Advertisement

ಗವಿಮಠ ಬಡ ಮಕ್ಕಳಿಗೆ ಆಶ್ರಯ ತಾಣವಾಗಲಿ

02:22 PM Jun 24, 2022 | Team Udayavani |

ಕೊಪ್ಪಳ: ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಅದೇ ನೀನು ಮಾಡುವ ಪೂಜೆ ಎಂದು ನನ್ನ ಗುರುಗಳು ನನಗೆ ಹೇಳಿದ್ದಾರೆ. ಅದರಂತೆ ಗವಿಮಠವು ಬಡ ಮಕ್ಕಳಿಗೆ ಆಶ್ರಯ ತಾಣವಾಗಲಿ ಎಂದು ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮಿಗಳು ಭಾವನಾತ್ಮಕವಾಗಿ ಹೇಳಿದರು.

Advertisement

ನಗರದ ಗವಿಮಠದ ಆವರಣದಲ್ಲಿ ಲಿಂ| ಮರಿಶಾಂತವೀರ ಮಹಾಶಿವಯೋಗಿಗಳ ಪುಣ್ಯಾರಾಧನೆ ಪ್ರಯುಕ್ತ 5000 ವಿದ್ಯಾರ್ಥಿಗಳ ವಸತಿ ನಿಲಯದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ಗುರುಗಳ ಗುರುಗಳಾದ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ ಪುಣ್ಯದಿನವಿಂದು. ಅವರು ಕಾಶಿಯಲ್ಲಿ 16 ವರ್ಷ ಆಯುರ್ವೇದ, ಸಂಸ್ಕೃತ, ಯೋಗ ಎಲ್ಲವನ್ನು ಬಲ್ಲಿದರಾಗಿದ್ದರು. ಅವರು 16 ವರ್ಷ ಅಭ್ಯಾಸ ಮಾಡಿ ಕೊಪ್ಪಳಕ್ಕೆ ಬಂದ ಮೇಲೆ ಇಲ್ಲಿ ಶಾಲೆ-ಕಾಲೇಜು ಏನೂ ಇರಲಿಲ್ಲ. ಆಗ ಶ್ರೀಗಳಿಗೆ ನಾನೊಬ್ಬ 16 ವರ್ಷ ಓದಿ ಪಂಡಿತನಾದರೆ ಸಾಲದು, ನಾನು ಯಾವ ಸ್ಥಳದಲ್ಲಿ ಇರುವೆ. ಆ ಮಕ್ಕಳಿಗೆ ವಿದ್ಯೆ ಕಲಿಸಬೇಕೆನ್ನುವುದು ಸಂಕಲ್ಪವಾಗಿತ್ತು. ಆಗ ಅವರು ಹಳ್ಳಿ ಹಳ್ಳಿಗೂ ಸುತ್ತಾಡಿ, 2, 3 ರೂಪಾಯಿಗೆ 2-3 ದಿನ ಹಳ್ಳಿಗೆ ಹೋಗಿ ಭಿಕ್ಷೆ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಮಕ್ಕಳ ಬಗೆಗಿನ ಪ್ರೇಮ, ಪ್ರೀತಿ ಎಷ್ಟಿತ್ತು ಎನ್ನುವುದು ಗೊತ್ತಾಗುತ್ತದೆ ಎಂದು ಗುರುಗಳ ಸೇವೆಯನ್ನು ಸ್ಮರಿಸಿದರು.

ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ: ನಾವು ಬಡತನದಿಂದ ಬಂದಿದ್ದೇವೆ. ಓದಲು ತುಂಬಾ ಕಷ್ಟಪಟ್ಟಿದ್ದೇವೆ. ಆದರೆ ಓದಲು ಆಗಲಿಲ್ಲ. ಇಲ್ಲಿನ ಶ್ರೀಗಳು ನನಗೆ ಓದಲು ಸ್ಥಳ ಕೊಟ್ಟು, ಅನ್ನ ಕೊಟ್ಟು, ಪುಸ್ತಕ ಕೊಟ್ಟು ನನ್ನ ಓದಿಸಿದರು. ಅದರಂತೆ ನಾಡಿನ ಸಾವಿರಾರು ಬಡ ಮಕ್ಕಳು ವಿದ್ಯೆ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳು ವಿದ್ಯೆಯಿಲ್ಲದೇ ಉಳಿಯಬಾರದು. ಆ ಗವಿಸಿದ್ದೇಶ್ವರ ನನ್ನ ಜೋಳಿಗೆಯಲ್ಲಿ ಎಷ್ಟು ಶಕ್ತಿ ಕೊಟ್ಟಿದ್ದಾನೋ ಅಷ್ಟು ಸಾಧ್ಯವಾದಷ್ಟು ಮಕ್ಕಳನ್ನು ಓದಿಸುವ ಕೆಲಸ ಮಾಡಬೇಕೆಂದು ಹೇಳಿದ್ದಾರೆ ಎಂದರು.

ಸಮಾರಂಭಕ್ಕೆ ಅಧಿಕಾರಿ ವರ್ಗ, ಹಲವು ಜನಪ್ರತಿನಿಧಿಗಳು, ಹಿರಿಯರು ಆಗಮಿಸಿದ್ದಾರೆ. ಎಲ್ಲರ ಸಹಕಾರ ನನಗಿರಲಿ. ಆ ಗವಿಸಿದ್ದೇಶ್ವರರು ನನ್ನ ಜೋಳಿಗೆಗೆ ಶಕ್ತಿ ಕೊಡಲಿ ಎಂದರು.

Advertisement

ಸಚಿವ ಹಾಲಪ್ಪ ಆಚಾರ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಅಮರೇಗೌಡ ಬಯ್ನಾಪೂರ, ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ್‌, ಮಾಜಿ ಸಚಿವರಾದ ಬಸವರಾಜ ರಾಯರಡ್ಡಿ, ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಕೆ. ಶರಣಪ್ಪ, ಮುಖಂಡರಾದ ಸಿ.ವಿ. ಚಂದ್ರಶೇಖರ, ಅಮರೇಶ ಕರಡಿ, ರಾಜಶೇಖರ ಹಿಟ್ನಾಳ, ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ್‌, ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌, ಜಿಪಂ ಸಿಇಒ ಫೌಜಿಯಾ ತರನ್ನುಮ್‌, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಸೇರಿದಂತೆ ಹಲವರು ಇದ್ದರು.

ಗುರುಗಳ ಅವಧಿಯಲ್ಲಿ ಗವಿಮಠದ ಗದ್ದುಗೆಯಲ್ಲಿ ನಡೆದ ಘಟನೆ ಸ್ಮರಿಸುತ್ತ, ಯಾರೋ ಭಕ್ತರೊಬ್ಬರು ಮಠದ ಗದ್ದುಗೆ ಕಟ್ಟೆ ಮೇಲಿನ ಆರತಿ ತಟ್ಟೆಗೆ ಮೀಸಲು ತುಪ್ಪ ಹಾಕಿದ್ದರಂತೆ. ಆ ಭಕ್ತರು ಗುಡ್ಡಕ್ಕೆ ಮೇಲೆ ಹೋಗಿ ಬರುವುದರೊಳಗೆ ಮಠದ ಮಕ್ಕಳು ತುಪ್ಪ ತೆಗೆದುಕೊಂಡು ಊಟ ಮಾಡಿದ್ದರಂತೆ. ಆಗ ಭಕ್ತರು ಶ್ರೀಗಳಿಗೆ ನಿಮ್ಮ ಮಠದ ಮಕ್ಕಳು ತುಪ್ಪ ತಿಂದಿದ್ದಾರೆ. ಅವರಿಗೆ ಸಂಸ್ಕಾರ ಇಲ್ಲ. ಅಂತಹ ಮಕ್ಕಳನ್ನು ಮಠ ಬಿಡಿಸಿ ಎಂದರಂತೆ. ಆಗ ಶ್ರೀಗಳು ಭಕ್ತರಿಗೆ ಹೇಳಿದರಂತೆ, ನೀವು ಆರುವ ದೀಪಕ್ಕೆ ತುಪ್ಪ ಹಾಕಿರುವಿರಿ. ಮಕ್ಕಳು ಅದನ್ನು ಊಟ ಮಾಡಿದ್ದಾವಲ್ಲ, ಆರದ ದೀಪಕ್ಕೆ ನೀವು ತುಪ್ಪ ಹಾಕಿದ್ದೀರಿ. ಮಕ್ಕಳು ಆರದ ದೀಪಗಳಾಗಿವೆ ಎಂದಿದ್ದರಂತೆ. ಅಂತಹ ಪುಣ್ಯ ಪುರುಷನ ಪುಣ್ಯಸ್ಮರಣೋತ್ಸವ ನಡೆದಿದೆ ಎಂದು ಹಿಂದಿನ ಶ್ರೀಗಳ ಸೇವೆ ನೆನೆದು ಗದ್ಗದಿತರಾದರು.

Advertisement

Udayavani is now on Telegram. Click here to join our channel and stay updated with the latest news.

Next