Advertisement

ಇನ್ನಾದರೂ ರೈತರ ಕೈಗೆ ಕ್ಷೀರಭಾಗ್ಯ ಹಣ ಸೇರಲಿ

11:09 PM Jun 08, 2023 | Team Udayavani |

ಕಳೆದ ಏಳು ತಿಂಗಳುಗಳಿಂದ ರೈತರಿಗೆ ಕ್ಷೀರಭಾಗ್ಯ ಹಣ ಸೇರಿಲ್ಲ ಎಂಬುದು ನೋವಿನ ಸಂಗತಿ. ರಾಜ್ಯದ ಸುಮಾರು 9 ಲಕ್ಷ ಮಂದಿ ರೈತರಿಗೆ ಈ ಹಣ ಸೇರಬೇಕಾಗಿದ್ದು ಸರಕಾರದ ಬಳಿ ಬಾಕಿ ರೂಪದಲ್ಲಿಯೇ 871 ಕೋಟಿ ರೂ.ಗಳಿವೆ. ಸದ್ಯ ರಾಜ್ಯದಲ್ಲಿ ಇನ್ನೂ ಮುಂಗಾರುಆರಂಭವಾಗಿಲ್ಲ. ಗುರುವಾರವಷ್ಟೇ ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿದ್ದು, ಕರ್ನಾಟಕಕ್ಕೆ ಇನ್ನು ಎರಡರಿಂದ ಮೂರು ದಿನಗಳಲ್ಲಿ ಆಗಮನವಾಗಬಹುದು. ಇದರ ಮಧ್ಯೆ ರೋಹಿಣಿ ಮಳೆಯಾಗದೇಬಹುತೇಕ ಕಡೆಗಳಲ್ಲಿ ಬಿತ್ತನೆಯಾಗಿದ್ದ ಬೆಳೆ ಒಣಗುವ ಹಂತಕ್ಕೆ ಬಂದಿದೆ. ಸಾಮಾನ್ಯವಾಗಿ ರೈತರು, ಕೃಷಿ ಜತೆಗೆ ಪೂರಕವಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಮುಂಗಾರು ವೇಳೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಸೇರಿದಂತೆ ಹಲವಾರು ಖರ್ಚು ವೆಚ್ಚಗಳಿಗೆ ಹೈನುಗಾರಿಕೆಯಿಂದ ಬರುವ ಹಣವೇ ಆದಾಯವಾಗಿರುತ್ತದೆ. ಆದರೆ ಏಳು ತಿಂಗಳ ಹಣವನ್ನು ಬಾಕಿ ಉಳಿಸಿಕೊಂಡಿರುವುದು ನ್ಯಾಯವಲ್ಲ ಎಂಬುದು ವೇದ್ಯವಾಗುತ್ತದೆ.

Advertisement

ರಾಜ್ಯದಲ್ಲಿ ಒಟ್ಟು 14 ಹಾಲು ಒಕ್ಕೂಟಗಳಿದ್ದು, ಇದರಲ್ಲಿ 15 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಈ ಸಂಘಗಳಲ್ಲಿ 24 ಲಕ್ಷ ಮಂದಿ ನೋಂದಾಯಿತ ಹಾಲು ಉತ್ಪಾದಕರಿದ್ದಾರೆ. ಇವರಲ್ಲಿ ನಿತ್ಯ 9 ಲಕ್ಷ ಮಂದಿ ರೈತರು ಹಾಲು ಸರಬರಾಜು ಮಾಡುತ್ತಿದ್ದಾರೆ. ರಾಜ್ಯ ಸರಕಾರವು ಹೈನುಗಾರಿಕೆ ನಡೆಸುವ ರೈತರಿಗೆ ಅನುಕೂಲವಾಗಲಿ ಎಂಬ ಕಾರಣದಿಂದಾಗಿ ಕ್ಷೀರಧಾರೆ ಹೆಸರಿನಲ್ಲಿ ಪ್ರತಿಯೊಬ್ಬ ರೈತರಿಗೆಲೀಟರ್‌ಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿದೆ.ಆದರೆ ಕಳೆದ ನವೆಂಬರ್‌ನಿಂದ ರಾಜ್ಯ ಸರಕಾರ ಹೈನುಗಾರಿಕೆ ನಡೆಸುತ್ತಿರುವ ರೈತರಿಗೆ ಇನ್ನೂ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ.

ಈಗಾಗಲೇ ಹೇಳಿರುವಂತೆ ಇದರ ಬಾಕಿಯೇ 871 ಕೋಟಿ ರೂ.ಗಳಿವೆ. 2022ರ ನವೆಂಬರ್‌ನಲ್ಲಿ ಅಕ್ಟೋಬರ್‌ಗಿಂತ ಹಿಂದಿನ ಮೂರು ತಿಂಗಳ ಪ್ರೋತ್ಸಾಹ ಧನ ಬಿಡುಗಡೆ ಮಾಡಿತ್ತು. ಇನ್ನು ರಾಜ್ಯದ ಎಲ್ಲ ಒಕ್ಕೂಟಗಳಲ್ಲಿಯೂ ಹಾಲಿಗೆ ಪ್ರತ್ಯೇಕ ದರವಿದೆ. ರೈತರ ಹಾಲು ಉತ್ಪಾದನೆಯೂ ಪ್ರಸ್ತುತದಲ್ಲಿ ಕಷ್ಟಕರವಾಗಿದೆ. ಸ್ವಂತ ಮೇವಿನ ವ್ಯವಸ್ಥೆ ಇದ್ದಲ್ಲಿ ಪ್ರತೀ ಲೀ.ಗೆ 22ರಿಂದ 24 ರೂ. ವೆಚ್ಚವಾಗುತ್ತದೆ. ಮೇವು ಖರೀದಿಸಿದರೆ ಇದು 30 ರೂ. ದಾಟುತ್ತದೆ. ಆದರೆ ಒಕ್ಕೂಟಗಳು ಕೊಡುವ ಹಣ ಪ್ರತೀ ಲೀ.ಗೆ 30ರಿಂದ 32.75 ರೂ. ಇದರಿಂದಾಗಿಯೇ ರಾಜ್ಯ ಸರಕಾರ ರೈತರಿಗೆ ಅನುಕೂಲವಾಗಲಿ ಎಂಬ ಕಾರಣದಿಂದಾಗಿ ಕ್ಷೀರಧಾರೆ ಹೆಸರಿನಲ್ಲಿ ಪ್ರೋತ್ಸಾಹ ಧನ ನೀಡುತ್ತಿದೆ.

ಅಂದ ಹಾಗೆ ಈ ಯೋಜನೆ ತೀರಾ ಹೊಸದೇನಲ್ಲ. 2008ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶುರು ಮಾಡಿದ್ದ ಯೋಜನೆ ಇದು. ಆಗ ಲೀ.ಗೆ 2 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಮುಂದೆ 2013ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ 4 ರೂ.ಗೆ ಏರಿಕೆ ಮಾಡಿದರು. 2016ರಲ್ಲಿ ಮತ್ತೆ 1 ರೂ. ಹೆಚ್ಚಳ ಮಾಡಿ 5ರೂ.ಗಳಿಗೆ ಏರಿಕೆ ಮಾಡಲಾಯಿತು. ಮೊದಲು ಮೂರರಿಂದ ನಾಲ್ಕುತಿಂಗಳಿಗೆ ಒಮ್ಮೆ ಹಣ ಬಿಡುಗಡೆಯಾಗುತ್ತಿತ್ತು. ಈಗ ಏಳುತಿಂಗಳುಗಳಾದರೂ ಬಂದಿಲ್ಲ.ಸದ್ಯ ಸಿದ್ದರಾಮಯ್ಯ  ನೇತೃತ್ವದಲ್ಲಿ ಹೊಸ ಸರಕಾರ ಬಂದಿದ್ದು, ಈಗಲಾದರೂ ಪ್ರೋತ್ಸಾಹ ಧನದ ಬಗ್ಗೆ ಕಣ್ಣು ಹಾಯಿಸಬೇಕಾಗಿದೆ. ಈ ಮೂಲಕ ರೈತರ ನೋವು ನಿವಾರಿಸುವ ಜವಾಬ್ದಾರಿ ಸರಕಾರದ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next