Advertisement

ಅವಮಾನಗಳನ್ನೇ ಅವಕಾಶವಾಗಿಸಿ ಸಾಧಕರಾಗೋಣ

01:13 AM Apr 29, 2021 | Team Udayavani |

ವೇದಿಕೆ ಮೇಲೆ ನಿಂತು ಭಾಷಣದಲ್ಲಿ, ಪತ್ರಿಕೆಯ ಲೇಖನದಲ್ಲಿ, ನಿತ್ಯದ ಬದುಕಿನ ಮಾತುಕತೆಯಲ್ಲಿ ನಾವು ಶ್ರೇಷ್ಠ ವ್ಯಕ್ತಿಗಳ ಗುಣಗಾನ ಮಾಡುತ್ತೇವೆ. ಸಮಾಜದಲ್ಲಿ ಶ್ರೇಷ್ಠ ಎಂಬ ಮನ್ನಣೆಗೆ ಪಾತ್ರನಾಗಿರುವ ವ್ಯಕ್ತಿ ಒಂದು ಕಾಲದಲ್ಲಿ ಇದೇ ಸಮಾಜದಿಂದ ತೆಗಳಿಕೆಗೆ, ಅವಮಾನಕ್ಕೆ, ಅಗೌರವಕ್ಕೆ ಪಾತ್ರನಾಗಿರುತ್ತಾನೆಂಬುದು ಅಕ್ಷರಶಃ ಸತ್ಯ.

Advertisement

ಶ್ರೇಷ್ಠತೆ ಯಾರಿಗೆ ಪ್ರಾಪ್ತಿಯಾಗಿರುತ್ತದೋ ಅವರು ಸಮಾಜದಿಂದ ನಿರಂತರ ಪರೀಕ್ಷೆಗೆ ಒಳಗಾಗಿರುತ್ತಾರೆ. ನಮ್ಮ ಸುತ್ತಲೂ ಆಸೆಗಳನ್ನು ಬಿತ್ತಿ ಅದಕ್ಕೆ ನಾವು ಮನಸೋಲುತ್ತೇವೊ ಇಲ್ಲವೋ ಎಂಬುದನ್ನು ಸಮಾಜವು ಪರೀಕ್ಷಿಸುವುದರ ಜತೆಗೆ ಕೆಲವೊಮ್ಮೆ ನಮ್ಮನ್ನು ಅವಮಾನ, ಅಪಹಾಸ್ಯ ಮಾಡುತ್ತದೆ. ಇಂತಹ ಅವಮಾನಗಳನ್ನು ಯಾರು ಅವಕಾಶವಾಗಿ ಸ್ವೀಕರಿಸುತ್ತಾರೋ ಅವರು ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ. ಅವಮಾನಗಳಿಂದ ಹೊಸ ದಾರಿಗಳು, ಅವಕಾಶಗಳು ನಮಗೆ ಗೋಚರವಾಗಬೇಕು.ಈ ಜಗತ್ತಿನಲ್ಲಿ ಎಷ್ಟು ಜನರಿ¨ªಾರೋ ಅಷ್ಟೂ ಜನರು ಅವಮಾನಗಳನ್ನು ಎದುರಿಸಿಯೇ ಎದುರಿಸಿರುತ್ತಾರೆ. ಹಾಗಾದರೆ ಈ ಜಗತ್ತಿನಲ್ಲಿ ಎಷ್ಟು ಜನರಿದ್ದಾರೋ ಅವರೆಲ್ಲರಿಗೂ ಅವಕಾಶಗಳಿವೆ. ಪ್ರತಿಯೊಂದು ಜೀವಾಣುವನ್ನು ಸಲಹುವ ದೇವರು ನಮಗೆ ಒಂದು ಅವಕಾಶವನ್ನು ಕೊಡಲಾರನೇ? ಆದರೆ ಅವಕಾಶವನ್ನು ಹುಡುಕುವ ಕಲೆ, ಗುರುತಿಸುವ ಕಲೆ ನಮ್ಮಲ್ಲಿ ಇರಬೇಕು.

ಉದ್ಯಾನವನದಲ್ಲಿ ಹೀಗೆ ಸುಮ್ಮನೆ ಕುಳಿತ ನ್ಯೂಟನ್‌ ತಲೆಯ ಮೇಲೆ ಸೇಬು ಬಿತ್ತು. ತಲೆಗೆ ಬಿದ್ದ ಆ ಸೇಬುವಿನಿಂದಲೇ ಗುರುತ್ವಾಕರ್ಷಣ ಬಲವನ್ನು ಗ್ರಹಿಸಿ ಪ್ರಸಿದ್ಧ ವಿಜ್ಞಾನಿಯಾದ. ಎಷ್ಟೋ ಜನರ ತಲೆಗೆ ಮರಗಳೇ ಉರುಳಿರಬಹುದು. ಆದರೆ ಅದರ ತರ್ಕವನ್ನು ಅರಿಯದವರು ಪೆಟ್ಟು ತಿನ್ನುತ್ತಾರೆ. ಅಂತೆಯೇ ನಮ್ಮ ದಿನನಿತ್ಯದ ಬದುಕಿನಲ್ಲಿ ನಡೆಯುವ ಘಟನೆಗಳು, ಎದುರಾಗುವ ವ್ಯಕ್ತಿಗಳು, ಯಾವುದೇ ಸಮಾರಂಭಗಳು ಮತ್ತು ಪ್ರಕೃತಿಯೂ ಕೂಡಾ ನಮಗೆ ಜೀವನ ಪಾಠವನ್ನು ಹೇಳಿಕೊಡುತ್ತವೆ. ಆದ್ದರಿಂದ ಅವೆಲ್ಲವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಬದುಕನ್ನು ಬಂಗಾರವಾಗಿಸಬೇಕು. ಕಷ್ಟಗಳಿಗೆ, ಸವಾಲುಗಳಿಗೆ, ಪರೀಕ್ಷೆಗಳಿಗೆ, ಅವಮಾನಗಳಿಗೆ ಒಳಪಡದಿದ್ದರೆ ಬದುಕು ಬದುಕೇ ಅಲ್ಲ.

ಡಾ| ಬಿ. ಆರ್‌. ಅಂಬೇಡ್ಕರ್‌ ಅವರು ಸ್ವತಃ ಅನ್ಯಾಯ, ಅಸಮಾನತೆ ಮತ್ತು ಶೋಷಣೆಗಳನ್ನು ಅನುಭವಿಸಿದರು. ಇಂತಹ ಅವಮಾನಗಳನ್ನು ಕೆಚ್ಚೆದೆಯಿಂದ ಎದುರಿಸಿ ಕೋಟ್ಯಂತರ ಜನರಿಗೆ ಸ್ಫೂರ್ತಿಯಾದರು. ಹಾಗೆಯೇ ಜಗತ್ತಿನ ಪ್ರತಿಯೊಬ್ಬ ಶ್ರೇಷ್ಠ ವಿಜ್ಞಾನಿ, ಅಧಿಕಾರಿ, ಕೃಷಿಕ, ಕ್ರೀಡಾಪಟು, ರಾಜಕೀಯ ನಾಯಕರು ತಾವು ಅವಮಾನಗಳಿಂದ ಕಲಿತ ಪಾಠದಿಂದಲೇ ಮುಂದೆ ಸಾಗಿದ್ದರಿಂದ ಇಂದು ಜಗತ್ತು ಅವರನ್ನು ನೆನಪಿಸುತ್ತದೆ. ಜಗದ್ವಿಖ್ಯಾತ ಮಾತುಗಾರ್ತಿ, ನಿರೂಪಕಿ ಓಪ್ರಾ ವಿನ್‌ ಫ್ರೆ ತನ್ನ ಯಶಸ್ಸಿನ ಕಥೆಯನ್ನು ಚೊಕ್ಕದಾಗಿ ಹೀಗೆ ಹೇಳಿ¨ªಾಳೆ- “ಟರ್ನ್ ಯುವರ್‌ ವುಂಡ್ಸ್‌ ಇನ್‌ ಟು ವಿಸ್‌ಡಮ್‌’ ಅಂದರೆ ನಿಮ್ಮ ನೋವುಗಳನ್ನು ಬುದ್ಧಿವಂತಿಕೆಯನ್ನಾಗಿಸಬೇಕು. ನಮ್ಮ ಒಳಗಣ್ಣು ತೆರೆಯಬೇಕು. ಅರಿವೇ ಗುರುವಾಗಬೇಕು. ಹೀಗಾದಾಗ ಯಾರೂ ನಮ್ಮ ಯಶಸ್ಸಿಗೆ ಅಡ್ಡಿಯಾಗಲು ಸಾಧ್ಯವೇ ಇಲ್ಲ. ಅವಮಾನಗಳನ್ನು ಅವಕಾಶಗಳಾಗಿ ಸ್ವೀಕರಿಸಿ ಗೆಲುವಿಗಾಗಿ ಹಂಬಲಿಸಬೇಕು.

ಅವಮಾನಿಸಲ್ಪಟ್ಟ ಜಾಗದಲ್ಲೇ ಎದ್ದು ನಿಲ್ಲಬೇಕು.ಯಶಸ್ಸು ಪಡೆಯಬೇಕು. ಅದೃಷ್ಟದ ಬೆನ್ನೇರಿ ಹೋಗುವವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಉತ್ತಮ ಬಾಳ್ವೆ ನಡೆಸುವ ಕನಸು ಅದನ್ನು ಸಾಕಾರಗೊಳಿಸುವ ಅಂತಃಶಕ್ತಿ ನಮ್ಮಲ್ಲಿರಬೇಕು. ಕೆಲವರು ಬದುಕಿದ್ದರೂ ಸತ್ತಂತೆ ಇರುತ್ತಾರೆ. ಮತ್ತೆ ಕೆಲವರು ಸತ್ತ ಅನಂತರವೂ ಬದುಕಿರುತ್ತಾರೆ. ಮೊದಲನೆಯದಕ್ಕೆ ನಿದರ್ಶನ ನೀಡಲು ಕೋಟ್ಯಂತರ ಜನರು ಸಿಗಬಹುದು, ಆದರೆ ಎರಡನೆಯದಕ್ಕೆ ನಿದರ್ಶನ ಕೊಡಲು ಕೋಟಿಗೊಬ್ಬರು ದೊರೆಯುವುದು ದುರ್ಲಭ. ಆದ್ದರಿಂದಲೇ ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿ, ಸತತವಾಗಿ ಪರಿಶ್ರಮ ಪಡಬೇಕು. ಸಾಧನೆಯ ಪಥದಲ್ಲಿ ನಡೆಯುವಾಗ ಬರುವ ಸೋಲಿನಿಂದ ಕುಗ್ಗದೆ, ಗೆಲುವಿನಿಂದ ಹಿಗ್ಗದೆ, ಅವಮಾನಗಳಿಗೆ ಅಂಜದೆ ಕ್ರಿಯಾಶೀಲರಾದರೆ ಸಾಧಕರಾಗಲು ಅಸಾಧ್ಯವಲ್ಲ.

Advertisement

– ಸುಪ್ರಿಯಾ ಭಂಡಾರಿ ಬೈಲೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next