Advertisement
ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಹೊಗಳಿದ್ದು, ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಹೇಳಿದ್ದು ಒಂದೆಡೆಯಾದರೆ ಮತ್ತೂಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ಸಹಿತ ಹೇಳಿಕೆಗಳ ಮೂಲಕ ತಿರುಗೇಟು ನೀಡಿದ್ದು ವಿಶೇಷ.
Related Articles
Advertisement
ಇನ್ನು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂಬ ಪ್ರಧಾನಿ ನರೇಂದ್ರಮೋದಿ ಹೇಳಿಕೆಯಿಂದಲೂ ಆತಂಕಗೊಂಡ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮೂಲಕ ತಕ್ಷಣ ಪ್ರತಿಕ್ರಿಯೆ ರವಾನಿಸಿತು. ಮಲ್ಲಿಕಾರ್ಜುನ ಖರ್ಗೆ ಅವರೂ “ದಲಿತರ ಬಗ್ಗೆ ನಿಮಗೆಷ್ಟು ಪ್ರೀತಿಯಿದೆ? ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ನೀಡಲು ನೀವು ಸಿದ್ಧರಿಲ್ಲ. ಮತ್ಯಾಕೆ ಕಾಂಗ್ರೆಸ್ ಬಗ್ಗೆ ಮಾತನಾ ಡುತ್ತೀರಿ?’ ಎಂದು ತಿರುಗೇಟು ನೀಡಿ ಆ ಸಮುದಾಯ ಆಕ್ರೋಶ ಏಳದಂತೆಯೂ ಮಾಡಿದರು.
ರಾಜ್ಯದ ರಾಜಕೀಯ ಚಿತ್ರಣ ನಿರ್ಧರಿಸುವುದು ಪ್ರಮುಖವಾಗಿ ಒಕ್ಕಲಿಗ, ಲಿಂಗಾಯಿತ, ಮುಸ್ಲಿಂ, ದಲಿತ, ಕುರುಬ, ಈಡಿಗ ಸಮುದಾ ಯಗಳು ಎಂಬ ಹಿನ್ನೆಲೆಯಲ್ಲಿ ಆ ವರ್ಗದ ಮತಗಳನ್ನು ಸೆಳೆಯಲು ಮೂರೂ ಪಕ್ಷಗಳು ಇನ್ನಿಲ್ಲದ ಕಸರತ್ತು ಮಾಡುವ ಸಂದರ್ಭದಲ್ಲಿ ಒಂದು ಪಕ್ಷದ ಜತೆ ಇರುವ ಸಮುದಾಯವನ್ನು ಸೆಳೆಯಲು ನಾನಾ ರೀತಿಯ ತಂತ್ರಗಾರಿಕೆ ಉಪಯೋಗಿಸುತ್ತಿವೆ. ಆದರೆ, ಇದು ಜಾತಿ ಸಂಘರ್ಷಕ್ಕೆ ಕಾರಣವಾಗಬಾರದು. ಚುನಾವಣೆ ಸಲುವಾಗಿ ಯಾವುದೇ ಜಾತಿ ಹಾಗೂ ಸಮುದಾಯದ ನಡುವೆ ಬಿರುಕು ಸೃಷ್ಟಿಸುವ ಕೆಲಸವನ್ನೂ ಮಾಡಬಾರದು. ಈ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಎಚ್ಚರಿಕೆ ವಹಿಸಿಬೇಕು.
ಏಕೆಂದರೆ, ಕರ್ನಾಟಕ ಎಂದಿಗೂ ಸಾಮರಸ್ಯ, ಜಾತ್ಯತೀತ ನೆಲೆಗಟ್ಟಿನ ಚಿಂತನೆಯುಳ್ಳ ರಾಜ್ಯ. ಇಲ್ಲಿನ ಜನರು ಮಠ ಮಂದಿರಗಳ ಬಗ್ಗೆ ಅಪಾರ ಗೌರವ, ಪ್ರೀತಿ ಹೊಂದಿದ್ದಾರೆ. ಉಡುಪಿ, ಧರ್ಮಸ್ಥಳ, ಕಟೀಲು, ಕೊಲ್ಲೂರು, ಶೃಂಗೇರಿ, ಹೊರನಾಡು, ಮೈಸೂರು ಚಾಮುಂಡಿ, ನಂಜನಗೂಡು, ಮಲೆ ಮಹದೇಶ್ವರ, ನಿಮಿಷಾಂಬ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರು ಇದಕ್ಕೆ ಸಾಕ್ಷಿ ಎನ್ನಬಹುದು. ಇಲ್ಲಿಗೆ ಬರುವ ಭಕ್ತರಲ್ಲಿ ಯಾವುದೇ ಜಾತಿಗಳ ಗೆರೆ ಇರುವುದಿಲ್ಲ. ಹೀಗಾಗಿ, ರಾಜಕಾರಣಿಗಳು ಸಹ ಸಮಾಜದಲ್ಲಿ ಜಾತಿ ಸಂಘರ್ಷಕ್ಕೆ ಕಾರಣವಾಗುವ, ಸಾಮರಸ್ಯಕ್ಕೆ ಧಕ್ಕೆ ಬರುವಂತಹ ಹೇಳಿಕೆಗಳಿಂದ ದೂರ ಇದ್ದರೆ ಪ್ರಜಾಪ್ರಭುತ್ವಕ್ಕೂ ಒಳ್ಳೆಯದು, ಸಾಮಾಜಿಕ ಸಾಮರಸ್ಯಕ್ಕೂ ಒಳ್ಳೆಯದು.