Advertisement

ಮುರಿದುದನ್ನು ಜೋಡಿಸಲು ಕಲಿಯಿರಿ

11:26 PM Dec 15, 2019 | Team Udayavani |

ಐದು ವರ್ಷದ ಮಗುವೊಂದು ಶಾಲೆಯಿಂದ ಬಂದು ಜೋರಾಗಿ ಅಳುತ್ತಿತ್ತು. ಕಾರಣ ಅಂದು ಬೆಳಗ್ಗೆ ಅದರ ಅಮ್ಮ ತೆಗೆಸಿಕೊಟ್ಟಿದ್ದ ಪೆನ್ಸಿಲ್‌ ಗೆಳೆಯರ ಗುಂಪಿನಲ್ಲಿ ಸೇರಿ ಎರಡು ಚೂರಾಗಿತ್ತು. ಅದಕ್ಕಿಂತ ಹೆಚ್ಚಾಗಿ ಇನ್ನು ಆ ಪೆನ್ಸಿಲ್‌ ಉಪಯೋಗಿಸಲು ಸಾಧ್ಯವಿಲ್ಲ ಎಂದು ಗೆಳೆಯರು ನಕ್ಕಾಗ ಬೇಸರದ ಜತೆಗೆ ಅಳುವೂ ಒತ್ತರಿಸಿ ಬಂದಿತ್ತು. ಅಮ್ಮ ಮಗುವಿನ ಅಳುವನ್ನು ನೋಡಿ ಸಮಾಧಾನ ಪಡಿಸಿ ಮುರಿದ ಪೆನ್ಸಿಲನ್ನು ತೆಗೆದುಕೊಂಡು ಅದನ್ನು ಚಂದ ಮೊನೆ ಮಾಡಿ ಎರಡು ಪೆನ್ಸಿಲ್‌ ಆಗಿ ಬದಲಾಯಿಸಿಕೊಟ್ಟರು. ಮಗುವಿನ ಅಳು ಒಂದೇ ಕ್ಷಣದಲ್ಲಿ ಮಾಯ.

Advertisement

ಮಗುವಿಗೆ ಮುರಿದುದು ಇನ್ನೆಂದೂ ಸರಿಯಾಗುವುದಿಲ್ಲವೆಂದು ಮಾತ್ರ ತಿಳಿದಿತ್ತು. ಆದರೆ ಅಮ್ಮನಿಗೆ ಮುರಿದ ಆ ವಸ್ತುವಿನ ಮರುಬಳಕೆ ತಿಳಿದಿತ್ತು. ಇಷ್ಟೇ ವ್ಯತ್ಯಾಸ. ಅದರಲ್ಲಿ ಮಾಯವಾದುದು ಮಗುವಿನ ದುಃಖ. ಇದು ಜೀವನ. ಪ್ರತಿಯೊಂದು ವಸ್ತು, ವ್ಯಕ್ತಿಗಳನ್ನು ಒಂದಲ್ಲ ಒಂದು ಘಟ್ಟದಲ್ಲಿ ಕಳೆದುಕೊಳ್ಳಬೇಕಾಗುತ್ತದೆ. ಆದರೆ ಕಳೆದುಕೊಂಡದ್ದು ಹೋಯಿತೆಂದು ದುಃಖ ಪಡದೆ ಮುಂದುವರಿಯುವುದೇ ಜೀವನ. ಜೀವನವೇ ಹಾಗೇ ಕೆಲವೊಂದು ನಾವಂದುಕೊಂಡಂತೆ ಎಲ್ಲವೂ ನಡೆಯುತ್ತಿದ್ದರೆ ಮತ್ತೂಂದು ಕ್ಷಣಕ್ಕೆ ಎಲ್ಲವೂ ಉಲ್ಟಾ ಪಲ್ಟಾ ಆಗಿ ಜೀವನ ಅಯೋಮಯವಾಗಿ ಬಿಡುತ್ತದೆ. ಆದರೆ ಸಮಯ ಅಲ್ಲೇ ನಿಲ್ಲುವುದಿಲ್ಲ, ನಾವಲ್ಲಿ ನಿಂತುಬಿಟ್ಟರೆ ಮತ್ತೆಂದೂ ಸಮಯದ ಜತೆ ಹೆಜ್ಜೆ ಹಾಕಲಾಗುವುದಿಲ್ಲ. ಅದರ ಬದಲಾಗಿ ಕಳೆದುಕೊಂಡದುದರ ಬಗ್ಗೆ ಚಿಂತಿಸದೆ ಮುಂದು ವರಿಯುತ್ತಲೇ ಇರಬೇಕು. ಅದು ನಿಜ ಅರ್ಥದ ಬದುಕು.

ಅಳುತ್ತಿದ್ದ ಮಗುವಿಗೆ ಅಮ್ಮ ಬೇರೊಂದು ಪೆನ್ಸಿಲ್‌ ತೆಗೆಸಿಕೊಡಬಹುದಿತ್ತು. ಮಗುವಿಗೆ ಖುಷಿಯೂ ಆಗುತ್ತಿತ್ತು. ಆದರೆ ಅಮ್ಮ ಆ ಪೆನ್ಸಿಲಿಗೆ ಮತ್ತೆ ಬೇರೊಂದು ರೂಪ ನೀಡಿದಳು. ಹಾಗೇ ನಾವಂದುಕೊಂಡಂತಯೇ ಎಲ್ಲ ಬಾರೀ ಜೀವನ ನಡೆಯುವುದಿಲ್ಲ. ಕೆಲವೊಂದು ಬಾರಿ ನಾವೇ ಅದಕ್ಕೊಂದು ಹೊಸ ರೂಪನೀಡಿ ಮುಂದುವರಿಯಬೇಕಾಗುತ್ತದೆ.

- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next