Advertisement

ವಕೀಲರು ಬಡವರ ಕಣ್ಣೀರು ಒರೆಸಲಿ: ನ್ಯಾ|ಮಹೇಶ್ವರಿ

10:09 AM Feb 20, 2018 | |

ಕಲಬುರಗಿ: ವಕೀಲರು ನ್ಯಾಯಾಲಯದ ಬುನಾದಿಗಳಿದ್ದಂತೆ. ಅವರು ಯಾವಾಗಲೂ ಸಮಾಜದ ಏರಿಳಿತಗಳೊಂದಿಗೆ ಕಾರ್ಯನಿರ್ವಹಿಸುತ್ತಾರೆ. ಬಡವರ ಕಣ್ಣಿರು ಒರೆಸುವುದು ಪ್ರತಿಯೊಬ್ಬ ವಕೀಲರ ಜವಾಬ್ದಾರಿ ಎಂಬುದನ್ನು ತಿಳಿದು ಕಾರ್ಯ ನಿರ್ವಹಿಸಬೇಕು ಎಂದು ಕರ್ನಾಟಕ ಉತ್ಛ ನ್ಯಾಯಾಲಯದ ನೂತನ ಮುಖ್ಯ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ಹೇಳಿದರು.

Advertisement

ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯವಾದಿಗಳ ಸಂಘದಲ್ಲಿ ನ್ಯಾಯಾಧೀಶರನ್ನು ಉದ್ದೇಶಿಸಿ ಅವರು ಮಾತನಾಡಿದರು. ನಿಸ್ವಾರ್ಥ ಸೇವೆ ಸಲ್ಲಿಸುವ ವಕೀಲರು ನಮ್ಮಲ್ಲಿ ಇದ್ದಾರೆ. ಅವರಿಗೆ ನಾನು ಕೃತಜ್ಞನಾಗಿದ್ದಾನೆ. ಪ್ರಸ್ತುತ ಧ್ವನಿ ಇಲ್ಲದ ದಮನಿತರಿಗೆ ಸಹಾಯ ದೊರಕಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.

ನಾವೆಲ್ಲರೂ ಶಿಸ್ತಿನ ನಾಗರಿಕ ಸಮಾಜದಲ್ಲಿದ್ದೇವೆ. ಜನರು ನ್ಯಾಯಾಂಗದ ಮೇಲೆ ನಂಬಿಕೆ, ಆತ್ಮವಿಶ್ವಾಸ ಇಟ್ಟುಕೊಂಡಿದ್ದರಿಂದ ಅದಕ್ಕೆ ತಕ್ಕ ಹಾಗೇ ಕಾರ್ಯನಿರ್ವಹಿಸಬೇಕು. ವಿಭಾಗೀಯ ನ್ಯಾಯಾಲಯ ಹಾಗೂ ಉಪವಿಭಾಗದಲ್ಲಿ ಸಮಸ್ಯೆಗಳು ಇರುತ್ತವೆ. ವಕೀಲರು ಸಮಸ್ಯೆ ಬದಲು ಪರಿಹಾರ ಕಡೆ ಹೆಚ್ಚು ಗಮನ ಕೊಡಬೇಕು.
ವಕೀಲ ವೃತ್ತಿಯಲ್ಲಿದ್ದಾಗ ನನಗೂ ತೊಂದರೆಗಳಿದ್ದವು. ಆಗ ನಾನು ಸಹಪಾಠಿಗಳೊಂದಿಗೆ ಸಮಸ್ಯೆ ಹೇಳಿ ಪರಿಹಾರ ಕಂಡುಕೊಳ್ಳುತ್ತಿದ್ದೆ ಎಂದು ಹೇಳಿದರು.

ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಕಲಬುರಗಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಮಾತನಾಡಿ, ಶಿಸ್ತನ್ನು ನಾವೂ ಶಿಕ್ಷೆ ಎಂದು ಪರಿಗಣಿಸಬಾರದು. ಶಿಸ್ತು ಸ್ವಾತಂತ್ರದ ಸಂಪನ್ಮೂಲವಾಗಿದೆ. ಶಿಸ್ತಿನಿಂದ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದು ಎಂದು ಹೇಳಿದರು. 

ಇದಕ್ಕೂ ಮುನ್ನ ಕರ್ನಾಟಕ ಉತ್ಛ ನ್ಯಾಯಾಲಯ ಕಲಬುರಗಿಯಲ್ಲಿ ಮುಖ್ಯ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ಮಾತನಾಡಿ, ನಾವೂ ನಮ್ಮ ಸ್ವಂತದ ಬದ್ಧತೆಯೊಂದಿಗೆ ಸಾಂಸ್ಥಿಕ ಬದ್ಧತೆಗೆ ಹೆಚ್ಚಿನ ಮಹತ್ವ ನೀಡುವ ವ್ಯವಸ್ಥೆಯಲ್ಲಿದ್ದೇವೆ. ಅದಕ್ಕೆ ಸಾಂಸ್ಥಿಕ ಹಾಗೂ ಸ್ವಯಂ ಬದ್ಧತೆ ಎರಡು ಮುಖ್ಯವಾಗಿದೆ. ನ್ಯಾಯದೊಂದಿಗೆ ಯಾರೂ ಸ್ಪರ್ಧೆ ಮಾಡುವುದಿಲ್ಲ. ಆದರೆ ನ್ಯಾಯವಾದಿಗಳು ತಮ್ಮ ಕರ್ತವ್ಯ ಬಡವರ ಪರವಾಗಿ ಮಾಡಬೇಕು ಎಂದು ಹೇಳಿದರು.

Advertisement

ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್‌.ಕೆ.ಹಿರೇಮಠ ಮಾತನಾಡಿ, ಕರ್ನಾಟಕ ಉತ್ಛ ನ್ಯಾಯಾಲಯದ
ಕಲಬುರಗಿ ಸಂಚಾರಿ ಪೀಠ 2008ರಲ್ಲಿ ಸ್ಥಾಪನೆಯಾಯಿತು. 2013 ಆಗಸ್ಟ್‌ನಲ್ಲಿ ಕರ್ನಾಟಕ ಹೈಕೋರ್ಟ್‌ ಕಲಬುರಗಿಯಾಗಿ ಪರಿವರ್ತನೆಗೊಂಡಿತು. ಪೀಠ ಸ್ಥಾಪನೆಯಾದಾಗ ಕೋರ್ಟ್‌ನಲ್ಲಿ 25000 ಕೇಸ್‌ ಬಾಕಿ ಇದ್ದು, 5 ನ್ಯಾಯಾಲಯ ಪೀಠಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಸಧ್ಯ 23 ಸಾವಿರಕ್ಕಿಂತ ಅಧಿಕ ಪ್ರಕರಣ ಬಾಕಿ ಇದ್ದು, ಕೇವಲ 3 ಪೀಠ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಕರ್ನಾಟಕ ಉತ್ಛ ನ್ಯಾಯಾಲಯ ಕಲಬುರಗಿಯಲ್ಲಿ 62 ನ್ಯಾಯವಾದಿಗಳ ಮಂಜೂರಾತಿ ಹುದ್ದೆಗಳಿದ್ದು, 29 ನ್ಯಾಯವಾದಿಗಳು ಮಾತ್ರ ಇದ್ದಾರೆ. ತುರ್ತಾಗಿ ನ್ಯಾಯವಾದಿಗಳ ನೇಮಕ ಮಾಡಬೇಕು. 5ರಿಂದ 6 ಪೀಠ ಪ್ರಾರಂಭಿಸಿ ಬಾಕಿ ಇರುವ ಪ್ರಕರಣ ಕಡಿಮೆ ಮಾಡಬೇಕು.

ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್‌ಗಳು ಏಕಕಾಲದಲ್ಲಿ ಪ್ರಾರಂಭವಾದವು. ಧಾರವಾಡ ಹೈಕೋರ್ಟ್‌
ವ್ಯಾಪ್ತಿಗೆ 55 ತಾಲ್ಲೂಕು ಒಳಪಟ್ಟವು. ಆದರೆ ಕಲಬುರಗಿ ಹೈಕೋರ್ಟ್‌ ಕೇವಲ 24 ತಾಲ್ಲೂಕುಗಳ ವ್ಯಾಪ್ತಿ ಹೊಂದಿದೆ.
ಇದನ್ನು ಸರಿದೂಗಿಸಲು ಬಳ್ಳಾರಿ, ಬಾಗಲಕೋಟೆ, ಕೊಪ್ಪಳ ಜಿಲ್ಲೆಯನ್ನು ಕಲಬುರಗಿ ಹೈಕೋರ್ಟ್‌ ವ್ಯಾಪ್ತಿಗೆ ತರಬೇಕು.

ಇದರಿಂದ ಸರಿಸಮಾನವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ಹೇಳಿದರು. ಕರ್ನಾಟಕ ಉತ್ಛ ನ್ಯಾಯಾಲಯದ
ನ್ಯಾಯಮೂರ್ತಿ ಎಲ್‌. ನಾರಾಯಣಸ್ವಾಮಿ, ನ್ಯಾಯಮೂರ್ತಿ ಶ್ರೀನಿವಾಸಗೌಡ, ನ್ಯಾಯಮೂರ್ತಿ ಜಿ. ನರೇಂದ್ರ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಿ.ವಿ. ಪಾಟೀಲ, ಕರ್ನಾಟಕ ಉಚ್ಚ ನ್ಯಾಯಾಲಯ ಕಲಬುರಗಿ ಹೆಚ್ಚುವರಿ ರಜಿಸ್ಟ್ರಾರ್‌ ಜನರಲ್‌ ಕೆ.ಬಿ.ಅಸೂದೆ, ಕಾನೂನು ಸೇವಾ ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಆರ್‌. ಮಾಣಿಕ್ಯ, ಗುಲಬರ್ಗಾ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಶರಣಯ್ಯ ಜಿ. ಮಠ, ವಿ.ಎನ್‌. ಪಾಟೀಲ, ಕಾರ್ಯದರ್ಶಿ ಗೋಪಾಲಕೃಷ್ಣ ಪಿ. ಯಾದವ, ಹಿರಿಯ ಮತ್ತು ಕಿರಿಯ ಶ್ರೇಣಿಯ ನ್ಯಾಯಾಧಿಧೀಶರು, ವಕೀಲರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next