Advertisement

ದೇವಿ ಅನುಗ್ರಹದಿಂದ ಸಭಾಭವನ ನಿರ್ಮಾಣ ಕಾರ್ಯ ಪ್ರಾರಂಭವಾಗಲಿ: ಅಣ್ಣಿ ಸಿ. ಶೆಟ್ಟಿ

02:32 PM Sep 22, 2021 | Team Udayavani |

ನವಿಮುಂಬಯಿ: ನಲ್ವತ್ತೂಂಬತ್ತು ವರ್ಷಗಳ ಹಿಂದೆ ಭಜನೆಗೆ ಒಲಿದು ಬಂದವಳು ತಾಯಿ ಮೂಕಾಂಬಿಕೆ. ಅಂದು ಸ್ಥಾಪನೆಗೊಂಡ ನಮ್ಮ ಸಂಸ್ಥೆ ಇಂದು ಈ ಹಂತಕ್ಕೆ ತಲುಪಿ ಪ್ರಸಿದ್ಧ ಕ್ಷೇತ್ರವಾಗಿ ರೂಪುಗೊಂಡಿದೆ. ನಮ್ಮ ಕರ್ಮಭೂಮಿಯಾದ ಈ ಮಹಾರಾಷ್ಟ್ರದ ಮಣ್ಣಿನಲ್ಲಿ ಉದ್ಯೋಗದ ಜತೆಗೆ ಧಾರ್ಮಿಕ, ಸಾಮಾಜಿಕ ಚಟುವಟಕೆಗಳನ್ನು ಮಾಡುತ್ತಾ ಈ ಮಣ್ಣಿನ ಪರಿಮಳವನ್ನು ಪಸರಿಸುವಲ್ಲಿ ಕೊಡುಗೆ ನೀಡುತ್ತಾ ಬಂದಿದ್ದೇವೆ.

Advertisement

ವರ್ಷದ ಎಲ್ಲ ದಿನಗಳಲ್ಲಿ ನಮ್ಮ ದೇವಾಲಯದಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಯಾವುದೇ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಲಿಲ್ಲ. ದೇವಾಲಯ ಮುಚ್ಚಲ್ಪಟ್ಟು ಆದಾಯವಿಲ್ಲದೆ ಖರ್ಚಿಗೂ ಕಷ್ಟವಿದೆ. 10 ದಿನ ವಿಜೃಂಭಣೆಯಿಂದ ನಡೆಯುತ್ತಿದ್ದ ನವರಾತ್ರಿ ಉತ್ಸವ ಕಳೆದ ವರ್ಷದಿಂದ ನೀರಸವಾಗಿದೆ. ಅಲ್ಲದೆ ಯಕ್ಷಗಾನ, ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಇತ್ಯಾದಿ ಸಾಮಾಜಿಕ ಕಾರ್ಯಗಳೂ ಸ್ಥಗಿತಗೊಂಡಿವೆ. ಕೊರೊನಾದಿಂದಾಗಿ ನಮ್ಮ ಸಭಾಭವನದ ಕಾರ್ಯವನ್ನು ಆರಂಭಿಸಲು ಸಾಧ್ಯವಾಗಲಿಲ್ಲ. ತಾಯಿಯ ಅನುಗ್ರಹದಿಂದ ಕೊರೊನಾ ನಿವಾರಣೆಯಾಗಿ ಆದಷ್ಟು ಬೇಗ ಕೆಲಸ ಆರಂಭವಾಗಲಿ ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ತಿಳಿಸಿದರು.

ಸೆ. 19ರಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಸಭಾಂಗಣದಲ್ಲಿ ನಡೆದ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಆಡಳಿತ ಸಮಿತಿ ಶ್ರೀ ಸಂತೋಷಿ ಮಾತಾ ದೇವಾಲಯ ಟ್ರಸ್ಟ್‌ನ 31ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ| ತೃಪ್ತಿ ಚಂದ್ರಹಾಸ್‌ ಶೆಟ್ಟಿ ತನ್ನ ಬಾಲ್ಯದ ಜೀವನವನ್ನು ನೆನಪಿಟ್ಟು ಡಾಕ್ಟರ್‌ ಕಲಿಯಲು ಪಟ್ಟ ಶ್ರಮವನ್ನು ವಿವರಿಸಿದ್ದಾಳೆ. ಅವಳು ನಮ್ಮ ಸಂಸ್ಕಾರ ಮರೆಯಲಿಲ್ಲ. ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವಳಿಂದ ಸಮಾಜಕ್ಕೆ ಒಳಿತಾಗಲಿ. ನಮ್ಮ ಸದಸ್ಯರ ಮಕ್ಕಳು ಇಂತಹ ಪದವಿ ಪಡೆಯುವುದು ಸಂತೋಷದ ವಿಷಯ. ಸಮಿತಿಯ ಸದಸ್ಯರು, ಉಪಸಮಿತಿ ಹಾಗೂ ಮಹಿಳಾ ಮಂಡಳಿಯ ಸದಸ್ಯರ ಸಹಕಾರದಿಂದ ನಮ್ಮ ಎಲ್ಲ ಕೆಲಸಗಳು ನಿರ್ವಿಘ್ನವಾಗಿ ನಡೆಯುತ್ತಿವೆ. ಅದರಲ್ಲೂ ಉಪ ಸಮಿತಿಯ ಯುವಕರ ಪ್ರಯತ್ನದಿಂದ ಉಚಿತವಾಗಿ ಕೋವಿಡ್‌ ಲಸಿಕೆ ವಿತರಣೆ ಕಾರ್ಯ ಯಶಸ್ವಿಯಾಗಿ ನಡೆದಿದೆ. ನಿಮ್ಮೆಲ್ಲರ ಸಹಕಾರ ಇದೇ ರೀತಿ ಮುಂದುವರಿಯಲಿ. ನಿಮಗೆಲ್ಲರಗೂ ತಾಯಿ ಮೂಕಾಂಬಿಕೆಯ ಅನುಗ್ರಹ ಸದಾಯಿರಲಿ ಎಂದರು.

ಇದನ್ನೂ ಓದಿ:1.2 ಕೋಟಿ ವೈದ್ಯಕೀಯ ಸಲಹೆ; ಟೆಲಿಮೆಡಿಸಿನ್‌ ಬಳಕೆ ಕರ್ನಾಟಕ ನಂ.2

ದೇವಿಗೆ ದೀಪ ಪ್ರಜ್ವಲಿಸಿ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಲಾಯಿತು. ಈ ವರ್ಷದ ಲೆಕ್ಕಪತ್ರ ಹಾಗೂ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿ ಮಂಜೂರುಗೊಳಿಸಲಾಯಿತು.

Advertisement

ಇತ್ತೀಚೆಗೆ ಎಂಬಿಬಿಎಸ್‌ ಪದವಿ ಗಳಿಸಿದ ದೇವಾಲಯದ ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್‌ ಶೆಟ್ಟಿ ಮತ್ತು ಜಯಂತಿ ಶೆಟ್ಟಿ ದಂಪತಿಯ ಪುತ್ರಿ ಡಾ| ತೃಪ್ತಿ ಹಾಗೂ ತುಳುಕೂಟ ಐರೋಲಿಯ ಅಧ್ಯಕ್ಷ ಬೈಕಾಡಿ ಹೆದ್ದಾರಿ ಮನೆ ನಾಗೇಶ್‌ ಶೆಟ್ಟಿ ಅವರ ಪುತ್ರಿ ಡಾ| ರಿಯಾ ಪರವಾಗಿ ನಾಗೇಶ್‌ ಶೆಟ್ಟಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮವನ್ನು ಶ್ರೀ ಮೂಕಾಂಬಿಕಾ ಚಾರಿಟೇಬಲ್‌ ಮಂಡಳದ ಪ್ರಧಾನ ಕಾರ್ಯದರ್ಶಿ ಹರೀಶ್‌ ಶೆಟ್ಟಿ ಪಡುಬಿದ್ರೆ ನಡೆಸಿಕೊಟ್ಟರು.

ಶುಭ ಹಾರೈಕೆ
ಸದಸ್ಯರ ಪರವಾಗಿ ನೆರೂಲ್‌ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ, ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ಮಾತನಾಡಿ, ಕೊರೊನಾ ಭಯ
ವಿದ್ದರೂ ಇಂದು ಇಷ್ಟೊಂದು ಸಂಖ್ಯೆಯಲ್ಲಿ ಸದಸ್ಯರು ಒಟ್ಟಾಗಿರುವುದು ಸಂತೋಷದ ಸಂಗತಿ. ಈ ಜಾಗದಲ್ಲಿ ನಿರಂತರ ಯಕ್ಷಗಾನ ಇತ್ಯಾದಿ
ಕಾರ್ಯ ಕ್ರಮಗಳು ನಡೆಯುತ್ತಲೇ ಇದ್ದವು. ಕೊರೊನಾ ದಿಂದಾಗಿ ಎಲ್ಲವೂ ಸ್ಥಗಿತವಾಗಿವೆ. ಕೊರೊನಾ ಆದಷ್ಟು ಬೇಗ ದೂರವಾಗಿ ಭಕ್ತರಿಗೆ ದೇವಾಲಯ ತೆರೆದು ಹಿಂದಿನಂತೆಯೇ ಕಾರ್ಯಚಟುವಟಿಕೆಗಳು ನಡೆಯುವಂತಾಗಲಿ. ಸಭಾ ಭವನ ಆದಷ್ಟು ಬೇಗ ನಿರ್ಮಾಣವಾಗಲಿ ಎಂದು ತಿಳಿಸಿ ಶುಭ ಹಾರೈಸಿದರು.

ಸದಸ್ಯರಾದ ವೀಣಾ ಸಿ. ಕರ್ಕೇರ, ಸಂದೀಪ್‌ ಡಿ. ಶೆಟ್ಟಿ, ಶಕುಂತಳಾ ಎಸ್‌. ಶೆಟ್ಟಿ, ಚಂದ್ರಹಾಸ್‌ ದೆಪ್ಪುಣಿಗುತ್ತು, ಪದ್ಮನಾಭ ಸಿ. ಶೆಟ್ಟಿ, ಪ್ರವೀಣ್‌ ಕೆ. ಶೆಟ್ಟಿ, ಹರೀಶ್‌ ಶೆಟ್ಟಿ ಪಡುಬಿದ್ರೆ ಮೊದಲಾದವರು ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದರು.

ಉಪಾಧ್ಯಕ್ಷರಾದ ನಂದಿಕೂರು ಜಗದೀಶ್‌ ಶೆಟ್ಟಿ, ಕೆ. ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್‌ ಎಸ್‌. ಕೋಟ್ಯಾನ್‌, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ್‌ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್‌ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್‌ ಶೆಟ್ಟಿ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಗೌರವಿಸಲಾಯಿತು.

ಮಹಿಳಾ ಮಂಡಳಿಯ ಸದಸ್ಯೆಯರು ಪ್ರಾರ್ಥನೆಗೈದರು. ಪ್ರಧಾನ ಕಾರ್ಯದರ್ಶಿ ಸುರೇಶ್‌ ಎಸ್‌. ಕೋಟ್ಯಾನ್‌ ಸ್ವಾಗತಿಸಿದರು. ಇತ್ತೀಚೆಗೆ ಕೊರೊನಾ ಸೋಂಕಿನಿಂದ ಮೃತಪಟ್ಟ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಧಾನ ಕಾರ್ಯದರ್ಶಿ ಸುರೇಶ್‌ ಎಸ್‌. ಕೋಟ್ಯಾನ್‌ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಹರೀಶ್‌ ಶೆಟ್ಟಿ ಪಡುಬಿದ್ರೆ ಸಹಕರಿಸಿದರು.

ಬಳಿಕ ಶ್ರೀ ಮೂಕಾಂಬಿಕಾ ಚಾರಿಟೆಬಲ್‌ ಮಂಡಳದ 18ನೇ ವಾರ್ಷಿಕ ಮಹಾಸಭೆ ಮತ್ತು ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆಯ 7ನೇ ವಾರ್ಷಿಕ ಮಹಾಸಭೆ ಜರಗಿತು. ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ನೆರವೇರಿತು. ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಸಂತೋಷಿ ಮಾತಾ ದೇವಾಲಯ ಟ್ರಸ್ಟ್‌, ಶ್ರೀ ಮೂಕಾಂಬಿಕಾ ಚಾರಿಟೆಬಲ್‌ ಮಂಡಳ, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆ, ಉಪಸಮಿತಿಯ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಸದಸ್ಯೆಯರು ಸಹಕರಿಸಿದರು.

ಸರ್ವರ ತುಂಬು
ಹೃದಯದ ಸಹಕಾರ
ಕಳೆದ ವರ್ಷದಿಂದ ಕೊರೊನಾದಿಂದಾಗಿ ಯಾವುದೇ ಚಟುವಟಿಕೆಗಳು ನಡೆಯಲಿಲ್ಲ. ಆದರೂ ನಾಗರ ಪಂಚಮಿ, ಶ್ರೀ ಕೃಷ್ಣಾಷ್ಟಮಿ, ಗಣೇಶ ಚತುರ್ಥಿಯ ಆಚರಣೆ ಮಾಡಿದ್ದೇವೆ. ವೈದ್ಯಕೀಯ ಪದವಿ ಪಡೆದು ಸಮ್ಮಾನಿತರಾದ ಡಾ| ತೃಪ್ತಿ ಅವರಿಂದ ಸಮಾಜಕ್ಕೆ ಉಪಕಾರವಾಗಲಿ. ಇಂದು ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳು ಮುಂದೆ ಒಳ್ಳೆಯ ಪದವಿ ಗಳಿಸಿ ಸಮಾಜದ ಋಣ ತೀರಿಸಬೇಕು. ಧರ್ಮದರ್ಶಿ ಅಣ್ಣಿ ಶೆಟ್ಟಿ ಅವರು ಕಳೆದ 40 ವರ್ಷಗಳಿಂದ ತಾಯಿಯ ಸೇವೆ ಮಾಡುತ್ತಾ ಬಂದಿದ್ದಾರೆ. ಅವರಿಗೆ ಆರೋಗ್ಯವನ್ನು ತಾಯಿ ಕರುಣಿಸಲಿ. ಮುಂದೆಯೂ ಹಲವಾರು ವರ್ಷಗಳ ಕಾಲ ತಾಯಿಯ ಸೇವೆ ಮಾಡಲು ಅವರಿಗೆ ಭಾಗ್ಯ ಸಿಗಲಿ. ಅವರಿಗೆ ಸಿಕ್ಕಿದ ಪುರಸ್ಕಾರ ನಮಗೆಲ್ಲರಿಗೂ ಸಿಕ್ಕಿದ ಪುರಸ್ಕಾರವಾಗಿದೆ. ನಾವೆಲ್ಲರೂ ಒಂದಾಗಿ ಅಧ್ಯಕ್ಷರಿಗೆ ಸಹಕರಿಸುತ್ತಿದ್ದೇವೆ. ಮಹಿಳಾ ಸದಸ್ಯೆಯರು, ಉಪಸಮಿತಿಗಳ ಸದಸ್ಯರು ತುಂಬು ಹೃದಯದಿಂದ ಸಹಕರಿಸುತ್ತಿದ್ದು, ಅವರೆಲ್ಲರಿಗೂ ಅಭಿನಂದನೆಗಳು.
-ನಂದಿಕೂರು ಜಗದೀಶ್‌ ಶೆಟ್ಟಿ
ಉಪಾಧ್ಯಕ್ಷರು, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ

ಶ್ರಮ ವಹಿಸಿ ಕಲಿತರೆ ಫ‌ಲ
ನಾನು ಸಣ್ಣವಳಾಗಿದ್ದಾಗ ನಮ್ಮ ದೇವಾಲಯದ ತೆಂಗಿನ ಮರಗಳು ಸಣ್ಣ ಸಸಿಯಾಗಿದ್ದವು. ಇಷ್ಟು ವರ್ಷಗಳಿಂದ ಅದಕ್ಕೆ ನೀರು, ಗೊಬ್ಬರ ಹಾಕಿ ಬೆಳೆಸಿದ್ದರಿಂದ ಈಗ ದೊಡ್ಡ ಮರವಾಗಿ ಬೆಳೆದು ಫಲ ನೀಡುತ್ತಿದೆ. ಅದೇ ರೀತಿ ನಾವು ಚಿಕ್ಕಂದಿನಿಂದಲೇ ಶ್ರಮ ವಹಿಸಿ ಕಲಿತರೆ ಮಾತ್ರ ಇಂತಹ ಪದವಿ ಪಡೆಯಲು ಸಾಧ್ಯ. ಎಂಬಿಬಿಎಐಸ್‌ ಪದವಿ ಪಡೆಯಲು ತುಂಬಾ ಶ್ರಮ ಪಡಬೇಕಾಗುತ್ತದೆ. ತಂದೆ-ತಾಯಿಯ ಹಾಗೂ ನಿಮ್ಮೆಲ್ಲರ ಆಶೀರ್ವಾದದಿಂದ ಈ ಪದವಿ ಪಡೆದು ತಾಯಿಯ ಸನ್ನಿಧಿಯಲ್ಲಿ ಸಮ್ಮಾನ ಸ್ವೀಕರಿಸುವ ಭಾಗ್ಯ ಒದಗಿದೆ. ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಕೊರೊನಾ ಜತೆಗೆ ಇತರ ಕಾಯಿಲೆಗಳು ಬಾರದಂತೆ ಗಮನ ಹರಿಸಬೇಕು. ಇಂದು ಪ್ರತಿಭಾ ಪುರಸ್ಕಾರ ಪಡೆದವರು ಉತ್ತಮವಾಗಿ ಕಲಿತು ಒಳ್ಳೆಯ ಪದವಿ ಗಳಿಸಬೇಕು.
-ಡಾ| ತೃಪ್ತಿ, ಸಮ್ಮಾನಿತರು

 

 

Advertisement

Udayavani is now on Telegram. Click here to join our channel and stay updated with the latest news.

Next