Advertisement

ಮಳೆಹಾನಿಗೆ ಸರ್ಕಾರ ಶೀಘ್ರ ಪರಿಹಾರ ನೀಡಲಿ; ಕೆಪಿಸಿಸಿ

05:30 PM Sep 15, 2022 | Team Udayavani |

ದೇವನಹಳ್ಳಿ: ತಾಲೂಕಾದ್ಯಂತ ಮಳೆ ಅವಾಂತರದಿಂದ ಸಾಕಷ್ಟು ಮನೆಗಳು ಬಿದ್ದು ಜನ ತೊಂದರೆ ಅನುಭವಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಗಳು ಜಲಾವೃತವಾಗಿ ಬೆಳೆ ನಷ್ಟವಾಗಿದ್ದು, ಸರ್ಕಾರ ಈ ಕೂಡಲೇ ಗಮನಹರಿಸಿ ಪರಿಹಾರ ನೀಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್‌ ತಿಳಿಸಿದರು.

Advertisement

ತಾಲೂಕಿನ ಕಸಬಾ ಹೋಬಳಿ ಅಣ್ಣೇಶ್ವರ ಗ್ರಾಮದಲ್ಲಿ ಮಳೆಯಿಂದ ಬಿದ್ದ ಮನೆ ಮಾಲೀಕರಿಗೆ ಪರಿಹಾರ ಧನ ವಿತರಿಸಿ ಮಾತನಾಡಿದ ಅವರು, ಅಣ್ಣೇಶ್ವರ ಗ್ರಾಪಂ ಶ್ರೀಮಂತ ಪಂಚಾಯಿತಿ ಎಂದು ಕರೆಯುತ್ತಾರೆ. ಆದರೆ ಇಂದಿಗೂ ಸರಿಯಾದ ರೀತಿಯಲ್ಲಿ ಚರಂಡಿಯಲ್ಲಿ ನೀರು ಹರಿಯುವುದಿಲ್ಲ. ರಾಜಕಾಲುವೆಗಳ ಒತ್ತುವರಿ ಅದರ ಜೊತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಳೆಯ ನೀರು ಗ್ರಾಮಗಳಿಗೆ ಬಿಡುತ್ತಿರುವುದರಿಂದ ಮಳೆಯ ನೀರು ಮನೆಗಳಿಗೆ ನುಗ್ಗುತ್ತಿರುವುದರಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದೇವೆ. ಇನ್ನಾದರೂ ಪರಿಹಾರ ಕಾರ್ಯ ಒದಗಿಸಲು ಸರ್ಕಾರ ಇತ್ತ ಗಮನಹರಿಸಬೇಕ ಎಂದು ಹೇಳಿದರು.

ಅಭಿವೃದ್ಧಿ ಕಾರ್ಯ ಆಗಿಲ್ಲ: ಎಚ್‌ಎಎಲ್‌ ವಿಮಾನ ನಿಲ್ದಾಣದ ಸುತ್ತಮುತ್ತ ಇರುವ ಗ್ರಾಮಗಳು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಆದರೆ, ಇನ್ನೂ ಅಣ್ಣೇಶ್ವರ ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಧಿಕಾರ ಗ್ರಾಮಗಳನ್ನು ದತ್ತು ತೆಗೆದು ಕೊಂಡು ಅಭಿವೃದ್ಧಿ ಪಡಿಸಬೇಕು. ಸ್ಥಳೀಯ ಜನಪ್ರತಿನಿಧಿಗಳು ಮನಸ್ಸು ಮಾಡಿದ್ದರೆ ಅಣ್ಣೇಶ್ವರ ರಾಜ್ಯದಲ್ಲಿಯೇ ಮಾದರಿ ಗ್ರಾಮವಾಗುತ್ತಿತ್ತು ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಎ.ಚಂದ್ರಶೇಖರ್‌ ಮಾತನಾಡಿ, ಅಣ್ಣೇಶ್ವರ ಗ್ರಾಮದಲ್ಲಿ ಮನೆ ಬಿದ್ದು ಜನ ಸಂಕಷ್ಟದಲ್ಲಿದ್ದು, ವಿಮಾನ ನಿಲ್ದಾಣದಿಂದ ಸಾಕಷ್ಟು ಮಳೆನೀರು ಮನೆಗಳಿಗೆ ನುಗ್ಗುತ್ತಿರುವುದರಿಂದ ಸಾಕಷ್ಟು ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಪರಿಹಾರ ಧನ ವಿತರಿಸುವಲ್ಲಿ ವಿಳಂಬ ಧೋರಣೆ ಮಾಡುತ್ತಿದ್ದಾರೆ. ಜನಸ್ಪಂದನ ಇತರೆ ಕಾರ್ಯಕ್ರಮ ಮಾಡಿ ಜನರನ್ನು ಮೆಚ್ಚಿಸಲು ಹೋಗುತ್ತಾರೆ. ಜನರ ಸಮಸ್ಯೆ ಈ ಸರ್ಕಾರಕ್ಕೆ ಅರ್ಥವಾಗುವುದಿಲ್ಲ ಎಂದರು. ದೇವನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಭುವನಹಳ್ಳಿ ಮುನಿರಾಜು, ಗ್ರಾಪಂ ಸದಸ್ಯರಾದ ಮಂಜುಳಾ ವೆಂಕಟೇಶ್‌, ಮುನಿರಾಜ್‌, ಮುನಿರಾಜಪ್ಪ, ಎಂಪಿಸಿಎಸ್‌ ಅಧ್ಯಕ್ಷ ವೆಂಕಟೇಶ್‌, ಉಪಾಧ್ಯಕ್ಷ ಆರ್‌. ವೆಂಕಟೇಶ್‌, ಅನಿಲ್‌, ಚೇತನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next