Advertisement

ಅರ್ಚಕರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಲಿ: ಹಿಟ್ನಾಳ

06:29 PM Oct 25, 2022 | Team Udayavani |

ಕೊಪ್ಪಳ: ಜನನದಿಂದ ಸಾವಿನವರೆಗೆ ಭಗವಂತನ ಮೇಲೆ ನಂಬಿಕೆ ಇರುವ ಪ್ರತಿ ಕುಟುಂಬದ ಜೊತೆಗಿರುವ ಅರ್ಚಕರ ಸೇವೆ ಅನನ್ಯವಾಗಿದ್ದು, ಅವರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಲಿ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

Advertisement

ನಗರದ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಅಖಿಲ ಕರ್ನಾಟಕ ವೀರಶೈವ ಅರ್ಚಕ ಪುರೋಹಿತರ ನಿಸ್ವಾರ್ಥ ಸೇವಾ ಸಂಘದಿಂದ ನಡೆದ ರಾಜ್ಯ ಘಟಕ, ಯುವ ಘಟಕ, ಜಿಲ್ಲಾ, ತಾಲೂಕು ಘಟಕಗಳ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂಘ ತನ್ನ ಕೆಲಸವನ್ನು ಉತ್ತಮ ರೀತಿಯಲ್ಲಿ ನಡೆಸಲಿ. ಸರಕಾರಕ್ಕೆ ನಿಮ್ಮ ಬೇಡಿಕೆ ಪಟ್ಟಿ ಸಲ್ಲಿಸುವೆ. ರಾಜ್ಯದಲ್ಲಿರುವ ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳ ಅರ್ಚಕರ ಗೌರವಧನ ಹೆಚ್ಚಳ ಮಾಡುವುದು ಸೇರಿದಂತೆ ಅರ್ಚಕರ ಬದುಕಿಗೆ ಭದ್ರತೆ ಒದಗಿಸಲಿ, ರಾಜ್ಯಮಟ್ಟದ ಸಂಘಟನೆ ಕೊಪ್ಪಳದಲ್ಲಿ ಉದ್ಘಾಟನೆಗೊಳ್ಳುತ್ತಿರುವುದು ಬಹಳ ವಿಶೇಷವಾಗಿದೆ ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಸಮಾಜದಲ್ಲಿ ಅರ್ಚಕರ ಪಾತ್ರ ಬಹಳ ದೊಡ್ಡದಾಗಿದೆ. ಸರಕಾರಕ್ಕೆ ತಮ್ಮ ಕಡೆಯಿಂದಲೂ ಅರ್ಚಕರ ಬೇಡಿಕೆಗೆ ಸ್ಪಂದಿಸುವಂತೆ ಮನವಿ ಸಲ್ಲಿಸಲಾಗುವುದು. ಪ್ರತಿ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿರುವ ಇವರ ಸೇವೆ ಅನನ್ಯ, ಮನಸ್ಸಿನ ನೆಮ್ಮದಿಗೆ ಪೂಜೆ ಪುನಸ್ಕಾರ ಸಂಸ್ಕಾರಗಳು ಅಗತ್ಯ. ಅವೆಲ್ಲವನ್ನೂ ಶಾಸ್ತ್ರೋಕ್ತವಾಗಿ ನಡೆಸಲು ಅರ್ಚಕರು ಬೇಕು. ಅವರಿಗೆ ಸರ್ಕಾರದ ಸೌಲಭ್ಯ ದೊರೆಯುವಂತೆ
ಶ್ರಮಿಸಲಾಗುವುದು ಎಂದರು.

ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ ಮಾತನಾಡಿ, ಸಂಘದ ಹೆಸರೇ ಹೇಳುವಂತೆ ಇದು ನಿಸ್ವಾರ್ಥ ಸೇವೆ ಮಾಡುವವರ ಸಂಘವಾಗಿದೆ. ಇನ್ನೊಬ್ಬರ ಒಳಿತಿಗಾಗಿ ಪೂಜೆ ನೆರವೇರಿಸಿ ಸೇವಾ ಮನೋಭಾವ ತೋರುತ್ತಿದ್ದಾರೆ. ಅವರ ಬೇಡಿಕೆಗೆ ಸರ್ಕಾರ ಸ್ಪಂದಿಸಲಿದೆ ಎಂದರು. ಸಂಘದ ರಾಜ್ಯಾಧ್ಯಕ್ಷ ಗಣೇಶ ಆರಾಧ್ಯ ಮಾತನಾಡಿ, ಅಪಾರ ಪಾಂಡಿತ್ಯವನ್ನು ಹೊಂದಿರುವ ಹಿಂದೂ ಸಮಾಜದ ಭಾಗವಾಗಿರುವ ಅರ್ಚಕರ ಸಂಘದ ಮೂಲಕ ಸರಕಾರ ಮಟ್ಟದಲ್ಲಿ ಸಿಗಬೇಕಾದ ಸೌಲಭ್ಯ ಮತ್ತು ಸಮಾಜದಲ್ಲಿ ಗೌರವ ಇವೆರಡನ್ನೂ ದೊರಕಿಸುವ ಉದ್ದೇಶದಿಂದ ಸಂವಿಧಾನಬದ್ಧವಾಗಿ ಸಂಘ, ಸ್ಥಾಪನೆಯಾಗಿದೆ ಎಂದರು.

Advertisement

ಮೈನಳ್ಳಿ ಬಿಕನಳ್ಳಿಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ನಿಡಶೇಸಿಯ ಶ್ರೀ ಗುರುಬಸವೇಶ್ವರ ಶ್ರೀಗಳು, ಶ್ರೀ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಕರಿಬಸವೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ವಕೀಲರಾದ ವಿ.ಎಂ. ಭೂಸನೂರಮಠ, ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ವಿರೇಶ ಮಹಾಂತಯ್ಯನಮಠ, ಪತ್ರೆಪ್ಪ ಪಲ್ಲೇದ, ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ಸದಸ್ಯರಾದ ಗುರುರಾಜ ಹಲಗೇರಿ, ಬಸಯ್ಯ ಹಿರೇಮಠ, ಅಶ್ವಿ‌ನಿ ಗದಗಿನಮಠ, ಮುತ್ತುರಾಜ ಕುಷ್ಟಗಿ, ಕೆ. ಚನ್ನಗೌಡರು, ರಾಜ್ಯ ಯುವ ಘಟಕ ಅಧ್ಯಕ್ಷ ಪ್ರಕಾಶ, ಶಿವಕುಮಾರ ಪಾವಲಿಶೇಟ್ಟರ್‌ ಇತರರು ಉಪಸ್ಥಿತರಿದ್ದರು.

ಪದಾಧಿಕಾರಿ: ಜಿಲ್ಲಾಧ್ಯಕ್ಷರಾಗಿ ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಕೊಪ್ಪಳ ತಾಲೂಕು ಅಧ್ಯಕ್ಷ ಮಹೇಶ್‌ ಮಠಪತಿ, ಉಪಾಧ್ಯಕ್ಷ ಶಿವನಯ್ಯ ಹಿರೇಮಠ, ಶಿವಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿ ಶಿವಯ್ಯ ಹಿರೇಮಠ, ಸಹಕಾರ್ಯದರ್ಶಿ ಶರಣಯ್ಯ ಹಿರೇಮಠ, ಸಂಚಾಲಕ ವಿರೂಪಾಕ್ಷಯ್ಯ ವಿರಕ್ತಮಠ, ರವಿಶಾಸ್ತ್ರಿ ನಾಗಬಸಯ್ಯ ಹಿರೇಮಠ, ಗವಿಸಿದ್ದಯ್ಯ ರವಿಯಯ್ಯ ಹಿರೇಮಠ, ಬಸಯ್ಯ ಹಿರೇಮಠ ಚಂದ್ರಶೇಖರಯ್ಯ ಹಿರೇಮಠ, ಜಗದೀಶ ಹಿರೇಮಠ ಇತರರು ಪದಗ್ರಹಣ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next