Advertisement

Karnataka: ಕಾನೂನು ಸುವ್ಯವಸ್ಥೆ ಕುಸಿದಿಲ್ಲ: ಪರಮೇಶ್ವರ್‌

11:02 PM Dec 14, 2023 | Team Udayavani |

ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನು ವುದು ಸುಳ್ಳು. ಅಂಕಿ-ಅಂಶಗಳೇ ಅದಕ್ಕೆ ಸಾಕ್ಷಿ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದ್ದಾರೆ.

Advertisement

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ತುಳಸಿ ಮುನಿರಾಜು ಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದೆ ಬಿಜೆಪಿ ಸರಕಾರದಲ್ಲಿ ಆರ್‌. ಅಶೋಕ್‌ ಅವರ ಗೃಹ ಸಚಿವರಾಗಿದ್ದಾಗ 2011-13ರ ವರೆಗೆ 4,121 ಕೊಲೆ, 1,639 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದ ಒಂದು ವರ್ಷ 11 ತಿಂಗಳ ಅವಧಿಯಲ್ಲಿ 2,254 ಕೊಲೆ, 915 ಅತ್ಯಾಚಾರ, ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದ ಅವಧಿಯಲ್ಲಿ 2,417 ಕೊಲೆ ಮತ್ತು 949 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈಗ ಕಾಂಗ್ರೆಸ್‌ ಅಧಿಕಾರದ ಬಂದ 6 ತಿಂಗಳಲ್ಲಿ 616 ಕೊಲೆ 310 ಅತ್ಯಾಚಾರ ಪ್ರಕರಣಗಳು ನಡೆದಿವೆ ಎಂದು ಹಿಂದಿನ ಸರಕಾರದ ಅವಧಿಯಲ್ಲಿನ ಅಂಕಿ-ಅಂಶಗಳನ್ನು ಈಗಿನ ಸರಕಾರದ ಜತೆಗೆ ಹೋಲಿಸಿ ಗೃಹ ಸಚಿವರು ಸಮರ್ಥಿಸಿಕೊಂಡರು.

ಸೂಲಿಬೆಲೆ ವಿರುದ್ಧ ಪ್ರಕರಣಕ್ಕೆ ಆಕ್ರೋಶ

ಕಾಂಗ್ರೆಸ್‌ ಸರಕಾರ ಅಧಿಕಾರದ ಬಂದ ಮೇಲೆ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣಗಳನ್ನು ದಾಖಲಿಸುವುದು ಹೆಚ್ಚಾಗಿದೆ. ಸಾಮಾಜಿಕ ಕೆಲಸ ಮಾಡುತ್ತಿರುವ ಚಕ್ರವರ್ತಿ ಸೂಲಿಬೆಲೆ ಅಂಥವರ ವಿರುದ್ಧ ಮೊಕದ್ದಮೆ ಹೂಡಿದ್ದು ಸರಿಯಲ್ಲ ಎಂದು ತುಳಸಿ ಮುನಿರಾಜು ಗೌಡ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಪ್ರಚೋದನಕಾರಿ ಭಾಷಣಗಳ ಮೇಲೆ ನಿಗಾ ಇರಿಸುತ್ತೇವೆ. ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕೋಮು ಭಾವನೆ ಕೆರಳಿಸಿದ ಪ್ರಕರಣವನ್ನೇನೂ ದಾಖಲಿಸಿಲ್ಲ. ನೀವು (ಬಿಜೆಪಿ) ಹೇಳಿದರೆ ದಾವೆ ಹೂಡಲು ಸರಕಾರ ಸಿದ್ಧವಿದೆ ಎಂದು ತಿರುಗೇಟು ನೀಡಿದರು. ಶಿವಮೊಗ್ಗ ಘಟನೆ ಸಣ್ಣದು ಎಂಬ ಹೇಳಿಕೆಗೆ ಈಗಲೂ ಬದ್ಧ. ಅದನ್ನು ದೊಡ್ಡದು ಮಾಡಿದ್ದು ನೀವು (ಬಿಜೆಪಿ) ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next