Advertisement

ಎಷ್ಟು ಜನರನ್ನು ಬಂಧಿಸಿದ್ದೀರಿ?: ಉತ್ತರಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

12:07 AM Oct 08, 2021 | Team Udayavani |

ಲಕ್ನೋ/ಹೊಸದಿಲ್ಲಿ: “ಲಖೀಂಪುರ ಖೇರಿಯಲ್ಲಿ 8 ಮಂದಿ ಸಾವಿಗೀಡಾಗಿ 4 ದಿನಗಳು ಕಳೆದವು. ನೀವು ಎಷ್ಟು ಮಂದಿಯನ್ನು ಬಂಧಿಸಿದ್ದೀರಿ? ಯಾರ ವಿರುದ್ಧ ಎಫ್ಐಆರ್‌ ದಾಖಲಿಸಿದ್ದೀರಿ?’

Advertisement

ಇದು ಉತ್ತರಪ್ರದೇಶ ಸರಕಾರಕ್ಕೆ ಗುರುವಾರ ಸುಪ್ರೀಂ ಕೋರ್ಟ್‌ ಕೇಳಿರುವ ಪ್ರಶ್ನೆ. ಲಖೀಂಪುರ ಘರ್ಷಣೆಗೆ ಸಂಬಂಧಿಸಿದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸಿಜೆಐ ಎನ್‌.ವಿ. ರಮಣ ನೇತೃತ್ವದ ನ್ಯಾಯಪೀಠ, “ಲಖೀಂಪುರ ಘಟನೆಯು ಅತ್ಯಂತ ದುರದೃಷ್ಟಕರ. ನಾಳೆಯೇ (ಶುಕ್ರವಾರ) ನಮಗೆ ಈ ಬಗ್ಗೆ ಸ್ಥಿತಿಗತಿ ವರದಿ ಸಲ್ಲಿಸಬೇಕು. ಹತ್ಯೆಗೀಡಾದ 8 ಮಂದಿ ಯಾರು? ಯಾರ ವಿರುದ್ಧ

ಎಫ್ಐಆರ್‌ ದಾಖಲಾಗಿದೆ? ಎಷ್ಟು ಮಂದಿಯನ್ನು ಬಂಧಿಸಿದ್ದೀರಿ ಎಂಬೆಲ್ಲ ವಿವರವನ್ನೂ ನಮಗೆ ನೀಡಬೇಕು’ ಎಂದು ಸೂಚಿಸಿತು.

“ವಿಚಾರಣೆ ವೇಳೆ ನಮಗೆ ಬಂದಿರುವ ಮಾಹಿತಿ ಪ್ರಕಾರ, ಮೃತ ವ್ಯಕ್ತಿಯೊಬ್ಬರ ತಾಯಿಯು ತನ್ನ ಮಗನನ್ನು ಕಳೆದುಕೊಂಡು ಆಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದಾರೆ. ಅವರಿಗೆ ಉ.ಪ್ರದೇಶ ಸರಕಾರ ಕೂಡಲೇ ವೈದ್ಯಕೀಯ ಚಿಕಿತ್ಸೆಗೆ ನೆರವಾಗಬೇಕು’ ಎಂದು ನ್ಯಾಯಪೀಠ ಹೇಳಿದೆ.

ಇಬ್ಬರು ವಶಕ್ಕೆ: ಸುಪ್ರೀಂ ಕೋರ್ಟ್‌ ನಿರ್ದೇಶನದ ಬೆನ್ನಲ್ಲೇ ಉತ್ತರಪ್ರದೇಶ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಷ್‌ ಮಿಶ್ರಾ ತಲೆಮರೆಸಿಕೊಂಡಿದ್ದಾರೆ. ತನಿಖೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್‌ ಜಾರಿ ಮಾಡಲಾಗಿದೆ. ಸಮನ್ಸ್‌ಗೆ ಪ್ರತಿಕ್ರಿಯಿಸದಿದ್ದರೆ, ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಐಜಿಪಿ ಲಕ್ಷ್ಮೀ ಸಿಂಗ್‌ ಹೇಳಿದ್ದಾರೆ. ಜತೆಗೆ ಆಶಿಷ್‌ ಮಿಶ್ರಾಗೆ ಕಳುಹಿಸಲಾಗಿರುವ ಸಮನ್ಸ್‌ಗೆ ಯಾವುದೇ ಕಾಲಮಿತಿ ಹೇರಲಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಜತೆಗೆ ವಶಕ್ಕೆ ಪಡೆಯಲಾದ ಇಬ್ಬರು ಆರೋಪಿಗಳ ಕುರಿತು ಮಾಹಿತಿಯನ್ನೂ ಅವರು ನೀಡಿಲ್ಲ.

Advertisement

ಹರಿಯಾಣದಲ್ಲಿ ರೈತನಿಗೆ ಗಾಯ: ಹರಿಯಾಣದ ಅಂಬಾಲಾದಲ್ಲಿ ಗುರುವಾರ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿರುವಾಗ ಬಿಜೆಪಿ ನಾಯಕರೊಬ್ಬರ ಬೆಂಗಾವಲು ಪಡೆಯ ವಾಹನ ಢಿಕ್ಕಿ ಹೊಡೆದು ರೈತರೊಬ್ಬರು ಗಾಯಗೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖಾ ಆಯೋಗ ರಚನೆ:  ಲಖೀಂಪುರ ಘಟನೆಯ ತನಿಖೆಗಾಗಿ ಉ.ಪ್ರದೇಶ ಸರಕಾರ ಗುರುವಾರ ಏಕಸದಸ್ಯ ನ್ಯಾಯಾಂಗ ಆಯೋಗವನ್ನು ರಚಿಸಿದೆ. ಅಲಹಾಬಾದ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪ್ರದೀಪ್‌ ಕುಮಾರ್‌ ಶ್ರೀವಾಸ್ತವ ಅವರು ಈ ಆಯೋಗದ ನೇತೃತ್ವ ವಹಿಸಿದ್ದಾರೆ. ಇದೇ ವೇಳೆ, “ಪ್ರಕರಣದ ತನಿಖೆಯನ್ನು ನಿವೃತ್ತ ನ್ಯಾಯಮೂರ್ತಿಯ ಬದಲಿಗೆ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನಡೆಸಬೇಕು’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಆಗ್ರಹಿಸಿದ್ದಾರೆ.

ವಿಪಕ್ಷಗಳ ಕೆಲವು ನಾಯಕರು ದೇಶದಲ್ಲಿ ಹಿಂಸೆ ಮತ್ತು ದ್ವೇಷದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಲಖೀಂಪುರದಲ್ಲಿ ನಡೆದ ಘಟನೆ ಖಂಡನೀಯ. ಈ ಕುರಿತು ತನಿಖೆಗೆ ಆಯೋಗ ರಚಿಸಿರುವ ಉತ್ತರ ಪ್ರದೇಶ ಸರಕಾರದ ಕ್ರಮವನ್ನು ಶ್ಲಾಘಿಸುತ್ತೇನೆ.-ಇಂದ್ರೇಶ್‌ ಕುಮಾರ್‌, ಆರೆಸ್ಸೆಸ್‌ ಹಿರಿಯ ನಾಯಕ

ಲಖೀಂಪುರದ ವೀಡಿಯೋ ಸ್ಫಟಿಕದಷ್ಟೇ ಸ್ಪಷ್ಟವಾಗಿದೆ. ಪ್ರತಿಭಟನಕಾರರನ್ನು ಹತ್ಯೆಯ ಮೂಲಕ ಮೌನವಾಗಿಸಲಾಗದು. ಪ್ರತಿಯೊಬ್ಬ ರೈತನ ಮನಸ್ಸಿಗೆ ಕ್ರೌರ್ಯ ಹಾಗೂ ಆಕ್ರೋಶದ ಸಂದೇಶ ರವಾನೆಯಾಗುವ ಮನ್ನ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.– ವರುಣ್‌ ಗಾಂಧಿ, ಬಿಜೆಪಿ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next