ಬೆಂಗಳೂರು: ಒಡಂಬಡಿಕೆ ಗಳ ಹೊರತಾಗಿ ಕೆಲವು ಪ್ರಮುಖ ಕೈಗಾರಿಕೋದ್ಯಮಿಗಳಿಂದ ನೇರವಾಗಿ ಸಾವಿರಾರು ಕೋಟಿ ರೂ. ಹರಿದು ಬರುವ ಭರವಸೆ ರಾಜ್ಯಕ್ಕೆ ದೊರಕಿತು.
ಹೂಡಿಕೆದಾರರ ಸಮಾವೇಶದ ಉದ್ಘಾಟನ ವೇದಿಕೆಯಲ್ಲಿ ಜಿಂದಾಲ್ ಗ್ರೂಪ್, ವೇದಾಂತ ಗ್ರೂಪ್, ಅದಾನಿ ಸೇರಿದಂತೆ ವಿವಿಧ ಕೈಗಾರಿಕಾ ದಿಗ್ಗಜರು ಮುಂಬರುವ ನಿಗದಿತ ವರ್ಷಗಳಲ್ಲಿ ರಾಜ್ಯದಲ್ಲಿ ತಮ್ಮ ಉದ್ಯಮಗಳನ್ನು ವಿಸ್ತರಿಸುವ ಮೂಲಕ ಸಾವಿರಾರು ಕೋಟಿ ರೂ. ಹೂಡಿಕೆ ಮಾಡುವ ಭರವಸೆ ನೀಡಿದರು.
ಆರಂಭದಲ್ಲಿ ಸಜ್ಜನ್ ಜಿಂದಾಲ್ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಜಿಂದಾಲ್ ಕಂಪೆನಿಯು ಒಂದು ಲಕ್ಷ ಕೋಟಿ ರೂ. ಹೂಡಿಕೆ ಮಾಡಿದೆ. ಇಲ್ಲಿ ಉದ್ಯಮಿಗಳಿಗೆ ಅತ್ಯಂತ ಪೂರಕ ವಾತಾವರಣ ಇದ್ದು, ಮುಂದಿನ ಐದು ವರ್ಷಗಳಲ್ಲಿ ಇನ್ನೂ ಒಂದು ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು ಎಂದು ಘೋಷಿಸಿದರು.
ಅದಿರು, ನವೀಕರಿಸಬಹುದಾದ ಇಂಧನ, ಬಂದರು ಮೂಲಸೌಕರ್ಯ, ಶಿಕ್ಷಣ, ಕೌಶಲ್ಯ ಮತ್ತಿತರ ಕ್ಷೇತ್ರಗಳಲ್ಲಿ ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುವುದು ಎಂದ ಅವರು, ಖನಿಜ ಸಂಪತ್ತುಗಳ ಹರಾಜಿಗೆ ಸಂಬಂಧಿಸಿದಂತೆ ಇನ್ನಷ್ಟು ಸುಧಾರಣೆಗಳನ್ನು ಸರಕಾರ ತರುವ ಅವಶ್ಯಕತೆ ಇದೆ ಎಂದು ಅಭಿ ಪ್ರಾಯಪಟ್ಟರು.
Related Articles
50 ಸಾವಿರ ಕೋಟಿ ಹೂಡಿಕೆ
ವೇದಾಂತ ಗ್ರೂಪ್ನ ಪ್ರತೀಕ್ ಅಗರವಾಲ್ ಮಾತ ನಾಡಿ, ಮುಂದಿನ 5 ವರ್ಷಗಳಲ್ಲಿ ಕಂಪೆ ನಿಯು ವಿವಿಧ ರಾಜ್ಯಗಳಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ 50 ಸಾವಿರ ಕೋಟಿ ಹೂಡಿಕೆ ಮಾಡಲು ಉದ್ದೇಶಿಸಿದೆ. ಈ ಪೈಕಿ ಕರ್ನಾಟಕದಲ್ಲಿ ಸಿಂಹಪಾಲು ಇರಲಿದೆ ಎಂದರು.
ಪ್ರಸ್ತುತ ಸಾವಿರ ಮೆ.ವಾ. ಪವನ ಮತ್ತು ಸೋಲಾರ್ ವಿದ್ಯುತ್ ಉತ್ಪಾದನ ಯೋಜನೆ ಯನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸ ಲಾಗಿದ್ದು, ಈ ವಿದ್ಯುತ್ ಅನ್ನು ರಾಜಸ್ತಾನ, ಛತ್ತೀಸಗಡ, ಒರಿಸ್ಸಾಕ್ಕೆ ಪೂರೈಸಲಾಗುತ್ತಿದೆ. ಕಳೆದ ಆರು ವರ್ಷಗಳಲ್ಲಿ ಕಂಪೆನಿಯಿಂದ ಸರ್ಕಾರಕ್ಕೆ ಬರೀ ವರಮಾನವೇ ಎರಡು ಲಕ್ಷ ಕೋಟಿ ಪಾವತಿಸಲಾಗಿದೆ ಎಂದು ವಿವರಿಸಿದರು.
7 ವರ್ಷಗಳಲ್ಲಿ 1 ಲಕ್ಷ ಕೋಟಿ ಹೂಡಿಕೆ: ಗೌತಮ್ ಅದಾನಿ ಅವರ ಪುತ್ರ ಕರಣ್ ಅದಾನಿ, ವಿದ್ಯುತ್, ಅನಿಲ ಕೊಳವೆ ಮಾರ್ಗ, ಲಾಜಿಸ್ಟಿಕ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂದಿನ ಏಳು ವರ್ಷಗಳಲ್ಲಿ ರಾಜ್ಯದಲ್ಲಿ ಒಂದು ಲಕ್ಷ ಕೋಟಿ ಹೂಡಿಕೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಈಗಾಗಲೇ ರಾಜ್ಯದಲ್ಲಿ 20 ಸಾವಿರ ಕೋಟಿ ಹೂಡಿಕೆ ಮಾಡಲಾಗಿದೆ. ಉಡುಪಿಯಲ್ಲಿ 1,200 ಮೆ.ವಾ. ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕ, ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್ ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಭಾರತಿ ಎಂಟರ್ ಪ್ರೈಸಸ್ನ ಉಪಾಧ್ಯಕ್ಷ ರಾಜನ್ ಭಾರತಿ ಮಿತ್ತಲ್, ಟೆಲಿಕಮ್ಯುನಿಕೇಷನ್ಸ್ ನಲ್ಲಿ ರಾಜ್ಯದಲ್ಲಿ ಈಗಾಗಲೇ 35 ಸಾವಿರ ಕೋಟಿ ಮೊತ್ತದಷ್ಟು ಹೂಡಿಕೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚುವರಿ ಯಾಗಿ 20 ಸಾವಿರ ಕೋಟಿ ಹೂಡಿಕೆ ಗುರಿ ಹೊಂದಿದ್ದೇವೆ ಎಂದರು.