Advertisement

ಮತದಾರರ ಮಾಹಿತಿ ಕಳವು: ಸಮಗ್ರ ತನಿಖೆ, ಮರು ಪರಿಷ್ಕರಣೆಗೆ; ಸಿದ್ದರಾಮಯ್ಯ-ಡಿಕೆಶಿ ಒತ್ತಾಯ

11:41 PM Nov 26, 2022 | Team Udayavani |

ಬೆಂಗಳೂರು: ಮತದಾರರ ಮಾಹಿತಿ ಕಳವು, ಚಿಲುಮೆ ಮಾದರಿ ಹಗರಣ ಇಡೀ ರಾಜ್ಯಾದ್ಯಂತ ನಡೆದಿದ್ದು ಲಕ್ಷಾಂತರ ಮತದಾರರ ಹೆಸರು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕಾಂಗ್ರೆಸ್‌ ಆಗ್ರಹಿಸಿದೆ.

Advertisement

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಬೆಂಗಳೂರಿನ ಮೂರು ಕ್ಷೇತ್ರಗಳಷ್ಟೇ ಅಲ್ಲದೆ, 28 ಕ್ಷೇತ್ರ ಜತೆಗೆ ರಾಜ್ಯಾದ್ಯಂತ ಮುಸ್ಲಿಂ, ದಲಿತ, ಹಿಂದುಳಿದ ವರ್ಗ ಸಮುದಾಯಗಳ ಮತ ಷಡ್ಯಂತ್ರ ರೂಪಿಸಿ ತೆಗೆದು ಹಾಕಲಾಗಿದೆ. ಹೀಗಾಗಿಯೇ ನಾವು ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆಗ್ರಹಿಸಿದ್ದೇವೆ ಎಂದು ಹೇಳಿದರು.

ಕೇಂದ್ರ ಚುನಾವಣಾ ಆಯೋಗದ ಕ್ರಮ ಸ್ವಾಗತಾರ್ಹ. ದೂರು ಕೊಟ್ಟಿದ್ದಕ್ಕೆ ನಮಗೆ ಪ್ರಥಮ ಹಂತದಲ್ಲಿ ನ್ಯಾಯ ಸಿಕ್ಕಿದೆ. ಆದರೆ, ಇದರ ವ್ಯಾಪ್ತಿ ಬೃಹತ್‌ ಪ್ರಮಾಣದ್ದಾಗಿದೆ. ಇದರ ಹಿಂದಿರುವ ಸಚಿವರು, ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಚಿಲುಮೆ ಸಂಸ್ಥೆಯ ಜತೆ ಸಂಬಂಧ ಹೊಂದಿದ್ದವರು, ಹಣ ವರ್ಗಾವಣೆ ಎಲ್ಲದರ ಬಗ್ಗೆ ವ್ಯಾಪಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಯಾವುದೇ ಮತವನ್ನು ಸೇರ್ಪಡೆ ಮಾಡುವಾಗ ಅಥವಾ ತೆಗೆಯುವಾಗ ಆಯಾ ವ್ಯಕ್ತಿಯ ಅರ್ಜಿ ಇರಬೇಕು. ಬಿಎಲ್‌ಒಗಳನ್ನು ಯಾರು ನೇಮಕ ಮಾಡಿದ್ದರು. ಈ ಬಿಎಲ್‌ಒಗಳನ್ನು ಕೇವಲ 3 ಕ್ಷೇತ್ರ ಚುನಾವಣಾಧಿಕಾರಿಗಳು ಮಾತ್ರ ಮಾಡಿಲ್ಲ. ಎಲ್ಲಾ 28 ಕ್ಷೇತ್ರಗಳ ಚುನಾವಣಾಧಿಕಾರಿಗಳೂ ಮಾಡಿದ್ದಾರೆ. ಸುಮಾರು 6-7 ಸಾವಿರ ಮಂದಿಗೆ ಈ ಬಿಎಲ್‌ಒ ಗುರುತಿನ ಚೀಟಿ ಕೊಟ್ಟಿದ್ದಾರೆ. ಇದರ ಮೂಲ ಕಿಂಗ್‌ ಪಿನ್‌ ಆಗಿ ಸರ್ಕಾರದ ಸಚಿವರು, ಶಾಸಕರಿಲ್ಲದೇ ಈ ಅಕ್ರಮ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಸೋಲುವ ಭೀತಿಯಿಂದಲೇ ಬಿಜೆಪಿ ಸರ್ಕಾರವು ಪಾಲಿಕೆ ಚುನಾವಣೆ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆಯನ್ನು ಮಾಡಿಲ್ಲ. ಮತದಾನ ಹಕ್ಕನ್ನು ಕಸಿಯುವ ಪ್ರಯತ್ನ ಮಾಡುವುದಾದರೆ ಇಂತಹ ಭ್ರಷ್ಟ, ದುಷ್ಟ ಸರ್ಕಾರವನ್ನು ಜನ ಕ್ಷಮಿಸಬಾರದು. ಚುನಾವಣಾ ಆಯೋಗ ಉನ್ನತ ಮಟ್ಟದ ತನಿಖೆ ಮಾಡಿ ಅಕ್ರಮದಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು.
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

Advertisement

ರಾಜ್ಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಮರು ಪರಿಶೀಲನೆ ನಡೆಸಬೇಕು. 7 ಎ ನಮೂನೆ ಇಲ್ಲದೆ ಹೆಸರು ತೆಗೆದುಹಾಕಲಾಗಿದೆ. ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ ತೆಗೆದು ಹಾಕಲಿ. ನಮ್ಮ ಅಭ್ಯಂತರವಿಲ್ಲ. ಆದರೆ, ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ಸಾವಿರಾರು ಹೆಸರು ತೆಗೆದುಹಾಕಿದ್ದು ಇದರ ಮರು ಪರಿಶೀಲನೆ ಮಾಡಬೇಕು.
– ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಮತದಾರರ ಮಾಹಿತಿ ಕಳುವು ಪ್ರಕರಣದಲ್ಲಿ ಸರ್ಕಾರ ಮುಕ್ತ ರೀತಿಯ ತನಿಖೆ ಮಾಡಿಸುತ್ತಿದೆ. ಯಾವುದೇ ಸಂಸ್ಥೆಯಾಗಲಿ, ಅಧಿಕಾರಿಗಳು ತಪ್ಪು ಮಾಡಿದ್ದರೆ ಅವುಗಳನ್ನು ಶಿಕ್ಷೆಗೆ ಒಳಪಡಿಸಲೆಂದೇ ಅವುಗಳನ್ನು ತನಿಖೆಗೆ ಆದೇಶ ಮಾಡಿರುವುದು. ಈಗಾಗಲೇ ಹಲವಾರು ಜನರ ವಿರುದ್ಧ ಕ್ರಮಕೈಗೊಂಡು ಬಂಧಿಸ‌ಲಾಗಿದೆ. ಚುನಾವಣಾ ಆಯೋಗ ಮುಖ್ಯವಾಗಿ ಡಿಲೀಟ್‌ ಆಗಿರುವ ಪ್ರಕರಣಗಳನ್ನು ಹಾಗೂ ಮತಪಟ್ಟಿಯನ್ನು ಮತ್ತೂಮ್ಮೆ ಪರಿಷ್ಕರಣೆ ಮಾಡಲು ತೀರ್ಮಾನಿಸಿದೆ. ಇದನ್ನು ಸ್ವಾಗತಿಸುತ್ತೇವೆ.
– ಬಸವರಾಜ ಬೊಮ್ಮಾಯಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next