ಪಾಂಡವಪುರ: ತಾಲ್ಲೂಕಿನ ತೊಣ್ಣೂರು ಕೆರೆಯಲ್ಲಿ ನ.23ರಿಂದ ಮೂರು ದಿನಗಳ ಕಾಲ ನಡೆಯುವ ‘ಕೆರೆ ಉತ್ಸವ’ಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ರಾತ್ರಿ ಚಾಲನೆ ನೀಡಿದರು.
ಇದೇ ಮೊದಲ ಬಾರಿಗೆ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ನೇತೃತ್ವದಲ್ಲಿ ಜಲ ಸಂಪನ್ಮೂಲ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮವು ಕೆರೆ ಉತ್ಸವವನ್ನು ಆಯೋಜಿಸಿದೆ.
ಕೆರೆ ನೀರಿನ ಮೇಲೆ 200ಕ್ಕೂ ಹೆಚ್ಚು ಜನರು ಕೂರಬಹುದಾದ ತೇಲುವ ವೇದಿಕೆ ನಿರ್ಮಿಸಲಾಗಿದೆ. ಈ ವೇದಿಕೆಗೆ ಹಲವು ಬಣ್ಣದ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ. ಇದೇ ವೇದಿಕೆಯಲ್ಲಿ ಸಿಎಂ ಕುಮಾರಸ್ವಾಮಿ ಉತ್ಸವವನ್ನು ಉದ್ಫಾಟಿಸಿದಾಗ ಸೇರಿದ್ದ ಆಪಾರ ಜನಸ್ತೋಮ ತಪ್ಪಾಳೆ ತಟ್ಟಿ ಹರ್ಷೋದ್ಗಾರ ವ್ಯಕ್ತಪಡಿಸಿದರು.
ಕಾರ್ಯಕ್ರಮನ್ನು ವೀಕ್ಷಿಸಲು ಕೆರೆಯ ಏರಿಯಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕೆರೆ ತೂಬಿನಿಂದ ನೀರು ಹರಿಯುವ ಸ್ಥಳದಲ್ಲಿ ಬಣ್ಣದ ದೀಪ ಹಾಕಿ ನೀರಿಗೆ ಆಕರ್ಷಕ ರೂಪ ನೀಡಲಾಗಿದೆ. ಕೆರೆಯ ಏರಿಯ ಕೆಳಗಿರುವ ರಾಮಾನುಜಾಚಾರ್ಯರ ಪ್ರತಿಮೆ ಬಳಿ ಸಂಗೀತ ಕಾರಂಜಿಯನ್ನು ವ್ಯವಸ್ಥೆಗೊಳಿಸಲಾಗಿದೆ. ರಾಮಾಜುಚಾರ್ಯರ ಪ್ರತಿಮೆ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.
ಸಾಂಸ್ಕೃತಿಕ ಕಾರ್ಯಕ್ರಮ: ಗಾಯಕ ವಿಜಯ ಪ್ರಕಾಶ್ ಮತ್ತು ತಂಡದಿಂದ ರಾತ್ರಿ ಗಾಯನ, ನೃತ್ಯ ಕಾರ್ಯಕ್ರಮ ನಡೆಯಿತು. ಪ್ರೇಕ್ಷಕರು ಗಾಯನವನ್ನು ಆಸ್ವಾದಿಸಿದರು.