Advertisement

ರಿಕ್ಷಾ, ವಾಹನ ನಿಲುಗಡೆಗೆ ಕಾನೂನುಬದ್ಧ ಸ್ಥಳ

10:46 AM May 18, 2022 | Team Udayavani |

ಕುಂದಾಪುರ:ಪುರಸಭೆ ವ್ಯಾಪ್ತಿಯಲ್ಲಿ ರಿಕ್ಷಾಗಳ ನಿಲುಗಡೆಗೆ ಅಧಿಕೃತ ನಿಲ್ದಾಣ, ನಗರಕ್ಕೆ ಬರುವ ವಾಹನಗಳಿಗೆ ಅಧಿಕೃತ ಪಾರ್ಕಿಂಗ್‌ ವ್ಯವಸ್ಥೆ ಮಾಡುವ ಕುರಿತು ಮಂಗಳವಾರ ಅಧ್ಯಕ್ಷೆ ವೀಣಾ ಭಾಸ್ಕರ್‌ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ವಿಶೇಷ ಸಭೆಯಲ್ಲಿ ನಿರ್ಣಯಿಸಲಾಯಿತು.

Advertisement

35 ವರ್ಷಗಳ ಬೇಡಿಕೆ

ನಗರದಲ್ಲಿ 500ರಷ್ಟು ಅಟೋಗಳಿದ್ದು 25ಕಡೆ ತಂಗುದಾಣಗಳಿವೆ. ಆದರೆ ಅಧಿಕೃತ ತಂಗುದಾಣಗಳಿಲ್ಲದ ಕಾರಣ ಕಾನೂನಿನ ತೊಡಕು, ದಂಡ, ನ್ಯಾಯಾಲಯದ ಮೊರೆ ಹೋಗುವುದು ಎಂದಾಗುತ್ತಿದೆ. ಅಧಿಕೃತ ತಂಗುದಾಣ ಗುರುತಿಸಿ ಎಂದು ಆಟೋ ಚಾಲಕರು ಮನವಿ ನೀಡಿದ್ದರ ಪ್ರಸ್ತಾವ ಆಯಿತು. 2012ರವರೆಗೆ ತಾಲೂಕು ಪರ್ಮಿಟ್‌ ಎಂದು ನೀಡಲಾಗುತ್ತಿತ್ತು. ಬಳಿಕ ನಗರ ಹಾಗೂ ಗ್ರಾಮಾಂತರ ಎಂದಾಗಿದೆ. 2012 ಬಳಿಕ ಕುಂದಾಪುರದಲ್ಲಿ ನಗರ ಪರ್ಮಿಟ್‌ ನೀಡಿಲ್ಲ ಎಂದು ಆರ್‌ಟಿಒ ಆನಂದ ಗೌಡ ಹೇಳಿದರು. ಎಷ್ಟು ನೀಡಲಾಗಿದೆ ಎಂದು ಶ್ರೀಧರ್‌ ಶೇರೆಗಾರ್‌ ಕೇಳಿದಾಗ, ಮಾಹಿತಿ ಕಳುಹಿಸಿಕೊಡುವುದಾಗಿ ಹೇಳಿದರು. ನಿಲ್ದಾಣ ಜವಾಬ್ದಾರಿ ಯಾರದ್ದು ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್‌ ಜಿ.ಕೆ. ಕೇಳಿದಾಗ, ಸ್ಥಳೀಯಾಡಳಿತದ್ದು ಎಂದು ಹೇಳಿದರು. ಗಿರೀಶ್‌ 1988ರ ಸಾರಿಗೆ ಕಾಯ್ದೆ ಓದಿ ಹೇಳಿದಾಗ, ಸ್ಥಳೀಯಾಡಳಿತದ ಜತೆಗೂಡಿ ಸರಕಾರಿ ಜಾಗ ಗುರುತಿಸಿ ನೋಟಿಫಿಕೇಶನ್‌ ಮಾಡಬೇಕಾದ್ದು ಆರ್‌ ಟಿಎ ಕರ್ತವ್ಯ ಎಂದು ಒಪ್ಪಿಕೊಂಡರು.

ಎಲ್ಲರಿಗೂ ಅವಕಾಶ

ಪರ್ಮಿಟ್‌ ನೀಡುವಾಗ ನಿಲ್ದಾಣ ಕುರಿತು ನೋಡಬೇಕಿತ್ತು ಎಂದು ಪ್ರಕಾಶ್‌ ಖಾರ್ವಿ, ಸಾರಿಗೆ ಇಲಾಖೆಯ ವಿಂಗಡಿತ ಜವಾಬ್ದಾರಿ ಬೇರೆ ಬೇರೆ ಇಲಾಖೆಗಳಿಗೂ ಇದೆ ಎಂದು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹೇಳಿದರು. ನೋಟಿμಕೇಶನ್‌ ಆದ ಬಳಿಕ ತಂಗುದಾಣದ ಅಭಿವೃದ್ಧಿ ಪುರಸಭೆಗೆ ಸೇರಿದೆ ಎಂದರು. ಹಳೆ ಪರ್ಮಿಟ್‌ ಸೇರಿದಂತೆ ಈಗ ನಗರದಲ್ಲಿ ಇರುವ ಎಲ್ಲ ರಿಕ್ಷಾದವರಿಗೂ ಅವಕಾಶ ನೀಡಬೇಕು, ಯಾರಿಗೂ ಹೊಸದಾಗಿ ಗುರುತಿಸುವ ಜಾಗದಲ್ಲಿ ಅವಕಾಶ ನಿರಾಕರಿಸಬಾರದು ಎಂದು ಮೋಹನದಾಸ ಶೆಣೈ ಹೇಳಿದರು. ನೋಟಿಫಿಕೇಶನ್‌ ಆದ ಬಳಿಕವಷ್ಟೇ ಪೊಲೀಸ್‌ ಇಲಾಖೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಸ್ಥಳ ನೋಡಿಕೊಂಡು ವಾಹನ ಮಿತಿಯನ್ನು ಆರ್‌ಟಿಎ ನಿರ್ಧರಿಸುತ್ತದೆ ಎಂದು ಡಿವೈಎಸ್‌ಪಿ ಶ್ರೀಕಾಂತ್‌ ಕೆ. ಹೇಳಿದರು. ಜಾಗಗಳನ್ನು ಗುರುತಿಸಿ ಸಂಬಂಧಪಟ್ಟ ಇಲಾಖೆ ಮೂಲಕ ಆರ್‌ ಟಿಎಗೆ ಕಳುಹಿಸಿ ನೋಟಿಫಿಕೇಶನ್‌ ಮಾಡಿಸಲು ನಿರ್ಣಯಿಸಲಾಯಿತು. ತಕರಾರು ಇರುವ ಖಾಸಗಿ ಜಾಗಗಳ ಹೊರತಾಗಿ ತಕರಾರು ಇಲ್ಲದವುಗಳನ್ನು ಮೊದಲು ನೋಟಿಫಿಕೇಶನ್‌ಗೆ ತೀರ್ಮಾನಿಸಲಾಯಿತು. ನಗರ ವ್ಯಾಪ್ತಿ ಯಲ್ಲಿ ಸರಕಾರಿ ಜಾಗವೇ ಇಲ್ಲ, ಗುರುತಿಸಿ ದರೆ ಸರ್ವೇ ಮಾಡಲಾಗುವುದು ಎಂದು ತಹಶೀಲ್ದಾರ್‌ ಕಿರಣ್‌ ಗೌರಯ್ಯ ಹೇಳಿದರು.

Advertisement

ಪಾರ್ಕಿಂಗ್‌

ನಗರದೊಳಗೆ ವಾಹನ ದಟ್ಟಣೆ ಹೆಚ್ಚಿದ್ದು ಈಗಾಗಲೇ ಪೊಲೀಸರು ಜಾಗಗಳನ್ನು ಗುರುತಿಸಿ ಪುರಸಭೆಗೆ ನೀಡಿದ್ದು ಪುರಸಭೆಯಿಂದ ಮೇಲ್ನೋಟಕ್ಕೆ ಪರಿಶೀಲಿಸಲಾಗಿದೆ. ಅಲ್ಲಿ ಅಧಿಕೃತ ಪಾರ್ಕಿಂಗ್‌ಗೆ ನೋಟಿಫಿಕೇಶನ್‌ ಗೆ ಕಳುಹಿಸಲು ನಿರ್ಧರಿಸಲಾಯಿತು. ತಮ್ಮ ವಾರ್ಡ್‌ ನಲ್ಲೂ ಪಾರ್ಕಿಂಗ್‌ ಜಾಗ, ಚರಂಡಿ ಸರಿಪಡಿಸಬೇಕು ಎಂದು ಪ್ರಭಾವತಿ ಶೆಟ್ಟಿ ಹೇಳಿದರು.

ಬಸ್‌ ಅವಶೇಷ

ಟಿಟಿ ರಸ್ತೆಯಲ್ಲಿ ಖಾಸಗಿ ಬಸ್ಸೊಂದು ಅನೇಕ ವರ್ಷಗಳಿಂದ ಇದ್ದು ಅನೈತಿಕ ಚಟುವಟಿಕೆಗೂ ಆಗರವಾಗಿತ್ತು. ತೆರವಿಗೆ ಸಂಬಂಧಿಸಿದಂತೆ ಕ್ರಮ ಆಗಿಲ್ಲ ಎಂದು ಅಧ್ಯಕ್ಷೆ ಹೇಳಿದರು. ಪ್ರಕರಣ ನ್ಯಾಯಾಲಯದಲ್ಲಿ ಇದೆ ಎಂದು ಸಂಚಾರ ಠಾಣೆ ಎಸ್‌ಐ ಸುಧಾಪ್ರಭು ಹೇಳಿದರು. ಸ್ವತ್ತು ಯಾರ ವಶದಲ್ಲಿ ಇರಬೇಕೆಂದು ನ್ಯಾಯಾಲಯ ಹೇಳಿದೆಯೋ ಅವರು ಅದನ್ನು ಸರಕಾರಿ ಜಾಗದಲ್ಲಿ ಇಟ್ಟರೆ ದಂಡ ಪಾವತಿಸಬೇಕಾಗುತ್ತದೆ. ಪ್ರಕರಣ ಎದುರಿಸಬೇಕಾಗುತ್ತದೆ. ಜಿಲ್ಲಾಧಿಕಾರಿಗಳು ತೆರವಿಗೆ ಆದೇಶಿಸಿದ್ದರೂ ಸಂಚಾರ ಠಾಣೆ ಕಾರ್ಯೋ ನ್ಮುಖವಾಗಿಲ್ಲ ಎಂದು ಮುಖ್ಯಾಧಿಕಾರಿ ಹೇಳಿದರು.

ಒಮ್ಮತದ ನಿರ್ಣಯ

ಹೆದ್ದಾರಿ ಕುರಿತಾದ ಎಲ್ಲ ಬೇಡಿಕೆ ಈಡೇರಿದ ಬಳಿಕವೇ ಸರ್ವಿಸ್‌ ರಸ್ತೆ ಏಕಮುಖವಾಗಿಸುವ ಕುರಿತು ಜನಾಭಿಪ್ರಾಯ ಪಡೆದು ತೀರ್ಮಾನಿಸಲು ಸರ್ವಸದಸ್ಯರೂ ಒಮ್ಮತದಿಂದ ನಿರ್ಣಯಿಸಿದರು. ಸರ್ವಿಸ್‌ ರಸ್ತೆ ಏಕಮುಖವಾಗಿಸಿದರೆ ತೊಂದರೆ ಆಗುತ್ತದೆ ಎಂದಾಗ ಸರ್ವಿಸ್‌ ರಸ್ತೆ ಅಗಲ ಕಡಿಮೆ ಇದೆ ಎಂದು ಡಿವೈಎಸ್‌ಪಿ ಹೇಳಿದರು.

ಎಸಿ ವಿರುದ್ಧ ಅಸಮಾಧಾನ

ನವಯುಗ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಲು ಪುರಸಭೆಯಲ್ಲಿ ನಿರ್ಣಯಿಸಲಾಗಿತ್ತು. ಎಸಿಯವರಿಗೆ ದೂರು ನೀಡಿದ್ದರೂ ಪ್ರಕರಣ ದಾಖಲಿಸಲು ವಿಳಂಬ ಮಾಡಿದ್ದಾರೆ. ಮರು ದೂರು ನೀಡಿದಾಗಲೂ ಅವಸರ ಮಾಡಬೇಡಿ ಎಂದಿದ್ದಾರೆ. ಆದ್ದರಿಂದ ಮುಂದಿನ ಸಭೆಗೆ ಎಸಿಯವರನ್ನು ಕರೆಸಬೇಕು. ಡಿಸಿಯವರಿಗೆ ದೂರು ನೀಡಬೇಕು. ನವಯುಗದವರನ್ನು ಎಸಿಯವರು ರಕ್ಷಿಸುವ ಕಾರಣ ಗೊತ್ತಾಗಬೇಕು ಎಂದು ಸದಸ್ಯರು ಹೇಳಿದರು.

ಏಕಮುಖ ಸಂಚಾರ

ನಗರದ ಸರ್ವಿಸ್‌ ರಸ್ತೆಗಳನ್ನು ಏಕಮುಖ ಸಂಚಾರವನ್ನಾಗಿಸುವ ಕುರಿತು ಚರ್ಚೆ ನಡೆಯಿತು. ನವಯುಗ ಸಂಸ್ಥೆಯವರು ಹೆದ್ದಾರಿ ಕಾಮಗಾರಿ ವಿಳಂಬ ಮಾಡಿದ್ದಷ್ಟೇ ಅಲ್ಲ ಕೇಂದ್ರ ಸಚಿವರು, ಸಂಸದರು, ಶಾಸಕರು, ಜನಪ್ರತಿನಿಧಿಗಳು, ಪುರಸಭೆ, ಅಧಿಕಾರಿಗಳು ಯಾರದ್ದೇ ಮಾತಿಗೆ ಬೆಲೆ ನೀಡಿಲ್ಲ. ಬೀದಿದೀಪ ಅಳವಡಿಸಿಲ್ಲ, ಸಾವು ನೋವು ಸಂಭವಿಸುತ್ತಿದೆ. ಚರಂಡಿ ವ್ಯವಸ್ಥೆ ಸರಿಪಡಿಸದೇ ರಸ್ತೆಯೇ ಹೊಳೆಯಾಗುತ್ತದೆ. ಫ್ಲೈಓವರ್‌ ಮೇಲಿನ ನೀರು ಸರ್ವಿಸ್‌ ರಸ್ತೆಗೆ ಬೀಳುತ್ತದೆ. ಹೆದ್ದಾರಿಯಿಂದ ಸರ್ವಿಸ್‌ ರಸ್ತೆಗೆ ಇನ್ನೂ ಪ್ರವೇಶ ನೀಡಿಲ್ಲ. ಹೈಮಾಸ್ಟ್‌ ವಿದ್ಯುತ್‌ ಬಿಲ್‌ ಪುರಸಭೆಯಿಂದ ಪಾವತಿಸಲಾಗುತ್ತಿದೆ. ಶಾಸ್ತ್ರಿ ಸರ್ಕಲ್‌ ಬಳಿ ಕಣ್ಣೊರೆಸುವ ತಂತ್ರದಂತೆ ಡಾಮರು ತೇಪೆ ಹಾಕಲಾಗಿದೆ ಎಂದು ಉಪಾಧ್ಯಕ್ಷ ಸಂದೀಪ್‌ ಖಾರ್ವಿ, ಸದಸ್ಯರಾದ ಮೋಹನದಾಸ ಶೆಣೈ, ರತ್ನಾಕರ್‌, ಪ್ರಭಾಕರ್‌, ಪ್ರಕಾಶ್‌ ಖಾರ್ವಿ, ರಾಘವೇಂದ್ರ ಖಾರ್ವಿ, ಚಂದ್ರಶೇಖರ ಖಾರ್ವಿ, ಗಿರೀಶ್‌ ಜಿ.ಕೆ., ಶೇಖರ ಪೂಜಾರಿ, ರೋಹಿಣಿ ಉದಯ್‌, ಅಶ್ವಿ‌ನಿ ಪ್ರದೀಪ್‌, ಶ್ವೇತಾ, ಶ್ರೀಧರ್‌ ಶೇರೆಗಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next