ಹುಬ್ಬಳ್ಳಿ: ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಬೋಗಸ್ ಕಾರ್ಡ್ ಗಳ ಬಿಡುಗಡೆ ಸರಣಿ ಆರಂಭಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ತಮ್ಮ ಆಡಳಿತ ರಾಜ್ಯಗಳಲ್ಲಿ ಜನರಿಗೆ ಆಶ್ವಾಸನೆ ನೀಡಿದಂತೆ ಯೋಜನೆಗಳನ್ನು ಎಷ್ಟರ ಮಟ್ಟಿಗೆ ಅನುಷ್ಠಾನಗೊಳಿಸಿದ್ದಾರೆ ಎಂಬುವದರ ಬಗ್ಗೆ ಶೀಘ್ರವೇ ಪಟ್ಟಿ ಬಿಡುಗಡೆ ಮಾಡುತ್ತೇನೆ. ಅಧಿಕಾರದ ಹತಾಶೆಯಿಂದ ಆಗಲಾರದ ಬೋಗಸ್ ಗ್ಯಾರಂಟಿ ಕಾರ್ಡ್ ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದು ಚುನಾವಣೆಗಾಗಿ ಮಾಡುತ್ತಿರುವ ಬೋಗಸ್ ಕಾರ್ಡ್ ಸರಣಿಯಾಗಿದೆ. ಜನರು ಇದನ್ನು ನಂಬುವುದಿಲ್ಲ. ಈಗಾಗಲೇ ಮೂರನ್ನು ಬಿಟ್ಟಿದೆ. ಈಗ ನಾಲ್ಕನೆಯ ಬೋಗಸ್ ಕಾರ್ಡ್ ಬಿಡುಗಡೆ ಮಾಡಿದೆ ಎಂದರು.
ರಾಹುಲ್ ಗಾಂಧಿಗೆ ದೇಶದ ಬಗ್ಗೆ ಎಷ್ಟು ಪ್ರೀತಿ ಇದೆ ಎಂಬುದು ಎಲ್ಲರಿಗೂ ಗೊತ್ತು. ಹೊರ ದೇಶಕ್ಕೆ ಹೋದಾಗ ನಾಡಿನ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಇವರಿಗೆ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಅವರು ಕರ್ನಾಟಕದ ಬಗ್ಗೆ ಏನು ಮಾತನಾಡುತ್ತಾರೆ ಎಂದು ಕುಟುಕಿದರು.
ಉರಿಗೌಡ, ನಂಜೇಗೌಡ ಆಧಾರ ಕಾರ್ಡ್ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಂಶೋಧನೆ ಆಗಲಿ. ಆಗ ಎಲ್ಲವೂ ಹೊರಬೀಳಿಲಿದೆ ಎಂದರು.