Advertisement

ವಿಧಾನ ಪರಿಷತ್ತು: ಮತಾಂತರ ನಿಷೇಧ ಕಾಯ್ದೆ ವಿರುದ್ಧ ಮುಗಿಬಿದ್ದ ವಿಪಕ್ಷ

03:36 PM Sep 16, 2022 | Team Udayavani |

ವಿಧಾನ ಪರಿಷತ್ತು: ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ (ತಿದ್ದುಪಡಿ) ವಿಧೇಯಕ ಒಂದು ಸಮುದಾಯವನ್ನು ಗುರಿಯಾಗಿರಿಸಿ ಕೊಂಡು ಮಾಡಿರುವ ಮಸೂದೆಯಾಗಿದ್ದು ಇದು ಸಂವಿಧಾನ ವಿರೋಧಿಯಾಗಿದೆ. ರಾಜಕೀಯ ಲಾಭಕ್ಕಾಗಿ ಈ ತಿದ್ದುಪಡಿ ವಿಧೇಯಕ ತರಲಾಗಿದೆ ಎಂದು ವಿರೋಧ ಪಕ್ಷಗಳು ಸರ್ಕಾರದ ನಡೆಯ ವಿರುದ್ಧ ಆಕ್ರೋಶ ಹೊರಹಾಕಿದವು.

Advertisement

ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ (ತಿದ್ದುಪಡಿ)ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಕಾಂಗ್ರೆಸ್‌ ಸದಸ್ಯ ಸಲೀಂ ಅಹಮದ್‌, ನಾಗರಾಜ್‌ ಯಾದವ್‌, ಪಿ.ಆರ್‌. ರಮೇಶ್‌, ಪ್ರಕಾಶ ರಾಥೋಡ್‌, ಜೆಡಿಎಸ್‌ ಸದಸ್ಯರಾದ ಮರಿತಿಬ್ಬೇಗೌಡ, ಭೋಜೇಗೌಡ ಅವರು ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಮಸೂದೆಗೆ ತಿದ್ದುಪಡಿ ತರಲಾಗಿದೆ. ಸರ್ಕಾರದ ಈ ನಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡುವ ಕೆಲಸ ಎಂದು ಸಿಟ್ಟು ಹೊರಹಾಕಿದರು.

ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ಕ್ರಿಶ್ಚಿಯನ್‌ ಮಿಷನರಿಗಳು ಈ ದೇಶಕ್ಕೆ ದೊಡ್ಡ ಕೊಡುಗೆ ನೀಡಿವೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಆ ಸಮುದಾಯ ನೀಡುವ ಕೊಡುಗೆ ಸ್ಮರಣೀಯ. ಮದರ್‌ ತೆರೇಸಾ ಅವರ ಕುಷ್ಠರೋಗಿಗಳ ಸೇವೆಯನ್ನು ಭಾರತೀಯರು ಮರೆಯುವ ಹಾಗಿಲ್ಲ. ಕನ್ನಡ ಭಾಷೆಗೆ ಕಿಟಲ್‌ ಶಬ್ಧ ಕೋಶ ನೀಡಿದ್ದು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನಾವೆಲ್ಲರೂ ಮರೆಯಲಾಗದಂತಹ ಕೊಡುಗೆ ನೀಡಿದ್ದಾರೆ.

ಇಂತಹ ಸಮುದಾಯವನ್ನು ಟಾರ್ಗೆಟ್‌ ಮಾಡಿ ಮಸೂದೆಗೆ ತಿದ್ದುಪಡಿ ತರಲಾಗಿದೆ ಎಂದು ಕಿಡಿ ಕಾರಿದರು. ಶೂದ್ರರಿಗೆ, ದಲಿತರಿಗೆ ಶಿಕ್ಷಣ ನೀಡಿದ ಶ್ರೇಯಸ್ಸು ಆ ಸಮುದಾಯಕ್ಕೆ ಸಲ್ಲುತ್ತದೆ. ಕೆಳ ಸಮುದಾಯದವರಿಗೆ ಶಿಕ್ಷಣ ದೊರೆಯಬಾರದು ಎಂಬುವುದು ಈ ಕಾಯ್ದೆಯ ಹುನ್ನಾರವಾಗಿದೆ. ಈ ಕಾಯ್ದೆಯ ಮೂಲಕ ಸಣ್ಣ ಸಮುದಾಯಗಳಲ್ಲಿ ಭಯ ಸೃಷ್ಟಿಸುವ ಕೆಲಸವಾಗುತ್ತಿದೆ. ನೈತಿಕ ಪೋಲಿಸ್‌ ಗಿರಿಗೆ ಈ ಕಾನೂನು ಮತ್ತಷ್ಟು ಪುಷ್ಟಿ ನೀಡಲಿದ್ದು ಅಂಬೇಡ್ಕರ್‌ ಅವರ ಆಶಯಕ್ಕೆ ವಿರುದ್ಧ ವಾಗಿದೆ.

ಸ್ವಯಂ ಘೋಷಿತ ಧರ್ಮ ರಕ್ಷಕರಿಗೆ ಈ ಕಾನೂನು ಮತ್ತಷ್ಟು ಶಕ್ತಿ ನೀಡಲಿದೆ ಎಂದು ಟೀಕಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ, ಈ ಕಾಯ್ದೆ ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿದ್ದೇ ಆಗಿದೆ. ಆದರೆ ಹಳೆ ಆಯುಧಕ್ಕೆ ಹೊಸ ಪೂಜೆ ಮಾಡಲಾಗಿದೆ ಅಷ್ಟೇ ಎಂದು ಸಮಜಾಯಿಷಿ ನೀಡಿದರು. ಕಾಯ್ದೆ ಯಾವುದೇ ಧರ್ಮದ ವಿರುದ್ಧ ಇಲ್ಲ. ಧರ್ಮ ಸಂರಕ್ಷಣೆಯ ಪರವಾಗಿದೆ. ಲವ್‌ ಜಿಹಾದ್‌, ಆಮಿಷ. ಪ್ರಲೋಭನೆ, ವಂಚನೆ ಮಾಡಿ ಮತಾಂತರ ಮಾಡುವವರ ವಿರುದ್ಧವಿದೆ. ಇದಕ್ಕಾಗಿ ಯಾವ ಸಮುದಾಯ ಕೂಡ ಭಯಪಡುವ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡರು.

Advertisement

ಈ ಮಾತಿಗೆ ಆಕ್ಷೇಪಿಸಿದ ಹರಿಪ್ರಸಾದ್‌, ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಂವಿಧಾನಾತ್ಮಕ ಕಾಯ್ದೆ ಅನ್ನು ಇದೀಗ ಸಡಿಲಗೊಳಿಸಲಾಗಿದೆ. ಮಡೆಸ್ನಾನ ತಾಂತ್ರಿಕವಾಗಿ ಜೀವಂತವಾಗಿದೆ. ನಿಮ್ಮ ತಂತ್ರ-ಕುತಂತ್ರ ನಮಗೆ ಅರ್ಥ ವಾಗುವುದಿಲ್ಲ ಎಂದು ಛೇಡಿಸಿದರು. ಸಿದ್ದರಾಮಯ್ಯ ಆಡಳಿತ ಅವಧಿಯದ್ದು ಎಂದು ನಮ್ಮ ಮೇಲೆ ಗೂಬೆ ಕೂರಿಸಲು ಹೋಗಬೇಡಿ ಎಂದರು.

ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ, ಬಲವಂತದ ಮತಾಂತರ ರಾಜ್ಯದಲ್ಲಿ ಇಲ್ಲ. ಆತ್ಮ ವಂಚನೆ ಮಾಡಿಕೊಂಡು ಕಾಯ್ದೆ ವಿರೋಧಿಸುತ್ತಿಲ್ಲ ಇದು ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳುವ ಕೆಲಸವಾಗಿದೆ. ಮತಾಂತರವನ್ನು ಘೋಷಣೆ ಮಾಡಿದ ಆ ನಂತರ ಮತ್ತೂಂದು ಮತವನ್ನ ಸ್ವೀಕರಿಸಬೇಕು ಎಂದು ಮಸೂದೆಯಲ್ಲಿ ಹೇಳಲಾಗಿದೆ. ಇದು ಮೂಲಭೂತವಾದಿಗಳ ಮಸೂದೆಯಾಗಿದೆ. ಸರ್ಕಾರ ಅಂತರ್‌ ಜಾತಿಗಳ ವಿವಾಹವನ್ನು ಪ್ರೋತ್ಸಾಹಿಸುವ ಕೆಲಸ
ಮಾಡಬೇಕು, ಆದರೆ ಇಲ್ಲಿ ಕಾಯ್ದೆ ಮೂಲಕ ಅದನ್ನು ಕಸಿದುಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ತಿರುಗೇಟು ನೀಡಿದ ಸಚಿವ ಆರಗ ಜ್ಞಾನೇಂದ್ರ, ಕೆಲವರು ಎಸ್‌ಸಿ ಪ್ರಮಾಣ ಪತ್ರಗಳನ್ನು ನೀಡಿ ಸವಲತ್ತು ಪಡೆಯುತ್ತಿದ್ದಾರೆ. ಸರ್ಕಾರದ ಸವಲತ್ತುಗಳ ದುರುಪಯೋಗವಾಗುತ್ತಿದೆ, ಸ್ವಯಂ ಘೋಷಣೆ ಮಾಡಿಕೊಂಡು ಅವರು ಬೇರೆ ಧರ್ಮ ಸ್ವೀಕಾರ ಮಾಡಲಿ, ನಮ್ಮ ಅಭ್ಯಂತರವಿಲ್ಲ. ಇವರು ಪಡೆಯುವ ಸವಲತ್ತುಗಳು ಸೌಲಭ್ಯ ವಂಚಿತರಿಗೆ ಸಿಗಲಿದೆ ಇದು ಕೂಡ ಮಸೂದೆಯ ಆಶಯವಾಗಿದೆ ಎಂದರು.

ಆಡಳಿತ ಪಕ್ಷದ ಪರವಾಗಿ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ, ಭಾರತಿ ಶೆಟ್ಟಿ ಮತ್ತು ತೇಜಸ್ವಿನಿಗೌಡ ಕಾಯ್ದೆಯನ್ನು ಸಮರ್ಥಿಸಿಕೊಂಡರು. ದಲಿತ ಸಮುದಾಯವನ್ನು ಗುರಿಯಾಗಿ ಸಿಕೊಂಡು ಶಿಕ್ಷಣ, ಆರೋಗ್ಯದ ಜತೆಗೆ ಇನ್ನಿತರ ಸವಲತ್ತುಗಳನ್ನು ನೀಡುವ ಆಸೆ ತೋರಿಸಿ ಮತಾಂತರ ನಡೆಸಲಾಗುತ್ತಿದೆ. ಹಲವರು ಆ ಆಸೆಗಳಿಗೆ ಬಲಿಯಾಗಿದ್ದಾರೆ. ಅವರು ಮತ್ತೆ ಘರ್‌ ವಾಪಸಿ ಆಗಬೇಕು ಎಂದು ಚಲವಾದಿ ನಾರಾಯಣ ಸ್ವಾಮಿ ಮನವಿ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next