Advertisement

ಚೀತಾ ಸಂರಕ್ಷಣೆಗೆ ಸರಕಾರ ಹೆಚ್ಚಿನ ಕಾಳಜಿ ವಹಿಸಲಿ

10:53 PM May 26, 2023 | Team Udayavani |

ಸರಿಸುಮಾರು ಏಳು ದಶಕಗಳ ಹಿಂದೆ ದೇಶದಲ್ಲಿ ನಶಿಸಿಹೋಗಿದ್ದ ವನ್ಯಜೀವಿಯಾದ ಚೀತಾವನ್ನು ಮರುಪರಿಚಯಿಸಿ ಅವುಗಳ ಸಂತತಿ ಯನ್ನು ಸಂರಕ್ಷಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರಕಾರ ಕಳೆದ ವರ್ಷ ಅನುಷ್ಠಾನಗೊಳಿಸಿದ್ದ “ಚೀತಾ ಮರುಪರಿಚಯ ಯೋಜನೆ’ ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ. ಕಳೆದ ವರ್ಷ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನವಾದ ಸೆ.17ರಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಚೀತಾಗಳನ್ನು ಬಿಡುಗಡೆ ಮಾಡುವ ಮೂಲಕ ಈ ವಿಶೇಷ ಯೋಜನೆಗೆ ಚಾಲನೆ ನೀಡಿದ್ದರು.

Advertisement

ಯೋಜನೆಯ ಮೊದಲ ಹಂತದಲ್ಲಿ ಸೆಪ್ಟಂಬರ್‌ನಲ್ಲಿ ನಮೀಬಿಯಾದಿಂದ ಎಂಟು ಮತ್ತು ಈ ವರ್ಷದ ಆರಂಭದಲ್ಲಿ ಮತ್ತೆ 12 ಚೀತಾಗಳನ್ನು ದಕ್ಷಿಣ ಆಫ್ರಿಕಾದಿಂದ ತರಲಾಗಿತ್ತು. ಈ ಚೀತಾಗಳನ್ನು ಹಂತಹಂತವಾಗಿ ಕುನೋ ರಾಷ್ಟ್ರೀಯ ಅಭಯಾರಣ್ಯಕ್ಕೆ ಬಿಡುಗಡೆ ಮಾಡುತ್ತ ಬರಲಾಗಿದೆ.

ಆದರೆ ಎರಡು ತಿಂಗಳುಗಳ ಅವಧಿಯಲ್ಲಿ ಮೂರು ಚೀತಾಗಳು ವಿವಿಧ ಕಾರಣಗಳಿಂದಾಗಿ ಸಾವನ್ನಪ್ಪಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಚೀತಾಗಳ ಮರುಪರಿಚಯ ಯೋಜನೆ ರೂಪುಗೊಂಡಾಗಿನಿಂದ ವನ್ಯಜೀವಿ ತಜ್ಞರು ಈ ಬಗೆಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದರಲ್ಲದೆ ದೇಶದಲ್ಲಿನ ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ಹವಾಮಾನ ಪರಿಸ್ಥಿತಿಯಲ್ಲಿ ಚೀತಾ ಸಂತತಿಯನ್ನು ಬೆಳೆಸುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೇ ವೇಳೆ ವಿದೇಶದಿಂದ ಕರೆತರುವುದಕ್ಕೂ ಮುನ್ನವೇ ಗರ್ಭ ಧರಿಸಿದ್ದ ಚೀತಾ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳದೆ ಮೂರು ಮರಿಗಳು ಕಳೆದ ನಾಲ್ಕು ದಿನಗಳ ಅಂತರದಲ್ಲಿ ಸಾವನ್ನಪ್ಪಿವೆ. ಚೀತಾಗಳಿಗೆ ಓಡಾಡಲು ವಿಶಾಲವಾದ ಸ್ಥಳಾವಕಾಶದ ಅಗತ್ಯವಿದ್ದು ಕುನೋ ರಾಷ್ಟ್ರೀಯ ಉದ್ಯಾ ನವನದಲ್ಲಿ ಇಷ್ಟೊಂದು ಸಂಖ್ಯೆಯ ಚೀತಾಗಳನ್ನು ಬಿಡುವುದು ಅವುಗಳ ಸುರಕ್ಷೆಯ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಅಷ್ಟು ಮಾತ್ರವಲ್ಲದೆ ಸಿಬಂದಿ ಕೊರತೆಯಿಂದಾಗಿ ಚೀತಾಗಳು ಪದೇಪದೆ ಅಭಯಾರಣ್ಯ ವ್ಯಾಪ್ತಿಯಿಂದ ಹೊರಬರುತ್ತಿವೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರಕಾರ ತಿಂಗಳ ಹಿಂದೆ ಕೇಂದ್ರ ಸರಕಾರಕ್ಕೆ ಪತ್ರ ಬರೆದು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿ, ಕೆಲವೊಂದು ಚೀತಾಗಳನ್ನು ಬೇರೆ ರಾಜ್ಯಗಳಲ್ಲಿನ ವಿಶಾಲ ರಾಷ್ಟ್ರೀಯ ಉದ್ಯಾನವನಗಳಿಗೆ ಸ್ಥಳಾಂತರಿಸುವಂತೆ ಮನವಿ ಮಾಡಿಕೊಂಡಿತ್ತು.
ಮಹತ್ವಕಾಂಕ್ಷಿ ಯೋಜನೆಯ ಕುರಿತಂತೆ ಸರಕಾರ ಇನ್ನಷ್ಟು ಆಸ್ಥೆ ವಹಿಸಿ ಚೀತಾಗಳು ಬದುಕಿ ಉಳಿಯುವಂತೆ ನೋಡಿಕೊಳ್ಳುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ. ಅವುಗಳಿಗೆ ಪೂರಕವಾಗುವಂತಹ ಆವಾಸ ಸ್ಥಾನಗಳನ್ನು ಕಲ್ಪಿಸಿಕೊಡಬೇಕಾಗಿದೆ. ಪ್ರಕೃತಿದತ್ತವಲ್ಲದ ಮಾನವ ನಿರ್ಮಾಣದ ವ್ಯವಸ್ಥೆಗಳನ್ನು ಮಾಡುವುದಕ್ಕೆ ಕಿಂಚಿತ್ತೂ ವಿಳಂಬ ಮಾಡುವುದು ಸಲ್ಲದು. ಇವುಗಳ ಮೇಲ್ವಿಚಾರಣೆಗೆ ಸಿಬಂದಿ ಕೊರತೆ ಇದ್ದಲ್ಲಿ ಅದನ್ನು ತುರ್ತಾಗಿ ನಿವಾರಿಸಲೇಬೇಕು.

ಭಾರತದಲ್ಲಿ ಮತ್ತೆ ಚೀತಾಗಳು ಓಡಾಡಬೇಕು. ಅವುಗಳ ಸಂಖ್ಯೆ ಹೆಚ್ಚಾಗಬೇಕೆಂಬ ಆಶಯ ಹೊಂದಿರುವ ಕೇಂದ್ರ ಸರಕಾರ ಕೂಡಲೇ ಇತ್ತ ಗಮನ ಹರಿಸಿ ವಿದೇಶಗಳಿಂದ ಕರೆತರಲಾಗಿರುವ ಚೀತಾಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಚೀತಾಗಳಿಗೆ ವಾಸಯೋಗ್ಯವಾದ ಅರಣ್ಯ ಪ್ರದೇಶವನ್ನು ಗುರುತಿಸಿ, ಸೌಲಭ್ಯಗಳನ್ನು ಕಲ್ಪಿಸಬೇಕು. ವನ್ಯಜೀವಿ ತಜ್ಞರ ಸಲಹೆ, ಮಾರ್ಗದರ್ಶನಗಳನ್ನು ಪಡೆದು ಸಾಧ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next