾಡಿದ್ದೂ ಇಂದಿನ ಸ್ಥಿತಿಗೆ ಕಾರಣ ಎಂಬ ವಿಶ್ಲೇಷಣೆಯೂ ಇದೆ.

ಸದ್ಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಮುಖವಾಗಿ ಜೋಶಿಮಠದ ಬಗ್ಗೆ ಸುದ್ದಿಯಾಗುತ್ತಿರುವುದರಿಂದ ಎಲ್ಲರ ಗಮನಸೆಳೆಯುತ್ತಿದೆ. ಅಲ್ಲದೆ ಭೂಮಿಯ ತಾಪಮಾನ ಏರಿಕೆಯಿಂದಾಗಿ ಈ ರೀತಿ ಆಗುತ್ತಿದೆ ಎಂಬ ಆತಂಕವೂ ಪರಿಸರವಾದಿಗಳಲ್ಲಿ ಹೆಚ್ಚುತ್ತಿದೆ.

ವಿಚಿತ್ರವೆಂದರೆ ಜೋಷಿಮಠದ ಭೂಕುಸಿತ ಮಾತ್ರ ಭೂಮಿಯ ತಾಪಮಾನ ಏರಿಕೆ ಅಥವಾ ಹವಾಮಾನ ಬದಲಾವಣೆಯ ಪಾಪದ ಕೂಸೇನಲ್ಲ. ಇದರ ಜತೆಯಲ್ಲೇ ಒಂದೇ ಸುಮನೆ ಸುರಿಯುತ್ತಿರುವ ಮಳೆ, ಕೆಲವೆಡೆ ಬರಗಾಲ, ಪ್ರವಾಹ, ಕಾಳ್ಗಿಚ್ಚು ಕೂಡ ಇದರಿಂದಾಗಿಯೇ ಆಗುತ್ತಿರುವುದು. ಕಳೆದ ವರ್ಷ ಭಾರತದಲ್ಲಿ ಇಂಥ ಹಲವಾರು ಘಟನೆಗಳನ್ನು ನೋಡಿದ್ದೇವೆ. ಕರ್ನಾಟಕ ಮತ್ತು ಕೇರಳದಲ್ಲಂತೂ ಕಳೆದ ಎರಡರಿಂದ ಮೂರು ವರ್ಷಗಳ ಕಾಲ ಈ ಭೂಕುಸಿತದಂಥ ಪ್ರಕರಣಗಳನ್ನು ನೋಡುತ್ತಿದ್ದೇವೆ.

Advertisement

ಇದಕ್ಕೆ ಕರ್ನಾಟಕದಲ್ಲಿ ಕಳೆದ ವರ್ಷ ಸುರಿದ ಮಳೆಯನ್ನೇ ನೋಡಬಹುದು. ಇಡೀ ವರ್ಷ ಒಂದೇ ಸಮನೆ ಸುರಿದು, ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ನೋಡಿದ್ದೇವೆ. ಮಳೆಯೇ ಬರದ ಜಾಗದಲ್ಲೂ ಈ ಬಾರಿ ಪ್ರವಾಹ ಸ್ಥಿತಿ ನೋಡಿದ್ದೇವೆ. ಹಾಗೆಯೇ ಕೊಡಗು ಜಿಲ್ಲೆಯಲ್ಲಿ ಭೂಕುಸಿತದಂಥ ಪ್ರಕರಣಗಳನ್ನು ಕಂಡಿದ್ದೇವೆ. ಬೆಂಗಳೂರಿನಲ್ಲೂ ಕಂಡರಿಯದ ಪ್ರವಾಹ ನೋಡಿದ್ದೇವೆ. ಹಾಗಾದರೆ ಈ ಎಲ್ಲ ನೈಸರ್ಗಿಕ ವಿಕೋಪಗಳಿಗೆ ಯಾರು ಕಾರಣ ಎಂಬ ಪ್ರಶ್ನೆಯೂ ಮೂಡುತ್ತದೆ.

ಸರಿಯಾಗಿ ಗಮನಿಸಿ ಹೇಳುವುದಾದರೆ ಈ ಘಟನೆಗಳಿಗೆ ಮನುಷ್ಯನೇ ಕಾರಣ. ಮಿತಿಮೀರಿದ ಆಸೆಯಿಂದಾಗಿ ಕಾಡನ್ನು ಕಡಿದು, ನಗರ ನಿರ್ಮಿಸುತ್ತಾ ಹೋಗುತ್ತಿದ್ದಾನೆ. ಸರಾಗವಾಗಿ ನೀರು ಹರಿಯುವ ಜಾಗದಲ್ಲಿ ಅಥವಾ ಕೆರೆಗಳಿದ್ದ ಜಾಗದಲ್ಲಿ ಮನೆಗಳನ್ನು ಕಟ್ಟಿಸಿಕೊಂಡಿದ್ದೇವೆ. ಪ್ರಕೃತಿಗೆ ವಿರುದ್ಧವಾಗಿ ಹೋದರೆ ಏನಾಗುತ್ತದೆ ಎಂಬುದನ್ನು ಈ ಮೂಲಕವೇ ಪರಿಸರ ನಮಗೆ ತೋರಿಸುತ್ತಿದೆ ಎಂಬುದನ್ನು ನಾವು ಮನಗಾಣಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next