Advertisement

ಏನೇ ವ್ಯವಸ್ಥೆ ಮಾಡಿದರೂ ಅಸಮಾಧಾನ

01:24 PM Apr 18, 2020 | Suhan S |

ಬಾಗಲಕೋಟೆ: ಕೋವಿಡ್ 19 ನಿಯಂತ್ರಣಕ್ಕಾಗಿ ಎಲ್ಲೆಡೆ ಲಾಕ್‌ಡೌನ್‌ ಮುಂದುವರೆದಿದ್ದು, ನಗರದಲ್ಲಿ ಇಂದಿಗೂ ಅಶ್ವಗಳನ್ನೇ ನಂಬಿ ಜೀವನ ನಡೆಸುವ ಬಡ ಕುಟುಂಬಗಳ ಗೋಳು ಹೇಳತೀರದಾಗಿದೆ.

Advertisement

ನಗರದ ವಾರ್ಡ್‌ ನಂ.2ರಲ್ಲಿ ಪೆಂಡಾರ ಗಲ್ಲಿ ಸಹಿತ ಹಲವು ಏರಿಯಾಗಳಲ್ಲಿ ಸಾವಿರಾರು ಜನರು ಟಂಟಂ, ಬೀದಿ ಬದಿ ವ್ಯಾಪಾರ, ಕುದುರೆ ಟಾಂಗಾ, ಮದುವೆ-ಮುಂಜವಿಯಲ್ಲಿ ಕುದುರೆ ಸಾರೋಟ ಹೀಗೆ ವಿವಿಧ ಕೆಲಸಗಳನ್ನೇ ನಂಬಿ ಜೀವನ ನಡೆಸುತ್ತಿದ್ದವರು, ಈಗ ಕೋವಿಡ್ 19 ಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ರಾಜ್ಯ ಸರ್ಕಾರದ ಪಡಿತರ ಆಹಾರಧಾನ್ಯ ಬಿಟ್ಟರೆ ನಮಗೆ ಯಾವ ಸೌಲಭ್ಯವೂ ದೊರೆಯುತ್ತಿಲ್ಲ ಎಂದು ಅಲ್ಲಿನ ಜನರ ವಿಡಿಯೋ ಮಾಡಿ, ಜಿಲ್ಲಾಡಳಿತಕ್ಕೆ ರವಾನಿಸಿದ್ದಾರೆ.

ವ್ಯವಸ್ಥೆಯ ದುರ್ಲಾಭ!: ಲಾಕ್‌ಡೌನದಿಂದ ತೀವ್ರ ಸಮಸ್ಯೆ ಎದುರಿಸುತ್ತಿರುವ ಜನರಿಗೆ ರಿಯಾಯಿತಿ ದರದಲ್ಲಿ ದಿನಸಿ, ತರಕಾರಿಗಳನ್ನು ಮನೆ ಮನೆಗೆ ಕಲ್ಪಿಸುವ ವ್ಯವಸ್ಥೆಯನ್ನು ಕೆಲವರು ಉದಾರ ಮನಸ್ಸಿನಿಂದ ಮಾಡುತ್ತಿದ್ದಾರೆ. ಆದರೆ, ಇನ್ನೂ ಕೆಲವರು ಇದನ್ನೇ ದುರುಪಯೋಗ ಪಡಿಸಿಕೊಂಡು, ಮನಸ್ಸಿಗೆ ಬಂದ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ದಿನಸಿ, ಔಷಧ ಸಹಿತ ಯಾವುದೇ ವಸ್ತುಗಳನ್ನು ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಜಿಲ್ಲಾಡಳಿತ, ತಾಲೂಕು ಆಡಳಿತ ನೀಡಿವೆ. ಆದರೆ, ಈ ಎಚ್ಚರಿಕೆಗೆ ಯಾರೂ ಕ್ಯಾರೆ ಅಂತಿಲ್ಲ. ಮನೆಗೆ ತಂದು ಕೊಡುವ ಸರ್ವಿಸ್‌ ಚಾರ್ಚ್‌ ಬೇರೆ ಎಂಬ ಸಬೂಬು ಹೇಳಿ, 50ರಿಂದ 100 ರೂ. ಹೆಚ್ಚಿಗೆ ಪಡೆಯುತ್ತಿದ್ದಾರೆ ಎಂದು ವಾರ್ಡ್‌ 2ರ ನಿವಾಸಿ ದೀಪಕ ಹಂಚಾಟೆ “ಉದಯವಾಣಿ’ಗೆ ತಿಳಿಸಿದರು.

ಅರ್ಧ ತಿಂಗಳಾದರೂ ನಿಖರವಿಲ್ಲ: ಎ.2ರಂದು ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಕೋವಿಡ್ 19 ಸೋಂಕು ಪತ್ತೆಯಾಗಿದ್ದು, ಅಲ್ಲಿಂದ ಇಲ್ಲಿಯ ವರೆಗೆ ಒಟ್ಟು 14 ಜನರಿಗೆ ಸೋಂಕು ತಗುಲಿದೆ. ಮೊದಲ ಬಾರಿಗೆ ಸೋಂಕು ಪತ್ತೆಯಾದ ವೃದ್ಧ ಅಸುನೀಗಿದ್ದಾರೆ. ಅವರ ಮನೆಯಲ್ಲಿ ಪತ್ನಿ, ಸಹೋದರನಿಗೂ ಸೋಂಕು ತಗುಲಿದೆ. ಜತೆಗೆ ಅವರ ಮನೆಯ ಅಕ್ಕ-ಪಕ್ಕದ ಒಟ್ಟು 11 ಜನರಿಗೆ ಈ ಸೋಂಕು ತಗುಲಿದೆ. ಇದರ ಹೊರತು, ಮುಧೋಳಕ್ಕೆ ಬಂದಿದ್ದ ಗುಜರಾತನ ಧರ್ಮ ಗುರು, ಆತನೊಂದಿಗೆ ಸಂಪರ್ಕವಿದ್ದು, ಮುಧೋಳ ತಾಲೂಕಿನ ಮುಗಳಖೋಡದ ಓರ್ವ ಯುವಕ ಹಾಗೂ ಮದರಸಾ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ  ಪೊಲೀಸ್‌ ಪೇದೆಗೆ ಸೇರಿ ಮುಧೋಳದಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ. ಮೊದಲ ಪ್ರಕರಣ ಪತ್ತೆಯಾಗಿ ಈಗ ಬರೋಬ್ಬರಿ ಅರ್ಧ ತಿಂಗಳು ಕಳೆಯಿತು.

ಆದರೂ, ನಗರಕ್ಕೆ ಈ ಸೋಂಕು ಬಂದಿದ್ದು ಹೇಗೆ ಎಂಬುದು ಇಂದಿಗೂ ನಿಖರವಾಗಿ ಪತ್ತೆಯಾಗಿಲ್ಲ. ಈ ಕುರಿತು ಆರೋಗ್ಯ ಇಲಾಖೆ, ಜಿಲ್ಲಾಡಳಿತ ಎಷ್ಟೇ ತಲೆಕೆಡಿಸಿಕೊಂಡು ತನಿಖೆ ನಡೆಸಿದರೂ, ಸೋಂಕಿತರು ಆರಂಭದಲ್ಲಿ ತಮ್ಮ ಪ್ರಯಾಣದ ಬಗ್ಗೆ ನಿಖರವಾಗಿ ವಿವರ ಹೇಳಿ, ಸಹಕಾರ ನೀಡಿರಲಿಲ್ಲ ಎಂದು ಸ್ವತಃ ಎಸ್ಪಿಯವರೇ ಹೇಳಿದ್ದರು. ಸತ್ಯ ಹೇಳಿ, ಕೊರೊನಾ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ.

Advertisement

ಮೊದಲ ಪ್ರಕರಣ ಹೇಗಾಯ್ತು ? :ನಗರದಲ್ಲಿ ಸೋಂಕಿನಿಂದ ಮೃತಪಟ್ಟ ವೃದ್ಧನ ಸಹೋದರನಿಂದಲೇ ಕೋವಿಡ್ 19  ಇಲ್ಲಿಗೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಅದೂ ನಿಖರವಾಗಿಲ್ಲ. ಏ.2ರಂದು 76 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟಿತ್ತು. ಏ.3ರಂದು ರಾತ್ರಿ ಆತ ಮೃತಪಟ್ಟಿದ್ದ. ವೃದ್ಧನಿಗೆ ಸೊಂಕು ದೃಢಪಟ್ಟ ಬಳಿಕ ಆತನ ಪುತ್ರ, ಪುತ್ರಿ ಬೆಂಗಳೂರಿನಿಂದ ಬಂದಿದ್ದು, ಅವರ ತಪಾಸಣೆ ಮೊದಲು ಮಾಡಲಾಯಿತು. ಅವರಿಗೆ ನೆಗೆಟಿವ್‌ ಬಂತು. ವೃದ್ಧನ ಪತ್ನಿ ಹಾಗೂ ಸಹೋದರನಿಗೆ ಪಾಜಿಟಿವ್‌ ಬಂದಿದ್ದೇ ತಡ, ಜಿಲ್ಲಾಡಳಿತ ಮತ್ತಷ್ಟು ಸೀರಿಯಸ್‌ ಆಯಿತು. ವೃದ್ಧನಿಗೆ ಯಾವುದೇ ಟ್ರಾವೆಲ್‌ ಹಿಸ್ಟರಿ ಇರಲಿಲ್ಲ. ಪತ್ನಿಯೂ ಮನೆಬಿಟ್ಟು ಹೋರ ಹೋಗಿರಲಿಲ್ಲ. ಆದರೆ, ವೃದ್ಧನ ಸಹೋದರ ಮಾ.15ರಂದು ಬಾಗಲಕೋಟೆಯಿಂದ ರೈಲು ಮೂಲಕ ಕಲಬುರಗಿಗೆ ಹೋಗಿ, ಮಾ.16ರಂದು ಬಸ್‌ ಮೂಲಕ ವಿಜಯಪುರಕ್ಕೆ ಬಂದು ಅಲ್ಲಿಂದ ಬಾಗಲಕೋಟೆಗೆ ಬಂದಿದ್ದ. ಮಾ.22ರ ವರೆಗೂ ಅವರ ಇಡೀ ಮನೆಯಲ್ಲಿ ಯಾವ ಸಮಸ್ಯೆಯೂ ಇರಲಿಲ್ಲ. ಮಾ.23ರಂದು ವೃದ್ಧನಿಗೆ ಕ್ರಮೇಣ ಜ್ವರ ಕಾಣಿಸಿಕೊಂಡಿತ್ತು. ಆಗ ಮೊದಲು ಆಯುರ್ವೇದ್‌ ಔಷಧ, ಬಳಿಕ ಖಾಸಗಿ ವೈದ್ಯರಿಗೆ ತೋರಿಸಿದ್ದರು. ಮಾ.31ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಏ.2ರಂದು ಕೊರೊನಾ ದೃಢಪಟ್ಟು, ಮಾ.3ರಂದು ರಾತ್ರಿ ಅವರ ಸಾವು, ಕೋವಿಡ್ 19 ಕ್ಕೆ ಜಿಲ್ಲೆಯಲ್ಲಿ ಮೊದಲ ಬಲಿ ಆಯಿತು. ಆದರೆ, ಈ ವೃದ್ಧನಿಗೆ ಅವರ ಸಹೋದರನಿಂದಲೇ ಈ ಸೋಂಕು ಬಂತಾ ಎಂಬುದು ಇನ್ನೂ ಖಚಿತವಾಗದೇ ಇರುವುದು ಮತ್ತಷ್ಟು ಭೀತಿ ಹೆಚ್ಚಿಸಿದೆ. ಇನ್ನು ಮುಧೋಳದಲ್ಲಿ ಧರ್ಮ ಗುರುಗೆ (ಅವರು ಡಿಸೆಂಬರ್‌ 23ರಂದೇ ಜಿಲ್ಲೆಗೆ ಬಂದಿದ್ದರು) ಹೇಗೆ ಸೋಂಕು ಬಂತು ಎಂಬುದೂ ಅಧಿಕೃತಗೊಂಡಿಲ್ಲ. ಹೀಗಾಗಿ ಕೋವಿಡ್ 19, ಜಿಲ್ಲೆಯ ಜನರಿಗೆ ಭೀತಿ ಹುಟ್ಟಿಸಿದೆ ಎನ್ನಲಾಗಿದೆ.

ನಗರದಲ್ಲಿ ಕೋವಿಡ್ 19  ಸೋಂಕು ಪತ್ತೆಯಾಗಿದ್ದರಿಂದ ಜನರ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ವಾರ್ಡ್‌ ನಂ.2 ಕೂಡ ನಿಷೇಧಿತ ಪ್ರದೇಶವಾಗಿದೆ. ಅಲ್ಲಿನ ಜನರಿಗೆ ದಿನಸಿ, ತರಕಾರಿ, ಔಷಧ ಮನೆ ಮನೆಗೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಅವರು ನಾವು ನೀಡಿದ ಮೊಬೈಲ್‌ಗ‌ಳಿಗೆ ಕರೆ ಮಾಡಿ, ಹಣ ಪಾವತಿಸಿ, ತಮಗೆ ಬೇಕಾದ ವಸ್ತು ಪಡೆಯಬೇಕು.  ಜಿ.ಎಸ್‌. ಹಿರೇಮಠ, ತಹಶೀಲ್ದಾರ್‌, ಬಾಗಲಕೋಟೆ

 

-ಶ್ರೀಶೈಲ ಕೆ. ಬಿರಾದಾರ

 

Advertisement

Udayavani is now on Telegram. Click here to join our channel and stay updated with the latest news.

Next