ಲಕ್ಷ್ಮೇಶ್ವರ: ಪಟ್ಟಣದ ಕೇಂದ್ರ ಭಾಗದಲ್ಲಿ 4/5 ದಶಕಗಳ ಕಾಲದ ಇತಿಹಾಸ ಹೊಂದಿರುವ ಜಾಗೃತ ಅಂಬಾ ಭವಾನಿ ದೇವಸ್ಥಾನ ಲೋಕಾರ್ಪಣೆ ಮತ್ತು ದೇವಿಮೂರ್ತಿ ಪುನರ್ ಪ್ರತಿಷ್ಠಾಪನೆ ನಿಮಿತ್ತ ಜೂ. 16ರಿಂದ 20 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ಎಸ್ಎಸ್ಕೆ ಸಮಾಜದ ಅಧ್ಯಕ್ಷ ಪರಶುರಾಮಸಾ ಬದಿ ಮತ್ತು ಉಪಾಧ್ಯಕ್ಷ ನಾರಾಯಣಸಾ ಪವಾರ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1975 ರಲ್ಲಿ ಅಂದಿನ ಸಮಾಜ ಬಾಂಧವರು ಸೇರಿ ಸಮಾಜದ ಆರಾಧ್ಯ ದೇವಿ ಅಂಬಾಭವಾನಿ ದೇವಸ್ಥಾನ ಕಟ್ಟಿದ್ದರು. ಸುಮಾರು 20 ವರ್ಷಗಳ ನಂತರ ಚಿಕ್ಕದಾದ ಈ ದೇವಸ್ಥಾನವನ್ನು ದೊಡ್ಡದಾಗಿ, ಸುಂದರವಾಗಿ ನಿರ್ಮಿಸಬೇಕು ಎಂಬ ಹಿರಿಯರ ಆಸೆಯಂತೆ ಮೂಲ ದೇವಸ್ಥಾನದ ಸುತ್ತಲಿದ್ದ ಹಳೆಯ ಮನೆ, ಖಾಲಿ ಜಾಗವನ್ನು ದೇವಿ ಅನುಗ್ರಹದಿಂದ ಖರೀದಿಸಲಾಯಿತು. 2015 ರಲ್ಲಿ ನೂತನ ದೇವಸ್ಥಾನ, ಸಭಾ ಭವನ ನಿರ್ಮಾಣಕ್ಕೆ ಭೂಮಿಪೂಜೆ ನಡೆಸಲಾಯಿತು. ಸಮಾಜ ಬಾಂಧವರ ಆರೇಳು ವರ್ಷ ಗಳ ನಿರಂತರ ಶ್ರಮ, ಶ್ರದ್ಧೆಯಿಂದ ಇದೀಗ 14 ಸಾವಿರ ಚದರ ಅಡಿ ನಿವೇಶನದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಸುಂದರ ದೇವಸ್ಥಾನ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಅನುದಾನದ ಕೊರತೆ ನಡುವೆ ಸಮುದಾಯ ಭವನದ ಕಾಮಗಾರಿ ಪ್ರಗತಿ ಹಂತದಲ್ಲಿದೆ.
ಜೂ.16 ರಂದು ದೇವಿಯ ಮೂರ್ತಿಯ ಕುಂಭ ಕಳಸದ ಮೆರವಣಿಗೆಯು ಪಟ್ಟಣದ ಭಾವಸಾರ ಕ್ಷತ್ರೀಯ ಸಮಾಜದ ಪಾಂಡುರಂಗ ದೇವಸ್ಥಾನದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಪ್ರದಾಯಿಕವಾದ ಭಜನೆ, ಸಕಲ ವಾದ್ಯವೈಭವ, ಮಂಗಲ ವಾದ್ಯಗಳು ಹಾಗೂ 108 ಪೂರ್ಣಕುಂಭಗಳನ್ನು ಹೊತ್ತ ಮಹಿಳೆಯರಿಂದ ಕೂಡಿದ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.
ಜೂ.17, 18, 19 ರಂದು ದೇವಸ್ಥಾನದಲ್ಲಿ ನಿತ್ಯಪೂಜೆ, ಹೋಮ, ಹವನ, ಪಾರಾಯಣ, ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಜೂ.20 ರಂದು ಬ್ರಾಹ್ಮಿà ಮುಹೂರ್ತದಲ್ಲಿ ದೇವಿ ಮೂರ್ತಿ ಪ್ರಾಣಪ್ರತಿಷ್ಠಾಪನೆ, ಪೂಜಾ ಕಾರ್ಯಕ್ರಮ ನೆರವೇರಲಿವೆ. ಜೂ. 20 ರಂದು ಬೆಳಗ್ಗೆ 10ಕ್ಕೆ ಧರ್ಮಸಭೆ ನಡೆಯಲಿದೆ.
Related Articles
ಹುಬ್ಬಳ್ಳಿ ಅದ್ವೈತ ವಿದ್ಯಾಶ್ರಮದ ಶ್ರೀ ಪ್ರಣವಾನಂದ ತೀರ್ಥ ಶ್ರೀಗಳು ಮತ್ತು ಶಿರಹಟ್ಟಿ ಫಕೀರೇಶ್ವರ ಸಂಸ್ಥಾನಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸುವರು.
ಶ್ರೀನಿವಾಸ ಹರೀಸಾ ಖೋಡೆ ಅವರಿಂದ ದೇವಸ್ಥಾನ ಲೋಕಾರ್ಪಣೆ ನೆರವೇರಲಿದೆ. ರಾಜಕಾರಣಿಗಳು, ಗಣ್ಯರು, ಅಧಿಕಾರಿಗಳು, ಜನಪ್ರತಿನಿಧಿಗಳು, ಸರ್ವಧರ್ಮದ ಸಮಾಜದ ಹಿರಿಯರು ಉಪಸ್ಥಿತರಿರುವರು ಎಂದು ಹೇಳಿದರು.
ಪಂಚ ಟ್ರಸ್ಟ್ ಕಮೀಟಿಯ ಲಕ್ಷ್ಮಣಸಾ ರಾಜೋಳಿ, ತುಕಾರಾಮಸಾ ಬದಿ, ವಿಠ್ಠಲಸಾ ಶಿದ್ಲಿಂಗ, ಆನಂದಸಾ ಬದಿ, ಯಲ್ಲಪ್ಪ ಬದಿ, ತಿಪ್ಪಣ್ಣಸಾ ಬಾಕಳೆ, ಪಾಂಡುಸಾ ಬದಿ, ಛಾಯಾಸಾ ಬದಿ, ಗಣಪತಸಾ ಪೂಜಾರಿ, ರಂಗನಾಥಸಾ ಬದಿ, ಕಲಾವಿದ ಶಾಂತರಾಮ ಹಾಜರಿದ್ದರು.