Advertisement

ಲಾಲ್‌ಬಾಗ್‌ಗೂ ಲಗ್ಗೆಯಿಟ್ಟ ಸರಗಳ್ಳರು

04:35 AM Apr 13, 2019 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಸರಕಳ್ಳರು ತಮ್ಮ ದುಷ್ಕೃತ್ಯ ಮುಂದುವರಿಸಿದ್ದಾರೆ. ಒಂದೇ ದಿನ ನಗರದ ಮೂರು ಪ್ರತ್ಯೇಕ ಭಾಗಗಳಲ್ಲಿ ಸರಗಳ್ಳರು ಮೂವರು ಮಹಿಳೆಯರ ಕತ್ತಿನಲ್ಲಿದ್ದ ಸರಕಿತ್ತುಕೊಂಡು ಪರಾರಿಯಾಗಿದ್ದಾರೆ.

Advertisement

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ವಾಕಿಂಗ್‌ ಮಾಡುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ದುಷ್ಕರ್ಮಿ ಒಂದು ಕೈಯಿಂದ ಅವರ ಕಣ್ಣುಮುಚ್ಚಿ ಕೆಳಗಡೆ ಬೀಳಿಸಿ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಸರಕಳೆದುಕೊಂಡ ಶ್ರೀನಿವಾಸನಗರದ ನಿವಾಸಿ ಸುಧಾ ಶ್ರೀವಾಸ್ತವ ಎಂಬುವವರು ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲಾಲ್‌ಭಾಗ್‌ನಲ್ಲಿ ಪ್ರತಿನಿತ್ಯ ಬೆಳಗ್ಗೆ ವಾಕಿಂಗ್‌ ಮಾಡುತ್ತಿದ್ದ ಸುಧಾ ಅವರು ಗುರುವಾರ ಬೆಳಗ್ಗೆ 8.45ರ ಸುಮಾರಿಗೆ ಲಾಲ್‌ಬಾಗ್‌ ಕೆರೆ ಸಮೀಪ ನಡೆದುಕೊಂಡು ಹೋಗುತ್ತಿದ್ದರು.

ಈ ವೇಳೆ ಹಿಂಬಾಲಿಸಿದ ಯುವಕನೊಬ್ಬ, ಅವರ ಕಣ್ಣುಮುಚ್ಚಿ ನೂಕಿದ್ದಾನೆ. ಸುಧಾ ಅವರು ಕೆಳಗೆ ಬೀಳುತ್ತಿದ್ದಂತೆ ಅವರ ಕತ್ತಿನಲ್ಲಿದ್ದ ಸುಮಾರು 45 ಗ್ರಾಂ ತೂಕದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಕೆಳಗಡೆ ಬಿದ್ದ ಸುಧಾ ಅವರು ಸಾವಾರಿಸಿಕೊಂಡು ಸಹಾಯಕ್ಕೆ ಕಿರುಚಿದ ಕೂಡಲೇ ಅಲ್ಲಿದ್ದವರು ಹೋಗುವಷ್ಟರಲ್ಲಿ ದುಷ್ಕರ್ಮಿ ಪರಾರಿಯಾಗಿದ್ದಾನೆ. ಆರೋಪಿ ಟ್ರಾಕ್‌ ಸೂಟ್‌ ಧರಿಸಿದ್ದನೆಂದು ದೂರುದಾರರು ತಿಳಿಸಿದ್ದು, ಆರೋಪಿ ವಾಕಿಂಗ್‌ ಮಾಡುವ ನೆಪದಲ್ಲಿ ಬಂದು ಕೃತ್ಯ ಎಸಗಿದ್ದಾನೆ. ಆರೋಪಿ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಚಾಕು ತೋರಿಸಿ ಸರ ಕಿತ್ತೂಯ್ದ: ಮತ್ತೂಂದು ಪ್ರಕರಣದಲ್ಲಿ ಸ್ನೇಹಿತೆ ಜತೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿ, ಚಾಕು ತೋರಿಸಿ ಸರ ಕಿತ್ತುಕೊಂಡು ಹೋದ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗಾರ್ಮೆಂಟ್ಸ್‌ ಉದ್ಯೋಗಿಯಾಗಿರುವ ಶ್ರೀಗಂಧ ಕಾವಲು ನಿವಾಸಿ ಪ್ರೇಮಾ (43) ಎಂಬವರು ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ಹೊಯ್ಸಳ ನಗರದಲ್ಲಿರುವ ಗಾರ್ಮೆಂಟ್ಸ್‌ಗೆ ಸ್ನೇಹಿತೆ ತಾಯಮ್ಮ ಅವರ ಜತೆ ನಡೆದು ಹೋಗುತ್ತಿದ್ದರು. ಮಾರ್ಗಮಧ್ಯೆ ಸುಂಕದಕಟ್ಟೆಯ ಸೊಲ್ಲಪುರದಮ್ಮ ದೇವಾಲಯದ ಸಮೀಪ ಬೈಕ್‌ನಲ್ಲಿ ಬಂದ ದುಷ್ಕರ್ಮಿ ಅಡ್ಡಗಟ್ಟಿದ್ದಾನೆ.

ಬಳಿಕ ಚಾಕು ತೋರಿಸಿ ಸರ ಬಿಚ್ಚಿಕೊಡುವಂತೆ ಹೆದರಿಸಿ, ಪ್ರೇಮಾ ಅವರ ಕತ್ತಿನಲ್ಲಿದ್ದ ಸುಮಾರು 50 ಗ್ರಾಂ ತೂಕದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ಪ್ರೇಮಾ ಅವರು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ಆರೋಪಿ ಬಂಧನಕ್ಕೆ ಬಲೆಬೀಸಿದ್ದಾರೆ.

ಕಾರಲ್ಲಿ ಬಂದು ಯುವತಿಯ ಸರಕಳವು: ಜಿಮ್‌ಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಕಾರಿನಲ್ಲಿ ಹಿಂಬಾಲಿಸಿದ ನಾಲ್ವರು ದುಷ್ಕರ್ಮಿಗಳು ಚಾಕು ತೋರಿಸಿ ಯುವತಿಯಿಂದ ಸರ ಕಿತ್ತುಕೊಂಡು ಹೋಗಿರುವ ಘಟನೆ ತಲಘಟ್ಟಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಈ ಕುರಿತು ಖಾಸಗಿ ಕಂಪೆನಿ ಉದ್ಯೋಗಿ (26) ಚೈತ್ರಾ ಎಂಬಾಕೆ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ತಲಘಟ್ಟಪುರ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

ದೂರುದಾರೆ ಚೈತ್ರಾ ಅವರು ಎಂದಿನಂತೆ ಗುರುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಜಿಮ್‌ಗೆ ತೆರಳಲು ಬಿಎಸ್‌ಕೆ ಆರನೇ ಹಂತದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಕಾರೊಂದು ಅವರ ಮುಂದೆ ನಿಲ್ಲಿಸಿದೆ.

ಕಾರಿನಿಂದ ಇಳಿದ ನಾಲ್ವರು ದುಷ್ಕರ್ಮಿಗಳು ಆಕೆಯನ್ನು ಸುತ್ತುವರಿದು ಚಾಕು ತೋರಿಸಿ ಆಕೆಯ ಕತ್ತಿನಲ್ಲಿದ್ದ ಸರ ಕಿತ್ತುಕೊಂಡು ಕೆಲವೇ ಕ್ಷಣಗಳಲ್ಲಿ ಪರಾರಿಯಾಗಿದ್ದಾರೆ. ಘಟನಾ ಸ್ಥಳದಲ್ಲಿ ಸಿಸಿಟಿವಿ ಫ‌ೂಟೇಜ್‌ ಪರಿಶೀಲಿಸಿದ್ದು ಆರೋಪಿಗಳ ಬಂದನಕ್ಕೆ ಕ್ರಮವಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next