ಹೈದರಾಬಾದ್: ಪ್ರವಾದಿ ಮುಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಾಗಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದ ಒಂದು ದಿನದ ನಂತರ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಈ ವಿಷಯವನ್ನು ಸೂಕ್ತ ವೇದಿಕೆಯಲ್ಲಿ ಚರ್ಚಿಸುವುದಾಗಿ ಶನಿವಾರ ಹೇಳಿದ್ದಾರೆ.
ಹೈದರಾಬಾದ್ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಎಎನ್ಐ ಜೊತೆ ಮಾತನಾಡಿದ ರಿಜಿಜು, ಮೊದಲನೆಯದಾಗಿ, ಕಾನೂನು ಸಚಿವನಾಗಿ ನಾನು ಸುಪ್ರೀಂ ಕೋರ್ಟ್ ಪೀಠದ ತೀರ್ಪು ಮತ್ತು ಅವಲೋಕನದ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ” ಎಂದಿದ್ದಾರೆ.
“ನನಗೆ ತೀರ್ಪು ಇಷ್ಟವಾಗದಿದ್ದರೂ ಅಥವಾ ಅವಲೋಕನಗಳನ್ನು ಮಾಡಿದ ವಿಧಾನದ ಬಗ್ಗೆ ನನಗೆ ಗಂಭೀರ ಆಕ್ಷೇಪವಿದ್ದರೂ, ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ” ಎಂದು ಸಚಿವರು ಹೇಳಿದರು.
ಟಿವಿ ಸಂದರ್ಶನವೊಂದರಲ್ಲಿ ನೂಪುರ್ ಶರ್ಮಾ ನೀಡಿದ ಹೇಳಿಕೆಗಳನ್ನು ಸುಪ್ರೀಂ ಕೋರ್ಟ್ ಬಲವಾಗಿ ಖಂಡಿಸಿದೆ. ದೇಶದಲ್ಲಿ ಉಂಟಾದ ಹಾನಿಗೆ ನೂಪುರ್ ಶರ್ಮಾ ಕಾರಣ, ಹೀಗಾಗಿ ಅವರು ದೇಶದ ಕ್ಷಮೆಯಾಚಿಸಬೇಕು ಎಂದು ಕೋರ್ಟ್ ಕಠಿಣ ಶಬ್ದಗಳಲ್ಲಿ ಹೇಳಿದೆ.
Related Articles
ಇದನ್ನೂ ಓದಿ:ಸಂಪ್ರದಾಯವಂತೆ..: ಮೊಸಳೆಯನ್ನು ಮದುವೆಯಾದ ಮೇಯರ್| ವಿಡಿಯೋ ನೋಡಿ
ಕೋರ್ಟ್ ತೀರ್ಪಿನ ಬಗ್ಗೆ ಮಾತನಾಡಿದ ಕಾನೂನು ಸಚಿವ ಕಿರಣ್ ರಿಜುಜು, ಈ ಬಗ್ಗೆ ಪ್ರತಿಕ್ರಿಯೆಗಳು ಬರುತ್ತಿವೆ, ಆದರೆ ನಾವು ಇದರ ಬಗ್ಗೆ ಸೂಕ್ತ ವೇದಿಕೆಯಲ್ಲಿ ಚರ್ಚಿಸುತ್ತೇವೆ” ಎಂದು ಹೇಳಿದರು.
ನೂಪುರ್ ಶರ್ಮಾ ಅವರು ದೇಶಾದ್ಯಂತ ಕೋಮು ಸ್ಫೋಟಕ್ಕೆ ಕಾರಣರಾಗಿದ್ದಾರೆ ಎಂಬ ಟೀಕೆಗಳನ್ನು ಮೌಖಿಕ ಅವಲೋಕನಗಳಲ್ಲಿ ಮಾಡಲಾಗಿದೆ ಮತ್ತು ಸುಪ್ರೀಂ ಕೋರ್ಟ್ ಆದೇಶದಲ್ಲಿ ಹೇಳಲಾಗಿಲ್ಲ. “ಸುಪ್ರೀಂ ಕೋರ್ಟ್ನ ಅವಲೋಕನದ ಬಗ್ಗೆ ನೇರವಾದ ಕಾಮೆಂಟ್ ಅಥವಾ ಉಲ್ಲೇಖವನ್ನು ಮಾಡಲು ನಾನು ಬಯಸುವುದಿಲ್ಲ. ಇದು ಮೌಖಿಕ ಅವಲೋಕನವಾಗಿದೆ ಮತ್ತು ತೀರ್ಪಿನ ಭಾಗವಲ್ಲ” ಎಂದು ರಿಜಿಜು ಹೇಳಿದರು.