Advertisement

ಹಬ್ಬಗಳ ಸಂಭ್ರಮದಲ್ಲಿ ಕೋವಿಡ್ ನಿಯಮ ಪಾಲನೆಯಾಗಲಿ

12:02 AM Aug 13, 2022 | Team Udayavani |

ಸ್ವಾತಂತ್ರ್ಯೋತ್ಸವದಿಂದ ಹಿಡಿದು, ಆಗಸ್ಟ್‌ ತಿಂಗಳಿನಾದ್ಯಂತ ಸರಣಿ ಹಬ್ಬಗಳು ಬರುತ್ತಿವೆ. ಆ. 13ರಿಂದಲೇ ಮೂರು ದಿನಗಳ ಕಾಲ ಎಲ್ಲೆಡೆ ಸ್ವಾತಂತ್ರ್ಯೋತ್ಸವ ಸಮಾರಂಭ ನಡೆಯಲಿದೆ. ಈ ಸಂಭ್ರಮದ ನಡುವೆಯೇ ದೇಶಾದ್ಯಂತ ಕೊರೊನಾ ಸೋಂಕುಗಳು ಹೆಚ್ಚಳವಾಗು ತ್ತಿರುವುದು ಮಾತ್ರ ಆತಂಕಕ್ಕೆ ಕಾರಣವಾಗಿದೆ.

Advertisement

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಪ್ರತಿದಿನವೂ ಒಂದು ಸಾವಿರದಿಂದ ಎರಡು ಸಾವಿರದ ಆಸುಪಾಸಿಗೆ ಸೋಂಕುಗಳು ಕಂಡುಬರುತ್ತಿವೆ. ಅಂದರೆ ಪಾಸಿಟಿವಿಟಿ ದರ ಶೇ.7ರ ಸುಮಾರಿನಲ್ಲಿದೆ. ಶುಕ್ರವಾರವೇ ಶೇ.6.63ರಷ್ಟು ಪಾಸಿಟಿವಿಟಿ ದರ ಕಂಡು ಬಂದಿದೆ. ಜತೆಗೆ, 2,032 ಮಂದಿಗೆ ಸೋಂಕು ತಗಲಿದ್ದು, ಬೆಂಗಳೂರಿನಲ್ಲೇ 1,202 ಮಂದಿಗೆ ಸೋಂಕು ದೃಢಪಟ್ಟಿದೆ. 5 ಮಂದಿ ಸಾವನ್ನಪ್ಪಿದ್ದಾರೆ ಕೂಡ. ಹೀಗಾಗಿ ಎಚ್ಚರಿಕೆಯಿಂದ ಇರಬೇಕಾದದ್ದು ಅನಿವಾರ್ಯವಾಗಿದೆ.

ಇದು ಕೇವಲ ರಾಜ್ಯದ ಕಥೆಯಲ್ಲ. ದೇಶದಲ್ಲಿಯೂ ಪ್ರತಿದಿನ 20 ಸಾವಿರದ ಆಸುಪಾಸಿನಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಶುಕ್ರವಾರ 16,561 ಪ್ರಕರಣ ಪತ್ತೆಯಾಗಿವೆ. 49 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಕಳೆದ ವರ್ಷದ ಇದೇ ಸುಮಾರಿಗೆ ನೋಡುವುದಾದರೆ ಸಾವಿನ ಸಂಖ್ಯೆ ತೀರಾ ಕಡಿಮೆ ಇದೆ ಎಂದೇ ಹೇಳಬಹುದು.
ಕೊರೊನಾ ಎರಡನೇ ಅಲೆಗೆ ಹೋಲಿಕೆ ಮಾಡಿದರೆ ಈ ಪ್ರಕರಣಗಳು ತೀರಾ ಕಡಿಮೆ ಎಂದೇ ಹೇಳಬಹುದು. ಆದರೆ ಎಚ್ಚರ ತಪ್ಪಿದರೆ ಮಾತ್ರ ಕೇಸು ಹೆಚ್ಚಳವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದೇ ತಜ್ಞರು ಹೇಳುತ್ತಾರೆ.

ಈಗಾಗಲೇ ಜನ ಕೊರೊನಾ ದೂರ ವಾಗಿದೆ ಎಂಬ ಲೆಕ್ಕಾಚಾರಕ್ಕೆ ಬಂದಾಗಿದೆ. ಹೀಗಾಗಿ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಶುಚಿತ್ವ ಕಾಪಾಡಿಕೊಳ್ಳುವುದು ಜನರಿಂದ ಮರೆಯಾಗಿದೆ. ಇದರ ನಡುವೆಯೇ, ಇತ್ತೀಚಿನ ದಿನಗಳಲ್ಲಿ ಒಂದಷ್ಟು ವಾತಾವರಣಕ್ಕೆ ಹೊಂದಿಕೊಂಡಂಥ ರೋಗಗಳಾದ ಜ್ವರ, ತಲೆನೋವು, ಶೀತ, ಕೆಮ್ಮು ಕೂಡ ಕಾಣಿಸಿಕೊಳ್ಳುತ್ತಿದೆ. ಈ ಲಕ್ಷಣಗಳು ಕೊರೊನಾವೇ ಅಥವಾ ಬೇರಾವ ಜ್ವರವೇ ಎಂಬ ದ್ವಂದ್ವದಲ್ಲಿಯೂ ಆಸ್ಪತ್ರೆಗಳು ಮತ್ತು ಜನರಿದ್ದಾರೆ.

ಏನೇ ಆದರೂ ಈ ರೋಗ ಲಕ್ಷಣಗಳ ಸಂಬಂಧ ಯಾರೂ ನಿರ್ಲಕ್ಷ್ಯ ತೋರಬಾರದು. ಇಂಥ ರೋಗ ಲಕ್ಷಣಗಳು ಕಂಡ ಬಳಿಕ ವೈದ್ಯರ ಸಲಹೆ ಮೇರೆಗೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇನ್ನು ಸ್ವಾತಂತ್ರ್ಯೋತ್ಸವದ ಮುನ್ನೆಚ್ಚರಿಕೆಯಾಗಿ ಕೇಂದ್ರ ಸರಕಾರ ಶುಕ್ರವಾರ ಕೆಲವೊಂದು ಸೂಚನೆಗಳನ್ನೂ ನೀಡಿದೆ.

Advertisement

ಅಂದರೆ, ಕಡ್ಡಾಯ ವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಹೆಚ್ಚು ಜನರನ್ನು ಸೇರಿಸದೇ ಸ್ವಾತಂತ್ರ್ಯೋತ್ಸವ ನಡೆಸುವುದು ಇದರಲ್ಲಿ ಸೇರಿದೆ. ಈ ನಿಯಮಗಳನ್ನು ಪಾಲನೆ ಮಾಡಿಕೊಂಡು ಸ್ವಾತಂತ್ರ್ಯೋತ್ಸವ ಆಚರಿಸಿದರೆ, ಕೊರೊನಾವನ್ನು ನಿಯಂತ್ರಿಸಬಹುದು. ಇಲ್ಲದಿದ್ದರೆ ಕಷ್ಟಕರ ಸನ್ನಿವೇಶ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.

ಈಗಾಗಲೇ ದಿಲ್ಲಿ ಸರಕಾರ ಮಾಸ್ಕ್ ಧಾರಣೆ ಸಂಬಂಧ ದಂಡ ವಿಧಿಸುವ ಕ್ರಮಕ್ಕೆ ಮುಂದಾಗಿದೆ. ಕರ್ನಾಟಕದಲ್ಲೂ ಮಾರುಕಟ್ಟೆ, ಮಾಲ್‌ಗ‌ಳು ಸೇರಿದಂತೆ ಜನರು ಸೇರುವಂಥ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ.

ಸದ್ಯ ದಂಡವಿಲ್ಲ ಎಂದಾದರೂ, ಇದೇ ಕಾರಣಕ್ಕಾಗಿ ಮಾಸ್ಕ್ ಇಲ್ಲದೇ ಓಡಾಟ ನಡೆಸುವುದು ತರವಲ್ಲ. ಈ ವಿಚಾರವನ್ನು ಮನದಲ್ಲಿ ಇರಿಸಿಕೊಂಡು ಎಲ್ಲರೂ ನಿಯಮ ಪಾಲನೆ ಮಾಡಬೇಕು. ಇದೆಲ್ಲವೂ ಜನರ ಕೈಯಲ್ಲಿಯೇ ಇದೆ ಎಂಬುದನ್ನು ಮರೆಯಬಾರದು.

Advertisement

Udayavani is now on Telegram. Click here to join our channel and stay updated with the latest news.

Next