Advertisement

ಕರಾವಳಿ ದೇವಸ್ಥಾನಗಳಲ್ಲಿ ಲಕ್ಷ ದೀಪೋತ್ಸವ

11:25 PM Nov 25, 2019 | Sriram |

ವಿಶೇಷ ವರದಿ-ಸುಬ್ರಹ್ಮಣ್ಯ: ಕಾರ್ತಿಕ ಮಾಸದಲ್ಲಿ ದೀಪಗಳ ಶೋಭೆಯೊಂದಿಗೆ ಮನೆ ಮನಗಳನ್ನು ಬೆಳಗಿಸುವ ಲಕ್ಷ ದೀಪೋತ್ಸವ ಕರಾವಳಿ ದೇಗುಲಗಳಲ್ಲಿ ಹೆಚ್ಚಿನ ಮಹತ್ವವನ್ನು ಪಡೆದಿದೆ. ಇಲ್ಲಿನ ಹಿಂದೂ ದೇಗುಲಗಳಲ್ಲಿ ಲಕ್ಷ ದೀಪೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

Advertisement

ಸಾಲು ಹಣತೆಗಳ ಹಬ್ಬ ಲಕ್ಷ ದೀಪೋತ್ಸವ ಕಾರ್ತಿಕ ಮಾಸದಲ್ಲಿ ನಡೆಯುತ್ತದೆ. ಈ ದಿನಗಳಲ್ಲಿ ಶ್ರದ್ಧಾ ಕೇಂದ್ರಗಳು ಬೆಳಕಿನಿಂದ ಶೋಭಿಸುತ್ತವೆ. ಪ್ರಮುಖವಾಗಿ ಧರ್ಮಸ್ಥಳ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಉಡುಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನ, ಕುಂದಾಪುರದ ಕುಂದೇಶ್ವರ ದೇವಸ್ಥಾನ, ಕಾರ್ಕಳ ಶ್ರೀ ಲಕ್ಷ್ಮೀ ವೆಂಕಟರಮಣ, ಶ್ರೀ ಅನಂತಶಯನ ದೇವಸ್ಥಾನ ಇಲ್ಲಿ ನಡೆಯುವ ಲಕ್ಷದೀಪೋತ್ಸವಗಳು ಪ್ರಸಿದ್ಧಿ ಪಡೆದಿವೆ. ಇನ್ನು ಅನೇಕ ದೇವಸ್ಥಾನಗಳಲ್ಲಿ ಲಕ್ಷ ದೀಪೋತ್ಸವವು ಸಂಭ್ರಮ ಸಡಗರದಿಂದ ನಡೆಯುತ್ತವೆ. ದೀಪಾವಳಿಯಿಂದ ತೊಡಗಿ ಆಚರಿಸಲ್ಪಡುವ ಬೆಳಕಿನ ಹಬ್ಬ ಲಕ್ಷದೀಪೋàತ್ಸವದ ವೇಳೆಗೆ ಮತ್ತಷ್ಟೂ ರಂಗು ತುಂಬಿಕೊಳ್ಳುತ್ತದೆ.

ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ತುಳಸಿ ಪೂಜೆ ನಡೆಯುತ್ತದೆ. ಹೊಸ ನೆಲ್ಲಿಕಾಯಿ, ತುಳಸಿ ಗಿಡ ಸೇರಿಸಿ ಶ್ರೀಕೃಷ್ಣ ಪ್ರತಿಮೆಗೆ ಪೂಜಿಸುವ ಕ್ರಮವೂ ಕೆಲವೆಡೆ ಇದೆ. ಕಾರ್ತಿಕ ಮಾಸದ ಹುಣ್ಣಿಮೆ-ಅಮಾವಾಸ್ಯೆಯಂದು ದೀಪೋತ್ಸವ ನಡೆಸಲಾಗುತ್ತದೆ. ದೇಗುಲಗಳ ಪರಿಸರದಲ್ಲಿ ದೀಪಗಳ ಮಾಲೆಯನ್ನು ತೂಗಿಸಿಟ್ಟು ಬೆಳಗಳಾಗುತ್ತದೆ.

ಚೆಲುವು ಇಮ್ಮಡಿ
ಕುಕ್ಕೆಯಲ್ಲಿ ಲಕ್ಷ ದೀಪೋತ್ಸವ ವೇಳೆ ಕೆಲವು ಹಣತೆ ದೀಪಗಳನ್ನು ಮಾತ್ರ ಹಚ್ಚಲಾಗುತ್ತಿತ್ತು. ನಿಕಟಪೂರ್ವ ಆಡಳಿತ ಮಂಡಳಿ ಲಕ್ಷ ದೀಪೋàತ್ಸವಕ್ಕೆ ಹೆಚ್ಚು ಮನ್ನಣೆ ಇರಿಸಿತ್ತು. ಬಳಿಕ ಸಾರ್ವಜನಿಕ ಭಕ್ತರ ಸಹಕಾರದಿಂದ ಲಕ್ಷ ಹಣತೆಗಳನ್ನು ಹಚ್ಚುವುದನ್ನು ರೂಢಿಸಿಕೊಂಡಿದೆ. ಲಕ್ಷ ದೀಪೋತ್ಸವದಂದು ಜಗಮಗಿಸುವ ವಿದ್ಯುದ್ದೀಪಾಲಂಕಾರ ಕ್ಷೇತ್ರದ ಚೆಲುವನ್ನು ಇಮ್ಮಡಿಗೊಳಿಸುತ್ತದೆ.

ಸಾಹಿತ್ಯ, ಕಲೆಯ ಮೆರುಗು
ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ಪ್ರಿಯನಾದ ಶಿವನಿಗೆ ಕಾರ್ತಿಕ ಮಾಸದಲ್ಲಿ ಲಕ್ಷ ದೀಪಗಳು ಪ್ರಜ್ವಲಿಸುವ ಹಬ್ಬ ಅತಿ ಪ್ರಿಯವಾದುದು. ಧರ್ಮಸ್ಥಳದಲ್ಲಿ ನಡೆಯುವ ಲಕ್ಷ ದೀಪದ ವೇಳೆ ಬೆಳಕಷ್ಟೆ ಅಲ್ಲ ಸಾಹಿತ್ಯ, ಕಲೆಗಳ ರಸವೇ ಹರಿಯುತ್ತವೆ. ದಿನಕ್ಕೆ ಸೀಮಿತವಾಗದೆ ನಡೆಯುವ ಶ್ರೀ ಮಂಜುನಾಥ ಸ್ವಾಮಿಯ ಉತ್ಸವದಲ್ಲಿ ಸರ್ವ ಧರ್ಮ ಮತ್ತು ಸಾಹಿತ್ಯ ಸಮ್ಮೆಳನಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಹೊಸಕಟ್ಟೆ ಉತ್ಸವ, ಕೆರೆಕಟ್ಟೆ ಉತ್ಸವ, ಲಲಿತೋದ್ಯಾನ ಉತ್ಸವ, ಕಂಚಿಮಾರು ಕಟ್ಟೆ ಉತ್ಸವ, ಗೌರಿಮಾರು ಕಟ್ಟೆ ಉತ್ಸವ ಹೀಗೆ ಸಾಲು ಉತ್ಸವಗಳು ನಡೆಯುತ್ತವೆ. ಉತ್ಸವದ ಮರುದಿನ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ, ಶ್ರೀ ಮಂಜುನಾಥ ದೇವಸ್ಥಾನವನ್ನು ಹೂಗಳಿಂದ ಸಿಂಗರಿಸಲಾಗುತ್ತದೆ. ಹೆಗ್ಗಡೆಯವರ ನಿವಾಸ (ಬೀಡು), ಅನ್ನಛತ್ರ, ರಥಬೀದಿ, ರಾಜಬೀದಿ ಸುತ್ತಲೂ ವಿದ್ಯುದೀಪಗಳಿಂದ ಅಲಂಕರಿಸಲಾಗುತ್ತದೆ. ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಲಕ್ಷ ದೀಪೋತ್ಸವದ ವೇಳೆ ದೇಗುಲದಲ್ಲಿ ಸಾವಿರಾರು ಹಣತೆಗಳನ್ನು ಹಚ್ಚಿ, ದೇಗುಲದ ಮುಂಭಾಗ ರಂಗೋಲಿ ಬಿಡಿಸಿ ದೀಪೋತ್ಸವ ಆಚರಿಸಲಾಗುತ್ತದೆ. ಕೆಲ ದೇವಸ್ಥಾನಗಳಲ್ಲಿ ತುಪ್ಪದಲ್ಲಿ ದೀಪ ಹಚ್ಚುವ ಸಂಪ್ರದಾಯವಿದೆ.

Advertisement

ದೀಪಾಲಂಕಾರ
ನಾಗನ ನೆಲೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಲು ಸಾಲು ಹಣತೆಗಳ ನಡುವೆ ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷ ದೀಪೋತ್ಸವ ಭಕ್ತಿ-ಸಡಗರದಿಂದ ನಡೆಯುತ್ತದೆ. ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲದಲ್ಲಿ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ, ರಥಬೀದಿಯಿಂದ ಕಾಶಿಕಟ್ಟೆ ತನಕ ಬೆಳಗುವ ಲಕ್ಷ ಹಣತೆ ದೀಪಗಳ ನಡುವೆ ಶ್ರೀ ದೇವರ ಉತ್ಸವ ನಡೆಯುತ್ತದೆ. ದೇಗುಲದ ಹೊರಾಂಗಣದ ಸುತ್ತ ಹಣತೆಗಳ ಸಾಲಿನ ದೀಪಾಲಂಕಾರದ ಜತೆಗೆ, ಆಕರ್ಷಕ ವಿದ್ಯುತ್ತಿನ ಅಲಂಕಾರದಿಂದ ದೇವಸ್ಥಾನ ವಿಶೇಷವಾಗಿ ಕಂಗೊಳಿಸುತ್ತದೆ.

ಐಶ್ವರ್ಯದ ಧ್ಯೋತಕ
ಕಾರ್ತಿಕ ದೀಪವು ಸುಖ ಸಮೃದ್ಧಿ ಐಶ್ವರ್ಯದ ಧ್ಯೋತಕ. ಇದರ ಅಧಾರದಲ್ಲಿ ಲಕ್ಷ ದೀಪೋತ್ಸವ ಆಚರಿಸಲ್ಪಡುತ್ತಿದೆ. ಸಂಕಷ್ಟಗಳು ದೂರವಾಗಿ ಸುಖ ಸಂತೃಪ್ತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುವ ದೀಪಗಳ ಹಬ್ಬ ಹಿಂದೂ ಶ್ರದ್ಧಾ ಕೇಂದ್ರಗಳಲ್ಲಿ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ.
– ವೇ|ಮೂ| ಸುಬ್ರಹ್ಮಣ್ಯ ನರಸಿಂಹ ಭಟ್‌, ಅರ್ಚಕ

Advertisement

Udayavani is now on Telegram. Click here to join our channel and stay updated with the latest news.

Next