ಮೂಡಲಗಿ: ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿದ್ದು, ವಿದ್ಯಾರ್ಜನೆಯ ಕಡೆ ಗಮನ ಹರಿಸಿ ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಮೂಡಲಗಿ ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಧೀಶ ಜೋತಿ ಪಾಟೀಲ ಹೇಳಿದರು.
ಶನಿವಾರಂದು ಪಟ್ಟಣದ ಶ್ರೀನಿವಾಸ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶ್ರೀನಿವಾಸ ಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ಮೂಡಲಗಿ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲರಿಗೂ ಸಮಾನ್ಯ ಕಾನೂನು ತಿಳುವಳಿಕೆ ಇರಬೇಕೆಂದು ಕಾನೂನು ಅರಿವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಕಾನೂನು ಅರಿತುಕೊಂಡರೆ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಲು ಸಹಾಯಕವಾಗುತ್ತದೆ ಎಂದರು.
ಬಾಲ್ಯ ವಿವಾಹ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ. ತಮ್ಮ ಅಕ್ಕ-ಪಕ್ಕದಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬಂದರೆ ತಮ್ಮ ಶಿಕ್ಷಕರ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದರು.
Related Articles
ಭಾರತ ಸಂವಿಧಾನವನ್ನು ಅಳವಡಿಸಿಕೊಂಡ ಸಂಧರ್ಭದ ಸ್ಮರಣೆಗಾಗಿ ನ.26 ರಂದು ಪ್ರತೀ ವರ್ಷ ಭಾರತದಲ್ಲಿ ಸಂವಿಧಾನ ದಿನ ಎಂದು ಆಚರಿಸಲಾಗುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಂಯೋಜಕಿ ನಂದಾ ಚುರಮರಿ ವಹಿಸಿದರು.
ವೇದಿಕೆಯಲ್ಲಿ ಶ್ರೀನಿವಾಸ ಶಾಲೆಯ ಕಾರ್ಯದರ್ಶಿ ವೆಂಕಟೇಶ ಪಾಟೀಲ, ನ್ಯಾಯವಾದಿ ಆರ್. ಆರ್. ಬಾಗೋಜಿ, ನ್ಯಾಯಾಲಯದ ಸಿಬ್ಬಂದಿ ಶಂಕರ ತುಕ್ಕನವರ ಇದ್ದರು.
ಸಮಾರಂಭದಲ್ಲಿ ಹನಮಂತ ಸೋರಗಾವಿ, ಶಿಕ್ಷಕರಾದ ವಿದ್ಯಾ ಹೆಗಡೆ, ಸಿದ್ರಾಮಯ್ಯಾ ಹಿರೇಮಠ, ಚಂದ್ರಶೇಖರ ಮ್ಯಾಗೇರಿ, ಮಾಲತೇಶ ಕುಂಬಾರ, ಸುಭಾಸ ಶಿಂಧೆ, ಲಕ್ಷ್ಮಣ ದೇವರಮನಿ, ಇರ್ಪಾಣ ಜರಮನಿ ಮತ್ತಿತರರು ಇದ್ದರು. ಶಿಪಾ ಎಸ್.ಬಿ ನಿರೂಪಿಸಿದರು, ರಂಜನಾ ಎಚ್.ಎನ್. ಸ್ವಾಗತಿಸಿದರು. ಕಾವ್ಯ ಮಡಿವಾಳ ವಂದಿಸಿದರು.