Advertisement

ಮೂಲ ಸೌಕರ್ಯ ವಂಚಿತ ಸಿದ್ಧಮ್ಮನಹಳ್ಳಿ ಶಾಲೆ

02:22 PM May 16, 2022 | Team Udayavani |

ಕುರುಗೋಡು: ವಿದ್ಯಾರ್ಥಿಗಳಿಗೆ ಕುಡಿಯಲು ನೀರಿಲ್ಲ. ಶಿಕ್ಷಕರ ಕೊರತೆ, ವಿದ್ಯುತ್‌ ಇಲ್ಲ. ಶಾಲೆ ಸುತ್ತಮುತ್ತ ಸ್ವಚ್ಛತೆ ಮರೀಚಿಕೆ. ಕೊಠಡಿಗಳ ಶಿಥಿಲಾ ಮಳೆ ಬಂದರೆ ಮಕ್ಕಳ ಸ್ಥಿತಿ ಹೇಳತೀರದು. ಇದು ತಾಲೂಕು ಸಮೀಪದ ಸಿದ್ದಮ್ಮನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ.

Advertisement

ಮೂಲ ಸೌಕರ್ಯಗಳಿಂದ ವಂಚಿತಗೊಂಡಿರುವ ಈ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ 228 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ 1 ಅತಿಥಿ ಶಿಕ್ಷಕರು ಹಾಗೂ 5 ಕಾಯಂ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ಇನ್ನೂ 1ರಿಂದ 3ನೇ ತರಗತಿ ಮಕ್ಕಳಿಗೆ ನಲಿ ಕಲಿಗೆ ಇಬ್ಬರು ಶಿಕ್ಷಕರು ಇರುವಲ್ಲಿ ಒಬ್ಬರು ಮಾತ್ರ ನಿಭಾಯಿಸುತ್ತಿದ್ದಾರೆ. 4ರಿಂದ 5ನೇ ತರಗತಿ ಮಕ್ಕಳಿಗೆ ಕನ್ನಡ ಶಿಕ್ಷಕರು ಇಲ್ಲದೆ ಇರುವುದರಿಂದ ಶಾಲೆಗೆ ಬರುವ ಮುಖ್ಯ ಗುರುಗಳೇ ಬೋಧನೆ ಮಾಡುತ್ತಿದ್ದಾರೆ. ಅಲ್ಲದೆ 6ರಿಂದ 8ನೇ ತರಗತಿ ಮಕ್ಕಳಿಗೆ ಗಣಿತ ಮತ್ತು ಸಮಾಜ ಹಾಗೂ ವಿಜ್ಞಾನ ವಿಷಯಕ್ಕೆ ಶಿಕ್ಷಕರಿಲ್ಲದಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ಗುಣಮಟ್ಟದ ಶಿಕ್ಷಣ ಸಿಗದಾಗಿದ್ದು ಹೆಚ್ಚುವರಿ ಶಿಕ್ಷಕರ ನೇಮಕಕ್ಕಾಗಿ ವಿದ್ಯಾರ್ಥಿಗಳು ನಿರೀಕ್ಷೆಯಲ್ಲಿದ್ದಾರೆ.

228 ವಿದ್ಯಾರ್ಥಿಗಳಿಗೆ ಒಟ್ಟು 14 ಕೊಠಡಿಗಳು ಇದ್ದು ಇದರಲ್ಲಿ 6 ಕೊಠಡಿಗಳು ತರಗತಿಗಳಿಗೆ ಬಳಕೆ ಮಾಡಿದರೆ ಇನ್ನೂ 1 ಮುಖ್ಯ ಶಿಕ್ಷಕರ ಕೊಠಡಿ, 1 ಅಡುಗೆ ಕೊಠಡಿ, 1 ಶಾಲಾ ಸಾಮಗ್ರಿಗಳ ಸಂಗ್ರಹಣೆಗೆ, 1 ಲೈಬ್ರರಿ ಪುಸ್ತಕಗಳಿಗೆ ಮತ್ತು 1 ಕೊಠಡಿ ಅಂಗನವಾಡಿಗೆ ನೀಡಿದ್ದು ಇನ್ನೂ 3 ಕೊಠಡಿಗಳು ಶಿಥಿಲಾವ್ಯಸ್ಥೆಯಿಂದ ದುರಸ್ತಿಯಲ್ಲಿವೆ.

ಹಳೆ 5 ಕೊಠಡಿಗಳ ಮೇಲ್ಛಾವಣಿ ಶಿಥಿಲ

Advertisement

ಶಾಲೆಯ 14 ಕೊಠಡಿಗಳ ಪೈಕಿ 5 ಕೊಠಡಿಗಳ ಮೇಲ್ಛಾವಣಿಗಳು ಸಂಪೂರ್ಣ ಶಿಥಿಲಾವ್ಯವಸ್ಥೆಗೆ ತಲುಪಿದ್ದು ಕೊಠಡಿಗಳು ತುಂಬ ಹಳೆಯವಾಗಿದ್ದು, ಮಕ್ಕಳು ಶಿಕ್ಷಣ ಪಡಿಯುವ ಸಂದರ್ಭದಲ್ಲಿ ಮೇಲ್ಚಾವಣಿ ಕಾಂಕ್ರೀಟ್‌ ಪದರು ಚುರು ಚುರಾಗಿ ಬೀಳಲಾರಂಭಿಸುತ್ತವೆ. ಯಾವ ಸಮಯದಲ್ಲಿ ಅದರೂ ಬೀಳುವ ಸಂಭವವಿದೆ. ಇನ್ನೂ ಮಳೆ ಬಂದರಂತು ಶಾಲೆ ಹಲವು ಕೊಠಡಿಗಳು ಸೋರುತ್ತಿವೆ. ಇದರಿಂದ ಜೀವ ಭಯದಲ್ಲೇ ಮಕ್ಕಳು ಶಿಕ್ಷಣ ಪಡೆಯಬೇಕಾಗಿದೆ.

ಶೌಚಾಲಯದಲ್ಲಿ ನೀರಿಲ್ಲ

ಶೌಚಲಯವಿದ್ದರೂ ನೀರಿನ ವ್ಯವಸ್ಥೆ ಇಲ್ಲದಾಗಿದೆ. ಇದರಿಂದ ಮಕ್ಕಳು ಬಯಲು ಜಾಗದಲ್ಲಿ ಶೌಚ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಸರಕಾರ ಸ್ವಚ್ಛತೆ ಬಗ್ಗೆ ನಾನಾ ರೀತಿಯ ಜಾಗೃತಿ ಮೂಡಿಸುತ್ತಿದ್ದು. ಇದು ಬರೆ ಹೆಸರಿಗೆ ಮಾತ್ರವಾಗಿದೆ. ಸರಕಾರಿ ಶಾಲೆಗಳಲ್ಲಿ ಶೌಚಲಯಗಳು ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು ಇದರಿಂದ ಅಸ್ವತ್ಛತೆ ವಾತಾವರಣದಿಂದ ನಾನಾ ರೋಗಕ್ಕೆ ತುತ್ತಾಗುವಂತಾಗಿದೆ.

ಕುಡಿಯುವ ನೀರಿಲ್ಲ

ಶಾಲೆಯಲ್ಲಿ ಕುಡಿಯುವ ನೀರಿಲ್ಲದ ಪರಿಣಾಮ ವಿದ್ಯಾರ್ಥಿಗಳು ನಿತ್ಯ ನೀರಿನ ದಾಹ ತಿರಿಸಿಕೊಳ್ಳಲು ಕಷ್ಟಕರವಾಗಿದೆ. ಶಾಲೆ ಮುಂದುಗಡೆ ಮಿನಿ ನೀರಿನ ಟ್ಯಾಂಕರ್‌ ವ್ಯವಸ್ಥೆ ಮಾಡಿಕೊಡುವಂತೆ ಗ್ರಾಪಂ ಅಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ನಾನಾ ಬಾರಿ ಮನವಿ ಮಾಡಿದರೂ ಪ್ರಯೋಜನೆ ಇಲ್ಲದಾಗಿದೆ. ಇದರ ಪರಿಣಾಮ ಶಾಲೆಗೆ ಸರಿಯಾದ ನೀರಿನ ವ್ಯವಸ್ಥೆ ಇಲ್ಲದಾಗಿದೆ. ಈ ಸಮಸ್ಯೆಯಿಂದ ವಿದ್ಯಾರ್ಥಿಗಳು ಮನೆಯಿಂದ ನೀರಿನ ಬಾಟಲ್‌ಗ‌ಳನ್ನು ತಂದು ನೀರು ಸೇವಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.

ಶಾಲೆಗೆ ದೊರೆಯದ ವಿದ್ಯುತ್‌ ಭಾಗ್ಯ

ಇತ್ತೀಚಿನ ದಿನಗಳಲ್ಲಿ ಸರಕಾರ ಸರಕಾರಿ ಶಾಲೆಗಳಿಗೆ ವಿವಿಧ ಸೌಲಭ್ಯಗಳನ್ನು ನೀಡಿ ಗುಣ ಮಟ್ಟದ ಶಿಕ್ಷಣ ನೀಡಲು ಮುಂದಾಗುತ್ತಿದೆ. ಅದರಲ್ಲಿ ಮಕ್ಕಳಿಗೆ ತಂತ್ರಜ್ಞಾನದ ತಿಳುವಳಿಕೆಗೆ ಕಂಪ್ಯೂಟರ್‌ ತರಗತಿಗಳು, ಡಿಜಿಟಲ್‌ ಸಿಸ್ಟಮ್‌ ಸೇರಿದಂತೆ ಅನೇಕ ತರಹದ ಯೋಜನೆಗಳನ್ನು ಜಾರಿಗೆ ಮಾಡಿದೆ ಅದರೆ ಇಲ್ಲಿ ಈ ಶಾಲೆಗೆ ಯಾವುದೇ ಅನುಕೂಲತೆ ಇಲ್ಲದಾಗಿದ್ದು, ಅದರಲ್ಲಿ ವಿದ್ಯುತ್‌ ಸಂಪರ್ಕವೇ ಇಲ್ಲದಾಗಿದೆ ಇದರಿಂದ ಮಕ್ಕಳ ತಿಳಿವಳಿಕೆಗೆ ಕೊಕ್ಕೆ ಬಿದ್ದಂತಾಗಿದೆ.

ಶಾಲೆಗೆ ಸೂಕ್ತ ತಡೆಗೋಡೆ ಇಲ್ಲ

ಶಾಲೆಗೆ ಸೂಕ್ತವಾದ ತಡೆಗೋಡೆ ಇಲ್ಲದ ಕಾರಣ ಸಂಜೆ ವೇಳೆ ಪುಡಾರಿಗಳು ಅವರಣಕ್ಕೆ ದೌಡಾಯಿಸಿ ಅಸ್ವಚ್ಛತೆ ವಾತಾ‌ರಣ ಸೃಷ್ಟಿಸುತ್ತಿದ್ದಾರೆ. ಇದಲ್ಲದೆ ಜಾನುವಾರುಗಳ ಕೂಡ ಶಾಲೆ ಒಳಗೆ ನುಗ್ಗುತ್ತಿವೆ. ಇದರಿಂದ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ದುರ್ವಾವಾಸನೆ ಬರುತ್ತಿದ್ದು ಶಿಕ್ಷಣ ಕಲಿಯುವುದಕ್ಕೆ ತೊಂದರೆ ಉಂಟಾಗುತ್ತಿದೆ.ಇನ್ನೂ ಶಾಲೆ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವುದರಿಂದ ಶಾಲೆ ತುಂಬ ತೆಗ್ಗಿನಿಂದ ಇದ್ದ ಪರಿಣಾಮ ಮಳೆಗಾಲದಲ್ಲಿ ರಸ್ತೆ ಮೇಲೆ ಹರಿಯುವ ನೀರೆಲ್ಲಾ ಶಾಲೆಗೆ ನುಗ್ಗಿ ಜಲಾವೃತ ಗೊಳ್ಳುತ್ತದೆ. ಇದರಿಂದ ಮಕ್ಕಳು ಮತ್ತು ಶಿಕ್ಷಕರು ಓಡಾಡುವುದಕ್ಕೂ ಅನುಕೂಲತೆ ಇಲ್ಲದಾಗಿದೆ.

ಮಕ್ಕಳ ಸಂಖ್ಯೆ ಕುಂಠಿತ

ಶಾಲೆಗೆ ಸರಿಯಾದ ಮೂಲ ಭೂತ ಸೌಕರ್ಯಗಳು ಇಲ್ಲದೆ ಕಾರಣ ಹಾಗೂ ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದೆ ಇರುವುದರಿಂದ ಗ್ರಾಮದ ಜನರು ತಮ್ಮ ಮಕ್ಕಳನ್ನು ಶಾಲೆಯಿಂದ ಬೇರೆ ಶಾಲೆಗೆ ನೋಂದಾಯಿಸುತ್ತಿದ್ದು ಪ್ರತಿ ವರ್ಷ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ.

ಬೇಸಿಗೆ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ಇಂದಿನಿಂದ ಶಾಲೆಗಳು ಪ್ರಾರಂಭವಾಗುತ್ತಿದ್ದು, ಪ್ರತಿ ಶಾಲೆಗಳ ಸಮಸ್ಯೆಗಳನ್ನು ಅರಿತು ಅದಷ್ಟು ಬೇಗ ಬಗೆಹರಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಈಗಾಗಲೇ ಹಲವು ಶಾಲೆಗಳ ಸಮಸ್ಯೆಗಳನ್ನು ಉಪ ನಿರ್ದೇಶಕರಿಗೆ ತಿಳಿಸಿದ್ದು ಸದ್ಯದಲ್ಲೇ ಇತ್ಯರ್ಥಗೊಳ್ಳಲಿವೆ. ವೆಂಕಟೇಶ ರಾಮಚಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುರುಗೋಡು

ಶಾಲೆಯಲ್ಲಿ ಕುಡಿಯಲು ಶುದ್ಧ ನೀರಿಲ್ಲ. ಮನೆಯಿಂದ ಮಕ್ಕಳು ನೀರು ತರುತ್ತಿದ್ದಾರೆ. ಶಾಲೆಗೆ ಸೂಕ್ತ ತಡೆಗೋಡೆ ಇಲ್ಲದ ಕಾರಣ ಮಧ್ಯಾಹ್ನ ಮಕ್ಕಳು ಊಟ ಮಾಡುವ ಸಮಯದಲ್ಲಿ ನಾಯಿಗಳು ಮತ್ತು ಜಾನುವಾರುಗಳು ಬರುತ್ತವೆ. ಮಳೆ ಬಂದರೆ ಶಾಲೆ ಜಲಾವೃತಗೊಳ್ಳುತ್ತದೆ. ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಷಣ್ಮಖ, ಶಿಕ್ಷಣ ಪ್ರೇಮಿ ಸಿದ್ದಮ್ಮನಹಳ್ಳಿ

ಶಾಲೆಯಲ್ಲಿ ಬಹಳ ತುಂಬ ದೊಡ್ಡ ಸಮಸ್ಯೆ ಎಂದರೆ ಶಿಕ್ಷಕರ ಕೊರತೆ. ಇದರಿಂದ ಸರಿಯಾದ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುತ್ತಿಲ್ಲ. ಕನ್ನಡ, ನಲಿ ಕಲಿ, ಗಣಿತ, ಸಮಾಜ, ವಿಜ್ಞಾನ ವಿಷಯಗಳಿಗೆ ಸರಿಯಾದ ಶಿಕ್ಷಕರೇ ಇಲ್ಲದಾಗಿದೆ. ಇದರ ಬಗ್ಗೆ ಅನೇಕ ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಅಲ್ಲದೆ ಶಾಲೆಯಲ್ಲಿ ಕುಡಿಯಲು ನೀರಿಲ್ಲ. ಶೌಚಾಲಯ ಇದ್ರೂ ನಿರ್ವಹಣೆಗೆ ನೀರಿಲ್ಲ. ಗೀತಾ. ಆರ್‌., ಮುಖ್ಯ ಗುರುಗಳು ಸ.ಹಿ.ಪ್ರಾ.ಶಾಲೆ ಸಿದ್ದಮ್ಮನಹಳ್ಳಿ

ಸುಧಾಕರ್‌ ಮಣ್ಣೂರು

 

Advertisement

Udayavani is now on Telegram. Click here to join our channel and stay updated with the latest news.

Next