Advertisement

ವಕೀಲರ ರಕ್ಷಣೆಗೆ ಕಾನೂನು

12:57 AM Jun 06, 2023 | Team Udayavani |

ಇತ್ತೀಚೆಗೆ ಕೇರಳದ ಆಸ್ಪತ್ರೆಯೊಂದರಲ್ಲಿ ವ್ಯಕ್ತಿಯೊಬ್ಬ ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಇಡೀ ವೈದ್ಯ ಲೋಕವನ್ನೇ ಬೆಚ್ಚಿಬೀಳಿಸಿತ್ತು.

Advertisement

ವೈದ್ಯರನ್ನು ದೈಹಿಕ ಹಿಂಸೆಗೆ ಗುರಿಪಡಿಸುವುದು, ಅವರ ಮೇಲೆ ಹಲ್ಲೆ ನಡೆಸುವುದು, ಕ್ಲಿನಿಕ್‌ ಮತ್ತು ಆಸ್ಪತ್ರೆಯ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಇತ್ಯಾದಿ ತಡೆಗಟ್ಟಲು ಈಗಾಗಲೇ ಕೇರಳವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕಾನೂನು ಜಾರಿಗೊಳಿಸಲಾಗಿದೆ. ಅದಾಗ್ಯೂ ವೈದ್ಯರ ಮೇಲಿನ ಹಿಂಸೆ ತಪ್ಪಿಲ್ಲ. ಈ ಪ್ರಕರಣದ ಹಿನ್ನೆಲೆಯಲ್ಲಿ ದೇಶದ ವೃತ್ತಿಪರರು, ವಿಶೇಷವಾಗಿ ವೈದ್ಯರು ಮತ್ತು ವಕೀಲರ ರಕ್ಷಣೆಗೆ ಪ್ರತ್ಯೇಕ ಕಾನೂನು ರಚಿಸುವ ಅಗತ್ಯದ ಚರ್ಚೆ ಮತ್ತೂಮ್ಮೆ ಮುನ್ನೆಲೆಗೆ ಬಂದಿದೆ.

ವೈದ್ಯರ ಮೇಲಿನ ಹಿಂಸೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತದೆ. ಆದರೆ ಅದೇ ರೀತಿ ವಕೀಲರ ಮೇಲಿನ ದೌರ್ಜನ್ಯ ಬೆಳಕಿಗೆ ಬರುವುದಿಲ್ಲ. ಮೂರು ತಿಂಗಳ ಹಿಂದೆ ರಾಜಸ್ಥಾನದ ಜೋಧ್‌ಪುರ್‌ನಲ್ಲಿ ಜುಗ್‌ರಾಜ್‌ ಚೌಹಾಣ್‌ ಎಂಬ 48 ವರ್ಷದ ವಕೀಲರೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಅಲ್ಲಿನ ಪತ್ರಿಕೆಗಳ ವರದಿ ಪ್ರಕಾರ ಚೌಹಾಣ್‌ ಮೋಟರ್‌ ಬೈಕ್‌ನಲ್ಲಿ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಅನಿಲ್‌ ಮತ್ತು ಮುಖೇಶ್‌ ಎಂಬ ಇಬ್ಬರು ಅಪರಾಧಿಗಳು ವಕೀಲನನ್ನು ಕಲ್ಲಿನಿಂದ ತಲೆ ಜಜ್ಜಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ. ಈ ಪ್ರಕರಣವನ್ನು ಖಂಡಿಸಿ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ ತಡೆಗಟ್ಟಲು ಪ್ರತ್ಯೇಕ ಕಾನೂನು ರಚಿಸಬೇಕೆಂದು ವಕೀಲರ ಪರಿಷತ್ತು ರಾಜ್ಯ ಸರಕಾರವನ್ನು ಆಗ್ರಹಪಡಿಸಿತು. ರಾಜ್ಯ ಸರಕಾರ ಸ್ಪಂದಿಸದಿದ್ದ ಕಾರಣ ವಕೀಲರು ಸುಮಾರು ಒಂದು ತಿಂಗಳು ರಾಜ್ಯಾದಂತ ಮುಷ್ಕರ ನಡೆಸಿದರು. ಅಂತಿಮವಾಗಿ ರಾಜ್ಯ ಸರಕಾರ ವಕೀಲರ ರಕ್ಷಣ ಅಧಿನಿಯಮ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಿದೆ.

ವಕೀಲರ ರಕ್ಷಣೆಗೆ ಕಾನೂನು ಜಾರಿಗೊಳಿಸಬೇಕೆಂಬ ಬೇಡಿಕೆ ಹೊಸದೇನಲ್ಲ. ಎರಡು ವರ್ಷಗಳ ಹಿಂದೆ ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ ಈ ವಿಷಯವಾಗಿ ರಾಷ್ಟ್ರಮಟ್ಟದಲ್ಲಿ ಒಂದು ಕಾನೂನು ಇರಬೇಕೆಂದು ಸೂಚಿಸಿತ್ತು. ಹವಾನ ಕ್ಯೂಬಾದಲ್ಲಿ ನಡೆದ 8ನೇ ಯುನೈಟೆಡ್‌ ನೇಷನ್ಸ್‌ ಕಾಂಗ್ರೆಸ್‌ನಲ್ಲಿ ಅಂಗೀಕರಿಸಿದ ವಕೀಲರ ಪಾತ್ರದ ಮೂಲ ತತ್ತÌಗಳು (ಆಚsಜಿc ಕrಜಿncಜಿಟlಛಿs ಟn ಠಿಜಛಿ Rಟlಛಿ ಟf ಠಿಜಛಿ ಔಚಡಿyಛಿr) ಆಧಾರದ ಮೇಲೆ ವಕೀಲರ ರಕ್ಷಣೆ ಕುರಿತ ಮಾದರಿ ವಿಧೇಯಕವನ್ನು ಸಿದ್ಧಪಡಿಸಿತ್ತು. ಇದಕ್ಕಾಗಿ ಕೌನ್ಸಿಲ್‌ ಏಳು ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿತ್ತು. ವಕೀಲರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಯಾವುದೆ ದೌರ್ಜನ್ಯಕ್ಕೆ ಒಳಗಾಗದಂತೆ ರಕ್ಷಣೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವುದು ಈ ವಿಧೇಯಕದ ಉದ್ದೇಶವಾಗಿತ್ತು. ವಕೀಲರ ಮೇಲೆ ದೌರ್ಜನ್ಯ ಎಸಗುವವರನ್ನು ಆರು ತಿಂಗಳ ಜೈಲು ಶಿಕ್ಷೆಗೆ ಗುರಿಪಡಿಸಬೇಕೆಂದು ಸೂಚಿಸಲಾಗಿತ್ತು. ಅದೇ ವ್ಯಕ್ತಿ ಮತ್ತೂಮ್ಮೆ ವಕೀಲರ ಮೇಲೆ ಹಲ್ಲೆ ನಡೆಸಿದರೆ ಎರಡು ವರ್ಷ ಜೈಲು ಶಿಕ್ಷೆ ನೀಡಬೇಕೆಂದು ಬಾರ್‌ ಕೌನ್ಸಿಲ್‌ ಸಲಹೆ ಮಾಡಿತ್ತು. ತಪ್ಪಿತಸ್ಥರು ವಕೀಲರಿಗೆ ಮತ್ತು ಅವರ ಕಚೇರಿ ಇತ್ಯಾದಿಗೆ ಉಂಟಾದ ನಷ್ಟವನ್ನು ತುಂಬಿ ಕೊಡಲು ಪರಿಹಾರವನ್ನೂ ನೀಡುವಂತೆ ಸೂಚಿ ಸಲಾಗಿತ್ತು. ವಕೀಲರ ಕುಂದುಕೊರತೆಗಳನ್ನು ನಿವಾರಿಸಲು ನ್ಯಾಯಾಲಯದ ಮಟ್ಟದಲ್ಲಿ ಪ್ರತ್ಯೇಕ ವ್ಯವಸ್ಥೆ ಇರಬೇಕೆಂಬ ಅಂಶ ಸಹ ಈ ವಿಧೇಯದಕಲ್ಲಿತ್ತು.

ವಕೀಲರ ಮೇಲೆ ನಡೆಯುವ ಹಿಂಸೆ, ದೌರ್ಜನ್ಯ, ಅವರ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡುವುದು, ಹಾಗೆ ಮಾಡಿದ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವುದು ರಾಜಸ್ಥಾನ ಸರಕಾರ ಹೊರಡಿಸಿರುವ ವಿಧೇಯಕದ ಮುಖ್ಯ ಉದ್ದೇಶ. ಈ ವಿಧೇಯಕದ ಪ್ರಕಾರ ಹಿಂಸೆ ಅಥವಾ ದೌರ್ಜನ್ಯಕ್ಕೆ ಒಳಗಾದ ವಕೀಲರು ತಮ್ಮ ವ್ಯಾಪ್ತಿಗೆ ಒಳಪಟ್ಟ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಬಹುದು. ವಕೀಲರಿಗೆ ರಕ್ಷಣೆಯ ಅಗತ್ಯವಿದೆ ಎಂದು ಪೊಲೀಸರಿಗೆ ದೃಢ‌ಪಟ್ಟಲ್ಲಿ, ಅಂತಹ ವಕೀಲರಿಗೆ ರಕ್ಷಣೆ ನೀಡಲಾಗುವುದು. ಈ ಕಾನೂನಿನ ಪ್ರಕಾರ ವಕೀಲರ ಮೇಲಿನ ಹಲ್ಲೆಯನ್ನು ಇಂಡಿಯನ್‌ ಪೀನಲ್‌ ಕೋಡ್‌, 1860ರ ಅನುಸಾರ ಸಂಜ್ಞೆàಯ ಅಪರಾಧ ಎಂದು ಪರಿಗಣಿಸಲಾಗುವುದು.

Advertisement

ವಿಧೇಯಕ ಮೂರು ರೀತಿಯ ಶಿಕ್ಷೆಯನ್ನು ಒಳಗೊಂಡಿದೆ. ಮೊದಲನೆಯದಾಗಿ, ವಕೀಲರನ್ನು ದೈಹಿಕವಾಗಿ ಥಳಿಸುವವರನ್ನು ಎರಡು ವರ್ಷ ಜೈಲು ಶಿಕ್ಷಗೆ ಒಳಪಡಿಸಬಹುದಾಗಿದೆ. ಅಲ್ಲದೆ ಇಪ್ಪತ್ತೆçದು ಸಾವಿರ ರೂಪಾಯಿವರೆಗೆ ದಂಡ ತೆರ ಬೇಕಾಗಬಹುದು. ಎರಡನೆಯದಾಗಿ, ವಕೀಲರಿಗೆ ತೀವ್ರ ಗಾಯ ಉಂಟುಮಾಡುವವರನ್ನು ಏಳು ವರ್ಷದ ಜೈಲು ಶಿಕ್ಷೆಗೆ ಗುರಿಪಡಿಸುವುದಲ್ಲದೆ ಅವರು ಐವತ್ತು ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. ಮೂರನೆಯದಾಗಿ, ಯಾವುದೇ ವ್ಯಕ್ತಿ ವಕೀಲರ ವಿರುದ್ಧ ಕ್ರಿಮಿನಲ್‌ ಅಪರಾಧ ಎಸಗಿದರೆ ಅಂತಹವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದಲ್ಲದೆ ಅಂತಹ ತಪ್ಪಿತಸ್ಥರು ಹತ್ತು ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. ಇನ್ನಿತರ ಅಪರಾಧಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಅಂಶವೂ ವಿಧೇಯಕದಲ್ಲಿದೆ.
ವಕೀಲರ ವಿರುದ್ಧ ನಡೆಯುವ ಅಪರಾಧಗಳಿಂದ ರಕ್ಷಿಸುವುದು ಈ ಕಾನೂನಿನ ಉದ್ದೇಶವಾಗಿದ್ದರೂ, ಕಕ್ಷಿದಾರರ ಅಥವಾ ಪ್ರತಿವಾದಿಯ ಕಕ್ಷಿದಾರರ ವಕೀಲರೇ ಸಂಜ್ಞೆàಯ ಅಪರಾಧ ಎಸಗಿದರೆ ಅಂತಹ ವಕೀಲರ ವಿರುದ್ಧ ಕ್ರಮ ಜರುಗಿಸಬಹುದಾಗಿದೆ. ವಕೀಲರ ವಿರುದ್ಧ ಸಲ್ಲಿಕೆಯಾಗುವ ದೂರಿನ ಬಗ್ಗೆ ಡಿವೈಎಸ್‌ಪಿಗಿಂತ ಕೆಳಮಟ್ಟದಲ್ಲದ ಪೊಲೀಸ್‌ ಅಧಿಕಾರಿ, ಗರಿಷ್ಠ ಏಳು ದಿನದೊಳಗೆ ವಿಚಾರಣೆ ಪೂರ್ಣಗೊಳಿಸಿ ಅದರ ಬಗ್ಗೆ ಮಾಹಿತಿಯನ್ನು ರಾಜಸ್ಥಾನ ಬಾರ್‌ ಕೌನ್ಸಿಲ್‌ಗೆ ಕಳುಹಿಸಬೇಕು.

ಭಾರತೀಯ ದಂಡ ಸಂಹಿತೆ ಜಾರಿಯಲ್ಲಿರುವಾಗ ವಕೀಲರ ಮೇಲೆ ನಡೆಯಬಹುದಾದ ದೌರ್ಜನ್ಯ ಇತ್ಯಾದಿ ತಡೆಗಟ್ಟಲು ಪ್ರತ್ಯೇಕ ಕಾನೂನು ಅಗತ್ಯವೇ ಎಂಬ ಚರ್ಚೆ ಆರಂಭವಾಗಿದೆ. ಉದಾಹರಣೆಗೆ ರಾಜಸ್ಥಾನ ವಿಧೇಯಕದ ಸೆಕ್ಷನ್‌ 51ರ ಪ್ರಕಾರ ಹಲ್ಲೆ ಎಸಗುವವರಿಗೆ ಎರಡು ವರ್ಷದ ಅವಧಿಯ ಜೈಲು ಶಿಕ್ಷೆ ಹಾಗೂ 25000 ರೂ. ದಂಡ ವಿಧಿಸಬಹುದು. ಆದರೆ ಇದೇ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 352ರ ಪ್ರಕಾರ ಮೂರು ತಿಂಗಳು ಜೈಲು ಶಿಕ್ಷೆ, 500 ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ಎರಡನೆಯದಾಗಿ, ವಕೀಲರಿಗೆ ತೀವೃ ಗಾಯ ಉಂಟುಮಾಡುವವರನ್ನು ಏಳು ವರ್ಷದ ಜೈಲು ಶಿಕ್ಷೆಗೆ ಗುರಿಪಡಿಸುವುದಲ್ಲದೆ ಅವರು 50000 ರೂ. ದಂಡ ತೆರಬೇಕಾಗುತ್ತದೆ. ಆದರೆ ಇದೇ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 352ರ ಪ್ರಕಾರ ಏಳು ವರ್ಷ ಜೈಲು ಶಿಕ್ಷೆ ವಿಧಿಸಬಹುದಾದರೂ, ದಂಡಕ್ಕೆ ಗರಿಷ್ಠ ಮಿತಿಯಿಲ್ಲ.

ರಾಜಸ್ಥಾನ ಸರಕಾರ ವಕೀಲರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವಿಧೇಯಕ ಹೊರಡಿ ಸಿದ್ದರೂ ಅದು ಎಷ್ಟರ ಮಟ್ಟಿಗೆ ಪರಿಣಾಮಕರಿ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ವೈದ್ಯರ ರಕ್ಷಣೆಗೆ ಪ್ರತ್ಯೇಕ ಕಾನೂನು ಇದ್ದರೂ ಅವರ ಮೇಲಿನ ದೌರ್ಜನ್ಯ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ, ಕಾನೂನು ಮಾಡುವಾಗ ಇರುವ ಕಾಳಜಿ ಅದನ್ನು ಜಾರಿಗೊಳಿಸುವಾಗಲೂ ಇರಬೇಕಾದ್ದು ಅವಶ್ಯ.

-ವೈ.ಜಿ.ಮುರಳೀಧರನ್‌

Advertisement

Udayavani is now on Telegram. Click here to join our channel and stay updated with the latest news.

Next